Friday, July 19, 2013

ಒಂದೆರಡು ಹನಿ ಕಣ್ಣೀರು....

ಒಂದೆರಡು ಹನಿ ಕಣ್ಣೀರು.......,
ಇವತ್ತು ನಾನು ಚನ್ನರಾಯಪಟ್ಟಣದಲ್ಲಿ ಶೂಟ್ ಗೆ ಹೋಗಿದ್ದೆ. ವಾರೆಂಟ್ ಕಾರ್ಯಕ್ರಮಕ್ಕಾಗಿ ಅರ್ಧ ಘಂಟೆ ವಿಶ್ಯುವಲ್ ನೀಡುವ ಜವಾಬ್ದಾರಿ ನನ್ನ ಮೇಲಿತ್ತು. ಪ್ರೀತಿಗಾಗಿ ಜೀವ ತೆತ್ತ ಹುಡುಗನ ಸುತ್ತ ಆ ಸ್ಟೋರಿ. ಅರ್ಥಾತ್ ಮೌನ ಮುರಿದು ಬಿದ್ದ ಮನೆಯಲ್ಲಿ ಕರುಳ ಕುಡಿಗಾಗಿ ಆಕ್ರಂಧನ....., ಆ ತಾಯಿ ಅವನಪ್ಪನ 2 ನೇ ಹೆಂಡತಿ. ಈತ ಆಕೆಗಿದ್ದ ಒಬ್ಬನೇ ಒಬ್ಬ ಮಗ. ತುಂಡು ಜಮೀನು..., ಎಷ್ಟೇ ಹಂಚಿದರೂ ಕರಗಲಾರದ ವಾತ್ಸಲ್ಯ. ಅವನು 24 ವರ್ಷದ ಯುವಕನಾಗಿದ್ರೂ ಆ ತಾಯಿಗೆ 4 ವರ್ಷದ ಬಾಲಕ.
ಇಂತಹ ಹುಡುಗ ಕೊಲೆಯಾದ.... ಆತನ ಶವ ನಾಲೆಯಲ್ಲಿ ತೇಲಿ ಹೋಗಿ ಮೀನು, ಹುಳ ಹುಪ್ಪಟೆಗಳಿಗೆ ಮೃಷ್ಟಾನ್ನವಾಯ್ತು.
ಪ್ರೀತಿಸಿದ್ದೇ ಆ ಹುಡುಗನಿಗೆ ಮುಳುವಾಯ್ತು. ತನ್ನ ಪ್ರೀತಿಯ ಹುಡುಗಿಗೆ 18 ವರ್ಷ ಆಗಲಿ ಅಂತ ಕಾಯುತ್ತಿದ್ದ. ದುರದೃಷ್ಟಾವಷಾತ್ ಅದಕ್ಕೂ ಮುನ್ನವೇ ಆಕೆಯ ಮದುವೆ ಆಯ್ತು. ನೆಚ್ಚಿದ ನಲ್ಲನನ್ನು ಬಿಟ್ಟಿರದ ಆ ಜೀವ ತನ್ನತನ ಉಳಿಸಿಕೊಂಡು ಆತನಿಗಾಗಿ ಕಾಯುತ್ತಿದ್ದಳು. ಮದುವೆಯಾಗಿ ಒಂದೂವರೆ ತಿಂಗಳು....., ತಾಳಿ ಕಟ್ಟಿದವನಿಗೆ ನಾನೊಲ್ಲೇ.. ಅನ್ನುತ್ತಲೇ ಬಂದಿದ್ದ ಆಕೆ ಆಷಾಡಕ್ಕೆ ಮನೆಗೆ ಬಂದಿದ್ದಳು.
ಹೀಗೆ ಪ್ರೀತಿಯ ಹುಡುಗನಿಗೆ ಪೋನ್ ಮಾಡಿದ ಹುಡುಗಿ ಅವತ್ತು ಆತನ ಜೊತೆ ಇಡೀ ದಿನ ಸುತ್ತಾಡಿದ್ದಾಳೆ. ಇವೆಲ್ಲವನ್ನೂ ಕಂಡ ಜನ ಅವಳ ಅಪ್ಪನಿಗೆ ವಿಷಯ ತಿಳಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಆ ಹುಡುಗ ಕೊಲೆಯಾದ....., ಹುಡುಗಿಯ ಸಂಬಂದಿಕರು ಆತನನ್ನ ಕೊಂದು ನಾಲೆಗೆ ಎಸೆದು ಬಿಟ್ಟರು.
ಈಗ ಅವನ ವಿಧವೆ ತಾಯಿ ಅಳುತ್ತಿದ್ದಾರೆ. ಆಕೆಯ ಕಣ್ಣೀರು ಒರೆಸೋಕು ಯಾರೂ ಇಲ್ಲ. ಕರಗುತ್ತಿರುವ ಆ ಮಾತೃ ಹೃದಯ.... ನೋವುಗಳ ಜೊತೆಗೆ................................ ಆಕೆ ಬದುಕುತ್ತಾಳೋ ಇಲ್ಲವೋ ಗೊತ್ತಿಲ್ಲ. ನನ್ನೆದೆಯಲ್ಲಿ ಅಸಾಧ್ಯ ವೇದನೆ....., ಯಾರೂ ಇಲ್ಲದ ಆ ತಾಯಿಗೆ ಅವುಕಿಕ್ಕೊಂಡ ಶೂನ್ಯತೆಗೆ... ಜೀವ ತುಂಬುವ,  ಮಗನ ನೆನಪಲ್ಲೇ ಕರಗಿ ಸಾಯುವ ಆ ಅಮ್ಮನಿಗೆ.... ನಾನಿದ್ದೇನೇ ಎನ್ನುವ ಹೃದಯ....?????


Thursday, July 18, 2013

ಚಡ್ಡೀ ಡಿಟೆಕ್ಟರ್....

ಇದು ನಾನು ಪ್ರೌಡಶಾಲೆಯಲ್ಲಿ ಓದುತ್ತಿದ್ದಾಗ ನಡೆದ ಘಟನೆ. ನಾನು ಓದಿದ ಶಾಲಾ ಕಾಲೇಜುಗಳ ಪೈಕಿ ಆ ಶಾಲೆ ಅಂದ್ರೆ ನನಗೆ ಈಗಲೂ ಅದೇನೋ ಒಂದು ರೀತಿಯ ತೀರದ ಅಭಿಮಾನ. ನನ್ನ ಭಾವನೆಗಳಿಗೆ..ತುಂಟತನಕ್ಕೆ ಹಾಗು ನನ್ನತನಕ್ಕೆ ವೇದಿಕೆಯಾದ ಶಾಲೆ ಅದು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾಕ್ಟರ್ ಶಿವಕುಮಾರಸ್ವಾಮೀಜಿಯವರ ಪ್ರೀತಿಯ ಸಿದ್ದಗಂಗಾ ಗ್ರಾಮಾಂತರ ಪ್ರೌಡಶಾಲೆ. ನನ್ನ   ಇಂದಿನ ಭವಿಷ್ಯ ರೂಪಿಸಿದ ಪುಣ್ಯ ದೇಗುಲ ಅದು ಅಂದ್ರೆ ಅತಿಶಯೋಕ್ತಿ ಏನೂ ಅಲ್ಲ. ಈ ಜ್ಞಾನದೇಗುಲ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶುಕ್ರವಾರ ಸಂತೆ ಅನ್ನೋ ಗ್ರಾಮದಲ್ಲಿದೆ. ಬ್ಯಾಕರವಳ್ಳಿ ಜಯಣ್ಣ ಅನ್ನೋ ಪುಣ್ಯಾತ್ಮ ನನ್ನನ್ನ  ಆ ಶಾಲೆಗೆ 9 ನೇ ತರಗತಿಗೆ ಸೇರಿಸಿದ್ದರು.  ಆ ಬಗ್ಗೆ ಹೇಳುತ್ತಾ ಹೋದ್ರೆ ಬಹಳಷ್ಟಿದೆ ಬಿಡಿ. ಸಧ್ಯಕ್ಕೆ ಅಲ್ಲಿ ನನ್ನ ಹಾಗು ನನ್ನ ಸಹಪಾಠಿಗಳ ತುಂಟತನದ ಹಾಗು ಮೂರ್ಖತನದ ಒಂದು ಸಣ್ಣ ಘಟನೆ ನಿಮ್ಮ ಮುಂದೆ ಇಡುತ್ತಿದ್ದೇನೆ.
    ಅವತ್ತು ಶುಕ್ರವಾರ..., ನಮ್ಮ ಶಾಲೆಯ ಪಾಲಿಗದು ವಿಶೇಷ ದಿನ.  ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ದರಾಗುತ್ತಿದ್ದ ನಮಗೆ ಅಂದು ಶಾರದಾಂಭೆ ಪೂಜೆ ಏರ್ಪಡಿಸಲಾಗಿತ್ತು. ಹೇಳಿ ಕೇಳಿ ಶುದ್ದ ಹಳ್ಳಿಗಾಡಿನ ಸಂಪ್ರದಾಯ ಶರಣರಿರುವ ಊರು ಅದು. ಅಲ್ಲಿ ಜಾತಿ ಗೀತಿಯ ಸೋಂಕು ಇಲ್ಲದಿದ್ದರೂ ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಶ್ರದ್ದೆಯಂತೂ ಖಂಡಿತಾ ಇತ್ತು. ನಾನು ಸಿಟಿ ಶಾಲೆಯಲ್ಲಿ ಓದಿ ಯಾವುದೋ ಕಾರಣಕ್ಕೆ ಆ ಶಾಲೆಗೆ ಸೇರಿದವ.  ಕೇವಲ ಯಾಂತ್ರಿಕ ಶಿಸ್ತುಗಳನ್ನ ಕಂಡಿದ್ದ ನನಗೆ ಅಂದಿನ ಐಕ್ಯತೆ, ಜವಾಬ್ದಾರಿ, ಎಲ್ಲವೂ ಹೊಸದು.
 ನನಗೆ ಹಾಗು ನನ್ನ ಗೆಳೆಯರ ತಂಡಕ್ಕೆ ಅಂದು ಇಡೀ ಶಾಲೆಗೆ ಬಾಳೆ ಹಾಗು ಮಾವಿನ ತೋರಣ ಕಟ್ಟುವ ಜವಾಬ್ದಾರಿ. ಸಿಟಿಯಿಂದ ಬಂದವ ಅನ್ನೋ ಕಾರಣಕ್ಕೆ ನಾನೇ ಆ ಟೀಮ್ ಗೆ ಲೀಡರ್ ಕೂಡ.  ರಸ್ತೆ ಬದಿಯಲ್ಲಿರೋ ಮಾವಿನ ಮರ ಹತ್ತಿ ಸಮಸ್ಯೆ ಆಗಬಾರದು ಅದೇ ರೀತಿ ಯಾರದ್ದೋ ತೋಟಕ್ಕೆ ನುಗ್ಗಿ ಬಾಳೆ ಕಡಿದ ಆರೋಪ ಬರಬಾರದು ಅನ್ನೋ ಕಾರಣಕ್ಕೆ ನಮ್ಮ ಸೋಷಿಯಲ್ ಟೀಚರ್ ವೈ.ಬಿ.ಎನ್ ( ವೈ.ಬಿ. ನಂಜಪ್ಪ) ಅವರು ಅವರದ್ದೇ ತೋಟಕ್ಕೆ ಹೋಗಿ ಎಷ್ಟು ಬೇಕೋ ಅಷ್ಟು ಬಾಚಿ ತನ್ನಿ ಅಂತಾ ಆದೇಶ ನೀಡಿದ್ದರು. ನಾನು ನನ್ನ ಪಟಾಲಂ ಜೊತೆ ಅತ್ತ ಹೊರಟೇ ಬಿಟ್ಟೆ.
                    ಮಲೆನಾಡಿನ ದೇಹ ಸಿರಿಗೆ ಸಾಕ್ಷ್ಯಿ ಹೇಳೋ ತೋಟ ಅದು. ನಳನಳಿಸುವ ಹಸಿರಿನ ನಡುವೆ ಹೂ ದುಂಭಿಗಳ ಝೇಂಕಾರ......, ಮಾವು, ಹಲಸು, ಕಿತ್ತಳೆ, ಸಪೋಟ, ಬಾಳೆ ಇತ್ಯಾದಿ ಇತ್ಯಾದಿ...., ಮೇಷ್ಟ್ರು ತೋಟ ಅಂದ ಮೇಲೆ ನಾವು ನಮ್ಮಿಷ್ಟದಂತೇ ನಡೆದುಕೊಳ್ಳುವಂತಿಲ್ಲ.  ಆ ಕಾರಣಕ್ಕೆ ಕೇವಲ ಮಾವಿನ ಸೊಪ್ಪನ್ನು ಕೀಳೋಕೆ ಒಂದಿಬ್ಬರು ಮರ ಹತ್ತಿದ್ದರು. ಆ ಪೈಕಿ ಮಾವಿ ಸೊಪ್ಪು ಕೀಳುತ್ತಿದ್ದ ಹೂವಣ್ಣನಿಗೆ ದೂರದಲ್ಲಿ ಒಂದು ತೆರೆದ ಬಾವಿ ಕಾಣಿಸಿತ್ತು. ಮರದಿಂದ ಇಳಿದ ಆತ ''ಲೇ..., ಎಲ್ರೂ ಈಜಾಡಣ್ವಾ.....? ಅಂತ ತರಲೆ ಐಡಿಯಾ ಕೊಟ್ಟಿದ್ದ
        ಹೇಳಿ ಕೇಳಿ ಹಳ್ಳಿ ಹೈದರು..., ನಾನೂ ಕೂಡ ಹೇಮಾವತಿ ನದಿ ತಟದವನಾಗಿದ್ರಿಂದ ಎಲ್ಲರಿಗೂ ಈಜು ಚೆನ್ನಾಗೇ ಬರುತ್ತಿತ್ತು. ಒಂದು ಅರ್ಧ ಘಂಟೆ ಭಾವಿಯಲ್ಲಿ ಈಜಾಡಿದ ನಾವು ಆಮೇಲೆ ಮಾವಿನ ಸೊಪ್ಪು, ಬಾಳೆ ದಿಂಡು ಹೊತ್ತು ನಮ್ಮ ಶಾಲೆ ಸೇರಿದ್ದೆವು. ಆದ್ರೆ ಅದಕ್ಕೂ ಮುಂಚೆ ಒಂದು ಎಡವಟ್ಟಾಗಿತ್ತು. ಅಲ್ಲಿ ದನ ಮೇಯಿಸುತ್ತಿದ್ದ ಯಾವನೋ ಒಬ್ಬ ( ಅವನಜ್ಜಿ) ನಮ್ಮ ಶಾಲೆಗೆ ನಾವು ಬಾವಿಗಿಳಿದು ಈಜಾಡಿದ್ದ ಬಗ್ಗೆ ಮಾಹಿತಿ ನೀಡಿದ್ದ.
     ಸರಿ, ನಾವು ಶಾಲೆ ಸೇರುತ್ತಿದ್ದಂತೇ ನಮ್ಮ ಪಿ.ಟಿ ಮಾಸ್ಟರ್ ಹನುಂತರಾಯಪ್ಪ ನಮ್ಮ ತಂಡವನ್ನ ಕರೆದು ಸಾಲಾಗಿ ನಿಲ್ಲಿಸಿದರು. ಅವರ ಕರಿ ಮೊಗದಲ್ಲಿ ತಡೆಯಲಾರದಷ್ಟು ಕೋಪ ಎದ್ದು ಕಾಣುತ್ತಿತ್ತು. " ಲೇ...ನನ್ ಮಕ್ಳ ಯಾರೆಲ್ಲಾ ಬಾವಿಗೆ ಇಳಿದಿದ್ರೀ ಎಲ್ಲಾ ಸತ್ಯ ಒಪ್ಕೊಂಡು ಈಕಡೆ ಬಂದ್ ನಿಂತ್ಕಳಿ....ಒದೆ ಕಮ್ಮಿ ಆಗುತ್ತೆ ಅಂತಾ ಧಮಕಿ ಬೇರೆ.  ಈ ಪಿ.ಟಿ ಯಪ್ಪನಿಗೆ ಇವೆಲ್ಲಾ ಹೆಂಗ್ ಗೊತ್ತಾಯ್ತದೇ ಅನ್ನೋ ಭಂಡ ದೈರ್ಯದಲ್ಲಿದ್ದ ನಾವು ನಿಂತಲ್ಲೇ ಸುಮ್ಮನೇ ನಿಂತಿದ್ದೆವು.  ಮತ್ತಷ್ಟು ಕೆಂಡಾಮಂಡಲರಾದ ಅವರು ನಮ್ಮ ಸುತ್ತಾ ಒಂದು ರೌಂಡ್ ಹಾಕಿದರು ಅಷ್ಟೇ....,  ಬಾವಿಗಿಳಿದ  ಒಬ್ಬೊಬ್ಬರನ್ನೇ ಕರೆದು '' ಸುಳ್ ಬೊಗಳ್ತೀಯೇನೋ....?' ಅನ್ನುತ್ತಾ ಸುರುಗೀ ಗಿಡದ ಬೆತ್ತದಿಂದ ಬಾಸುಂಡೆ ಬರುವಂತೆ ( _ ಮೇಲೆ) ಭಾರಿಸಿಯೇ ಬಿಟ್ಟರು.  ನೋವು ತಾಳದ ನಾವು ಸತ್ಯ ೊಒಪ್ಪಿಕೊಂಡು ಕ್ಷಮೆ ಯಾಚಿಸಿ ಅವರ ಅಂದಿನ ಕಳಕಳಿ ಹಾಗು ಜವಾಬ್ದಾರಿಯ ಬೋಧನೆ ಕೇಳಿ ತಪ್ಪಿಸಿಕೊಂಡೆವು.
    ವಿಷಯ ಇದಲ್ಲಾರೀ...., ನಮ್ಮನ್ನ ಬಾವಿಗಿಳಿಯುವಂತೆ ಮಾಡಿದ್ದ ಹೂವಣ್ಣನಿಗೆ ಮಾತ್ರ ಮೇಷ್ಟ್ರು ಏನೂ ಮಾಡಲ್ಲಿಲ್ಲ. ನಮಗೆ ಇದು ನಿಜವಾಗಲೂ ಅಚ್ಚರಿಯನ್ನುಂಟು ಮಾಡಿತ್ತು. ನಮ್ಮ  ಒಬ್ಬೊಬ್ಬರಿಗೂ ಬೆತ್ತದ ಪೆಟ್ಟು ಬೀಳುತ್ತಿದ್ದಾಗ ಅದು ತನಗೇ ಬಿದ್ದಂತೇ ಅಳುತ್ತಿದ್ದ ಅವನನ್ನು ಪಿ.ಟಿ. ಮೇಷ್ಟ್ರು ಗದರಿಸಿ ಓಡಿಸಿದ್ದರು.   ಅದು ಒಂದು ರೀತಿಯ ರಹಸ್ಯವಾಗಿ ನಮ್ಮ ಅನುಮಾನಕ್ಕೆ ಕಾರಣವಾಗಿ ನಮ್ಮಗಳ ಮನಸ್ಸಲ್ಲೇ ಉಳಿದುಕೊಂಡಿತ್ತು.
     ಹೀಗೆ ರಹಸ್ಯ ಬೇಧಿಸಲು ಹೊರಟ ನಾನು ಮೇಷ್ಟರ ಆಪ್ತರನ್ನ ಕೇಳಿದಾಗ ಭಾವಿಗಳಿದ ನಮ್ಮನ್ನು ಅವರು ಕಂಡು ಹಿಡಿದ ರಹಸ್ಯ ಗೊತ್ತಾಯ್ತು...., ನಮ್ಮ ಮೂರ್ಖತನಕ್ಕೋ ಅಥ್ವಾ ಅವತ್ತಿನ ಪರಿಸ್ಥಿತಿಗೋ ಗೊತ್ತಿಲ್ಲ ತಡೆಯಲಾಗದ ನಗು ಬಂತು.
       ಅದೇನಂದ್ರೆ...ಸತ್ಯ ಒಪ್ಪಿಕೊಳ್ಳದ ನಮ್ಮ ತಂಡದ ಸುತ್ತ  ಒಂದು ರೌಂಡ್ ಹಾಕಿದ್ದ ಮೇಷ್ಟ್ರು ಯಾರದ್ದೆಲ್ಲಾ ಪ್ಯಾಂಟ್ ಒದ್ದೆಯಾಗಿದೆ ಅನ್ನೋದನ್ನ ಗಮನಿಸಿದ್ದಾರೆ....ಅಂದ್ರೆ ಬಾವಿಗಿಳಿದು ಈಜಾಡಿದ ನಂತರ ಒದ್ದೆಯಾಗಿದ್ದ  ಒಳು  ಉಡುಪನ್ನ ಹಿಂಡಿ ಹಾಕಿಕೊಂಡು ಬಂದಿದ್ದವರೆಲ್ಲಾ ಮೇಷ್ಟ್ರ ಡಿಟೆಕ್ಟಿವ್ ಕಣ್ಣಿಗೆ ಸಿಕ್ಕಿ ಬಿದ್ದಿದ್ದೆವು.
                    ಹೂವಣ್ಣ ಮಾತ್ರ ಸಿಕ್ಕಿ ಬೀಳಲ್ಲಿಲ್ಲ.......ಕಾರಣ................. 

Tuesday, May 28, 2013

ಆ.....ರೆಸ್ಟ್.......,!

'' ರ್ರೀ...., ಬ್ಯಾಂಕ್ ನಲ್ಲಿ ಆಡಿಟಿಂಗ್ ನಡಿತಾ ಇದೆ. ಒಟ್ಟೊಟ್ಟಿಗೆ ಮೂರು ಬ್ರಾಂಚ್ ಗಳಿಗೆ ವಿಸಿಟ್ ಹಾಕಬೇಕು. ಪ್ಲೀಸ್ ಇವತ್ತು ಒಂದು ದಿನ ಆಂತೂನ ನೋಡ್ಕೊಳ್ಲೀ ಪ್ಲೀಸ್.....,
ನನ್ನ ಮನದನ್ನೆಯ ಮಾತಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ಯಾಕಂದ್ರೆ ತಿಂಗಳಿಗೆ ಹದಿನೈದು ದಿನ ಮಾತ್ರ ಮಗುವಿನ ಉಸ್ತುವಾರಿ ನೋಡಿಕೊಳ್ಳುವ ನನ್ನ ಮಹಾನ್ ಅತ್ತೆ ಈ ಬಾರಿ ಕೂಡ ಊರಿನ ದಾರಿ ಹಿಡಿದಿದ್ದರು. ನನ್ನ 2 ನೇ ಮಗಳು ಮಹಾನ್ ತುಂಟಿ ಆಂತರ್ಯಳನ್ನು ನೋಡಿಕೊಳ್ಳುವ ಗುರುತರ ಜವಾಬ್ದಾರಿ ನನ್ನ ಹೆಗಲೇರಿತ್ತು.  ಭಾನುವಾರದ ರಜೆಯನ್ನು ಶನಿವಾರಕ್ಕೇ ಪೋಸ್ಟ್ ಪೋನ್ ಮಾಡಿದ ನಾನು ಮಾತಿಲ್ಲದಂತೆ ಮಗಳ ಜೊತೆ ಕುಳಿತುಕೊಂಡೆ. ಅದ್ಯಾಕೋ ಏನೋ ಭಾನುವಾರವನ್ನ ಮಿಸ್ ಮಾಡಿಕೊಳ್ಳೋದು ಅಂದ್ರೆ ನನಗೆ ತುಂಬಾ ಬೇಜಾರಾಗುತ್ತೆ. ಅವತ್ತೇ ನನ್ನ ಅರ್ಧಾಂಗಿಗೂ ರಜಾ ಇರೋ ಕಾರಣ ನಾನೂ ಕೂಡ ಮಡದಿ ಮಕ್ಕಳ ಜೊತೆ ಮನೆಯಲ್ಲೇ  ಇರಲು ಬಯಸುತ್ತೇನೆ. ಅದರಲ್ಲೂ ಅವತ್ತು ನನಗೆ ಅಥ್ವಾ ನನ್ನ ಮಗಳು ಅಭಿಜ್ಞಾಳಿಗೆ ಇಷ್ಟವಾದ ನಾನ್ ವೆಜ್ ಅಡುಗೆ......, ಅದನ್ನ ನಾನ್ ಮತ್ತೆ ನನ್ನ ಹೆಂಡ್ತಿ ಜೊತೆ ಸೇರಿ ಮಾಡೋದ್ರಿಂದ ಅದೊಂಥರಾ ವಿಶೇಷ ಖುಷಿನೇ ಬಿಡಿ.
 ವಿಷಯಕ್ಕೆ ಬಂದು ಬಿಡುತ್ತೇನೆ ಆ ಶನಿವಾರ ನನ್ನಾಕೆ ನನಗೆ ಬಾಯ್....ಬೈ...ಬೈ ಅಂತಾ ಹೇಳಿ ಡ್ಯೂಟಿಗೆ  ಹೊರಟು ಹೋಗಿಯೇ ಬಿಟ್ಟಳು. ಅವಳ ಆಕ್ಟೀವಾ ಹೊಂಡಾದಿಂದ ಧೂಳೆದ್ದ ರಸ್ತೆಯ ಮೇಲೆ ಶೂನ್ಯ ನೋಟ ಹಾಯಿಸಿ ಮನೆ ಒಳಗೆ ಸೇರಿಕೊಂಡೆ. ಇನ್ನು  ನನ್ನ 2 ನೇ ಮಗಳು ಆಂತರ್ಯಳ ಮಾತುಗಳನ್ನ ಕೇಳೋದು ಆಂ...ಹೂಂ...ಅನ್ನೋದು ಇದ್ದಿದ್ದೇ ಬಿಡಿ. ಕೇವಲ 2ವರೆ ವರ್ಷದ ನನ್ನ ಮಗಳು ಕನ್ನಡವನ್ನ ಅರಳು ಹುರಿದಂತೆ ಮಾತನಾಡುತ್ತಾಳೆ. ದೊಡ್ಡವರೂ ಬೆಚ್ಚಿ ಬೀಳುವಂತೆ ದೊಡ್ಡ ದೊಡ್ಡ ಪ್ರಶ್ನೆಗಳನ್ನ ಕೇಳುತ್ತಾಳೆ.
ಅವತ್ತೂ ಕೂಡ ಸಾಕಷ್ಟು ಸಮಯ ಅವಳ ಜೊತೆ ಆಟವಾಡುತ್ತಾ ಸಮಯ ಕಳೆದೆ. ಮದ್ಯಾಹ್ನದ ಗಡಿ ದಾಟುತ್ತಿದ್ದಂತೇ ನನಗೆ ಸ್ನಾನ ಮಾಡಿಕೊಳ್ಳೋಣ ಅನ್ನಿಸಿತ್ತು. ಹಾಗೂ ಹೀಗೂ ಮಗಳನ್ನು ಪುಸಲಾಯಿಸಿ ಟಿವಿ ಯಲ್ಲಿ ಕಾರ್ಟೂನ್ ನೆಟ್ ವರ್ಕ್ ಹಾಕಿಕೊಟ್ಟು  ಮೆಲ್ಲನೆ ಬಾತ್ ರೂಮ್ ಸೇರಿಕೊಂಡೆ.  ಹೋಗೋ ಮುನ್ನ '' ಮಗಳೇ ಬೇಗ ಬರ್ತೀನೀ....ಬೋಲ್ಟ್ ಹಾಕಿರೋಲ್ಲಾ....ಭಯ ಆದ್ರೆ ನನ್ನನ್ನ ಕರಿ..ಆಯ್ತಾ,,,? ಅಂತಾ ಹೇಳಿದ್ದೆ.
ಮದ್ಯಾಹ್ನದ ಸಮಯದಲ್ಲಿ ಸ್ನಾನ ಮಾಡೋದು ಅಂದ್ರೆ ಅತ್ತ ತಣ್ಣಗೂ ಅಲ್ಲ ಇತ್ತ ಬಿಸಿಯೂ ಅಲ್ಲ ಅನ್ನೋ ಪರಿಸ್ಥಿತಿ. ಒಂದು ಹತ್ತು ನಿಮಿಷ ಸ್ನಾನದ ಶಾಸ್ತ್ರ ಮುಗಿಸಿ ಹೊರಗೆ ಬರೋದಕ್ಕೆ ಬಾಗಿಲು ತೆಗೆಯಲು ಯತ್ನಿಸಿದೆ.....,
ಏನಾಶ್ಚರ್ಯಾ.....?!!!!..., ನನಗೆ ಗೊತ್ತಿಲ್ಲದಂತೇ ಬಾಗಿಲು ಭದ್ರವಾಗಿ ಕುಳಿತುಕೊಂಡಿದೆ.....!!. ದಬಾಯಿಸಿ ಎಳೆದೆ...ಊಹುಂ ಬರಲ್ಲಿಲ್ಲ. ದಮ್ ಕಟ್ಟಿ ಇದ್ದ ಶಕ್ತಿಯನ್ನೆಲ್ಲಾ ಹಾಕಿ ಎಳೆದೆ. ಹ್ಯಾಂಡಲ್ ಕಿತ್ತು ಕೈಗೆ ಬಂದು ದಬಾರನೆ ಬಾತ್ ರೂಂ ನಲ್ಲಿ ಪಲ್ಟಿ ಹೊಡೆದೆ. 2 ಬಕೆಟ್ ಗಳು ನನ್ನ ಪುಟ್ಟ ದೇಹದ ಅಡಿ ಸಿಲುಕಿ ಮೃತಪಟ್ಟವು.
ಎಸ್ .......,,,  ಅಕ್ಷರಷಃ ಬಂಧಿತನಾಗಿದ್ದೆ. ನನ್ನ ಮಗಳು ಆಂತರ್ಯ ಹೊರಗಡೆಯಿಂದ ಬಾತ್ ರೂಂ ನ ಚಿಲಕ ಜಡಿದುಬಿಟ್ಟಿದ್ದಳು. ಅತ್ತ ಕಾರ್ಟೂನ್ ನೆಟ್ ವರ್ಕ್ ನ ವಾಲ್ಯೂಮ್ ಇಡೀ ಊರಿಗೆ ಕೇಳಿಸುವಂತೆ ಅಬ್ಬರಿಸುತ್ತಿತ್ತು. ನಾನು ಮಗಳೇ....ಆಂತೂ..., ಚಿನ್ನೂ....., ಪುಟ್ಟಮ್ಮಾ...., ಅಂತಾ ಕೂಗೀ ಕೂಗೀ ಸಾಕಾಗಿ ಹೋದೆ.  ಏನೂ ಪ್ರಯೋಜನವಾಗಲ್ಲಿಲ್ಲ.
ಬಾತ್ ರೂಂ ನ ಗೋಡೆಗೆ ಗೀಜರ್ ನ ಪೈಪ್ ಲೈನ್ ಅಳವಡಿಸಿದ್ದ ಕಾರಣಕ್ಕೆ ಅದರ ಬಿಸಿ ಇಡೀ ಬಾತ್ ರೂಂ ನ್ನು ಆವರಿಸುತ್ತಿತ್ತು.  ಅತ್ತ ಕಿಟಕಿಗೆ ಸಮಾನಾಂತರದಲ್ಲಿ ಬಟ್ಟೆ ಒಣ ಹಾಕಿದ್ದ ಕಾರಣ ಗಾಳಿಯೂ ಬರುತ್ತಿಲ್ಲ....., ಆಹಾಹ...ಹ ಏನ್ ಹೇಳೋದು ಸ್ವಾಮಿ.., ಈಗ ಪಿಕ್ಚರ್ ನಲ್ಲಿ ಖಳನಾಯಕ ಸುದೀಪ್  ಸ್ಟೀಮ್ ಬಾತ್ ಗೆ ಕುಳಿತಂತೆ ಆಗಿತ್ತು ನನ್ನ ಪರಿಸ್ಥಿತಿ. ತಣ್ಣೀರು ಹುಯ್ದುಕೊಳ್ಳೋಣ ಅಂದ್ರೆ ಬಕೆಟ್ ಕೂಡ ಇಲ್ಲ. ಶವರ್ ಆನೆ ಮಾಡಿ ತಕ್ಕಮಟ್ಟಿಗೆ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವೀಯಾದೆ. ಸುಮಾರು ಒಂದೂವರೆ ಘಂಟೆ ಇದೇ ಪರಿಸ್ಥಿತಿಯಲ್ಲಿ ಬಾತ್ ರೂಂ ನಲ್ಲೇ ಕಳೆಯಬೇಕಾಗಿ ಬಂತು. ಮನೆಯ ಮುಂಬಾಗಿಲನ್ನೂ ಲಾಕ ಮಾಡಿದ್ದ ಕಾರಣ ಒಳಗೆ ಯಾರೂ ಬರುವಂತೆ ಇರಲ್ಲಿಲ್ಲ.  ಇತ್ತ ಆಂತರ್ಯ ಇದ್ದಕ್ಕಿದ್ದಂತೇ ಯಾವುದೂ ಸದ್ದು ಮಾಡದಂತೆ ಮೌನವಾಗಿರೋದು ಗಾಬರಿ, ಆತಂಕ ಹೆಚ್ಚಾಗುವಂತೆ ಮಾಡಿ ಎದೆಬಡಿತ ನಗಾರಿ ಬಡಿತದಂತೆ ಕೇಳಿಸುತ್ತಿತ್ತು.  ಇನ್ನೇನು ನನ್ನ ಕಣ್ಣ ಅಂಚಿನಲ್ಲಿ ನೀರ ಹನಿ ಮೂಡಬೇಕು......., ಪಪ್ಪಾ ಅನ್ನೋ ಮುದ್ದಾದ ಧ್ವನಿ...., ನನಗೆ ಹೋದ ಜೀವ ಮರಳಿ ಬಂದಿತ್ತು.
ಮೆಲ್ಲನೆ ಬಾತ್ ರೂಂ ಬಾಗಿಲಿನ ಚಿಲಕ ತೆಗೆದ ಆಂತರ್ಯ...., ಸ್ನಾನ ಆಯ್ತ ಪಪ್ಪಾ....? ನಿಮ್ಗೆ ಭಯ ಆಗ್ಬಾರ್ದು ಅಂತಾ ಬೋಲ್ಟ್ ಹಾಕಿದ್ದೇ.....ಅಂದ್ಲು.  ಅದೇನ್ ಭಯ ಬಿಡ್ರಿ ಸ್ನಾನ ಮಾಡಿ ನಂತರ ತೊಟ್ಟುಕೊಂಡಿದ್ದ ಬನಿಯನ್  ಸೇರಿದಂತೆ ಎಲ್ಲಾ ವಸ್ತ್ರಗಳು ಒದ್ದೆಯಾಗಿದ್ದವು. ಅದನ್ನ ಹೇಳಿಕೊಳ್ಳೋಕಾಗುತ್ಯೇ......?. ನನ್ನ ತುಂಟ ಮಗಳು ಬಾಗಿಲಿಗೆ ಚಿಲಕ ಜಡಿದು ಕಾರ್ಟೂನ್ ನೋಡ್ತಾ ಅಲ್ಲೇ ನಿದ್ದೆ ಮಾಡಿಟ್ಟಿದ್ದಾಳೆ. (ಹಾಳಾದೋವ್ನು ಅದ್ಯಾ ಕಿತ್ತೋದ ಕಾರ್ಟೂನ್ನೋ ಗೊತ್ತಿಲ್ಲ. ) ನಿದ್ದೆಯಿಂದ ಎದ್ದ ನಂತರ ನನ್ನ ನೆನಪಾಗಿ ಬಾಗಿಲು ತೆರೆದಿದ್ದಾಳೆ. ಪಾಪ ಅವಳಿಗೇನು ಗೊತ್ತು ಬಾತ್ ರೂಂ ನಲ್ಲಿ ಬಂಧಿಯಾಗಿದ್ದ ನಾನು ಅದೆಷ್ಟು ಹಾಡು ಹೇಳಿದ್ದೇ.....ಅದೆಷ್ಟು ದೇವರ ನಾಮ ಸ್ತೋತ್ರ ಮಾಡಿದ್ದೇ ಅಂತಾ....,

Monday, March 26, 2012

ಸಂಜೆಯಾಗಿ ಹೋಗಿದೆ....

   ನಿನ್ನ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಇದೇ ಜಾಗದಲ್ಲಿ ನಾನು ಮತ್ತು ನಿನ್ನ ಅಪ್ಪ ದೊಡ್ಡ ಚಪ್ಪರ ನೆಟ್ಟಿದ್ದೆವು. ಆಗ ಈ ಊರು ಅಷ್ಟೇನೂ ಬೆಳೆದಿರಲ್ಲಿಲ್ಲ, ಅಲ್ಲೊಂದು ಇಲ್ಲೊಂದು ಮನೆ. ಆದರೆ ಚಪ್ಪರದ ತುಂಬಾ ಜನರೋ ಜನ. ನೆಂಟರಿಷ್ಟರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳ ತುಂಬಾ ಜನ ಬಂದಿದ್ರು......., ಅವತ್ತಿನ ಗೌಜಿ ಕಣ್ಣಿಗೆ ಕಟ್ಟಿದ ಹಾಗಿದೆ.
     ಅಮ್ಮನ ಮುಖದಲ್ಲಿ ಅದೇನೋ ಮಂದಹಾಸ. ಕಣ್ಣುಗಳಲ್ಲಿ ಸಾಕ್ಷಾತ್ ದೇವತೆಯ ಕಳೆ. ಕಳೆದ ಹಲವು ತಿಂಗಳಿನಿಂದ ಮೌನವಾಗಿದ್ದ ಅಮ್ಮ  ತಾನು ಬಾಳಿ ಬದುಕಿದ ಮನೆಯಂಗಳಕ್ಕೆ ಕಾಲಿಟ್ಟ ಕೂಡಲೇ ಮಗುವಾಗಿದ್ದಾರೆ. ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.
    ಏ...ಪುಟ್ಟಾ...., ಇದು ಭಾರೀ ಶಾಮಿಯಾನ ಕಣೋ....., ಇಲ್ಲಿ ಸ್ಟೇಜ್ ಕೂಡ ಹಾಕಿದ್ದಾರೆ. ತುಂಬಾನೆ ಚೆನ್ನಾಗಿದೆ ಮಗ. ಇಲ್ಲಿ ಈಗ ನಿನ್ನ ಮಗನ ಅಲ್ಲಲ್ಲಾ ನನ್ನ ಮಗನ ಹುಟ್ಟು ಹಬ್ಬ ಅಂದ್ರೇ..., ನನಗಂತೂ ಹೆಮ್ಮೇನೇ......, ನಿಮ್ಮಪ್ಪ ಇದ್ದಿದ್ರೇ ಮಿಂಚು..ಮಿಂಚಿನ ಹಾಗೇ ಓಡಾಡಿಕೊಂಡಿರೋರು. ಉತ್ಸಾಹದ ನಡುವೆಯೂ ಅಮ್ಮನ ಕಣ್ಣಿನಾಳದಲ್ಲಿ ನೋವಿನ ಗುರುತು ಮೂಡಿ ಮರೆಯಾಗಿತ್ತು. ಅದುವರೆಗೂ ಸುಮ್ಮನಿದ್ದ ಅವನು ಹೊಸ ಸೀರೆ ಹಾಗು ಅಮ್ಮನ ಒಡವೆಗಳ ಪುಟ್ಟ ಪೆಟ್ಟೆಗೆಯೊಂದನ್ನ ಆಕೆಯ ಮುಂದೆ ಹಿಡಿದ.
    ಅಮ್ಮಾ ......,ನೆಂಟರಿಷ್ಟರು ಬರೋ ಹೊತ್ತಾಯ್ತು. ಹೋಗಿ ಸ್ನಾನ ಮಾಡಿ ಹೊಸಸೀರೆ ಉಟ್ಕೊಂಡು ಬಾ..., ಆಕೆ ಮಗನತ್ತ ದಿಟ್ಟಿಸಿ ನೋಡಿದಳು. ಅವನ ಮೊಗರಾವಿಂದದಲ್ಲಿ ಕಿಂಚಿತ್ತೂ ಕಳೆ ಇಲ್ಲ. ಸೋತು ಜಡ್ಡುಗಟ್ಟಿದ ಮುಖಕ್ಕೆ ಬಣ್ಣ ಬಳಿದಂತಿದೆ.  ಅವನ ನಿಲುವಲ್ಲಿ ಹತಾಷ ಭಾವ ಎದ್ದು ಕಾಣುತ್ತಿದೆ. ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಅಪ್ಪ ಎದೆಯೊಡೆದು ಸತ್ತ ಅನ್ನೋ ಅಪರಾಧಿ ಭಾವ ಅವನನ್ನು ಇನ್ನೂ ಕಾಡುತ್ತಿದೆ ಎಂದೆಣಿಸತೊಡಗಿತ್ತು. ಆದರೆ ಕೇಳುವಂತಿಲ್ಲ.
    ನೆಂಟರಿಷ್ಟರು, ಗೆಳೆಯರು,ಅವರು, ಇವರು ಎಲ್ಲಾ ಬಂದರು. ಜೋಯಿಸರು ಮಂತ್ರವನ್ನು ಪಠಿಸತೊಡಗಿದರು. ಅವನು ಮಗುವಿನ ಕಿವಿಯಲ್ಲಿ ಆಕಾಶ್, ಆಕಾಶ್, ಆಕಾಶ್ ಅಂತ ಉಸುರಿದ. ನಾಮಕರಣ ಶಾಸ್ತ್ರ ಸಾಂಗ್ಯವಾಯ್ತು. 
    ಬಂದವರಿಗೆಲ್ಲಾ ಹಬ್ಬದ ಅಡುಗೆ. ಮೊಮ್ಮಗುವಿನ ಜೊತೆ ರೇಷ್ಡೆ ಸೀರೆ ಹಾಗು ಚಿನ್ನಾಭರಣ ಧರಿಸಿ ನಿಂತ ಆಕೆಯ ಫೋಟೋ ತೆಗೆದದ್ದೇ ತೆಗೆದದ್ದು. ಬಂದವರಿಗೆಲ್ಲಾ ಆಕೆಯನ್ನು ಕಂಡಾಗ ಅದೇನೋ ಒಂಥರಾ ಆತ್ಮಿಕ ಆನಂದ. ಅಂತಹ ಮಹಾನ್ ಸಾಧ್ವಿ ಅವಳು. ಆಕೆಯ ಪರಿಶ್ರಮದಿಂದ ಈತ ದೊಡ್ಡ ಅಧಿಕಾರಿಯಾಗಿ ಬೆಳೆದು ನಿಂತಿದ್ದಾನೆ. ಊರಲ್ಲೆಲ್ಲಾ ಬಹುದೊಡ್ಡ ಹೆಸರು ಮಾಡಿದ್ದಾನೆ. ತಾಯಿ ಹಾಗು ಮಗ ಎಂದರೆ ಹೀಗಿರಬೇಕು......, ಬಂದವರಲ್ಲಿ ಈ ಮಾತು ಹೇಳದೇ ಯಾರೂ ಹೋಗಿಲ್ಲ.
    ಊರಿನ ಮಂದಿ ಖಾಲಿಯಾದರು. ನೆಂಟರು ಹೊರಟರು. ಆಳುಗಳು ಕೆಲಸ ಮುಗಿಸಿ ಕೈ ಕಟ್ಟಿ ನಿಂತರು. ಎಲ್ಲರಿಗೂ ಹೊರಡುವ ತವಕ. ಅತ್ಯಂತ ಗೌರವಯುತವಾಗಿ ಫಲತಾಂಬೂಲದ ಜೊತೆಗೆ ಈತ ಎಲ್ಲರನ್ನೂ ಬೀಳ್ಕೊಟ್ಟ.  ಮನೆಯಲ್ಲಿದ್ದ ಜನಗಳ ಸಂಖ್ಯೆ ಕರಗಿತ್ತು.
          ಪುಟ್ಟಾ ಅಲ್ಲಿ ಆ ಹಲಸಿನ ಮರ ಇದೆಯಲ್ವಾ...., ಅಲ್ಲಿ ನಾನು ಬಸಲೇಸೊಪ್ಪಿನ ಬಳ್ಳಿ ನೆಟ್ಟಿದ್ದೆ. ನೀ ಆರನೇ ಕ್ಲಾಸ್ ಓದೋವರ್ಗೂ ಆ ಬಳ್ಲಿಯಿಂದ ಕತ್ತರಿಸಿದ ಸೊಪ್ಪನ್ನ ಮಾರಿ ನಿನ್ನನ್ನ.......ಆಕೆಯ ಮಾತು ಮುಂದುವರೆದಿತ್ತು. ಆದರೆ ಅವನಿಗೆ ಅದರಲ್ಲಿ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ದೂರದಲ್ಲಿ ಅವನ ಕೈ ಹಿಡಿದಾಕೆ ಅವನಿಗೆ ಕಣ್ಸನ್ನೆ ಮಾಡಿ ಕರೆದಳು. ಅವನು ಮನೆಯೊಳಗೆ ಹೋದವ ಮತ್ತೆ ಹೊರಗೆ ಬಂದ. ಅಮ್ಮ ಇನ್ನೂ ಏನೋ ಹೇಳುತ್ತಲೇ ಇದ್ದಳು. ಅದನ್ನು ಅರ್ಧಕ್ಕೆ ನಿಲ್ಲಿಸಿದ ಆತ 
   ಅಮ್ಮಾ...., ಹೊರಡೋಣ್ವಾ....? ಅಂತ ವಿನಮ್ರನಾಗಿ ಕೇಳಿದ. ಅವನೆದೆಯಲ್ಲಿ ನೆಟ್ಟ ನೋವಿನ ಶೂಲ ಅಸಹಾಯಕತೆಯ ಚೀತ್ಕಾರವಾಗುವುದೇನೋ ಎಂಬ ಭಯ ಆಕೆಗೆ. ಅವಳು ಮತ್ತಷ್ಟು ಖುಷಿಯಾದಳು.
   ಓ.., ಹೌದಲ್ವಾ...? ಸಂಜೆಯಾಗಿ ಹೋಗಿದೆ........! ಗೊತ್ತೇ ಆಗಿಲ್ಲಾ ನೋಡು. ಹಾಗೆಂದವಳು ಕೋಣೆಯೊಳಗೆ ಹೋಗಿ ಧರಿಸಿದ್ದ ಹೊಸ ಸೀರೆ ಬದಲಾಯಿಸಿ ತಾನು ಮೊದಲು ಉಟ್ಟಿದ್ದ ಹಳೇಯ ಮಾಸಲು ಸೀರೆ ಉಟ್ಟುಕೊಂಡಳು.  ಹಾಗು ಆಭರಣಗಳನ್ನು ಪೆಟ್ಟಿಗೆಯಲ್ಲಿಟ್ಟು ಸೀರೆ ಹಾಗು ಅದನ್ನು ಮಗನ ಕೈಗಿತ್ತಳು. ಅವನು ಅವೆಲ್ಲವನ್ನೂ ತನ್ನ ಹೆಂಡತಿಯ ಕೈಗಿತ್ತ.  ಆಕೆ ಲಗುಬಗೆಯಿಂದ ಒಳಸೇರಿ ಮುಂಬಾಗಿಲು ಹಾಕಿ ಚಿಲಕ ಜಡಿದುಕೊಂಡಳು.
     ಹೈವೇ ಯಲ್ಲಿ ಆತನ ಕಾರು ಓಡುತ್ತಿತ್ತು. ಆತನ ಪಕ್ಕದಲ್ಲಿ ಆತನನ್ನು ಹೆತ್ತತಾಯಿ ಕುಳಿತಿದ್ದಾರೆ. ಏನನ್ನೂ ವ್ಯಕ್ತಪಡಿಸಲಾಗದ ಅಸಹಾಯಕತೆ  ಸ್ಥಿತಿ ಅವನದು. ಕಣ್ಣಿನಿಂದ ಧಾರಾಕಾರವಾಗಿ ನೀರು ಇಳಿಯತೊಡಗುತ್ತೆ. ಅದನ್ನು ಕಂಡ ಅವನ್ನಮ್ಮ ಯಾಕಪ್ಪಾ ಅಳ್ತಾ ಇದ್ದೀಯಾ...? ಅಂತಾ ಕೇಳುತ್ತಾಳೆ. ಅದಕ್ಕವನು ಇಲ್ಲಾಮ್ಮ ಅಳ್ತಾ ಇಲ್ಲಾ..ಗಾಳಿ ಜೋರಾಗಿ ಬೀಸ್ತಾ ಇದೆ ನೋಡು, ಅದು ಕಣ್ಣಿಗೆ ರಾಚಿ ಕಣ್ಣೀರು ಬರ್ತಾ ಇದೆ ಎನ್ನುತ್ತಾನೆ. ಓ ಹೌದಾ....? ಎನ್ನುತ್ತಾ ಆಕೆ ಸುಮ್ಮನಾಗುತ್ತಾಳೆ. ಇಬ್ಬರಿಗೂ ಅದು ಸುಳ್ಳು ಎನ್ನುವುದು ಗೊತ್ತಿದೆ. ಆದರೆ ಅದನ್ನು ಕೆದಕುತ್ತಾ ಹೋದರೆ ತನ್ನ ಕಂದ ಮತ್ತಷ್ಟು ಕಣ್ಣೀರಾಗುತ್ತಾನಲ್ಲಾ ಎಂದು ಆಕೆ ಸುಮ್ಮನಾಗಿ ಬಿಡುತ್ತಾಳೆ. ಇದು ಆತನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಮಾರಂಭದಲ್ಲೂ ಮರುಕಳಿಸುತ್ತೆ.
    ಆ ಹೈಟೆಕ್ ವೃದ್ದಾಶ್ರಮದ ಎದುರು ಅವನ ಕಾರು ಬರುತ್ತಿದ್ದಂತೇ ಲಗುಬಗೆಯಿಂದ ಓಡಿ ಬಂದ ಸಿಬ್ಬಂದಿ ಬಾಗಿಲು ತೆರೆಯುತ್ತಾರೆ. ಅವ ಕಾರಿನಿಂದಿಳಿದು ಮುಂದಿನ ಡೋರ್ ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆ ಅವಕಾಶ ನೀಡದ  ಆ ತಾಯಿ ತಾನೇ ಕಾರಿನಿಂದ ಕೆಳಗಿಳಿದು ಪರ್ವಾಗಿಲ್ಲ ಬಿಡು ಕಂದಾ ಎನ್ನುತ್ತಾರೆ. ಆತನ ಹಾಗು ಆಕೆಯ ಎದೆಗೆ ಒಮ್ಮೆಗೆ ಸಾವಿರ ಸಾವಿರ ಭಲ್ಲೆಗಳು ತಿವಿಯುತ್ತವೆ. ಅಸಾಧ್ಯ ವೇದನೆ......, ಆದರೆ ಇಬ್ಬರೂ ವ್ಯಕ್ತಪಡಿಸಿಕೊಳ್ಲುವುದಿಲ್ಲ.
      ಉಸಿರನ್ನೊಮ್ಮೆ ಎಳೆದುಕೊಂಡ ಆತ ಅಮ್ಮಾ...., ಬರ್ತೀನಮ್ಮಾ..., ಎನ್ನುತ್ತಾನೆ. ಅವನಷ್ಟೇ ತಾಳ್ಮೆಯಿಂದ ಆಕೆ ಕೂಡ ಆಯ್ತು ಪುಟ್ಟಾ ಹೋಗಿ ಬಾ...ಜೋಪಾನ ಮಗನೇ ಎನ್ನುತ್ತಾಳೆ. ಇನ್ನೊಂದು ಕ್ಷಣ ಅಲ್ಲಿದ್ದರೂ ಎದೆಯೊಳಗಿರುವ ನೋವಿನ ಕಟ್ಟೆ ಒಡೆದು ಹೋಗುತ್ತೆ...ನಾನಳುವುದನ್ನು ಕಂಡರೆ ಅಮ್ಮನ ಉಸಿರೇ ಉಡುಗಿ ಹೋಗುತ್ತೆ..., ಅವನೆಂದುಕೊಳ್ಳುತ್ತಾನೆ. ಬೇಗ ಹೊರಡು ಕಂದಾ...., ನನ್ನ ಕಣ್ಣೀರು ನಿನ್ನನ್ನು ಮತ್ತಷ್ಟು ದುಃಖಿತನನ್ನಾಗಿಸಬಾರದು ಅಂತಾ ಅವಳೆಂದುಕೊಳ್ಳುತ್ತಾಳೆ.
       ಅಮ್ಮನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅವನು ಹೊರಡುತ್ತಾನೆ. ಕಾರಿನ ಎಲ್ಲಾ ಗ್ಲಾಸ್ ಗಳನ್ನು ಮೇಲೇರಿಸಿಕೊಂಡು ಸ್ಟೀರಿಯೋ ಸದ್ದನ್ನು ಜೋರಾಗಿಸಿ ವೇಗವಾಗಿ ಕಾರು ಚಲಾಯಿಸುತ್ತಾನೆ. ಈಗವನು ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವುದಿಲ್ಲ. ಅಜ್ಞಾತ ಸ್ಥಳದಲ್ಲಿ ಕಾರು ನಿಲ್ಲಿಸಿ ಜೋರಾಗಿ ಅಳುತ್ತಾನೆ. ಕಿರುಚುತ್ತಾನೆ. ಎದೆ ಎದೆ ಬಡಿದುಕೊಳ್ಳುತ್ತಾನೆ. ವೃದ್ದಾಶ್ರಮದ ಕೊಠಡಿಯ ಮೂಲೆಯಲ್ಲಿ ಕುಳಿತ ಅವನಮ್ಮ  ಕೂಡ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಕಂದಾ ನೀ ಅಳಬೇಡ ಚೆನ್ನಾಗಿರು. ನಿನ್ನದೇನು ತಪ್ಪಿಲ್ಲ ಅನ್ನೋದು ನನಗೆ ಗೊತ್ತಿದೆ ಎಂದು ಹಾರೈಸುತ್ತಾಳೆ. ಅದೊಂದು ಸಂಜೆ ಹಾಗೆ ದುಃಖದ ಹನಿಗಳ ಜೊತೆಗೆ ಜಾರಿ ಹೋಗುತ್ತೆ.