Wednesday, November 10, 2010

ಬ್ರೇಕಿಂಗ್ ನ್ಯೂಸ್......,

ಹಲೋ...., ಇಸ್ ಇಟ್ ಟಿವಿ 9....?,
ಹೌದು ಹೇಳಿ.....,
ಸರ್, ಇಲ್ಲೊಂದು ಮರ್ಡರ್ ಆಗಿದೆ..., ಯಾರೋ ಇಲ್ಲಿ ಒಬ್ಬನ್ನ ಶೂಟೌಟ್ ಮಾಡಿ ಬಿಸಾಕಿ ಹೋಗಿದ್ದಾರೆ.
ಹಾಂ...! ಹೌದಾ....? ಎಲ್ಲಿ.....? ಯಾವೂರಲ್ಲಿ.....!!!??
ಸರ್, ಇಲ್ಲೇ ಚಿಕ್ಕ್ ಬಾಣಾವರ ಹತ್ರ, ಅಲ್ಲಿ ಪಂಚಾಯ್ತಿ ಆಫೀಸ್ ಇದೆ ಅಲ್ವಾ.., ಅಲ್ಲಿ........,
ಬೆಳಗ್ಗಿನ ಆ ಚುಮುಚುಮು ಛಳಿಗೆ ಇಡೀ ಹಾಸನವನ್ನೇ ಮಂಜಿನ ಮೋಡ ಕವುಕಿಕೊಂಡು ಬಿಟ್ಟಿತ್ತು. ಆ ಛಳಿಗೆ ಸವಿಗನಸು ಕಾಣುವ ಸಮಯದಲ್ಲಿ..,  ಆ ಸುಂದರ ಮುಂಜಾವಲ್ಲಿ..., ಅದ್ಯಾರೋ ಕೋಗಿಲೆ ಕಂಠದ ಹುಡುಗಿಯ ಧನಿ ನನ್ನ ಜವಾಬ್ದಾರಿಯನ್ನು ಬಡಿದೆಬ್ಬಿಸಿತ್ತು. ಆಕೆ ಪೋನ್ ಕಟ್ ಮಾಡಿದ್ದಳು.
ಸರಿ, ಈಗ ಶುರುವಾಯ್ತು ನನ್ನ ಡ್ಯೂಟಿ. ದಡಬಡನೆ ಎದ್ದವನೇ ಟಿವಿ ಆನ್ ಮಾಡಿ ಬೇರೆ ಎಲ್ಲಾ ಕನ್ನಡ ಚಾನಲ್ ಗಳನ್ನು ತಡಕಾಡಿದೆ. ಸಧ್ಯ ಯಾವುದರಲ್ಲೂ ಬ್ರೇಕಿಂಗ್ ನ್ಯೂಸ್ ಬರ್ತಾ ಇಲ್ಲ. ತಕ್ಷಣ ಡೆಸ್ಕ್ ಗೆ ಫೋನ್ ಮಾಡಿ ವಿಷಯ ಹೇಳುವ ತವಕ. ಆದ್ರೂ ಡೀಟೈಲ್ಸ್ ಮಿಸ್ ಆಗ್ಬಾರ್ದು ಅಲ್ವಾ...? ಭಾಣಾವರ ಸ್ಟೆಷನ್ ಅರಸೀಕೆರೆ ತಾಲೂಕಿಗೆ ಸೇರುತ್ತೆ. ಅಲ್ಲಿನ ಡಿ.ವೈ.ಎಸ್.ಪಿ ರಶ್ಮಿ ಮೈಸೂರಿನಲ್ಲಿ ಟ್ರೈನಿಂಗ್ ಅಂತಾ ಹೋಗಿದಾರೆ. ಆದ್ರೂ ಇರ್ಲಿ, ಇದು ಮೇಜರ್ ಇಶ್ಯೂ, ಅವರನ್ನೇ ಕೇಳೋಣ ಅಂತಾ ಫೋನ್ ಮಾಡಿದೆ. ಪಾಪ, ರಶ್ಮಿ ಮೇಡಂ ತಕ್ಷಣ ಪೋನ್ ರಿಸಿವ್ ಮಾಡಿದ್ರು, ಆದ್ರೆ ಮರ್ಡರ್ ಬಗ್ಗೆ ನನಗೇನೂ ಗೊತ್ತಿಲ್ಲ, ಬಾಣಾವರ ಪಿ.ಎಸ್.ಐ ಗೆ ಮೆಸೇಜ್ ಕೊಡ್ತೀನಿ,  ಥ್ಯಾಂಕ್ಯೂ ಜೋಸೆಫ್ ಅಂದವ್ರೇ ಪೋನ್ ಕಟ್ ಮಾಡಿದ್ರು. ಇನ್ನು ಭಾಣಾವರ ಸಬ್ ಇನ್ಸ್ ಪೆಕ್ಟರ್ ನಂಬರ್ ಇರಲ್ಲಿಲ್ಲ. ಅಲ್ಲಿ ನನ್ನ ಹೈಸ್ಕೂಲ್ ಗೆಳೆಯ ಹೀರಾಸಿಂಗ್ ಈಗ ಪೊಲೀಸ್ ಪೇದೆ ಆಗಿದ್ದಾನೆ. ತಕ್ಷಣ ಅವನಿಗೆ ಪೋನ್ ಮಾಡಿ ವಿಷಯ ತಿಳಿಸಿ ಬಾಣಾವರ ಸಬ್ ಇನ್ಸ್ ಪೆಕ್ಡರ್ ನಂಬರ್ ಬರೆದುಕೊಂಡೆ. ಬ್ರಷ್ ಗೆ ಪೇಸ್ಟ್ ಹಾಕಿಕೊಂಡು ಪರಪರ ಹಲ್ಲುಜ್ಜುತ್ತಲೇ ರಿಂಗ್ ಮಾಡಿದೆ. ಪುಣ್ಯಾತ್ಮ ಸರಿಯಾಗಿ ಹನ್ನೊಂದನೇ ರಿಂಗ್ ಗೆ ಪೋನ್ ರಿಸೀವ್ ಮಾಡಿ ತುಸು ಕೋಪದಿಂದಲೇ  ಹಲ್ಲೋ...., ಅಂದ್ರು.
ಹಲೋ.....ಹಲೋ...ಸಾರ್, ಇದು ಬಾಣಾವಾರ ಸಬ್ ಇನ್ಸ್ ಪೆಕ್ಟರ್ರಾ....?
ಹೂಂ ಹೌದ್ರೀ..., ನೀವ್ಯಾರ್ ಮಾತಾಡೋದು.
ನಾನು ಟಿವಿ9 ರಿಪೋರ್ಟರ್ ಜೋಸೆಪ್ ಅಂತಾ ಸರ್....,
ಹೂಂ..., ಹೇಳ್ರೀ ಜೋಸೆಪ್ ಸಾಹೆಬ್ರೇ...., ಏನ್ ಇಷ್ಟೊತ್ತಲ್ಲಿ....?
ಸಾಹೆಬ್ರೇ ಅದೇನೋ ಶೂಟೌಟ್ ಆಗಿದ್ಯಲ್ಲಾ..., ಅದ್ರುದು ಸ್ವಲ್ಪ ಡೀಟೈಲ್ಸ್ ಬೇಕಿತ್ತು....,
 ಆ ಹೊತ್ತಲ್ಲಿ ಸಿಡಿಲು ಬಡಿದಂತೆ ಗಾಬರಿಗೊಂಡ ಸಬ್ ಇನ್ಸ್ ಪೆಕ್ಟರ್, ಶೂಟೌಟಾ...? ಎಲ್ಲಿ..ಎಲ್ಲಿ...ಎಲ್ಲಿ....??!! ಅನ್ನೋದೆ...?
ಈ ಪೊಲೀಸರೇ ಹಾಗೆ. ಎಲ್ಲದ್ರಲ್ಲೂ ಲೇಟು, ಮೀಡಿಯಾಕ್ಕೆ ವಿಷಯ ಗೊತ್ತಾಗುತ್ತೆ ಇವ್ರಿಗೆ ಗೊತ್ತಿರೋಲ್ಲ ಅಂತಾ ಗೊಣಗಿಕೊಂಡು '' ಅದೇ ಆ ಚಿಕ್ಕ್ ಬಾಣಾವರ ಪಂಚಾಯ್ತಿ ಆಪೀಸ್ ಇದೆಯಲ್ವಾ..., ಅಲ್ಲಿ ಯಾರೋ ಕೂರ್ಗಿ ಉಮೇಶ ಅನ್ನೋವ್ನ ಶೂಟ್ ಮಾಡಿ ಎಸೆದು ಹೋಗಿದಾರಂತೆ. ಬಾಡಿ ಪಕ್ಕದಲ್ಲೇ ರಿವಾಲ್ವರ್ ಬಿದ್ದಿದೆಯಂತೆ ಸ್ವಲ್ಪ ಚೆಕ್ ಮಾಡಿ ಗುರುಗಳೆ..., ಹಂಗೇ ನಂಗೊಂದಿಷ್ಟು ಮಾಹಿತಿ ಕೊಡಿ ಎಂದೆ
ತುಂಬಾ ಥ್ಯಾಂಕ್ಸ್ ಜೋಸೆಪ್ ಸರ್, ಈಗ್ಲೇ ಹೊರಡ್ತೀನಿ ಎಂದು ಆತ ಕರ್ತವ್ಯಕ್ಕೆ ಅಣಿಯಾದ.
ಆ ಕ್ಷಣ ಐ ಆಮ್ ಗ್ರೆಟ್ ಅನ್ನಿಸಿಬಿಟ್ಟಿತ್ತು. ಹೇಗಾದ್ರೂ ಆಗ್ಲಿ ಆ ಹೆಂಗಸಿಗೆ ಮತ್ತೊಮ್ಮೆ ಪೋನ್ ಮಾಡಿ ಡೀಟೈಲ್ಸ್ ತಗೊಳೋಣ ಅಂತಾ ಪೋನಾಯಿಸಿದೆ. 
ಹಲೋ....,  ಹೇಳಿ ಸಾರ್, ಸ್ಪಾಟಿಗೆ ಬರ್ತಾ ಇದೀರಾ....?
ಹಾಂ, ಹಾಂ, ಬರ್ತೀನಿ ಮೇಡಂ, ಆದ್ರೆ ನನಗೊಂದಿಷ್ಟು ಮಾಹಿತಿ ಬೇಕಿತ್ತು....
ಕೇಳಿ ಸಾರ್.....,
ಅದೂ ಆತ ಯಾವ ಊರು ಮತ್ತೆ ಅವನ ಕಡೆವ್ರಿಗೆ ವಿಷಯ ಗೊತ್ತಾಗಿದ್ಯಾ....?
ಅವ್ನು ಇಲ್ಲೇ ಎಲ್ಲೋ ಪ್ಯಾಕ್ಟರಿ ಇಟ್ಕೊಂಡಿದಾನಂತೆ. ಮೂಲತಃ ಕೊಡಗಿನ ವಿರಾಜಪೇಟೆವ್ನು ಅಂತಾ ಪೊಲೀಸ್ರು ಹೇಳ್ತಾ ಇದ್ರು.
ಹಾಂ....., ಪೋಲಿಸ್ರಾ....? ಯಾವ್ ಪೊಲೀಸು....? ನಮ್ಗೇನು ಗೊತ್ತಿಲ್ಲಾ ಅಂತಿದ್ರಲ್ಲಾ....?
ಹೌದಾ ಸರ್, ಮತ್ತೇ ಪಿ.ಸಿ. ಸುಬ್ರಹ್ಮಣೀ ಔಟ್ ಪೋಸ್ಟ್ ನಿಂದ ಆಗ್ಲೇ ಬಂದಿದಾನಲ್ಲಾ.....?
ಔಟ್ ಪೋಸ್ಟಾ....! ಅಲ್ಯಾವುದಿದೆ ಔಟ್ ಪೋಸ್ಟು....?
ಸರ್, ಹೆಸರಘಟ್ಟ ಸ್ಟೇಷನ್ ಗೆ ಸಂಬಂದಪಡೋ ಔಟ್ ಪೋಸ್ಟ್ ಸರ್..................,,,,,
ನನಗೆ ಆ ಛಳಿಯಲ್ಲೂ ತಣ್ಣನೇ ಬೆವರುತ್ತಿರುವ ಅನುಭವವಾಯ್ತು. ಯಾಕೆಂದ್ರೆ  ಈ ಮಹಾತಾಯಿ ಹೇಳ್ತಾ ಇರೋದು ಬೆಂಗಳೂರಿನ ಹೆಸರಘಟ್ಟ ಠಾಣಾ ವ್ಯಾಪ್ತಿಗೆ ಸಂಬಂದಪಟ್ಟ ಕ್ರೈಂ ರಿಪೋರ್ಟ್. ನಾನು ಹಾಸನ ಜಿಲ್ಲಾ ವರದಿಗಾರ. ನಮ್ಮ ಜಿಲ್ಲೆಯ ಅರಸೀಕೆರೆಯಲ್ಲಿ ಭಾಣಾವರ ಹಾಗು ಚಿಕ್ಕಭಾಣಾವರ ಅನ್ನೋ ಊರುಗಳಿವೆ. ಮರ್ಡರ್ ಬಗ್ಗೆ ಬೆಂಗಳೂರಿನ ನಮ್ಮ ಕೇಂದ್ರ ಕಛೇರಿಗೆ ಫೋನ್ ಮಾಡಿದ್ರೆ ಅಲ್ಲಿರೋ ಯಾರೋ ಪುಣ್ಯಪುರುಷರು ನನ್ನ ನಂಬರ್ ಕೊಟ್ಟು ನನ್ನ ಸವಿಯಾದ ಬೆಳಗನ್ನು..............,? ಛೆ, ಹೋಗ್ಲಿ ಬಿಡ್ರಿ, ನಾನು ಕರ್ತವ್ಯ ಮರೆಯಲ್ಲಿಲ್ಲ. ಕೊಲೆಯ ಜಾಡು ಹುಡುಕಿ ಹೊರಟಿದ್ದ ನಮ್ಮ ಭಾಣಾವರ ಸಬ್ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಸಾರಿ ಸರ್, ಅದು ರಾಂಗ್ ಮೆಸೇಜು ಎಂದೆ. ಪಾಪ ನಡುವಯಸ್ಸಿನ  ಆ ಮನುಷ್ಯ ಉತ್ತರಿಸಲಾಗದೇ ಪೇಚಾಡಿಕೊಂಡು ಬಿಟ್ರು
ಒಂದಂತೂ ನೆಮ್ಮದಿ...., ಬ್ರೇಕಿಂಗ್ ನ್ಯೂಸ್ ಕೊಟ್ಟಿರಲ್ಲಿಲ್ಲ.

Monday, August 9, 2010

ಥತ್ತೇರೀ......,!

ಒಮ್ಮೊಮ್ಮೆ ನಾವು ನಮಗೆ ತಿಳಿಯದಂತೆ ನಮ್ಮಿಂದಲೇ ಅವಮಾನಿರಾಗಿ ಬಿಡುತ್ತೇವೆ....., ಮೊನ್ನೆ ಇಂತಹುದ್ದೊಂದು ಘಟನೆ ಜರುಗಿತು. ಒಂದಷ್ಟು ಅಪ್ ಗ್ರೇಡ್ ಆಗೋಣ ಅಂತಾ ನನ್ನ ಇಂಡಿಕಾ ಕಾರನ್ನು ಮಾರಿ ಸೆಕೆಂಡ್ ಹ್ಯಾಂಡ್ ಸ್ಯಾಂಟ್ರೋ ಕಾರನ್ನು ಕೊಂಡುಕೊಂಡೆ. ಇನ್ನು ಬೇರೆ ಕಾರು ಅಂದಾಕ್ಷಣ ಮನೆಮಂದಿಗೆಲ್ಲಾ ಒಂದು ರೌಂಡ್ ಹೊಡಿಸಲೇಬೇಕಲ್ವೇ...?. ನಿತ್ಯ ವಟಗುಟ್ಟುವ ಪತ್ನಿಯ ಮಂಗಳಾರತಿಯನ್ನೇ ಬೆಳಗಿನ ಶುಭಶಕುನ ಎಂದುಕೊಂಡು ನನ್ನ ಮಗಳು ಅಭಿಜ್ಞ ಹಾಗು ಒಂದಿಬ್ಬರು ಸ್ನೇಹಿತರ ಜೊತೆ ಸಕಲೇಶಪುರಕ್ಕೊಂದು ಜಾಲಿ ಟೂರ್ ಹೊರಟೆ. ಹೊರಡುವಾಗಲೇ ನನ್ನಾಕೆ " ನಿಮ್ದೊಂದು...., ಯಾವಾಗ್ ನೋಡಿದ್ರೂ ಸಕ್ಲೇಶ್ ಪುರ. ಅದು ಬಿಟ್ರೆ ಬೇಲೂರು ಹಳೇಬೀಡು.., " ಅಂತಾ ದೀಪಕರಾಗ ಹಾಡೋಕೆ ಶುರು ಮಾಡಿದ್ಲು. ಏನ್ಮಾಡ್ಲಿ ಈಗಿರೋ ಪೆಟ್ರೋಲ್ ರೇಟ್ ನಲ್ಲಿ ಅದೂ ಒಂದೇ ದಿನದಲ್ಲಿ ಊಟಿ ಕೊಡೈಕೆನಲ್ ಗೆ ಹೋಗೋಕ್ಕಾಗುತ್ತಾ...? ಅವಳ ಗುಡುಗುಡು ವದನವನ್ನೇ ಮಂಗಳವಾಧ್ಯ ಅಂತಾ ಸಮಾಧಾನ ಮಾಡಿಕೊಂಡೆ. ಅಂತೂ ಅದೊಂದು ದಿನ ನನ್ನ ಹುಟ್ಟೂರು.., ನ್ನನ ಭಾವನೆಗಳಿಗೆ.., ನನ್ನ ವ್ಯಕ್ತಿತ್ವಕ್ಕೆ ರೂಪ ಕೊಟ್ಟ ನನ್ನೂರು...., ನನ್ನ ಪ್ರೀತಿಯ ಸಕಲೇಶಪುರದಲ್ಲಿ  ತನ್ಮಯನಾಗಿ ಕಾಲ ಕಳೆದೆ. ನನ್ನ ಗೆಳೆಯರಾದ ಅಶ್ವಥ್, ರೋಶನ್, ರವಿ ಇತ್ಯಾದಿಗಳೆಲ್ಲಾ ಅವತ್ತು ನನ್ನೊಂದಿಗೆ ಬಾಲ್ಯಕ್ಕೆ ಜಾರಿದ್ದರು. ಆ ಅನುಭವ ವರ್ಣಿಸೋಕೆ ಹೋದ್ರೆ ಬಹಳಷ್ಟು ಸಮಯ ಬೇಕು ಇರ್ಲಿ ಬಿಡಿ. ಹಾಗೂ ಹೀಗೂ ಮಡದಿಯ ಕಿರಿಕಿರಿಯ ನಡುವೆ ಒಂದು ಸುಂದರ ದಿನವನ್ನು ನನ್ನದಾಗಿಸಿಕೊಂಡ ನಾನು ಹಾಸನಕ್ಕೆ ಮರಳುತ್ತಿದ್ದೆ. ಇನ್ನೇನು ಸಿಟಿ ಎಂಟರ್ ಆಗಬೇಕು, ಗಾಂಧಿ ಬಜಾರ್ ಸರ್ಕಲ್ ಬಳಿ ಹುಡುಕಿಕೊಂಡು ಬಂದಂತೆ ಕುಡುಕನೋರ್ವ ನನ್ನ ಗಾಡಿಗೆ ಇದ್ದಕ್ಕಿದ್ದಂತೆ ಅಡ್ಡ ಬಂದು ಬಿಡೋದೇ.....?. ಒಂದೊಂದು ಇಂಚು...,! ತಕ್ಷಣ ಗಾಡಿ ನಿಯಂತ್ರಿಸದಿದ್ದರೆ ಅವನು ಅಲ್ಲಿಂದ ಕನಿಷ್ಟ ಹತ್ತಾರು ಅಡಿ ದೂರಕ್ಕೆ ಎಗರಿ ಬೀಳುತ್ತಿದ್ದ. ಕಾರಿನಲ್ಲಿ ಕುಳಿತಿದ್ದವರೆಲ್ಲರೂ ಭಯದಿಂದ ಥರಗುಟ್ಟಿದ್ದರು. ಕೋಪದಿಂದ ನಾನು ಅವನಿಗೆ ಏಯ್ ಚಪ್ಪರ್ ಕಾರಿಗೆ ಯಾಕೋ ಅಡ್ಡ ಬರ್ತೀಯಾ....? ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಬರ್ತಾ ಇದೆ.., ಅದಕ್ಕೆ ಅಡ್ಡ ಹೋಗು., ಭೂಮಿ ಭಾರನಾದ್ರೂ ಕಮ್ಮಿ ಆಗುತ್ತೆ ಅಂದೆ. ಅದ್ಯಾಕೋ ಏನೋ ನಾ ಬೈದಿದನ್ನು ಕೇಳಿಸಿಕೊಂಡು ಸುಮ್ಮನೇ ತೂರಾಡಿಕೊಂಡು ಹೋಗುತ್ತಿದ್ದ ಅವ ಮತ್ತೆ ನನ್ನ ಕಾರಿನತ್ತ ವಾಪಾಸ್ ಬಂದು ಬಿಡೋದೆ....? ಪಿತ್ತ ನೆತ್ತಿಗೇರಿದ ನಾನು ಕಾರಿನಿಂದ ಕೆಳಗಿಳಿಯುವ ಪ್ರಯತ್ನದಲ್ಲಿದ್ದೆ. ಆದರೆ ಆತ ತನ್ನ ತುಟಿಗಳ ಮೇಲೆ ಬೆರಳಿಟ್ಟು ಅದೇ ಜಾಕಿ ಸ್ಟೈಲ್ ನಲ್ಲಿ ನನ್ನ ಬಳಿ ಬಂದವನೇ  ತೊದಲುತ್ತಾ '' ಡೋಂಟ್ ವರಿ ಬ್ರದರ್, ಆ ಬಸ್ಸ್ ಡ್ರೈವರ್ ನನ್ ನೆಂಟ್ ನೇಯಾ...., ನೀನೀಗ ರೈಟ್ಹೇಳು..., ಇಲ್ದಿದ್ರೆ ಅವ್ನು  ಈ ಲ್ಯಾಂಡ್ ಮೇಲೆ ನಿನ್ದು ಮತ್ತೆ ನನ್ದು ಇಬ್ರುದೂ ತೂಕ ಕಮ್ಮಿ ಮಾಡ್ಬುತ್ತಾನೆ ಅಂದ. ಥತ್ತೇರಿ ಕಾರ್ ನಲ್ಲಿದ್ದ ನನ್ನ ಮನದನ್ನೆ ಆಕೆಯ ಸ್ನೇಹಿತರು ಎಲ್ಲರಿಗೂ ನಗು. ದುಸ್ರಾ ಮಾತಾಡದೇ ನಾನು ಮನೆಯ ಹಾದಿಯತ್ತ ಚಿತ್ತ ನೆಟ್ಟೆ. ಆಗ ನನಗೆ ನೆನಪಾಗಿದ್ದು ಕೊಚ್ಚೆಯ ಮೇಲೆ ಕಲ್ಲು ಹೊಡಬೇಡ ಅನ್ನೋ ಅನುಭವೀಗಳ ಮಾತು.

Thursday, March 4, 2010

ಆನೆ ಮತ್ತು ನಾನು......,

ಇತ್ತೀಚೆಗೆ ತುಸು ಜಾಸ್ತೀನೇ ಅನ್ನೋವಷ್ಟು ದೇಹ ಬೆಳೆಸಿಕೊಂಡಿದ್ದೇನೆ. ನನ್ನ ಗೆಳೆಯರು ಯಾಕೋ...., ಈ ಪರಿ ಕೊಬ್ಬಿದ್ದಿಯಾ...? ಅಂತಾ ಅಂದಾಗಲ್ಲೆಲ್ಲಾ ಅದ್ಯಾವನೋ ಬೃಹನ್ನಳೆಯೊಬ್ಬ ನನ್ನ ಬಗ್ಗೆ '' ತಿಂದೂ ತಿಂದೂ ಕಾಡೆಮ್ಮೆಯಂತೆ ಕೊಬ್ಬಿದ ಜೋಸೆಫ್....,'' ಅಂತಾ ಬರೆದದ್ದು ನೆನಪಾಗುತ್ತೆ.  ಸಮೃದ್ದಿ ಅನ್ನೋದೇ ಅಲ್ಲಿ, ನಮ್ಮ ಬಗ್ಗೆ ಮತ್ತೊಬ್ಬ ಕಾಮೆಂಟ್ ಮಾಡಲಿಕ್ಕೆ ಶುರು ಮಾಡಿದ್ದಾನೆ ಅಂತಾಂದ್ರೆ ನಾವು ಗುರುತಿಸಿಕೊಳ್ಳಲಿಕ್ಕೆ ಶುರು ಮಾಡಿದ್ದೇವೆ ಅಂತಾ ಅರ್ಥ. ನಮ್ಮನ್ನು ಹೀಯಾಳಿಸಲಿಕ್ಕೆ ಶುರುವಾಯ್ತು ಅಂದ್ರೆ ನಾವು ಬೆಳೆಯುತ್ತಿದ್ದೇವೆ ಅಂದುಕೊಳ್ಳಬೇಕು. ತೀರಾ ನಮ್ಮನ್ನು ಹಿಗ್ಗಾಮುಗ್ಗಾ ತೆಗಳಿ ನಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಆಡಿಕೊಳ್ಳೋದು ಸಾಧ್ಯವಾದಷ್ಟು ನಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ ಅಂದ್ರೆ ನಾವು ಬೆಳೆದಿದ್ದೇವೆ ಎಂದು ಸಮಾಧಾನಪಟ್ಟುಕೊಳ್ಳಬೇಕು. ಇಂತಹುದ್ದೊಂದು ಸರ್ಕಲ್ ಹಾಕಿಕೊಂಡು ಕುಳಿತಿದ್ದ ನಾನು ತೀರಾ ನನ್ನನ್ನ ಕೋಣ ಅಂತಾ ಬರೆದಿದ್ದಕ್ಕೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದೆ. ಹೀಗೆ ಸಿಟ್ಟಾಗಿದ್ದ ನನ್ನನ್ನು  ನನ್ನ ಗೆಳೆಯನೊಬ್ಬ '' ನಾಯಿ ಬೊಗಳಿದ್ರೆ ಆನೆ ತೂಕಾ ಕಮ್ಮಿಯಾಗುತ್ತಾ...? ನೀನು ಆನೆ ಕಣೋ.., ಡೋಂಟ್ ವರಿ....'' ಅಂತಾ ಮತ್ತಷ್ಟು ಉರಿದುಕೊಳ್ಳುವಂತೆ ಮಾಡಿದ್ದ. ಹಾಗಂತಾ ಆನೇ ಅಂದ್ರೇ ಸಾಮಾನ್ಯನಾ....? ಭಾರೀ ಗಂಭೀರ...., ಮತ್ತೊಬ್ಬರ ಪರಿಶ್ರಮವನ್ನು ಕಿತ್ತು ತಿನ್ನದ..., ಸದಾ ಸಮೃದ್ದಿ ಹಾಗು ಸಂಘ ಜೀವಿಯಾಗಿರುವ....,ಹೀಗೇ ನಾನಾ ಒಳ್ಳೇ ಲಕ್ಷಣಗಳುಳ್ಳ ಪ್ರಾಣಿ. ಇನ್ನು ನಾನು ಈಗಿರುವ ದೇಹಸೌಂದರ್ಯಕ್ಕೆ ಸರಿಯಾದ ಅದೇ ಸರಿ  ಅನ್ನೋ ನಿರ್ಧಾರಕ್ಕೆ ಬಂದೆ. ಹಾಗಾಗಿ ಹಾಸನದ ಪತ್ರಿಕಾ ಮಿತ್ರರ ಬಳಗದಲ್ಲಿ ನಾನೊಬ್ಬ ಒಂಟಿ ಸಲಗನಾಗಿದ್ದೇನೆ. ಹಾಗಂತ ಕರೆಸಿಕೊಳ್ಳೋಕೆ  ನನಗೇನೂ ಬೇಸರವಿಲ್ಲ. ಯಾಕೆಂದ್ರೆ ಹಾಸನ ಜಿಲ್ಲೆ ಮಣ್ಣಿನ ಮಕ್ಕಳಿಗೆ ಎಷ್ಟು ಫೇಮಸ್ಸೋ ಅಷ್ಟೇ ಆನೆಗಳಿಗೂ ಫೇಮಸ್ಸಾಗಿದೆ. ರಾಜಕಾರಣವನ್ನೇ ಹಾಸು ಹೊದ್ದು ಮಲಗುವ ಹಾಸನದಲ್ಲಿ ರಾಜಕೀಯ ಮಾಡೋಕೆ ಆನೆಗಳೂ ಕೂಡ ವಸ್ತುಗಳು . ನನ್ನನ್ನು ವಿನಾಕಾರಣ ತೆಗಳಿ ರೆಡ್ ಚಿಲ್ಲಿ ಅಂದುಕೊಳ್ಳೋರ ಬಗ್ಗೆ ಒಂದು ಸಣ್ಣ ಕನಿಕರ ವ್ಯಕ್ತಪಡಿಸುತ್ತೇನೆ.
 ಇನ್ನು ಆನೆಗಳಿಗೂ ನನಗೂ ಎಲ್ಲಿಲ್ಲದ ಅವಿನಾಭಾವ ಸಂಬಂದ. ಅದಕ್ಕೆ 2 ಕಾರಣಗಳಿವೆ. 1. ಆನೆಗಳು ಎಲ್ಲೇ ದಾಳಿ ಮಾಡಿದ್ರೂ ಬಹುತೇಕ ನನಗೆ ಮೊದಲ ಕರೆ ಬರುತ್ತೆ. 2. ಹಾಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಲು ಸಿಧ್ದರಾಗುವ ನನ್ನ ಸ್ನೇಹಿತರ ಬಳಗಕ್ಕೊಂದು ವಾಹನ ಏರ್ಪಾಡು ಮಾಡುವ ಜವಾಬ್ದಾರಿ ನನ್ನ ಹೆಗಲೇರಿರುತ್ತೆ.  ಆನೆಗಳ ಹಾವಳಿ, ಆನೆಗಳ ಧಾಳಿ.., ಸಾವು ನೋವಿನ ಬಗ್ಗೆ ಬಹಳಷ್ಟು ಸುದ್ದಿ ಮಾಡಿದ್ದೇನೆ. ಈ ಎಲ್ಲದರ ಪೈಕಿ ಅತ್ಯಂತ ಭಯಾನಕ ಅನುಭವವೊಂದನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ಅಂದು ನಸುಕಿನ ವೇಳೆ ಮಾಮೂಲಿನಂತೆ ಆಲೂರಿನ ಸುಳುಗೋಡು ಗ್ರಾಮದಿಂದ ಗೆಳೆಯರೊಬ್ಬರು ಆನೆಗಳು ಗ್ರಾಮಕ್ಕೆ ದಾಳಿಯಿಟ್ಟು ಹಾವಳಿ ನಡೆಸುತ್ತಿರುವ ಬಗ್ಗೆ ವಿಷಯ ತಿಳಿಸಿದ್ದರು. ಡೆಸ್ಕ್ ಗೆ ಪೋನ್ ಮಾಡಿ ಮಾಮೂಲಿ ಪ್ಲಾಷ್ ನ್ಯೂಸ್ ಕೊಟ್ಟ ನಾನು ಮತ್ತೆ ನಿದ್ರೆಗೆ ಜಾರಿದ್ದೆ. ಅದ್ಯಾರೋ ಪುಣ್ಯಾತ್ಮ ಪದೇ ಪದೇ ಫೋನ್ ಮಾಡಿ ''ಸಾರ್, ಆನೆಗಳು ಗ್ರಾಮದ ಒಳಗೇ ಬಂದಿವೆ ಸಾರ್..., ದಯವಿಟ್ಟು ಬನ್ನಿ ಸರ್, ನಾವು ಬಡವ್ರು ಈ ಸರ್ಕಾರ ನಮ್ ಕಷ್ಟಕ್ಕೆ ಆಗಲ್ಲ ಸಾರ್ ಅಂತಾ ಗೋಗರೆಯೋಕ್ಕೆ ಶುರು ಮಾಡಿದ್ದ.  ಆದ್ರೆ ಸುಳುಗೋಡು ಗ್ರಾಮಕ್ಕೆ ಬೆಳ್ಳಂಬೆಳಗ್ಗಿನ ಛಳಿಯಲ್ಲಿ ಆನೆಗಳಿಗೆ ಇದಿರಾಗಿ ಹೋಗಲು ಮನಸ್ಸು ಒಪ್ಪದ ಕಾರಣ ಏನೇನೋ ಸಬೂಬು ಹೇಳಿ ಜಾರಿಕೊಂಡೆ. ಆದರೆ ಅಂದು ನಮ್ಮ ಅದೃಷ್ಟ ನೆಟ್ಟಗಿರಲ್ಲಿಲ್ಲ. ಆ ಗ್ರಾಮದಲ್ಲಿ ಕೇವಲ ಪುಂಡಾಟಿಕೆಯಲ್ಲಿ ತೊಡಗಿದ್ದ ಆನೆಗಳು ಸಂಜೆಯವೇಳೆಗೆ ಅಮಾಯಕ ರೈತನೊಬ್ಬರನ್ನು ತುಳಿದು ಕೊಂದು ಹಾಕಿದ್ದವು. ಅನಿವಾರ್ಯವಾಗಿ ಹೊರಡುವ ಸ್ಥಿತಿ ನಿರ್ಮಾಣವಾಯಿತು. ಮಾಮೂಲಿನಂತೆ ಗೆಳೆಯ ಸತೀಶ್ ಪಟೇಲ್ ನ ಸುಮೋ ಏರಿದ ನಾವು ಸುಳುಗೋಡಿನತ್ತ ಪ್ರಯಾಣ ಬೆಳೆಸಿದೆವು.  ಸುಪ್ತ ಮನಸ್ಸಿನ ಮೂಲೆಯಲ್ಲೊಂದು ರೆಡ್ ಲೈಟ್ ಆನ್ ಆಗಿ ಆಗಲೇ ಸೈರನ್ ಮೊಳಗತೊಡಗಿತ್ತು. ಮುಂದೇನೋ ಕಾದಿದೆ ಅನ್ನೋ ಆತಂಕ ಮನಸ್ಸಿನಲ್ಲಿ ಮನೆ ಮಾಡಿತ್ತು. ಹೇಗಾದರೂ ಆಗಲಿ ಸ್ವಲ್ಪ ಅಲರ್ಟ್ ಆಗಿರ್ರಪ್ಪಾ ಅಂತಾ ಕ್ಯಾಮೆರಾಮೆನ್ ಗಳಿಗೆ ಎಚ್ಚರಿಕೆ ನೀಡಿದ್ದೆ. ಸುಳುಗೋಡು ಗ್ರಾಮದ ಹತ್ತಿರ ಬಂದಾಗ ಅಲ್ಲಿದ್ದ ಜನಸಂಖ್ಯೆ ಹಾಗು ತರಾತುರಿ ನೋಡಿ ಭಯ ಮತ್ತಷ್ಟು ಹೆಚ್ಚಾಯಿತು. ನಾವಿದ್ದ ಕೆಲವೇ ಮೀಟರ್ ಅಂತರದಲ್ಲಿ ನಾಲ್ಕು ಆನೆಗಳು ಮರಿಯಾನೆಯ ಜೊತೆಗೆ ನಿಂತಿದ್ದವು. ರೇಂಜರ್ ಮಂದಣ್ಣ ಹಾಗು ಅವರ ಸಿಬ್ಬಂದಿ ಆನೆಗಳನ್ನು ಓಡಿಸಲು ಪ್ರಯತ್ನ ಮಾಡುತ್ತಿದ್ದರು. ಅರಣ್ಯ ಇಲಾಖೆಯ ಜೀಪ್ ನಲ್ಲಿ ಮೃತ ರೈತನ ಶವವಿದ್ದ ಕಾರಣ ಗಾಡಿಯಿಂದ ಇಳಿದ ನಮ್ಮ ಕ್ಯಾಮೆರಾಮೆನ್ ಗಳು ಆ ಗುಂಪಿನತ್ತ ಓಡತೊಡಗಿದರು. ಅಲ್ಲಿದ್ದವವರು ಆನೆ...ಆನೆ...ಆನೆ ಇದೆ ಅಂತಾ ಕೂಗುತ್ತಲೇ ಇದ್ದರೂ ಲೆಕ್ಕಿಸದೇ ಶವವಿದ್ದ ಜೀಪ್ ಬಳಿ ತೆರಳಿದ ಕ್ಯಾಮೆರಾಮೆನ್ ಗಳು ಇನ್ನೇನು ಕ್ಯಾಮೆರಾ ಆನ್  ಮಾಡಬೇಕು ಅಲ್ಲಿದ್ದವರ ಪೈಕಿ ತೀರಾ ಪೊರ್ಕಿಯ ರೀತಿ ಇದ್ದ ಒಬ್ಬ ಇವರೆಲ್ಲರಿಗೂ ಅಡ್ಡಿ ಮಾಡಲಾರಂಬಿಸಿದ. '' ಕರೆದ ತಕ್ಷಣ ಬಾರದ ನೀವು ಈಗ ಸತ್ತಾಗ ಬಂದಿದ್ದೀರಾ....? ಇವರ ಸಾವಿಗೆ ನೀವೇ ಕಾರಣ, ಫೋಟೋ ಅಥ್ವಾ ವಿಡಿಯೋ ತೆಗೆದ್ರೆ ಕ್ಯಾಮೆರಾ ಪುಡಿ ಮಾಡ್ತೀನಿ ಎಂದು ಎಗರಾಡಲಾರಂಬಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ಎಗರಾಡುತ್ತಿದ್ದ ಇವನನ್ನು ಸಮಾಧಾನ ಪಡಿಸಿ  ನಾನು ನಿಂತಿದ್ದ ಸ್ಥಳಕ್ಕೆ ಕರೆದುಕೊಂಡು ಬಂದವನೇ " ನಿಕ್ಕು ತರೆ ಸಮಾ ಇಜ್ಜಾ...? ಮುಲ್ಪ ದಾಯೆ ಬೊಬ್ಬೆ ಪಾಡುವಾ.., ಅಕ್ಲೇನ್ ಮಾತೆರೆನ್ಲಾ ಉಪಾಯಡ್ ಊರುದ ಉಲಯ್ ಲೆತೋ ಪೋಯಿ, ಬುಕ್ಕಾ ಏತ್ ಬೋಡ್ ಆತ್ ಬೊಟ್ಟುಗಾ..'' ಅನ್ನೋದೆ. ( ನಿನಗೆ ತಲೆ ಸರಿ ಇಲ್ವಾ...? ಯಾಕೆ ಅಲ್ಲಿ ಕಿರುಚಾಡುತ್ತೀ.., ಅವರೆಲ್ಲರನ್ನಾ ಉಪಾಯವಾಗಿ ಊರಿನ ಒಳಗೆ ಕರೆದುಕೊಂಡು ಹೋಗುವ. ನಂತರ ಎಷ್ಟು ಬೇಕು ಅಷ್ಟು ಒದೆ ಬಿಡುವ). ಸಧ್ಯ ತುಳು ಚೆನ್ನಾಗಿ ಗೊತ್ತಿದ್ದ ನನಗೆ ಇವರ ಸಂಭಾಷಣೆ ಅರ್ಥವಾದರೂ ಏನೂ ತಿಳಿಯವದವನಂತೆ ನಿಂತಿದ್ದೆ. ಅವರಿಬ್ಬರೂ '' ಸಾರ್ ಇಲ್ಲಿ ಪೋಟೋ ತೆಗೆಯುವುದಕ್ಕಿಂತ ಊರೊಳಗೆ ಅವರ ಮನೆಯ ಎದುರಿಗೇ ತೆಗೆಯೋಣ ಬನ್ನಿ ಅಂತಾ ಮೊದಲು ನನಗೇ ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಮುನ್ನುಡಿ ಹಾಡತೊಡಗಿದ್ದರು. ಅಷ್ಟರಲ್ಲಿ ಅಲ್ಲಿ ಊರಾಚೆ ಇದ್ದ ಆನೆಗಳು ಇದ್ದಕ್ಕಿದ್ದಂತೆ ಎಸ್ಟೇಟ್ ಬಳಿ ಧಾವಿಸತೊಡಗಿದವು. ನಿಂತಿದ್ದ ಜನರೆಲ್ಲಾ ಚೆಲ್ಲಾಪಿಲ್ಲಿಯಾದರು. ಸತ್ಯ ಹೇಳುತ್ತೇನೆ,  ಪ್ರಾಣಭೀತಿ ಅನ್ನೋ ಪದದ ನಿಜವಾದ ಅರ್ಥ ನನಗಾದದ್ದೇ ಅಲ್ಲಿ. ನನ್ನಿಂದ ಕೇವಲ ಐವತ್ತು ಹೆಜ್ಜೆ ಅಂತರದಲ್ಲಿ ಆನೆಗಳು.........., ನನಗಾಗ ಗುಂಡುಗುಂಡಾಗಿದ್ದ ನನ್ನ ದೇಹದ ಬಗ್ಗೆ ನೆನಪಾಗಲ್ಲಿಲ್ಲ. ಓಡಲೇಬೇಕೆನ್ನೋ ಅನಿವಾರ್ಯತೆಗೆ ಸಿಲುಕಿ ಓಡತೊಡಗಿದೆ. ಪಕ್ಕದಲ್ಲಿ ಜೋರಾಗಿ ಯಾರೋ ಕಿರುಚುತ್ತಿದ್ದರು. ಕರೆಂಟ್ ಇದೆ..ಜಾಗೃತೆ ಅನ್ನುತ್ತಲೇ ಇದ್ದರು. ಊಹುಂ, ನೋಡಲ್ಲಿಲ್ಲ. ಎದುರಿಗಿದ್ದ ತೋಟದ ಬೇಲಿಯ ತಂತಿಯನ್ನು ಅದುಮಿದವನೇ ಚಂಗನೇ ತೋಟದೊಳಕ್ಕೆ ಜಿಗಿದವ ಆಯತಪ್ಪಿ ನೆಲಕ್ಕೆ ಬಿದ್ದೆ. ಮತ್ತೆ ಸಾವರಿಸಿಕೊಂಡು ಎಸ್ಟೇಟ್ ನೊಳಕ್ಕೆ ಓಡತೊಡಗಿದೆ. ಅಷ್ಟರಲ್ಲಿ  ನನ್ನ ಹಿಂದೆ ಬರುತ್ತಿದ್ದ ಗ್ರಾಮಸ್ಥನೊಬ್ಬ ನಿಲ್ಲಿ, ನಿಲ್ಲಿ ಸಾರ್ ಈ ಎಸ್ಟೇಟ್ ಒಳಕ್ಕೆ ಆನೆ ಬರೋದಿಲ್ಲ. ಓಡಿ ಸುಸ್ತು ಮಾಡಿಕೊಳ್ಳಬೇಡಿ ಎಂದು ತಡೆದ. ಸ್ವಲ್ಪ ಸುಧಾರಿಸಿಕೊಂಡು ಓಡಿ ಬಂದ ದಿಕ್ಕಿನತ್ತ ಕಣ್ಣು ಹಾಯಿಸಿದೆ. ಆನೆಗಳು ದೂರದಲ್ಲಿದ್ದವು. ನನ್ನನ್ನು ನಿಲ್ಲಿ ಎಂದು ಹೇಳಿದ್ದ ಗ್ರಾಮಸ್ಥ ಮೆಲ್ಲನೆ ನನ್ನ ಬಳಿ ಬಂದು '' ಸಾರ್ ಬೇಲಿ ದಾಟುವಾಗ ಎರಡನೇ ವೈರ್ ಅದುಮಿ ತಾನೆ ನೀವು ಒಳಕ್ಕೆ ಬಂದಿದ್ದು...? ಎಂದ ಹೌದೂ.., ಯಾಕೆ ಎಂದೆ. ಸಾರ್ ಅದ್ರಲ್ಲಿ ಸೋಲಾರ್ ಕರೆಂಟ್ ಇತ್ತು, ನಿಮ್ಗೆ ಏನೂ ಆಗ್ಲಿಲ್ವಾ..? ಅಂದ. ನನಗೆ ಆಗ ಶಾಕ್ ಹೊಡೀತು. ಯಾಕಂದ್ರೆ ಸೋಲಾರ್ ಫೆನ್ಸ್  ದಾಟುವಾಗ ವೈರ್ ಹಿಡಿದ ತಕ್ಷಣ ಮೈಯೆಲ್ಲಾ ಜುಮ್ ಅನ್ನೋ ಅನುಭವವಾಗಿತ್ತು. ಕಣ್ಣ ತುಂಬಾ ನಕ್ಷತ್ರಗಳು ಮಿಂಚು ಮರೆಯಾಗಿದ್ದವು. ಬಹುಷಃ ದಾಟುವಾಗ ಅಲ್ಲಿದ್ದ  ಒಣಗಿದ ಮರದ ಮೇಲೆ ಕಾಲಿಟ್ಟ ಕಾರಣಕ್ಕೋ ಏನೋ ಶಾಕ್ ನ ತೀವ್ರ ಅನುಭವವಾಗಿರಲ್ಲಿಲ್ಲ. ಸಧ್ಯ ಏನೂ ಆಗಲ್ಲಿಲ್ಲ ಎಂಬ ಸಮಾಧಾನದೊಂದಿಗೆ ಎಸ್ಟೇಟ್ ನ ಗೇಟ್ ನತ್ತ ಹೆಜ್ಜೆ ಹಾಕಿದೆ. ಅಲ್ಲಿ ನನಗಾಗಿ ಕಾಯುತ್ತಿದ್ದ ನನ್ನ ಗೆಳೆಯರ ಜೊತೆ ಸುಮೋ ಏರಿ ಮತ್ತೆ  ಗೂಡು ಸೇರಿದೆ. ಅಂದೇ ಕೊನೆ ಅವತ್ತಿಂದ ಇವತ್ತನಿನವರೆಗೆ ಮತ್ತೆ ಸುಳುಗೋಡಿನ ಕಡೆ ನಾನು ಸುಳಿಯಲೇ ಇಲ್ಲ.