Tuesday, December 20, 2011

ಎಲ್ಲಯ್ತೋ ಅಂತಃಪುರ.....?


"ರ್ರೀ  .....ರ್ರೀ.....ರ್ರೀ.......ಏಳ್ರೀ ಮೇಲೇ......, ಮನೆಹಾಳ್ ಕೆಲ್ಸ ಮಾಡಿ ಸುಖವಾಗಿ ಮಲ್ಗಿದ್ದೀರಲ್ರೀ........, ಏಳ್ರೀ ಮೇಲೆ.......,"
      ಕನಸ್ಸಿನಿಂದ ಎದ್ದು ಕಣ್ಬಿಟ್ಟ ನನ್ನ ಕಣ್ಣೆದುರು ಪತ್ನಿಯ ಚಂಡಿಕಾ ರೂಪ.....!.   ಕ್ಷಣ ಕಾಲ ಅವಾಕ್ಕಾದೆ. ಅದು ಕತ್ತಲು ಸರಿದು ಬೆಳಕು ಹುಟ್ಟುವ ಸಮಯ......,  ಭುಸುಗುಡುತ್ತಿದ್ದ ಕಾಳಿಂಗ ಸರ್ಪದಂತೆ ಕಾಣುತ್ತಿದ್ದ ಅವಳು ಕೈಯಲ್ಲಿದ್ದ ಮೊಬೈಲನ್ನು ಮುಖದ ಮುಂದೆ ಹಿಡಿದು ಯಾರ್ರೀ ಇದು....? ಅಂದ್ಲು. ಮೊಬೈಲ್ ಸ್ರೀನ್ ನೋಡಿದೆ ಏನೂ ಇರಲ್ಲಿಲ್ಲ. ನಗು ಬಂತು, ನಿದ್ದೆಯಿಂದ ಎದ್ದು ಏನೇನೋ ಮಾತಾಡ್ತಾ ಇದಾಳೆ ಅಂತಾ   '' ಲೇ ಅದು ಮೊಬೈಲ್ ಕಣೇ.., ಏನಾಯ್ತೇ ನಿನ್ಗೆ...? ಅಂತಾ ಮತ್ತೆ ಮಲಗಲು ಯತ್ನಿಸಿದೆ. ಈ ಬಾರಿ ಅವಳ ಕೋಪ ಮಳೆಗಾಲದಲ್ಲಿ ಭೋರ್ಗರೆವ ಜೋಗದ ಜಲಪಾತದಂತೆ....., ಸಂಪೂರ್ಣ ಓಪನ್ ಆದ ಕ್ರಸ್ಟ್ ಗೇಟ್ ನಿಂದ ದುಮ್ಮಿಕ್ಕಿ ಹರಿವ ಡ್ಯಾಂ ನೀರಿನಿಂತೆ...., ಇನ್ನೂ ಯಾವುದ್ಯಾವುದರಂತೆ ಕಾಣಿಸಿತು. ಸ್ವಲ್ಪ ಆತಂಕನೂ ಆಯಿತು.ಏ..ಏನೇ ಅದು ಅಂತಾ ಪೇಲವಾಗಿ ಪ್ರಶ್ನಿಸಿದೆ. ಯಾರ್ರೀ ಅವ್ಳು 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೀರಂತಲ್ಲಾ...? ನೀನ್ಯಾರೇ...? ಅಂತಾ ನನ್ನನ್ನೇ ಕೇಳ್ತಾ ಇದಾಳೆ, ಯಾರ್ರೀ ಅವ್ಳು. ಕೋಪದಲ್ಲಿ ಏದುಸಿರು ಬಿಡುತ್ತಾ ಕಿರುಚಾಡತೊಡಗಿದ್ದಳು. ಎದ್ದು ಓಡಿ ಹೋಗೋಣಾ ಅನ್ನಿಸುವಷ್ಟು ಪೀಕಲಾಟ ಶುರುವಾಯ್ತು. ಯಾಕಂದ್ರೇ ನಾನು ನಿಜವಾಗ್ಲೂ ಅಡ್ವಾನ್ಸ್ ಕೊಟ್ಟಿದ್ದೆ. ಆದ್ರೆ ಉದ್ದೇಶ ಒಳ್ಳೆಯದಾಗಿತ್ತು.
  ಅದು ಹಾಗಲ್ಲಮ್ಮಾ.., ಅಂತಾ ಮಾತಿಗೆ ಶುರುವಿಕ್ಕಿಕೊಂಡೆ. ಊಹೂಂ, ಇವಳು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಕಣ್ಣುಗಳು ಕೊಳಗಳಾಗಿದ್ದವು. ಕೊಡದಷ್ಟು ಕಣ್ಣಿರು ಕೂಡ ಬಸಿದು ಹೋಗತೊಡಗಿತ್ತು.
     ತಡರಾತ್ರಿಯಲ್ಲಿ ಯಡವಟ್ಟಾಗಿತ್ತು. ಹೈಟೆಕ್ ವೇಶ್ಯಾವಟಿಕೆಯ ಸ್ಟಿಂಗ್ ಆಪರೇಶನ್ ಮಾಡುವ ಉದ್ದೇಶದಿಂದ ದಂಧೆ ನಡೆಸುವ ಒಬ್ಬಾಕೆಯ ಜೊತೆ ಗಿರಾಕಿಯಂತೆ ನಟಿಸಿ ಪರಿಚಯ ಮಾಡಿಕೊಂಡು ಕೇರಳದ ಹುಡುಗೀರು ಬೇಕು ಅಂತಾ 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೆ. ಅವಳು ಹುಡುಗೀರು ಬಂದ ತಕ್ಷಣ ಪೋನ್ ಮಾಡ್ತೀನಿ ಅಂತಾ ಮೊಬೈಲ್ ನಂಬರ್ ಬರೆದುಕೊಂಡಿದ್ದಳು.  ಇದೆಲ್ಲವನ್ನೂ ನನ್ನ ಕ್ಯಾಮೆರಾಮೆನ್ ಶಿವಾಜಿ ಗೋಣಿಚೀಲದೊಳಗೆ ಕ್ಯಾಮೆರಾ ಅವಿತಿಟ್ಟು ಶೂಟ್ ಮಾಡಿಕೊಂಡಿದ್ದ
   ಯಾರಿಗ್ರೀ ಗೊತ್ತು ಈ ದಂಧೆವಾಲಿಗೆ ಅಷ್ಟೊಂದು ನಿಯತ್ತಿದೆ ಅಂತಾ....?  ಅಷ್ಟೊತ್ತಲ್ಲಿ ತನ್ನ ನಿಯತ್ತಿನ ಪ್ರದರ್ಶನ ಮಾಡೋಕೆ ನನ್ನ ಮೊಬೈಲ್ ಗೆ ಫೋನ್ ಮಾಡಿದ್ದಾಳೆ. ಪಾಪ, ಗಂಡ ಅನ್ನೋ ಪ್ರಾಣಿ ದುಡಿದು ದಣಿದು ಬಂದು ಮಲಗಿದ್ದಾನಲ್ಲಾ ಅಂತಾ ನನ್ನಾಕೆ ಪೋನ್ ರಿಸೀವ್ ಮಾಡಿದ್ದಾಳೆ.  ಅತ್ತಲ್ಲಿಂದ ಅವಳು ಅವಸರದಲ್ಲಿ ಹಾಯ್ ಚಿನ್ನಾ....., ಸಾವಿರ ರುಪಾಯಿ ಅಡ್ವಾನ್ಸ್ ಕೊಟ್ಟೋವ್ನು ಆರಾಮಾಗೇ ಮಲ್ಕೊಂಬಿಟ್ಟಿದ್ದೀಯಲ್ಲಾ......., ನಿನ್  ಕೇರಳದ್ ಮಹಾರಾಣೀರು ಬಂದಿದಾರೆ. ಅಂತಃಪುರ ಎಲ್ಲಯ್ತೋ.......ಡಾರ್ಲಿಂಗ್ ಅಂತಾ ಕೇಳಿ ಬಿಟ್ಟಿದ್ದಾಳೆ. ಉರಿದು ಬಿದ್ದ ನನ್ನ ಧರ್ಮಪತ್ನಿ ಆಕೆಗೆ ಮಂಗಳಾರತಿ ಮಾಡಿದ್ದಾಳೆ. ಅದಕ್ಕವಳು ಕೇರಳದವರು ಬೇಕು ಅಂದೋವ್ನು ಕನ್ನಡದವಳನ್ನ ಕರ್ಕೊಂಡು ಬಂದಿದ್ದಾನಾ.....? ಅಂತಾ ಮರುಪ್ರಶ್ನೆ ಹಾಕಿದ್ದಾಳೆ.........., ಯಾಕ್ರೀ ಬೇಕಿತ್ತೂ ಗ್ರಹಾಚಾರಾ......?.
ಅವಳಿಗೆ ರೀ ಡೈಯಲ್ ಮಾಡಿ ಲೇ ಬಿಕನಾಸಿ ಇವಳು ನನ್ನ ಹೆಂಡತಿ ಅಂತಾ ಬೈದೆ.  ನಿನ್ನ ಹೈ ಟೆಕ್ ದಂಧೆ ನಾಳೆ ನಮ್ಮ ಚಾನೆಲ್ ನಲ್ಲಿ ಸುದ್ದಿಯಾಗುತ್ತೇ ನೋಡ್ತಾ ಇರು ಅಂತಾ ಗುಡುಗಿದೆ. ಬೆದರಿದ ಅವಳು ಮೊಬೈಲ್  ಸ್ವಿಚ್ ಆಪ್ ಮಾಡಿದಳು.
     ಅವತ್ತು ಬೆಳಿಗ್ಗಿನ ಟಿಫಿನ್ ಖೋತಾ. ಈ ತಕ್ಷಣ ಆಪೀಸಿಗೆ ನಡೀರಿ ನಾನು ವಿಶ್ಯವಲ್ಸ್ ನೋಡಬೇಕು ಅಂತಾ ನನ್ನ ಹೆಂಡತಿ ಒಂದೇ ಸವನೆ ಹಠ ಹಿಡಿದಿದ್ದಳು. ಸ್ನಾನ ಮಾಡ್ಕೋತೀನಿ ಬಿಡೇ ಅಂದ್ರೂ ಬಿಡದೆ ನನ್ನನ್ನು ಬಲವಂತದಿಂದ ಆಪೀಸಿಗೆ ಎಳೆದು ತಂದಿದ್ದಳು. ಆಫೀಸಿನಲ್ಲಿ ಗಡದ್ದಾಗಿ ಮಲಗಿದ್ದ ಶಿವಾಜಿ ಬಡಬಡನೇ ಎದ್ದವನೇ ಕ್ಯಾಮೆರಾ ತಂದು ಕ್ಯಾಸೆಟ್ ರಿವೈಂಡ್ ಮಾಡಿ ಪ್ಲೇ ಮಾಡಿದ. ಆದರೆ ಎಲ್.ಸಿ.ಡಿ.ಯಲ್ಲಿ ಯಾವುದೇ ವಿಶ್ಯುವಲ್ಸ್ ಮೂಡಲ್ಲಿಲ್ಲ. ತಲೆ ಕೆರೆದುಕೊಂಡು ಮತ್ತೆ ಹಿಂದೆ ಮುಂದೆ ಮಾಡಿ ಪ್ಲೇ ಮಾಡಿದ. ಊಹೂಂ ಏನೂ ಇಲ್ಲ. ಪೆದ್ದುಪೆದ್ದಾಗಿ ನಗುತ್ತಾ ತಲೆಕೆರೆದುಕೊಂಡು 'ಸರ್ ಕ್ಯಾಮರಾ ಆನ್ ಮಾಡಿದ್ದೆ, ಆದ್ರೆ ರೆಕಾರ್ಡಿಂಗ್ ಬಟನ್ ಅದುಮಿರಲ್ಲಿಲ್ಲ ಅನ್ನೋದೆ......!? ನನಗೋ ಸುನಾಮಿಯಂತ ಕೋಪ. ಹೆಂಡತಿಯ ಮುಖ ನೊಡಲಾರದಷ್ಟು ಭಯ. ಹಾಂ....! ಅಂತಾ ಬಾಯ್ಬಿಟ್ಟ ನನ್ನನ್ನು ಕಂಡು ನನ್ನ ಹೆಂಡತಿ ಹೊಟ್ಟೆ ಹಿಡಿದು ನಗಲಾರಂಬಿಸಿದಳು
ಅಯ್ಯೋ...ಬಿಡ್ರಿ, ನಾವೆಷ್ಟು ಪೆದ್ದರು ಅಂತಾ ನನ್ನ ಹೆಂಡತಿಗೆ ಅರ್ಥವಾಗಿ ಸಂಸಾರ ಸರಿಯಾಯ್ತು. ಮೊಬೈಲ್ ನಲ್ಲಿ ನನ್ನ ಬದುಕು ಬಂಗಾರ ಮಾಡಲಿದ್ದ ಆ ಹೈ ಟೆಕ್ ಹೆಣ್ಣು ಮತ್ಯಾವತ್ತೂ ನನ್ನ ಕಣ್ಣಿಗೆ ಬೀಳಲೇ ಇಲ್ಲ.

Monday, December 19, 2011

ಉಗ್ರಗಾಮಿ......,

ಆತ ನಿಜವಾಗಲೂ ಆಗಂತುಕ. ಆ ಬಡಾವಣೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದ ಅವನು ರಸ್ತೆಯ ಉದ್ದಗಲವನ್ನು ಇಂಚಿಂಚೂ ಬಿಡದೆ ಕಣ್ಣಲ್ಲೇ ಅಳತೆ ಮಾಡಿಕೊಳ್ಳುತ್ತಿದ್ದ.  ಜೇಬಿನಿಂದ  ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಅದೇನೇನೋ ಬರೆದುಕೊಳ್ಳುತ್ತಿದ್ದ.  ಅವನ ಈ ವರ್ತನೆಯ ಬಗ್ಗೆ ಹಲವಾರು ಕಿಟಕಿಗಳಿಂದ  ಅನುಮಾನದ ನೋಟ ಹೊರಬಿದ್ದಿದ್ದವು.  ಆ ನೋಟಗಳ ಜೊತೆಗೆ ಹಲವರ ಎದೆ ಬಡಿತದ ವೇಗವೂ ಹೆಚ್ಚಾಗುತ್ತಿತ್ತು. ಅವನು ನಡೆಯುತ್ತಲೇ ಇದ್ದ.....,  ಆ ಬೀದಿಯಿಂದ ಈ ಬೀದಿಗೆ....., ಆ ಸರ್ಕಲ್ ನಿಂದ ಈ ಸರ್ಕಲ್ ಗೆ...., ಅಲ್ಲಿ ಯುವಕರ ಗುಂಪೊಂದು ಇವನನ್ನು ನೋಡಿತ್ತು. ಪಸ್ಟ್ ಮೈನ್ ಪಿಪ್ತ್ ಕ್ರಾಸ್ ನ ಲಲಿತಮ್ಮ ನೈನ್ತ್ ಕ್ರಾಸ್ ನಲ್ಲಿರುವ ಮಂಜುಳಕ್ಕನಿಗೆ ಫೋನ್ ಮಾಡಿದ್ಲು. '' ಏ ಮಂಜುಳಾ ಇಲ್ಯಾವನೋ ಬಂದಾವ್ನೆ ಕಣೇ....., ನೋಡೋಕೆ ಕಳ್ಳನ್ ಥರಾ ಕಾಣ್ತಾವ್ನೇ......, ಅದಕ್ಕವಳು ಗಾಬರಿ ಬಿದ್ದು '' ಅಯ್ಯಯ್ಯೋ ಅಲ್ಲಿಗೂ ಬಂದಿದಾನಾ....? ಅದೇ ಬಿಳಿ ದೊಗಲೆ ಶರ್ಟೂ.., ಪೈಜಾಮಾ ಹಾಕಿದಾನಲ್ಲಾ......?!! ಅವ್ನೇ ತಾನೇ.....? ಲಲಿತಮ್ನನ ಹಣೆಯಲ್ಲಿ ಬೆವರಿಳಿಯಲು ಆರಂಭವಾಯ್ತು. ಯಾಕಂದ್ರೆ ಅವನು ಅವಳ ಮನೆಯ ಮುಂದೆಯೇ ನಿಂತು ಅದೇನನ್ನೋ ಗುರುತು ಹಾಕಿಕೊಳ್ಳುತ್ತಿದ್ದ. ಹೂಂ...ಹೂಂ...., ಅಂತಾ ಉಗುಳಿ ನುಂಗಿಕೊಂಡ ಲಲಿತಮ್ಮ ಪೋನ್ ಕುಕ್ಕಿದಳು. ಭಯದಿಂದಲೇ ಕಳ್ಳ ಹೆಜ್ಜೆ ಇಡುತ್ತಾ ಬಂದು ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅವ ಅಲ್ಲಿರಲ್ಲಿಲ್ಲ. ಲಲಿತಮ್ಮನಿಗೆ ಬಾಗಿಲು ತೆರೆಯಲೂ ಭಯ. ಅಡುಗೆ ಮನೆಯೊಳಗೆ ಇದ್ದಕ್ಕಿದ್ದಂತೆ ಪಾತ್ರೆ ಕೆಳಕ್ಕೆ ಬಿದ್ದ ಸದ್ದು. ಕಿಟಾರನೇ ಕಿರುಚಿದ ಲಲಿತಮ್ಮ ಮನೆಯ ಬಾಗಿಲು ತೆಗೆದು ಹೊರಗೋಡಿದಳು. ಅವಳ ಬೊಬ್ಬೆಗೆ ಬೆದರಿದ ಕಳ್ಳಬೆಕ್ಕೊಂದು ಅಡುಗೆ ಮನೆಯಿಂದ ಅವಳ ಜೊತೆಗೇ ಓಡಿ ಬಂತು.
          ಬೀದಿ ಬೀದಿ ಅಲೆಯುತ್ತಿದ್ದ ಆ ಆಗಂತುಕ ಆಟವಾಡುತ್ತಿದ್ದ ಮಕ್ಕಳ ಗುಂಪಿನ ಬಳಿ ಬಂದು ನಿಂತ. ಚಲ್ ಮೇರೇ ಗೋಡೇ ಚಲ್  ಚಲ್ ಚಲ್ ಅಂತಾ ಹಿಂದಿ ಹಾಡು ಹಾಡತೊಡಗಿದೆ. ಆ ಹಾಡಿಗೆ ತಕ್ಕಂತೆ ತಾನು ಹಾವಭಾವ ಪ್ರದರ್ಶಿಸತೊಡಗಿದೆ. ಮಕ್ಕಳಿಗೆ ವಿಚಿತ್ರ ಎನ್ನಿಸಿದರೂ ಅದೇನೋ ಒಂದು ರೀತಿಯ ಖುಷಿ. ಅವನ ನಟನೆಗೆ ಹಾಸ್ಯಕ್ಕೆ ಮನಸೋತ ಅವರಲ್ಲಿ ಅದ್ಯಾವುದೋ ಅವ್ಯಕ್ತ ಆಪ್ತ ಭಾವ..........,
        ಮಕ್ಕಳ ಜೊತೆ ಕಟ್ಟೆಯ ಮೇಲೆ ಕುಳಿತ ಅವನು ಮೆರಾ ನಾಮ್ ದಾದಾಪೀರ್ ಎಂದ. ಮಕ್ಕಳೂ ಕೂಡ ಏ..... ದಾದಪೀರ್ ಅಂತಾ ಚಪ್ಪಾಳೆ ತಟ್ಟಿ  ಕುಣಿದಾಡಿದವು. ಖುಷಿಯೋ ಖುಷಿ. 
     ಲಲಿತಮ್ಮ ಗಾಬರಿಯಿಂದ ಕೂಗಿ ಹೊರಗೋಡಿ ಬಂದಿದ್ದನ್ನು ಕಂಡ ಆ ಕ್ರಾಸ್ ನ ಮಹಿಳೆಯರೆಲ್ಲಾ ಮನೆಯಿಂದ ಹೊರಗೆ ಬಂದರು. ಎಲ್ಲರಿಗೂ ಆ  ಆಗಂತುಕನ ಬಗ್ಗೆ ಭಯ. ಹತ್ತಾರು ಮಹಿಳೆಯರು......ನೂರಕ್ಕೂ ಹೆಚ್ಚು ಫೋನ್ ಕಾಲ್.......,   
    ಕ್ಷಣ ಮಾತ್ರದಲ್ಲಿ ಅಲ್ಲಿ ಮೂವತ್ತಕ್ಕೂ ಹೆಚ್ಚು ಯುವಕರು ಹಾಜರಾದರು. ಹಾಗೇ ಸೈನ್ಯ ಕಟ್ಟಿ ಹೊರಟ ಆ ಯುವಕರಿಗೆ ಮಕ್ಕಳ ಜೊತೆ ಆಟವಾಡುತ್ತಿದ್ದ ಆ ಆಗಂತುಕ ಕಂಡ. ಕೊಳೆಯಾದ ಬಿಳಿ ಪೈಜಾಮ, ದೊಗಲೆ ಶರ್ಟ್, ಉದ್ದದ ಗಡ್ಡ. ತಲೆಯ ಮೇಲೊಂದು ಬಿಳಿ ಟೋಪಿ ಅದಕ್ಕೆ ವಿಚಿತ್ರವಾಗಿ ಸುತ್ತಿರುವ ದಾರ.........., 
     ಏ ಟೆರರಿಸ್ಟ್ ಕಣೋ........, ಗುಂಪಿನಲ್ಲಿದ್ದ ಒಬ್ಬ ಕೂಗಿ ಹೇಳಿದ. ಡೌಟೇ ಇಲ್ಲ ಮಗಾ...ಮತ್ತೊಬ್ಬ ಧನಿ ಸೇರಿಸಿದ.  ಎಲ್ಲರೂ ಅವನತ್ತ ನುಗ್ಗಿ ಬಂದರು. ಗಾಬರಿಗೊಂಡ ಅವ ಎದ್ದು ನಿಂತು ಭಾಯ್ ಸಾಬ್ ಕ್ಯಾ ಹುವಾ.......?  ಅಂತಾ ನಡುಗುತ್ತಾ ಕೇಳಿದ. ಯಾರೋ ನೀನು..........? ಏನ್ ಹೆಸ್ರು......? ಇಲ್ಲೇನ್ಮಾಡ್ತಿದ್ದೀಯಾ.......? ಗುಂಪಿನ ಮುಖಂಡ ಒಂದೇ ಸವನೆ ಕೇಳಲಾರಂಭಿಸಿದ. ಅವನಿಗೆ ಕನ್ನಡ ಅರ್ಥವಾಗುತ್ತಾ ಇಲ್ಲ. ಅಲ್ಲಿದ್ದವರ ಪೈಕಿ ಯಾರೋ ಒಬ್ಬ ನಾಮ್...ನಾಮ್ ಎಂದು ಕೈಯಾಡಿಸಿದ. ಧಾದಾಫೀರ್ ಮೆರಾ ನಾಮ್ ದಾಧಫೀರ್ .............., ಕ್ಯಾ ಚಾಹಿಯೇ ಆಪ್ ಲೋಗೋಂಕೋ.......? ಆತ ಕೇಳುತ್ತೇ ಇದ್ದ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಅವರು ಅವನನ್ನು ನಾಯಿ ಬಡಿದಂತೆ ಬಡಿಯಲಾರಂಭಿಸಿದರು. ಅವನ ಕಿರುಚಾಡಲಾರಂಬಿಸಿದ. ಇವೆಲ್ಲವನ್ನೂ ಕಂಡ ಮಕ್ಕಳು ಗಾಬರಿಬಿದ್ದು ದಿಕ್ಕೆಟ್ಟು ಓಡಿ ಮನೆ ಸೇರಿಕೊಂಡವು.
        ಉಗ್ರಗಾಮಿ ಅನ್ನೋ ಪದ ಕಿವಿಗೆ ಬಿದ್ದಿದ್ದೇ ತಡ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ  ಆ ಕೃಶಕಾಯ ಆಗಂತುಕ ಅರೆ ಜೀವವಾಗಿ ಹೋಗಿದ್ದ. ಅದೇನನ್ನೋ ಸಾಧಿಸಿದ ಖುಷಿಯಲ್ಲಿ ಯುವಕರು ಮೀಸೆ ತಿರುವಿಕೊಂಡು ನಿಂತಿದ್ದರು. ಅವರಲ್ಲೊಬ್ಬ ಅವನ ಕೈ ಕಾಲುಗಳಿಗೆ ಹಗ್ಗ ಬಿಗಿಯಲಾರಂಬಿಸಿದ್ದ.
       ಇನ್ನೇನು ಅವನನ್ನು ಪೊಲೀಸ್ ಜೀಪಿಗೆ ಹತ್ತಿಸಿಕೊಳ್ಳಬೇಕು. ಆಗ ಅಲ್ಲಿ ತನ್ನ ಮೂವರು ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಜೊತೆ ಓಡಿ ಬಂದ ಮಹಿಳೆಯೊಬ್ಬಳು ಗೋಳಾಡಲಾರಂಭಿಸಿದಳು. ಹಿಂದಿ ಭಾಷೆ ಸ್ಪಷ್ಟವಾಗಿ ಬರುತ್ತಿದ್ದ ಪೊಲೀಸ್ ಪೇದೆ ಇಸ್ಮಾಯಿಲ್ ಬಳಿ ತನ್ನ ಹಾಗು ಆ ಆಗಂತುಕನ ಗುರುತು ಹೇಳಿಕೊಂಡಳು. ಇಸ್ಮಾಯಿಲ್ ನಡುಗಿ ಹೋದ...ಅವನ ಬಾಯಿಂದ ಮಾತೇ ಬರಲ್ಲಿಲ್ಲ.
ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ರಾಜಾಸ್ಥಾನದಿಂದ ನಮ್ಮೂರಿಗೆ ಬಂದಿದ್ದ ಕುಟುಂಬವದು. ದಾಧಾಪೀರ್ ಕುಲ್ಪೀ, ರಸ್ಕ್, ಸೋನ್ ಪಾಪ್ಪುಡಿ ಇತ್ಯಾದಿ ಉತ್ತರ ಭಾರತೀಯ ತಿಂಡಿಗಳನ್ನು ತಯಾರಿಸಿ ಗಾಡಿಯಲ್ಲಿ ಹೇರಿಕೊಂಡು ಮಾರುವ ವ್ಯಕ್ತಿ. ನಮ್ಮೂರಿಗೆ ನಿನ್ನೆಯಷ್ಟೇ ಬಂದಿದ್ದ ಅವನು ತನ್ನ ಮನೆಯಿಂದ ದಾರಿ ತಪ್ಪದಿರಲಿ ಅಂತಾ ತನ್ನದೇ ರೂಟ್ ಮ್ಯಾಪ್ ಬರೆದುಕೊಳ್ಳುತ್ತಿದ್ದ. ಮಕ್ಕಳಿಂದಲೇ ಅವನಿಗೆ ವ್ಯಾಪಾರ ಆಗಬೇಕಿದ್ದ ಕಾರಣ ಅವರ ಪ್ರೆಂಡ್ ಶಿಪ್ ಮಾಡಿಕೊಳ್ಳುತ್ತಿದ್ದ. ಪಕ್ಕದ ಊರಿನ ಗಲ್ಲಿಗಲ್ಲಿಯಲ್ಲೂ ಕೂಡ ಈ ದಾಧಫೀರ್ ಮಕ್ಕಳಿಗೆಲ್ಲಾ ದಾಧಾ ಮಾಮ ಅಂತಾನೇ ಫೇಮಸ್ ಆಗಿದ್ದ. ಇವನ ಸೌಮ್ಯ ವರ್ತನೆ ಹಾಗು ಹಾಡುಗಾರಿಕೆಗೆ ಆ ಊರವರು ಇವನಿಗೆ ಸನ್ಮಾನ ಮಾಡಿದ್ದರು. 
     ಈ ಎಲ್ಲಾ ವಿಷಯ ಕೇಳುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಯುವಕರು ಒಬ್ಬೊಬ್ಬರಾಗಿ ಅಲ್ಲಿಂದ ಕಾಲ್ಕಿತ್ತರು. ತೆರೆದಿದ್ದ ಮನೆಯ ಕಿಟಕಿಗಳು ಮುಚ್ಚಿಕೊಂಡವು. ಧೂಳೆಬ್ಬಿಸಿ ಹೋದ ಪೊಲೀಸ್ ಜೀಪಿನತ್ತ ದುಃಖದ ನೋಟ ಬೀರಿದ ಆಕೆ ಅಳುತ್ತಿದ್ದ ಗಂಡನನ್ನು ಎದೆಗೊರಗಿಸಿಕೊಂಡು ಅವನ ಕಣ್ಣೀರು ಒರೆಸಿದಳು. ಅವರ ಜೊತೆಯಲ್ಲಿದ್ದ ಆ ಮೂರು ಹೆಣ್ಣು ಮಕ್ಕಳು ರೋಧಿಸುತ್ತಲೇ ಇದ್ದವು. 
      ಆ ಎಲ್ಲಾ ಮನೆಗಳಲ್ಲೂ ಮೌನ ಮುರಿದುಕೊಂಡು ಬಿದ್ದಿದ್ದು. ನಿಟ್ಟುಸಿರಿನ ಸಣ್ಣ ಸದ್ದಿನ ನಡುವೆ ಛೇ.., ಪಾಪ ಹೀಗಾಗಬಾರದಿತ್ತು ಅನ್ನೋ ಭಾವುಕತೆ ಲಹರಿಯೋಪಾದಿಯಲ್ಲಿ ಹರಿಯುತ್ತಿತ್ತು.

Friday, December 9, 2011

ಪಾಪ......, ಹಾಸನ್

ಸರ್..., ನಿಮಗೆ ಒಬ್ಬ ಹುಡುಗಿ ಫೋನ್ ಮಾಡ್ತಾಳೆ.

ಸಂತೇ ಸೇರುವ ಮುನ್ನಾ.....!!!???

   ಸರ್,  ದೇವ್ರಾಣೆಗೂ  ಹೇಳ್ತೀನಿ..., ನಿಮ್ ಚಾನೆಲ್ ನಂಬರ್ ಒನ್ ಸರ್,  ನನ್ಗಂತೂ ಬೆಳಿಗ್ಗೆ ಎದ್ದ್ ತಕ್ಷಣ ಅದನ್ನ ನೋಡ್ನಿಲ್ಲಾಂದ್ರೆ ಸಮಾಧಾನನೇ ಆಗಲ್ಲಾ....., ನೀವ್ ಬಿಡಿ ಸಾರ್ ನಿಮ್ಮಂಗೆ  ಬೇರೆ ಯಾವ ಟೀವಿನೋರು ಸುದ್ದಿ ಮಾಡಲ್ಲ....., 
                  ಆತ ಬೆಳ್ಳಬೆಳಗ್ಗೇನೇ ನನ್ನನ್ನು ಎಬ್ಬಿಸಿ ವಾಯಲಿನ್ ಥರ ಕೊಯ್ಯತೊಡಗಿದ್ದ. ಆ ವರಸೇಲೇ ಆತ ಒಬ್ಬ ಪುಡಾರಿ ಅನ್ನೋದು ನನಗೆ ಅರ್ಥವಾಗಿತ್ತು. ಕಷ್ಟ ಪಟ್ಟು ಮಾತನ್ನು ಅರ್ಧಕ್ಕೆ ತುಂಡರಿಸಿ   ಸರಿ, ನನ್ನಿಂದ ನಿಮಗೆ ಏನಾಗ್ಬೇಕು ಅಂತಾ ಹೇಳಿ ಪ್ಲೀಸ್........., ಅಂದೆ. ನನ್ನ ಅವಸರದಲ್ಲಿ ಅಸಹನೆಯನ್ನು ಸ್ಪಷ್ಟವಾಗಿ ಗುರುತಿಸಿದ ಆತ ಕೊಂಚ ಸಾವರಿಸಿಕೊಂಡು   ಏ..ಏನಿಲ್ಲಾ ನಮ್ ಊರಲ್ಲಿ ಒಬ್ಬ ಟ್ರ್ಯಾಕ್ಟರ್ ಡ್ರೈವರ್ ಅಪ್ಪ ಅಮ್ಮ  ಇಲ್ಲದ ಬಡಪಾಯಿ ಹೆಣ್ಣು ಮಗಳಿಗೆ ಮದ್ವೆ ಆಗ್ತೀನಿ ಅಂತಾ ನಂಬ್ಸಿ ಮೋಸ ಮಾಡವ್ನೆ.  ಪಾಪ ಅವ್ಳು ಹೊಳೆಗ್ ಬೀಳಾಕ್ ಓಯ್ತಾ ಇದ್ಲು....., ನಾವ್ ಊರ್ ಹಿರಿಕ್ರು ಎಲ್ಲಾ ಸೇರಿ ಅವ್ನುನ್ನ ಹಿಡಿದ್  ಕೂರ್ಸೀವಿ. ಈಗ ಮಾವಿನ್ ಕೆರೆ ಬೆಟ್ದಾಗೆ ಮದ್ವೆ ಮಾಡೋಕ್ ಓಯ್ತಾ ಇದೀವಿ ಬತ್ತೀರಾ ಸಾ....? ಅಂತ ಅವನ ಅಗತ್ಯವನ್ನು ತೆರೆದಿಟ್ಟ.  ಅದರ ಜೊತೆಗೆ ನಿಮ್ಮುನ್ನ ಬುಟ್ರೆ ಬೇರೆ ಯಾರಿಗೂ ವಿಷ್ಯ ಹೇಳಿಲ್ಲಾ..........., ಅನ್ನೋ Extra ಡೈಲಾಗ್ ಬೇರೆ ಸೇರಿಸಿ ಬಿಟ್ಟ.        
  ಈ ದಿನದ ಸೂಪರ್ ಓಪನಿಂಗ್ ಅಂದ್ಕೊಂಡ ನಾನು ನನ್ನ ಕ್ಯಾಮೆರಾಮೆನ್ ಜೊತೆ ಮಾವಿನಕೆರೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆ.  ಆ ಕೊರೆಯುವ ಚಳಿಯಲ್ಲೂ Exclusive ನ್ಯೂಸ್ ಬಾರಿಸುವ ಉತ್ಸಾಹ ನಮ್ಮದಾಗಿತ್ತು.                                                          ಹಾಗೋ ಹೀಗೋ ಬೆಟ್ಟ ಸೇರಿದ ನಮಗೆ ಪರಮಾಶ್ಚರ್ಯ ಕಾದಿತ್ತು. ಯಾಕೇಂದ್ರೆ ಅಲ್ಲಿ ಮದುವೆ ಜೋಡಿ ಅಥ್ವಾ ಅವರ ಪಟಾಲಂ ನ ಸುಳಿವೇ ಇರಲ್ಲಿಲ್ಲ.  ಅನುಮಾನಗೊಂಡ ನಾನು ಆ ಮಹಾಶಯನಿಗೆ ಫೋನಾಯಿಸಿದೆ. '' ಬತ್ತಾ ಇದೀವಿ ಸಾ......, ಅಲ್ಲೇ ಇರಿ ಐದು ನಿಮ್ಶ....ಬಂದೇ ಬುಟ್ವೀ....ಅಂದ.
  ಸಧ್ಯ ಸ್ಟೋರಿ ಮಿಸ್ ಆಗ್ಲಿಲ್ವಲ್ಲಾ ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.  ಆದ್ರೆ ಆ ಕ್ಷಣದ ದುರಂತ ಅನ್ನೋ ಥರ ಅಲ್ಲಿ ಇದ್ದಕ್ಕಿದ್ದಂತೇ ಸುವರ್ಣ ಚಾನೆಲ್ ನ ವರದಿಗಾರ ವೇಣುಕುಮಾರ ಭಯಾನಕ ಸ್ಪೀಡ್ ನಲ್ಲಿ ಬೆಟ್ಟ ಏರಿ ಬಂದೇ ಬಿಡೋದೇ.......? ನನಗೆ Exclusive ಅಂತಾ ಹೇಳಿದ್ದ ಆ ಮಹಾಶಯನ ಮೇಲೆ ಇನ್ನಿಲ್ಲದ ಕೋಪ. ವೇಣು ನನಗೆ ಸ್ನೇಹಿತನಾಗಿದ್ದರೂ ಸುದ್ದಿ ವಿಚಾರದಲ್ಲಿ ಮಾತ್ರ ದುಶ್ಮನ್ ಆಗಿದ್ದ. ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಪೇಲವ ನಗೆ ನಕ್ಕೆವು. ಪಕ್ಕದಲ್ಲೇ ಬಂದು ಕುಳಿತ ವೇಣು ಕೊಸರಾಡಿಕೊಂಡು '' ಅಣ್ಣಾ ನಿನ್ ಗೆ ಹೆಂಗೋ ಗೊತ್ತಾಯ್ತು. ಅಂತ  ಕೇಳೇ ಬಿಟ್ಟ. ಕೋಪದಿಂದ ನಾನು '' ಯಾಕೇ....? ನಿಮ್ ಚಾನಲ್ ಗೆ ಮಾತ್ರ ಹೇಳ್ಬೇಕು ಅಂತಾ ಬಾಂಡ್ ಏನಾದ್ರೂ ಇದ್ಯಾ......? ಅಂತ ಮರುಪ್ರಶ್ನೆ ಹಾಕಿದೆ.   '' ಹಂಗಲ್ವೋ ನನ್ಗೆ ಇನ್ ಪಾರ್ಮ್ ಮಾಡಿದವ ನನ್ನೊಬ್ಬನಿಗೆ ಬಿಟ್ಟು ಯಾರಿಗೂ ವಿಷಯ ಹೇಳಿಲ್ಲ ಅಂದಿದ್ದ.........., ಅಂತ ವಿವರಿಸತೊಡಗಿದ. ಯಾರವನು ಅಂತಾ ಕೇಳಿದ್ರೆ ಆ ಮಹಾಶಯನ ಹೆಸರು ಹೇಳೋದೇ.......? ಎಲಲಾ ಮಹಾಶಯಾ........, ಚೆನ್ನಾಗೇ ಗೇಮ್ ಹಾಕಿದ್ದೀ....ಅಂತ ಮನಸಾರೆ ಅವನನ್ನ ಬೈದುಕೊಳ್ಳತೊಡಗಿದೆವು.   ಅಷ್ಟರಲ್ಲಿ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು. ಬಂಡೆಯೊಂದರ ಮರೆಯಿಂದ  ಕಸ್ತೂರಿ ಚಾನಲ್ ನ ಕ್ಯಾಮೆರಾಮೆನ್ ಬಿಳಿಗಿರಿ ಶ್ರೀನಿವಾಸ್ ರಿಪೋರ್ಟರ್ ಸುರೇಶ್ ನಗ್ತಾ ನಗ್ತಾ ಹೊರ ಬಂದು ಬಿಟ್ರು. ದೇವಸ್ಥಾನದ ಅದ್ಯಾವುದೋ ಮೂಲೆಯಿಂದ ಉದಯ ಟಿವಿ ಅತಿಖ್ ಕೂಡ ಎಂಟ್ರಿ ಕೊಟ್ರು. ಅಲ್ಲಿಗೆ ಎಲ್ಲಾ ಮುಗಿದೇ ಹೋಗಿತ್ತು. ಆ ಮಹಾಶಯ ಆ Extra ಡೈಲಾಗನ್ನು ಎಲ್ಲರಿಗೂ ಹೇಳಿ ಎಲ್ಲರೂ ಬೆಳ್ಳಗ್ಗೇನೇ ಬೆಟ್ಟ ಹತ್ತುವಂತೆ ಮಾಡಿದ್ದ. ಇನ್ನೇನು ಮಾಡೋದು.., ವೃತ್ತಿ ಬಾಂಧವರು ತಾನೇ.....? ಎಲ್ಲರೂ ಒಂದಾಗಿ ಕಲೆತು ಹರಟೆ ತಮಾಷೆ ಇತ್ಯಾದಿ ಶುರು ಮಾಡಿದ್ವು....., ನನಗೆ ಅಲ್ಲೊಂದು ಕೊರತೆ ಎದ್ದು ಕಾಣತೊಡಗಿತು. ಅದು ಈ ಟಿವಿಯ ಅಂಬಿಕಾ ಪ್ರಸಾದ್.......,  ಛೇ ಅವರೊಬ್ಬರು ಮಾತ್ರ ಇಲ್ವಲ್ಲಾ ಅಂತ ಕನವರಿಸಿದೆ ಅಷ್ಟೇ........, ಕ್ಯಾಮೇರಾನ ಕೈ ಯಲ್ಲಿ ಹಿಡಿದುಕೊಂಡೇ ನಮ್ಮ ಹಿಂಬದಿಯ ಬಂಡೆ ಮರೆಯಿಂದ ಹೊರಬಂದ ಪ್ರಸಾದ್ '' ಹೌದು ಸ್ವಾಮಿ.., ನಾನು ಇದೀನಿ....ಸಂತೆ ಸೇರೋ ಮುಂಚೆ ಗಂಟು ಕಳ್ಳರು ಸೇರ್ಕೊಂಡ್ರು ಅನ್ನೋ ಹಾಗೇ..........., ಅನ್ನೋದೆ....? ನಮ್ಮ ನಗುವಿಗೆ ಪಾರವೇ ಇರಲ್ಲಿಲ್ಲ. ಯಾಕಂದ್ರೇ ನಾವು ನಿಜವಾಗ್ಲೂ ಕಳ್ಳರ ರೀತಿ ಒಬ್ಬರಿಗೊಬ್ಬರು ವಿಷಯ ತಿಳಿಸದೇ ಬೆಟ್ಟಕ್ಕೆ ಬಂದಿದ್ದೆವು. ಎಲ್ಲರಿಗೂ Exclusive ನ್ಯೂಸ್ ಮಾಡುವ ತವಕ. ಯಾವನೋ ಒಬ್ಬ ಹಳ್ಳೀ ಲೀಡರ್ ನಿಂದ ನಾವೆಲ್ಲಾ ಮೂರ್ಕರಾಗಿದ್ದೆವು. ಸುಮಾರು ಒಂದು ಘಂಟೆ ತಡವಾಗಿ ಬಂದ ಆ ಮಹಾಶಯ ಬಂದು ನಮ್ಮನ್ನು ನೋಡಿ ನಕ್ಕನಾದ್ರೂ ನಾವ್ಯಾರೂ ನಗಲ್ಲಿಲ್ಲ. ಮದುವೆ ಮನೆಯಲ್ಲಿ ಅವನಿಗೆ ಬಾಯಿಗೆ ಬಂದಂತೆ ಜಾಡಿಸುವ ಮನಸ್ಸಿತ್ತಾದ್ರೂ ಯಾರೂ ಕೂಡ ಆ ದೈರ್ಯ ಮಾಡಲ್ಲಿಲ್ಲ.  ಅನಾಥ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಿದ ಆತ್ಮತೃಪ್ತಿಯ ಜೊತೆಗೆ ಮರಳಿ ಗೂಡಿಗೆ ಸೇರಿದೆವು.

Sunday, November 20, 2011

ಡ್ರಾಪ್ ಕೊಡ್ತೀರಾ ಪ್ಲೀಸ್.......?

ಏನೇ ಹೇಳಿ....., ಜೇಬಲ್ಲಿ ಪರ್ಸ್ ಇಡೋದೇ ಒಂದು ರೀತಿಯ ಸ್ಟಾಂಡರ್ಡ್.  ಅದರಲ್ಲಿ ಕಾಸಿರ್ಲಿ ಅಥ್ವಾ ಹಳೇಯ ಪೇಪರ್ ಚೂರುಗಳಿರ್ಲಿ  ಪ್ಯಾಂಟ್ ಹಿಂಬಾಗದ ಪಾಕೆಟ್ ನಲ್ಲಿ ಅದು ಇದ್ದು ದಪ್ಪದಪ್ಪಾಗಿ ಎದ್ದು ಕಂಡ್ರೆ ಅದೊಂಥರಾ ಖುಷಿ. ಐದು ರುಪಾಯಿ ಆದ್ರೂ ಸರೀನೇ....., ದಪ್ಪದಪ್ಪದಾಗಿರೋ ಪರ್ಸನ್ನ ಕಿಸೆಯಿಂದ ಕಸಕ್ಕನೆ ಎಳೆದು, ಎರಡೆಳೆಯಾಗಿ ತೆರೆದು, ನೋಟನ್ನು ಎಳೆದು ಕೊಡ್ತಾ ಇದ್ರೆ........! ಸುತ್ತ ಮುತ್ತಲ ಜನರೆಲ್ಲಾ ಯಾವನೋ ಶ್ರೀಮಂತ ಅಂತಾ ಅಂದ್ಕೋತಾರೆ ಅನ್ನೋ ಕಲ್ಪನೆ.
     ಇಷ್ಟೆಲ್ಲಾ ತಿಳಿದುಕೊಂಡಿದ್ದ ನನಗೆ ನಾನಿಡುವ ಪರ್ಸ್ ಕೂಡ ಅಷ್ಟೇ ಸ್ಟಾಂಡರ್ಡ್  ಆಗಿರಬೇಕು ಅಂತ ಅನ್ನಿಸಿತ್ತು. ಅದಕ್ಕೆ ಪೂರಕ ಎಂಬಂತೆ ನನ್ನ ಗೆಳೆಯ ರಫಿಕ್ ಒಂದು ಪರ್ಸನ್ನು ನನಗೆ ಗಿಪ್ಟ್ ಕೊಟ್ಟಿದ್ದ. ಸೊಂಟದ ಅಳತೆಗೆ ಸರಿದೂಗುವ ಪ್ಯಾಂಟ್ ಇದ್ದರೂ ಸೊಂಟವೇ ಇಲ್ಲದಂತೆ ಜಾರಿ ಹೋಗುವ ಪ್ಯಾಂಟ್ ಹಾಕಿಕೊಳ್ಳುವಂತಹ ಸ್ಟೈಲ್ ಮಾಡೋದ್ರಲ್ಲಿ..., ನ್ಯೂ ಜನರೇಶನ್ ಅನ್ನೋ ಹೆಸರಲ್ಲಿ ಚಿತ್ರವಿಚಿತ್ರ ವೇಷ ಹಾಕಿಸೋದರಲ್ಲಿ ಅವ ಭಯಂಕರ ರುಸ್ತುಮ ಬಿಡಿ.
ಎಷ್ಟೇ ಆದ್ರೂ ಗೆಳೆಯ ಕೊಟ್ಟ ಪರ್ಸ್..., ಹಾಗಂತ ಅದನ್ನು ಖಾಲಿ ಬಿಡೋಕಾಗುತ್ಯೇ.....?  ತಿಂಗಳ ಮೊದಲ ವಾರದಲ್ಲಿ ನನ್ನ ಸಂಬಳ ತನ್ನ ಕೈ ಸೇರುವವರೆಗೆ ಪ್ರೀತಿಯ ನಯಾಗರವಾಗಿ ನಂತರ ರಣಭಯಂಕರವಾಗುವ ನನ್ನ ಮನದನ್ನೆ ಎದುರು ಮೂರು ನೂರರ ನೋಟಿಗಾಗಿ ಕೈ ಒಡ್ಡಿದೆ.
    ಅಯ್ಯೋ ,,, ಇದ್ದಿದ್ದೇ ಬಿಡ್ರಿ,   ಸಾವಿರ ಸಾವಿರ ಹಣವನ್ನು ನನ್ನ ಅಕೌಂಟ್ ನಿಂದ ಪೀಕುವ ನನ್ನ ರಾಜರಾಜೇಶ್ವರಿ ನೂರರ ಮೂರು ನೋಟು ಕೊಡೋಕೆ ಮುನ್ನೂರು ಪ್ರಶ್ನೆ ಕೇಳಿ ಅಷ್ಟ ಸಹಸ್ರನಾಮಾರ್ಚನೆ ಮಾಡೀ.........., ಕೊಡುವಷ್ಟರಲ್ಲಿ ಬೆಳಗ್ಗಿನ 10 ಘಂಟೆಯಾಗಿತ್ತು. ಎಷ್ಟೇ ಆಗ್ಲೀ ಅವಳ ಸಿಡಿ ಸಿಡಿ ವಧನವೇ ನನಗೆ ಶುಭ ಶಕುನ ಅಲ್ವೇ....?  ಬೈಕನ್ನೇರಿ ಆಪೀಸ್ ನತ್ತ ಹೊರಟೆ. ಶಾಂತಿನಗರದಿಂದ  ಸಾಲಗಾಮೆ ರಸ್ತೆಯಲ್ಲಿ ಸಾಗುವ ಮಾರ್ಗ ಮಧ್ಯ  ನಂದು ವರ್ಕ್ ಶಾಪ್ ಎದುರು ಒಬ್ಬ ಸುಂದರಾಂಗಿ ನನ್ನ ಬೈಕ್ ಗೆ ಕೈ ತೋರಿಸಿದಳು. ಕಕ್ಕಾಬಿಕ್ಕಿಯಾದ ನಾನು ಹಿಂದೆ ತಿರುಗಿ ನೋಡಿದೆ....., ಯಾರೂ ಇಲ್ಲಾ....!!!?. ಅಚ್ಚರಿಯಾಯಿತು. ಟೈಟ್ ಜೀನ್ಸ್,  ಟೀ ಶರ್ಟ್......, ಹವಳದಂತಹ ತುಟಿಗೆ ಮೆತ್ತಿರುವ ಕೆಂಬಣ್ಣ...., ಆಹಾ.., ಮೋಹನಾಂಗಿ ಅನ್ನೋದ್ರಲ್ಲಿ  ಎರಡು ಮಾತೇ ಇಲ್ಲ. ಅದ್ಯಾಕೋ ಸಣ್ಣ ನಡುಕ ಹುಟ್ಟಿದ್ರೂ ಸಾವರಿಸಿಕೊಂಡು ಬೈಕ್ ನಿಲ್ಲಿಸಿದೆ. ಅವಳೆಷ್ಟು ಚೆಲುವೆಯೋ ಅವಳ ನಗು ಅದರ ನೂರರಷ್ಟು ಚೆಲುವು. ಒಂದೇ ಬಾರಿ ಸಾವಿರ ಸಾವಿರ ವೋಲ್ಟ್ ನಷ್ಟು ವಿದ್ಯುತ್ ಪ್ರವಹಿಸಿದ ಅನುಭವ. .....,
       ಡ್ರಾಪ್ ಕೊಡ್ತೀರಾ....ಪ್ಲೀಸ್.....? ಅವಳ ಧ್ವನಿ.., ಅದು ಧ್ವನಿಯಲ್ಲ......., ವೀಣಾನಾಧ. ಕಳೆದು ಹೋಗುತ್ತಿದ್ದ ನನ್ನನ್ನು ಅವಳು ಸರ್, ಬಸ್ ಸ್ಟ್ಯಾಂಡ್ ತನಕ ಡ್ರಾಪ್ ಕೊಡ್ತೀರಾ ಅಂತ ಕೇಳಿದಳು. ರಂಭೆಯೋರ್ವಳು ಬೈಕನ್ನೇರುವಾಗ ನಾನೇಕೆ ಬೇಡಾ ಎನ್ನಲಿ...? ಆ ಕ್ಷಣಕ್ಕೆ ನನ್ನ ಪತ್ನಿಯ ನೆನಪಾದರೂ ದೈರ್ಯ ತಂದುಕೊಂಡು ವೈ ನಾಟ್.....ಪ್ಲೀಸ್ ಅಂತ ಒಂದಷ್ಟು ಮುಂದೆ ಜರುಗಿ ಕುಳಿತೆ. ಹಾಗೇ ನನ್ನ ಬೈಕ್ ಎಡಕಲ್ಲು ಗುಡ್ಡದ ಮೇಲೆ ಸ್ಟೈಲ್ ನಲ್ಲಿ ಬಸ್ ಸ್ಟ್ಯಾಂಡ್ ಕಡೆಗೆ ಹೊರಟಿತ್ತು. ಅವಳು ತುಂಬಾ ಮಾತನಾಡಿದಳು... ಎಲ್ಲದಕ್ಕೂ ಹೂಂ...ಹೂಂ ಅಂದೆ. ಬೈಕ್ ನಿಂದ ಕೆಳಗಿಳಿದ ನಂತರ ಟಾಟಾ ಮಾಡಿದಳು. ಸಾಧ್ಯವಾದಷ್ಟು ಮಾದಕವಾಗಿ ನಕ್ಕು ನಾನೂ ಕೂಡ ಹಾಗೇ ಮಾಡಿದೆ. ಅದೊಂದು ರಸಮಯ ಅನುಭವ ನೀಡಿದ ಗಾಡ್ ಗೆ ಥ್ಯಾಂಕ್ಸ್ ಹೇಳಿ  ಪೆಟ್ರೋಲ್ ಹಾಕಿಸಿಕೊಂಡು ಬರಲು ಬಂಕ್ ನತ್ತ ಹೊರಟೆ.
      ನೂರು ರುಪಾಯಿಯ ಪೆಟ್ರೋಲ್ ಹಾಕಿಸಿದ ನಾನು ಹೊಸ ಪರ್ಸ್ ನೊಳಗೆ ಬೆರಳು ತೂರಿಸಿ ಸ್ಠೈಲ್ ಆಗಿ ನೋಟು ತೆಗೆದು ಕೊಡಲು ಜೇಬಿಗೆ ಕೈ ಹಾಕಿದೆ. ಪರ್ಸ್ ಇರಲ್ಲಿಲ್ಲ. ಗಾಬರಿ ಬಿದ್ದು ಎಲ್ಲಾ ಜೇಬುಗಳನ್ನು ತಡಕಾಡಿದೆ....ಊಹೂಂ ಪರ್ಸ್ ಇಲ್ಲ. ಆಗ ನನಗೆ ಸಹ್ಯಾದ್ರಿ ಥಿಯೇಟರ್ ಬಳಿ ಬೈಕ್ ನಲ್ಲಿ ಹಂಪ್ ಅವೈಡ್ ಮಾಡಲು ಬ್ರೇಕ್ ಹಾಕಿದ್ದು.....ಆ ಹುಡುಗಿ ನನ್ನ ಬೆನ್ನಿಗೆ ಅಂಟಿ ನಂತರ ಸೊಂಟ ಹಿಡಿದು ಹಿಂದೆ ಜರುಗಿದ್ದು ನೆನಪಾಯ್ತು.
          ಥತ್..., ಊರವರ ಪೆದ್ದುತನ ಸುದ್ದಿ ಮಾಡೋ ನಾನು ಪೆದ್ದುಪೆದ್ದಾಗಿ ಪರ್ಸ್ ಕಳೆದುಕೊಂಡಿದ್ದೆ. ಬಂಕ್ ನವ ಪರಿಚಯ ಇದ್ದ ಕಾರಣ ಆ ತಕ್ಷಣಕ್ಕೆ ಹಣ ಕೊಡಲೇಬೇಕಾದ ಅಗತ್ಯ ಬರಲ್ಲಿಲ್ಲ. ಅವೊತ್ತಿನಿಂದ ನಾನು ಪರಿಚಯ ಇಲ್ಲದ ಯಾವುದೇ ಹೆಣ್ಣು ಮಗಳನ್ನ ನನ್ನ ಬೈಕ್ ಹತ್ತಿಸುತ್ತಿಲ್ಲ...., ಜೊತೆಗೆ ಪರ್ಸ್ ಇಡುವ ಧೈರ್ಯವನ್ನೂ ಮಾಡಿಲ್ಲ.

Tuesday, November 15, 2011

ಆಪರೇಶನ್ ಗೋ ಮಾತೆ.....,

ಅದು Exact message..........,
   ಹಾಸನದ ಎ.ಪಿ.ಎಂ.ಸಿ ಯಾರ್ಡ್ ಹಿಂಭಾಗದ ಗೇಟ್ ಬಳಿ ಐದು ಲಾರಿಗಳಲ್ಲಿ ಗೋವುಗಳನ್ನು ಲೋಡ್ ಮಾಡಿದ್ದಾರೆ. ರಾತ್ರಿ 10 ಘಂಟೆ ಸುಮಾರಿಗೆ ಅವುಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತೆ. ಹಾಸನ ಪೆನ್ ಶನ್ ಮೊಹಲ್ಲಾ ನಿವಾಸಿ ಸಾಬು      ( ಹೆಸರು ಬದಲಾಯಿಸಿದೆ) ಅನ್ನೋವ್ನು ಅವುಗಳನ್ನ ಸಕಲೇಶಪುರದ ಶಿರಾಡಿ ಗಡಿಯವರೆಗೆ ಪಾಸ್ ಮಾಡುತ್ತಾನೆ. ಅಲ್ಲಿಂದ ಮಂಗಳೂರಿನ ಟೀಮ್ ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೆ..........,
     ನನಗೆ ಇದರ ಅಸಲೀಯತ್ತನ್ನು ಅರಿಯುವ ಹಾಗು ಅಷ್ಟೇ ರೋಚಕವಾಗಿ ಈ ಸುದ್ದಿ ಚಿತ್ರೀಕರಿಸುವ ಮನಸ್ಸಾಯ್ತು. ನನ್ನ ಆಗಿನ ಕ್ಯಾಮೆರಾಮೆನ್ ಶಿವಾಜಿಗೆ ಇದೆಲ್ಲವನ್ನೂ ವಿವರಿಸಿದೆ.  ಶಿವಾಜಿ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಲೇಬೇಕು.  ಹೊಟ್ಟೆ ತುಂಬಾ ಊಟ ಇದ್ದರೆ ಸಾಕು, ಅವನದು ಮಗುವಿನಂತ ಮನಸ್ಸು.  ಅದೆಂತಹ  ಕಷ್ಟಕರ ಕೆಲಸವೇ ಇರಲಿ, ಸಾಕ್ಷಾತ್ ಛತ್ರಪತಿ ಶಿವಾಜಿಯಂತೆ ನುಗ್ಗುವ ಅಪ್ರತಿಮ ದೈರ್ಯಶಾಲಿ. ಅವನಂತಹ ಕ್ಯಾಮೆರಾಮೆನ್ ಬಲು ಅಪರೂಪ ಬಿಡಿ.
     ಆಗ ನನ್ನ ಬಳಿ ಕಾರು ಇರಲ್ಲಿಲ್ಲ. ಹಾಗಾಗಿ ನನ್ನ  ನನ್ನ ಸ್ನೇಹಿತ ಬಾಲಿಯಣ್ಣನ ಬಳಿ ಕಾರು ಕೇಳಿದೆ.  ಅದೇನೋ ಒಳ್ಳೇ ಜೋಶ್ ನಲ್ಲಿದ್ದ ಅವರೂ ಕೂಡ ನಮ್ಮ ಜೊತೆ  ಹೊರಟೇ ಬಿಟ್ರು.  ಇದೇ ವೇಳೆ ಸಕಲೇಶಪುರದ್ಲಲಿದ್ದ ನನ್ನ ಗೆಳೆಯ ಧ್ಯಾನ್ ಪೂಣಚ್ಚನಿಗೆ ಮಾಹಿತಿ ನೀಡಿದ್ದೆ. ಅವ  ಈಗ ಜನಶ್ರೀ ಚಾನೆಲ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ.
            ನಮ್ಮ ಪ್ಲಾನ್ ನಂತೆ ಆಪರೇಶನ್ ಸ್ಟಾರ್ಟ್  ಆಯ್ತು.  ಅಲ್ಲಿ ಎ.ಪಿ.ಎಂ.ಸಿ ಯಾರ್ಡ್ ನ ಹಿಂಬಾಗದ ಗೇಟ್ ಬಳಿ ಗೋವುಗಳನ್ನು ಅಮಾನವೀಯವಾಗಿ ಲಾರಿಗಳಿಗೆ ಲೋಡ್  ಮಾಡುತ್ತಿದ್ದುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡೆವು. ರಾತ್ರಿ 10.30 ರ ಸುಮಾರಿಗೆ ಆ ಐದು ಲಾರಿಗಳು ಒಂದೋದಾಗಿ ಸಕಲೇಶಪುರದತ್ತ ಹೊರಟವು.
     ನಿಜವಾಗ್ಲೂ ಅದು ರಣ ಸ್ಪೀಡ್....., ನೀವು ನಂಬಲಿಕ್ಕಿಲ್ಲ. ಆ ಕತ್ತಲ ಹಾದಿಯಲ್ಲಿ ಎಲ್ಲಾ ಲಾರಿಗಳು ಸರಿಸುಮಾರು 100 ಕಿಲೋಮೀಟರ್ ವೇಗದಲ್ಲಿ ಹೊರಟಿದ್ದವು. ಅವುಗಳನ್ನ  ಛೇಸ್ ಮಾಡೋದಿರ್ಲಿ.., ಧೂಳು ಕೂಡ ಹಿಡಿಯೋಕೆ ನಮ್ಮಿಂದ ಸಾಧ್ಯವಾಗಲ್ಲಿಲ್ಲ. ನಾನು ತಕ್ಷಣ ಧ್ಯಾನ್ ಗೆ  ಯಾವುದಾದ್ರೂ ಕಾಯಿನ್ ಬೂತ್ ನಿಂದ ಸಕಲೇಶಪುರ ನಗರ ಠಾಣೆಗೆ ಪೋನ್ ಮಾಡಿ ಮಾಹಿತಿ ನೀಡುವಂತೆ ಹೇಳಿದೆ. ಸೇಫರ್ ಸೈಡ್ ಅಂತ ಅವ ನಾವು ಹೇಳಿದಂತೆ ಮಾಡಿದ್ದ.
     ಸಕಲೇಶಪುರ ತಲುಪಿದ ನಮಗೆ ನಿಜವಾಗ್ಲೂ ಖುಷಿಯಾಯ್ತು ಯಾಕೆಂದ್ರೆ ಆ ಎಲ್ಲಾ ಲಾರಿಗಳು ನಗರ ಠಾಣೆ ಎದುರು ಸಾಲಾಗಿ ನಿಂತಿದ್ದವು.  ಪೊಲೀಸರ ಕಾರ್ಯ ದಕ್ಷತೆಗೆ ಮೆಚ್ಚಿದ ನಾವು ಕಾರ್ ನಿಂದ ಕೆಳಗಿಳಿದು ಲಾರಿಗಳ ವಿಶ್ಯುವಲ್ಸ್ ಮಾಡತೊಡಗಿದೆವು. ಆದ್ರೆ ಏನಾಶ್ಚರ್ಯ.....?  ಸ್ಟೇಷನ್ ನಿಂದ  ಇದ್ದಕ್ಕಿದ್ದಂತೆ ಓಡಿ ಬಂದ ಲಾರಿ ಚಾಲಕರು ಲಾರಿ ಹತ್ತಿ  ಹೊರಟೇ ಬಿಟ್ರು...,
    ನಮಗೆ ಅದನ್ನು ಪ್ರಶ್ನೆ ಮಾಡುವಷ್ಟು ಸಮಯ  ಇರಲ್ಲಿಲ್ಲ. ನಾವು ಕೂಡ  ಎಲ್ಲಾ ಲಾರಿಗಳನ್ನು ಹಿಂದಿಕ್ಕಿ ಕಪ್ಪಳ್ಳಿ ಗ್ರಾಮದ ಬಳಿ ನಮ್ಮ ವ್ಯಾನ್ ನಿಲ್ಲಿಸಿದೆವು.
           ಸರಿಯಾಗಿ ಐದು ನಿಮಿಷಕ್ಕೆ ಎಲ್ಲಾ ಲಾರಿಗಳು ಕಪ್ಪಳ್ಳಿ ಸಮೀಪ ಬಂದವು.  ಬಾಲಿಯಣ್ಣ ಹಾಗು ಧ್ಯಾನ್ ರಸ್ತೆಯಲ್ಲಿ ಲಾರಿ ನಿಲ್ಲಿಸುವಂತೆ ಅಡ್ಡ ನಿಂತರು. ನಿಲ್ಲಿಸಬಹುದು ಎಂಬ  ಆತ್ಮವಿಶ್ವಾಸ ಕೂಡ ಅವರಲ್ಲಿತ್ತು. ಇನ್ನೇನು ಹತ್ತಿರ.......ಹತ್ತಿರಾ...,   ಆ ಲಾರಿಗಳು ನಿಲ್ಲುವುದಿರಲಿ..., ಯಾವ ಸ್ಪೀಡ್ ನಲ್ಲಿ ಬಂದವೋ ಅದೇ ಸ್ಪೀಡ್ ನಲ್ಲಿ ಇವರ ಮೇಲೆ ಬಂದೇ ಬಿಟ್ವು.
     ಕ್ಷಣ ಮಾತ್ರದಲ್ಲಿ ಅಪಾಯವನ್ನು ಗ್ರಹಿಸಿದ ಧ್ಯಾನ್  ಹಾಗು ಬಾಲಿಯಣ್ಣ ಅಲ್ಲಿಂದ ಪಕ್ಕಕ್ಕೆ ಜಿಗಿದು ಪ್ರಾಣ  ಉಳಿಸಿಕೊಂಡ್ರು.  ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ನಾವೆಲ್ಲರೂ ಗಾಬರಿಯಾಗಿದ್ದೆವು. ಗೋವುಗಳನ್ನು ಸಾಗಿಸುವ ಕಟುಕರು ಮನುಷ್ಯರ ಪ್ರಾಣವನ್ನೂ ತೆಗೆಯಲು ಹೇಸೋದಿಲ್ಲ ಅನ್ನೋ ಸತ್ಯವನ್ನು ಸ್ವತಃ ಅನುಭವಿಸಿದೆವು.
ಎಲ್ಲವೂ ನಮ್ಮ ಸ್ಪೀಡನ್ನು ಮೀರಿ ಹೋಗಿದ್ದವು. ಆದ್ರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಯುವಕರ ಗುಂಪೊಂದು ಆ ಎಲ್ಲಾ ಲಾರಿಗಳ ಮೇಲೆ ಕಲ್ಲು ತೂರುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು. ಕುತೂಹಲ ತಡೆಯದ ನಾನು ಅವರ ಬಳಿ ಹೋಗಿ ಯಾಕೆ ಕಲ್ಲು ತೂರುತ್ತಾ ಇದ್ದೀರಾ.....? ಅಂತ ಕೇಳಿದೆ.
       ಅವರಲ್ಲೊಬ್ಬ  " ಸಾರ್...., ಈ ರಸ್ತೇಲಿ ಐದು ಲಾರೀಲಿ ದನಗಳನ್ನ ಕೇರಳಕ್ಕೆ ತಗೊಂಡು ಹೋದ್ರು ಸಾರ್...., ನಾನು ಇದುನ್ನ ಟಿವಿ ನೋರಿಗೆ ಹೇಳಿದ್ದೆ. ಅವ್ರು  ಬರ್ಲಿಲ್ಲ..,ಯಾವ್ದುಕ್ಕೂ ತಾಕತ್  ಬೇಕು ಸಾರ್...,  ನಮ್ ಕೈಲಿ ಗೋಮಾತೇನಾ ಕಾಪಾಡೋಕೆ ಆಗ್ಲಿಲ್ಲ.  ಆದ್ರೆ ಸಾಗಿಸ್ತಾ ಇದ್ದ  ಎಲ್ಲಾ ಲಾರಿಗಳ ಗಾಜು ಪುಡಿ ಪುಡಿ ಮಾಡಿದ್ವೀ....., " ಎಂದ.
   ಅವನು ಕುಡಿದಿದ್ದ.  ಆದ್ರೆ  ಆತನ ಕಳಕಳಿಗೆ ನಶೆ ಏರಿರಲ್ಲಿಲ್ಲ.  ಅಲ್ಲಿ ನಾವು ಯಾರು ಅಂತ ಅವನಿಗೆ ನಮ್ಮಿಂದ ಹೇಳೋಕೆ ಸಾಧ್ಯ ಆಗ್ಲಿಲ್ಲ.  ಮತ್ತದೇ ಬೇಸರ...ವ್ಯವಸ್ಥೆಯ ವಿರುದ್ದ ಅಸಹನೆಯನ್ನು ಹಂಚಿಕೊಂಡು ಹಾಸನದ ಹಾದಿ ಹಿಡಿದೆವು. ಸಕಲೇಶಪುರದ ಟೋಲ್ ಗೇಟ್ ನ ಬಳಿ ಅಂದಿನ ನಗರ ಠಾಣಾ ಇನ್ಸ್ ಪೆಕ್ಟರ್ ಜೀಪ್ ನಿಂತಿತ್ತು. ಡ್ರೈವರ್ ಹೊರಗೆ ನಿಂತು ಸಿಗರೇಟು ಸೇದುತ್ತಾ ಬಂದ ಬಂದ ವಾಹನಗಳಿಗೆ ಕೈ ತೋರಿಸುತ್ತಿದ್ದ.

Monday, November 14, 2011

ಹೇ ಭಾಯ್.., ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......?

ಕಾಚೀಗುಡ ಎಕ್ಸ್ ಪ್ರೆಸ್..........,
  ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರೈನ್ ಹತ್ತಿದ ನನಗೆ ಅಂದು ವಿಮಾನವನ್ನೇ ಏರಿದ ಅನುಭವ.  ಟ್ರೈನ್ ನ ಲಬ್ ಡಬ್ ಸದ್ದಿಗಿಂತ   ಎದೆಯಾಳದಲ್ಲಿ ನಾಳೆ ಅನ್ನೋ ಆತಂಕದ ಬಡಿತ ಹೆಚ್ಚಾಗಿತ್ತು. ಜೊತೆಜೊತೆಗೆ ಬೆಂಗಳೂರಲ್ಲೇ ಕನ್ನಡವನ್ನು ಕಳೆದುಕೊಂಡ ಪರಕೀಯತೆ........., ತೆಲುಗು, ಹಿಂದಿ, ಇಂಗ್ಲೀಷ್, ಮರಾಠಿ ಬಾಷೆಯ ಅಬ್ಬರ.......,
   ಆಗಸದ ಅಂಗಳದಲ್ಲಿ ಸೂರ್ಯ ಮರೆಯಾಗುತ್ತಿದ್ದ. ಕೆಂಪು ಕೆಂಪಾಗಿದ್ದ ಸಂಜೆ ರಾತ್ರಿಯ ಸಿದ್ದತೆಯಲ್ಲಿತ್ತು........,  ಅದು ನನ್ನ  ಜೀವನದ ಮೊತ್ತಮೊದಲ ಇಂಟರ್ ವ್ಯೂ.ಗೆ ನಾ ಮಾಡಿದ ಪಯಣ.
ಅದ್ಯಾವಾಗ ನಿದ್ರೆಗೆ ಜಾರಿದೆನೋ ಗೊತ್ತಿಲ್ಲ. ಕಣ್ಣು ಬಿಟ್ಟಾಗ ಎಲ್ಲವೂ ತೆಲುಗುಮಯವಾಗಿತ್ತು. ಅಲ್ಲಿದ್ದ ಬೋರ್ಡು......, ಅಂಗಡಿ ಮುಂಗಟ್ಟುಗಳು....., ಓಡಾಡುತ್ತಿದ್ದ ಜನರು........., ಸುಳಿಯುತ್ತಿದ್ದ ತಂಗಾಳಿ............... ಗುರುತಿನ ಕಂಗಳಿಗಾಗಿ ಹುಡುಕಾಟ.
ಜೇಬಿನಲ್ಲಿದ್ದ ಟೆಲಿಗ್ರಾಂ ನ್ನು ಮತ್ತೊಮ್ಮೆ ತಡವಿಕೊಂಡೆ. ಅದು ನನಗೆ ರಾಮೋಜಿ ಫಿಲ್ಮ್ ಸಿಟಿಯಿಂದ ಇಂಟರ್ ವ್ಯೂ ಗೆ ಬರುವಂತೆ ಕರೆದಿದ್ದ ತುರ್ತು ಟೆಲಿಗ್ರಾಂ.
ಅಲ್ಲಿದ್ದ ಆಟೋ ಚಾಲಕನ ಬಳಿ ಹಿಂದಿಯಲ್ಲಿ ರಾಮೋಜಿ ಫಿಲ್ಸ್ ಸಿಟಿಗೆ ಹೋಗುವ ಬಸ್ ನಂಬರ್ ಕೇಳಿ ಬಸ್ ಹತ್ತಿದೆ. ಬಸ್ ಓಡುತ್ತಿದ್ದಂತೇ ಮನದಾಳದ ತಳಮಳ ಕೂಡ ಹೆಚ್ಚಾಗಿತ್ತು. ಬಸ್ ರಾಮೋಜಿ ಫಿಲ್ಸ್ ಸಿಟಿಯ ಒಳ ಪ್ರವೇಶಿಸಿದಂತೇ ಅದು ಇನ್ನೂ ಕೂಡ ಹೆಚ್ಚಾಗಿತ್ತು.
  ಫಿಲ್ಮ್ ಸಿಟಿಗೆ ಸಂಬಂದಪಡದ ವಾಹನಗಳಿಗೆ ಅದರ ಮುಖ್ಯಧ್ವಾರದ ಬಳಿಯವರೆಗೆ ಮಾತ್ರ ಪ್ರವೇಶಾವಕಾಶ. ಅಲ್ಲಿಂದ ಏನಿದ್ದರೂ ರಾಮೋಜಿ ಫಿಲ್ಮ್ ಸಿಟಿಯ ವಾಹನಗಳಲ್ಲೇ ಒಳಗೆ ಹೋಗಬೇಕು. ಹಾಗಾಗಿ ನನಗೆ ಬಂದಿದ್ದ ಟೆಲಿಗ್ರಾಂ ತೋರಿಸಿ ಅಲ್ಲಿದ್ದವರ ನೆರವಿನೊಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಾನು ತಲುಪಬೇಕಿದ್ದ ಕಛೇರಿಯನ್ನು ತಲುಪಿದೆ. ಆಗ ಸಮಯ ಇನ್ನೂ   ಬೆಳಗ್ಗಿನ 8.30 ಘಂಟೆಯಾಗಿದ್ದರಿಂದ ಕಛೇರಿ ಬಾಗಿಲೇ ತೆರೆದಿರಲ್ಲಿಲ್ಲ.
         ಇಂಟರ್ ವ್ಯೂ ಅನ್ನೋ ಕಾತುರತೆಗೆ ಸಿಲುಕಿದ್ದ ನಾನು ರಾತ್ರಿಯಿಂದ ಸರಿಯಾಗಿ ಊಟ ತಿಂಡಿ ಮಾಡಿರಲ್ಲಿಲ್ಲ. ಆದ ಕಾರಣ ಹೊಟ್ಟೆಗೆ ಒಂದಷ್ಟು ಏನನ್ನಾದರೂ ಹಾಕಿ ಬರೋಣ ಅಂತಾ ಕ್ಯಾಂಟಿನ್ ಹುಡುಕಿ ಹೊರಟೆ. ಒಂದಷ್ಟು ದೂರ ಕ್ರಮಿಸಿದ ನನಗೆ ಅಲ್ಲಿ ಆಟೋ ಸ್ಟ್ಯಾಂಡ್, ಹೊಟೆಲ್, ಚಾಯ್ ಕಾ ದುಕಾನ್, ಪಾನ್ ಶಾಪ್, ಬಾರ್ ಆಂಡ್ ರೆಸ್ಟೋರೆಂಟ್,  ದೇಸೀ ದಾರೂ ಕಾ ದುಕಾನ್ ಇತ್ಯಾದಿ ಇತ್ಯಾದಿ ಬೋರ್ಡ್ ಗಳು ಕಂಡವು. ವಿಚಿತ್ರ ಅಂದ್ರೆ ಅವು ಯಾವೂ ಕೂಡ ಬಾಗಿಲು ತೆರೆದಿರಲ್ಲಿಲ್ಲ.
  ಅರೆರೆ...., ಏನ್ ಊರಪ್ಪಾ ಇದು..! ಇಷ್ಟೊತ್ತಾದ್ರೂ  ಯಾವ ಅಂಗಡಿನೂ ಬಾಗಿಲು ತೆಗೆದಿಲ್ಲ  ಎಂದು ರಾಗವೆಳೆದ ನನಗೆ ಇಲ್ಲಿ ಕರ್ಪ್ಯೂ ಜಾರಿಯಲ್ಲಿದೆಯಾ...? ಅನ್ನೋ ಅನುಮಾನ ಕೂಡ ಕಾಡತೊಡಗಿತು.
         ದೂರದಲ್ಲೊಬ್ಬ ಸೆಕ್ಯೂರಿಟಿ ಗಾರ್ಡ್ ಕಂಡ.., ನನಗೆ  ದೇವರನ್ನೇ ಕಂಡಷ್ಟು ಸಂತಸ.........., ಯಾಕಂದ್ರೆ ಅವ ನನ್ನತ್ತಲೇ ಬಂದು '' ಮೀರ್ ಎವುರು....? ಇಕ್ಕಡಾ ಯಾಲ ನಿಲ್ಚುಕುಂಡಾರು.....? ಎಂದ. ದೇವರಾಣೆ ನನಗೆ ಅರ್ಥ ಆಗ್ಲಿಲ್ಲ ಕಣ್ರೀ. ಪೆದ್ದು ಪೆದ್ದಾಗಿ ಅವನ ಬಳಿ ''  ಹೇ ಭಾಯ್..,  ಒ ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......? ಅಂತ ಕೇಳಿದೆ. ನನ್ನ ದುರಾದೃಷ್ಟಕ್ಕೆ ಅವನಿಗೆ ಹಿಂದಿ ಬರೋಲ್ಲ. ಅವ    '' ಇಕ್ಕುಡಾ ಚಾಣ ಪದ್ದು ನಿಲ್ಚುಕುಣೇಟ್ಲಾ......, ಅಂದ. ಇದ್ಯಾಕೋ ಸರಿ ಹೋಗ್ಲಿಲ್ಲ ಅಂತಾ ನನ್ನದೇ ಆದ ಆಂಗಿಕ ಬಾಷೆಯಲ್ಲಿ ಆತನಿಗೆ ನನ್ನ ಪ್ರಶ್ನೆಯನ್ನು ಅರ್ಥ ಮಾಡಿಸಿದೆ. ಅದಕ್ಕವನು '' ಇದು ಸ್ಟುಡಿಯೋ ಸೆಟ್ಟು...., ಯಾಪದೂ ಓಪನ್ ಆಯಿಲೇದು. ಏಮ್ ದಡ್ಡುಡು ನೂವು ಎಂದು ಜೋರಾಗಿ ನಗಲಾರಂಭಿಸಿದ.
          ಥತ್ ......, ನನ್ನ ಪೆದ್ದುತನ್ಕಕೆ ನನಗೇ ನಗು ಬಂದಿತ್ತು. ಸ್ಟುಡಿಯೋ ಸೆಟ್ ಗಳ ಎದುರು ನಿಂತ ನಾನು ಅವನ ನಗುವಿಗೆ ವಸ್ತವಾಗಿ ಬಿಟ್ಟೆ. ನಕ್ಕೂ ನಕ್ಕು ಸಾಕಾದ ಅವ ಕಡೆಗೆ ಪಕ್ಕದ ಬೀದಿಯಲ್ಲಿದ್ದ ಒರಿಜಿನಲ್ ಟೀ ಶಾಪ್ ಅಡ್ರೆಸ್ ಕೊಟ್ಟ.
       ಅದೇನೋ ಸರಿ........, ನನಗೆ ನಿಜವಾಗ್ಲೂ ಸಮಸ್ಯೆ ಶುರುವಾಗಿದ್ದೇ ಅಲ್ಲಿ. ಯಾಕಂದ್ರೆ ಅವೊತ್ತು 1999 ನೇ ಇಸವಿ ಏಪ್ರಿಲ್ ಒಂದನೇ ತಾರೀಖು. ನನ್ನ ಜೀವನದ ಮೊದಲ ಇಂಟರ್ ವ್ಯೂ ಅನ್ನೋ ಅತ್ಯಂತ ಮಹತ್ವದ ದಿನ........., ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಿಂದ ಬಂದಿದ್ದ  ಈ ಟೆಲಿಗ್ರಾಂ ಅಸಲೀನಾ.....ಅಥ್ವಾ ಇದೂ ಕೂಡ............!!!????. ಹಾಗೆನ್ನೋ ಪ್ರಶ್ನೆ ನನ್ನನ್ನು ನಖಶಿಖಾಂತ ನಡುಗಿಸಿ ಬಿಟ್ಟಿತ್ತು. ನಾನು ಸಂಪೂರ್ಣ ಬೆವೆತು ಹೋಗಿದ್ದೆ.
         ಆದ್ರೆ ಅದು ಹಾಗಾಗಲ್ಲಿಲ್ಲ. ಟೆಲಿಗ್ರಾಂ ಅಸಲೀನೇ ಆಗಿತ್ತು. ಅಲ್ಲಿ ನನ್ನ ವೃತ್ತಿ ಜೀವನದ ಗುರುಗಳಾದ ಕೆ.ಎಂ ಮಂಜುನಾಥ್ ನನ್ನನ್ನು ಇಂಟರ್ ವ್ಯೂ ಮಾಡಿದರು.  ನನಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತ್ತು.

Saturday, November 5, 2011

ಬೈಕ್ ಇನ್ ಸ್ನೇಕ್.......!!!

ಅದು ಕತ್ತಲನ್ನು ಬೆಳಕು ಚುಂಬಿಸುವ ಮೋಹಕ ಸಮಯ. ಕೋಟಿ ಕೊಟ್ಟರೂ ಏಳಲಾರೆ ಎಂಬ ದೇಹಾಲಾಸ್ಯದ ಜೊತೆಗೆ ಸುಖನಿದ್ರೆ. ಸಾವಿರ ಸೊಳ್ಳೆಗಳ ಸದ್ದನ್ನಾದ್ರೂ ಸಹಿಸಿಕೊಳ್ಳಬಹುದು ಹೆಂಡತಿ ಅನ್ನೋ ಮೈಕ್ ಅಷ್ಟೊತ್ತಿನಲ್ಲಿ ರ್ರೀ..., ಅಂತಾ ಎಷ್ಟೇ ಮೆಲ್ಲಗೆ ಕರೆದ್ರೂ ಅದು ಗುಡುಗಿನ ಸದ್ದಿನಂತೇ ಕೇಳಿಸುತ್ತೆ. ದಡಬಡಿಸಿ ಎದ್ದು ಕುಳಿತು ಅಂಗೈ ಉಜ್ಜಿಕೊಂಡು ಮುಖ ಮುಚ್ಚುತ್ತಾ ಏನೇ ಅದು.....? ಅಂದೆ. ಅವಾಗ್ಲಿಂದ ಪೋನ್ ಬಡ್ಕೊಂತಾ ಇದೆ  ಆನೆ ಬಿದ್ದಂಗೆ ಬಿದ್ದೀದೀರಲ್ರೀ....., ಅದೇನ್ ನೋಡ್ರೀ.... ಅಂತ ಅಂದವಳೇ ರಗ್ ಹೊದ್ದು ಮಲಗಿಕೊಂಡ್ಳು.  ಹೌದು, ಪೋನ್ ರಿಂಗಾಗ್ತಾನೇ ಇತ್ತು.  ''ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದರನೀಗಾ......, ಅಲ್ಲೊಂದು ಚೂರು ಇಲ್ಲೊಂದು ಚೂರು...., ಅನ್ನೋ ಹಾಡು.  ಅದು ನಮ್ಮ  ಇಂಗ್ಲೀಷ್ ಚಾನೆಲ್ ನಿಂದ ತುರ್ತುಕರೆ.  ಬೆಳ್ಳಂಬೆಳಗ್ಗೇ  ಕೋಕಿಲ ಧ್ವನಿ
ಹಲೋ ಸಾರ್....... ಹಾಸನ್  ಸ್ನೇಕ್ ದು ವಿಶ್ಯುವಲ್ಸ್ ಬಂದಿಲ್ಲ. ಬೇಗ ಅಪ್ ಲೋಡ್ ಮಾಡಿ ಪ್ಲೀಸ್....... ಅಂತಾ ರಾಗ ತೆಗೆದಳು. ಗಾಬರಿ ಬಿದ್ದ ನಾನು ಸ್ನೇಕಾ......? ಯಾವ ಸ್ನೇಕು....ಉ...? ಎಂದೆ.
ಅದೇ ಸಾರ್......., ಬೈಕು...., ಸ್ನೇಕೂ...., ಅಂತಾ ಆಕೆ ನನ್ನ ನಿದ್ದೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ಲು.
 ಈಗ ನನಗೆ ನಿಜವಾಗ್ಲೂ ನೆನಪಾಯ್ತು. ಹಾಸನದಲ್ಲಿ ಅವತ್ತು ಭಾರೀ ಮಳೆ ಬಂದಿತ್ತು. ಈ ಸಂದರ್ಭದಲ್ಲಿ ಚರಂಡಿಯಲ್ಲಿ ತೇಲಿ ಬಂದ ಚಿಕ್ಕ  ಹಾವೊಂದು ದೊಡ್ಡಿ ರಸ್ತೆಯಲ್ಲಿರೋ ಮೆಡಿಕಲ್ ಶಾಪ್ ವೊಂದರ ಒಳಕ್ಕೆ ಸೇರಿಕೊಂಡು ಬಿಟ್ಟಿತ್ತು.  ನಂತರ ಅಲ್ಲಿಂದ ಹೊರಬಂದ ಹಾವು ಶಾಪ್ ಎದುರು ನಿಲ್ಲಿಸಿದ್ದ ಬೈಕ್ ನ ಚೈನ್ ಸ್ಪಾಕೆಟ್ ಒಳ ಹೊಕ್ಕಿ ಹೊರ ಬರಲಾರದೆ ತಾಯಿಸಲಾರಂಬಿಸಿತು. ಕಡೆಗೆ ಅಲ್ಲೊಬ್ಬ ಯುವಕ ಚೈನ್ ಸ್ಪಾಕೆಟ್ ಹಾಗು ಮಾಸ್ಕನ್ನು ಬಿಚ್ಚಿ ಹಾವನ್ನು ಹೊರಕ್ಕೆ ತೆಗೆದಿದ್ದ. ಅಲ್ಲಿದ್ದ ನನ್ನ ಗೆಳೆಯರು ನನಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ತೆರಳಿ ಅದನ್ನು ರಂಗುರಂಗಾಗಿ ವರದಿ ಮಾಡಿದ್ದೆ.
 ಆದ್ರೆ ಘಟನೆ ನಡೆದಿದ್ದು ರಾತ್ರಿ 8 ಘಂಟೆಯಲ್ಲಿ..., ಈ ಚೆಲುವೆ ಪೋನ್  ಮಾಡ್ತಾ  ಇರೋದು ಬೆಳಗ್ಗಿನ ಮೂರು ಘಂಟೆಯಲ್ಲಿ. ನನಗೆ ನನ್ನ ಕ್ಯಾಮೆರಾಮೆನ್ ಬಗ್ಗೆ ಭಾರೀ ಬೇಸರವಾಯ್ತು. ನಾನು ಸ್ಕ್ರಿಪ್ಟ್ ಹಾಕಿದ್ದರೂ ಅವ ವಿಶ್ಯುವಲ್ಸ್ ಹಾಕಿಲ್ಲ ಅಂತಾ ಕೋಪಗೊಂಡ ನಾನು ತಕ್ಷಣ ಪೋನ್ ಮಾಡಿ ಈ ಬಗ್ಗೆ ವಿಚಾರಿಸಿದೆ. ಆದ್ರೆ ಆತ  ಇದ್ದಬದ್ದ ದೇವರ ಹೆಸರನ್ನೆಲ್ಲಾ ಹೇಳಿ ವಿಶ್ಯವಲ್ಸ್ ಅಪ್ ಲೋಡ್ ಆಗಿದೆ ಎಂದು ಉತ್ತರ ಕೊಟ್ಟ.
    ಸರಿ, ವಿಧಿಯಿಲ್ಲದೆ ಆಕೆಗೆ ಪೋನ್ ಮಾಡಿ ವಿಶ್ಯುವಲ್ಸ್ ರಾತ್ರಿ 8.30 ಕ್ಕೇ ಬಂದಿದೆ ಚೆಕ್ ಮಾಡಿ ಎಂದೆ.  ಅದಕ್ಕೆ ಅವಳು ಹೌದು ಸಾರ್, ವಿಶ್ಯುವಲ್ಸ್ ಬಂದಿದೆ. ಅದ್ರಲ್ಲಿ ಬೈಕ್ ಮಾತ್ರ  ಇದೆ.., ಸ್ನೇಕ್ ಇಲ್ಲ ......., ಅಂತಾ ಹೇಳಿದ್ಲು.
  ಅಯ್ಯಯ್ಯೋ.., ರಾಮ ರಾಮ, ಬೈಕ್ ನಲ್ಲೇ  ಇದ್ದ ಹಾವಿನ ವಿಶ್ಯುವಲ್ಸ್ ನಾಪತ್ತೆಯಾಯ್ತಾ....? ಅಂತಾ ತಲೆ ಕೆರೆದುಕೊಂಡು... '' ಮೇಡಂ ಬೈಕ್ ನ ಚೈನ್ ಸ್ಪಾಕೆಟ್ ಹತ್ರ ಒಬ್ಬ  ಯುವಕ ಹಾವನ್ನು ಕೋಲಿನಿಂದ ಹೊರಕ್ಕೆ ತೆಗೆಯೋ ವಿಶ್ಯುವಲ್ಸ್ ಇಲ್ವಾ.....? ಅಂತ ಮರುಪ್ರಶ್ನೆ ಮಾಡಿದೆ.
 ಸ್ವಲ್ಪ ಸಮಯ ವಿಶ್ಯುವಲ್ಸ್  ನೋಡಿದ ಅವಳು...ಯು ಮೀನ್ ಆ ಸ್ಟಿಕ್ ನಲ್ಲಿ ಇರೋದು ಸ್ನೇಕಾ..........!!!!!????? ಅಂತಾ ಸಖೇದಾಶ್ಚರ್ಯದಿಂದ ಕೇಳೋದೇ.....?
ನನಗೆ ಇದ್ಯಾಕೋ ಅತಿಯಾಯ್ತು ಅನ್ನಿಸ್ತು. ಹೂಂ...ಹೂಂ..., ನಮ್ ಕಡೆ ಅದನ್ನ ಹಾವು ಅಂತಾರೆ.....  ಅಂತ ಸ್ವಲ್ಪ ಗಡುಸಾಗೇ ಹೇಳ್ದೆ. ಆದ್ರೆ ಅದನ್ನ ಗಂಭೀರವಾಗಿ ಪರಿಗಣಿಸದ ಆಕೆ ಇಟ್ ಮೀನ್ಸ್ ಸ್ನೇಕ್ ಇನ್ ಬೈಕ್....?! ಈ ಬಾರಿ ನನ್ನ ಕೋಪ ನೆತ್ತಿಗೇರಿತ್ತು.........ಹೌದ್ರೀ.., ಸ್ನೇಕ್ಕೇ ಅದು..., ನಿಮ್ಗೆ ಆ ಥರಾ ಅನ್ನಿಸ್ತಾ ಇಲ್ವಾ ಅಂತಾ ಎಗರಾಡಿದೆ.
ಅರೆ ಬಾಬ.., ಗುಸ್ಸಾ ಮತ್ ಕರೋ ನಿಮ್ಮ ಪೈಲ್ ನಲ್ಲಿ ಬೈಕ್ ಇನ್ ಸ್ನೇಕ್ ಅಂತಾ ಇದೆ......, ಅದಕ್ಕೆ ನಾನು ಸ್ನೇಕ್ ಬೈಕನ್ನ ನುಂಗಿರಬೇಕು ಅಂತಾ ಅಂದ್ಕೊಂಡೆ....., ಕಿತ್ ನಾ ಬಡಾ ಸ್ಟೋರಿ ನಾ.....?
ನಿಜ, ಆಕೆ ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ. ನಾನು ನನ್ನ ಕ್ಯಾಮೆರಾಮೆನ್ ಬಳಿ ವಿಶ್ಯುವಲ್ಸ್ ಪೈಲ್ ಗೆ ಸ್ನೇಕ್ ಇನ್ ಬೈಕ್ ಅಂತಾ ಹೆಸರು ಕೊಡು ಅಂತಾ ಹೇಳಿದ್ದೆ. ಅವನು ಅದನ್ನು ಜಸ್ಟ್ ಉಲ್ಟಾ ಮಾಡಿದ್ದ. ಅದು ಬೈಕ್ ಇನ್ ಸ್ನೇಕ್ ಆಗಿತ್ತು. ಪಾಪ ನಮ್ಮ ಮಲೆನಾಡು ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳದ  ಉತ್ತರ ಭಾರತದ ಚೆಲುವೆ ಹಾವಿನೊಳಗೆ ಬೈಕ್ ಹುಡುಕುವ ಕೆಲಸ ಮಾಡಿದ್ದಾಳೆ.  ಅಂದ್ರೆ ನಾವು ಕಳುಹಿಸಿದ್ದ ಸ್ಟೋರಿ ಹಾವು ಬೈಕ್ ನುಂಗಿದೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳೆ. ಅಂತ ನಾನು ಅಂದ್ಕೊಂಡೆ
ಆದ್ರೆ ಆ ಕಿಲಾಡಿ ಹುಡುಗಿ ಬೆಳ್ಳಂಬೆಳಗ್ಗೆ ಹಾವಿನ ಕಥೆ ಹೇಳಿ ನನಗೆ ಹುಳ ಬಿಟ್ಟಿದ್ದಳು.  ನಂತರ ಆಕೆ ಮತ್ತು ಆಕೆಯ ಸ್ನೇಹಿತೆಯರು ನನ್ನ ಪೆದ್ದುತನಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಹಾವು ಬೈಕ್ ನುಂಗ್ತೋ ಇಲ್ವೋ ಹಾಳಾಗಿ ಹೋಗ್ಲಿ. ನನ್ನ ಸುಂದರ ಮುಂಜಾವು...., ಸವಿಯಾದ ನಿದ್ರೆ....., ಸಿಹಿ ಸಿಹಿ ಕನಸುಗಳು ಹಾಳಾಗಿ ಹೋಗಿದ್ದು ಮಾತ್ರ ಖಂಡಿತ ಸತ್ಯ.

ಹುಚ್ಚು ನಾಯಿ............,!!??

ಈ ಮೊಬೈಲ್ ಅನ್ನೋದು ಇದ್ಯಲ್ಲಾ..., ಅದು ಎಷ್ಟು  ಆಪ್ತವೋ ಒಮ್ಮೊಮ್ಮೆ ಅಷ್ಟೇ ದುರಾತ್ಮ ಅಂತಾ ಅನ್ನಿಸೋಕೆ ಶುರವಾಗಿ ಬಿಡುತ್ತೆ. ಜುಳು ಜುಳು ಮಂಜುಳ ನೀನಾದದಿಂದ ಹಿಡಿದು ಕಿವಿಯ ತಮಟೆ ಒಡೆಯುವಂತಹ ಕರ್ಕಶವನ್ನೂ ಕೇಳಿಸಿ  ಕರ್ಣಾನಂದ ಅನುಭವಿಸುವಂತೆ ಮಾಡಿ ಬಿಡುತ್ತೆ. ಅದ್ರಲ್ಲಿ ನನ್ನ ಮೊಬೈಲ್ ಅಂತೂ ತುಂಬಾನೆ ಸ್ಪೆಷಲ್ ಬಿಡಿ. ಯಾರದ್ದೋ ಕರೆ ಹೊತ್ತಲ್ಲದ ಹೊತ್ತಲ್ಲಿ ನನಗೆ ಬಂದು ನನ್ನ ಹೆಂಡತಿ ಅದನ್ನು ಸ್ವೀಕರಿಸಿ ತಪ್ಪಾಗಿ ಅರ್ಥೈಸಿ ಅದೇ ರಾತ್ರಿ ಗಂಟು ಮೂಟೆ ಕಟ್ಟಿ ನನ್ನನ್ನು ಹೊರಕ್ಕೆ ದಬ್ಬುವಂತೆ ಮಾಡಿದ್ದ ಕುಖ್ಯಾತಿ ಅದ್ಕಕಿದೆ...............,  ಜೊತೆ ಜೊತೆಗೆ ಅದು ತಪ್ಪು ಅಂತ ಅರ್ಥ ಮಾಡಿಸಿ ಮತ್ತೆ ಮನೆ ಬಾಗಿಲು ತೆಗೆಸಿದ ಪ್ರೀತಿ ಕೂಡ ಅದರ ಮೇಲಿದೆ.........,
  ಆ ಕಥೆ ಇನ್ನೊಮ್ಮೆ ಯಾವತ್ತಾದ್ರೂ ಹೇಳ್ತೀನಿ. ಅದಕ್ಕೂ ಮುನ್ನ ಈ ಮೊಬೈಲ್ ನಿಂದ ಮುಜುಗರ ಅನುಭವಿಸಿದ ಪ್ರಸಂಗವೊಂದನ್ನ ನಿಮ್ಮ ಮುಂದೆ ಇಡುತ್ತೇನೆ.
   ಅವತ್ತು ಭಾನುವಾರ.  ನನ್ನ ಪಾಲಿಗೆ ಇಡೀ ವಾರದ ಜಂಜಾಟಗಳಿಗೆ ಬ್ರೇಕ್ ಹಾಕಿ ವೀಕೆಂಡ್  ಅನ್ನೋ ಮೋಜು ಅನುಭವಿಸುವ ದಿನ.  ಆದ್ರೆ ಅದು ಯಾವತ್ತೂ ಕಂಪ್ಲೀಟ್ ಆದ ಮೋಜು ಆಗಲ್ಲ.., ಯಾಕಂದ್ರೆ ನನ್ನ ಮಕ್ಕಳ ಜೊತೆ ನನ್ನ ಕೈ ಹಿಡಿದ ದೇವತಾಮಣಿ ಇರ್ತಾಳಲ್ಲ....., ಹಾಗಾಗಿ ಆಗಾಗ  ಆಚೀಚೆ ಅಥ್ವಾ ಮೇಲೆ ಕೆಳಗೆ ಕತ್ತನ್ನು ಆಡಿಸೋದು....ಕಿವಿ ಮುಚ್ಚಿಕೊಳ್ಳೋದು ಈ ರೀತಿಯ ಶಿಕ್ಷೆಗಳು ಇದ್ದೇ ಇರುತ್ವೆ.
     ಹೀಗೆ ಭಾನುವಾದ ಜಾಲಿ ಟ್ರಿಪ್ ಗೆ ರೆಡಿಯಾಗ್ತಾ ಇದ್ದ ನನಗೆ ಒಂದು ಪೋನ್ ಕರೆ ಬಂತು.  '' ಸಾರ್ ನಿಮಗೊಂದು ಎಕ್ಸ್ ಕ್ಲೂಸಿವ್ ನ್ಯೂಸ್ ಸಾರ್...'' ಇಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನ ಜೆ.ಸಿ.ಬಿ ಗಳಲ್ಲಿ ಮಾಡ್ತಾ ಇದಾರೆ. ಈ ಜಾಗದಲ್ಲಿ ಜಿಲ್ಲಾ ಪಂಚಾಯ್ತಿ ಮೆಂಬರ್ರು ಆ ಗೌಡ್ರು ಇದಾರೆ ಸಾ...., ನಾವೆಲ್ಲಾ ಊರೋವ್ರು ಒಗ್ಗಟ್ಟಾಗಿ ಅವ್ರುನ್ನ ತಡೀತೀವಿ ನೀವು ಬಂದ್ ಬಿಡಿ ಸಾ..., ಅಂದ
ಇದೊಳ್ಳೇ ಗ್ರಹಾಚಾರ ಬಂತಲ್ಲಪ್ಪಾ ಎಂದು ಗೊಣಗಿಕೊಂಡ ನಾನು   '' ಇವ್ರೇ..., ನಾನು ಈಗ ಹೊರಗಡೆ ಇದೀನಿ ಸ್ವಲ್ಪ ಲೇಟಾಗುತ್ತೆ. ಮದ್ಯಾಹ್ನದ ಮೇಲೆ ಬರ್ಲಾ ಎಂದೆ.    ಅದ್ಕಕೊಪ್ಪದ ಆತ '' ಯಾಕ್ಸಾ ಇಂಗಂತೀರಾ....? ಆಯ್ಕಿಲ್ಲಾ ಅಂದ್ರೆ ಯೋಳಿ ನಮ್ಗೆ ನಿಮ್ ಜೊತೆ ಇರೋವ್ರೆಲ್ಲಾ ಗೊತ್ತು.., ನಿಮ್ ಯೆಡ್ ಆಪೀಸ್ ಗೇ ಪೋನಾಕ್ತೀವಿ...., ಅಂತಾ ಧಮ್ಕಿ ಬೇರೆ ಹಾಕಲಾರಂಬಿಸಿದ.  ಆ ಮಾತಿಗೆ ನಾನು ಕ್ಯಾರೇ ಅನ್ನದ ಕಾರಣಕ್ಕೆ ಮೇಲಿಂದ ಮೇಲೆ ಹತ್ತಾರು ಬಾರಿ ರಿಂಗ್ ಮಾಡಿ ಹಿಂಸೆ ಕೊಡಲಾರಂಬಿಸಿದ. ಕಟ್ಟಕಡೆಗೆ ಈತನ ಕಾಟ ತಡೆಯಲಾರದ ನಾನು ಪಟೇಲನ ಸುಮೋ ಹತ್ತಿ ಅವ ಹೇಳಿದ ದಿಕ್ಕಿನತ್ತ ಪ್ರಯಾಣ ಬೆಳೆಸಿದೆ.
   ಆಗ ಸಮಯ ಬೆಳಗ್ಗಿನ ಹನ್ನೊಂದು ಘಂಟೆ. ಆ ಅಡ್ರೆಸ್ ನಲ್ಲಿ ಅವನಾಗಲೀ, ಜಿಲ್ಲಾ ಪಂಚಾಯತ್ ಮೆಂಬರ್ ಗೌಡನಾಗಲೀ ಅಥ್ವಾ ಜೆ.ಸಿ.ಬಿ.ಗಳಾಗಲೀ ಇರಲ್ಲಿಲ್ಲ. ಅಲ್ಲೊಂದು ಕೆರೆಯಂಗಳದಲ್ಲಿ ರಾಶೀ ರಾಶೀ ಮಣ್ಣು ಮಾತ್ರ ಕಣ್ಣಿಗೆ ರಾಚುವಂತಿತ್ತು. ಮದ್ಯಾಹ್ನ 2 ಘಂಟೆಯವರೆಗೆ ಕಾದೂ ಕಾದೂ ಸುಸ್ತಾದ ನಮಗೆ ಆತನ ಸುಳಿವೇ ಸಿಗಲ್ಲಿಲ್ಲ. ಈ ನಡುವೆ ಅವ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದ. ಕೋಪದಿಂದ ನಖಶಿಖಾಂತ ಉರಿದು ಹೋಗಿದ್ದ ನಾನು ಅವನ ನಂಬರನ್ನು ನನ್ನ ಮೊಬೈಲ್ ನಲ್ಲಿ ಹುಚ್ಚುನಾಯಿ ಅಂತಾ ಫೀಡ್ ಮಾಡಿಕೊಂಡೆ.
ಈ ಘಟನೆ ಕಳೆದು ಸುಮಾರು ಆರೇಳು ತಿಂಗಳಾಗಿತ್ತು. ಅದೊಂದು ದಿನ ಬೆಳಿಗ್ಗೆ  ಒಂಬತ್ತು ಘಂಟೆ ಸುಮಾರಿನಲ್ಲಿ ವ್ಯಕ್ತಿಯೊಬ್ಬರು ನಮ್ಮ ಕಛೇರಿಗೆ ಬಂದಿದ್ದರು. ಎತ್ತರದ ನಿಲುವು..., ವೈಟ್ ಆಂಡ್ ವೈಟ್ ಡ್ರೆಸ್..., ಕೈಯ್ಲಲಿ ಉಂಗುರ ಕೊರಳಲ್ಲಿ ಸರ...., ಹಣೆಯಲ್ಲಿ ಕುಂಕುಮ...., ಒಂದೇ ಮಾತಲ್ಲಿ ಹೇಳೋದಾದ್ರೆ ಆತನೊಬ್ಬ ು ಉದಯೋನ್ಮುಖ ಯುವ ನಾಯಕ.......................,
ಸೂಜಿಗಲ್ಲಿನಂತೆ ಗಮನ ಸೆಳೆದ ಆತ ಅತ್ಯಂತ ವಿನಮ್ರನಾಗಿ ನಮಸ್ಕಾರ ಸಾರ್ ಅಂದ. ಕಪ್ಪು ಮೊಗದಲ್ಲಿ ಬೆಳ್ಳ ಬೆಳ್ಳನೆ ದಂತ ಪಂಕ್ತಿಗಳು......,  ನಾನು ಕೂಡ ಅಷ್ಟೇ ವಿನಯದಿಂದ ನಮಸ್ಕಾರ ಕುಳಿತುಕೊಳ್ಳಿ ಎಂದೆ. ಇಬ್ಬರೂ ಬಹಳ ಹೊತ್ತು ಸಾಕಷ್ಟು ಮಾತನಾಡಿದೆವು. ಗ್ರಾಮೀಣ ಪ್ರತಿಭೆಯಾಗಿದ್ದರೂ ಆತನ ವಿಚಾರಧಾರೆ...ಉದ್ದೇಶಗಳು ನನಗೆ ತುಂಬಾ ಇಷ್ಟವಾಯ್ತು. ಆತ ಹೊರಡುವಾಗ ಸಾರ್ ನಿಮ್ಮ ನಂಬರ್ ಕೊಡಿ ಅಗತ್ಯ ಬಿದ್ದಾಗ ಫೋನ್ ಮಾಡ್ತೀನಿ ಎಂದೆ. ಆತ ಕೂಡ ಅಷ್ಟೇ ಖುಷಿಯಾಗಿ ನಿಮ್ಮ ನಂಬರ್ ನನ್ನ ಬಳಿ ಇದೆ. ಮಿಸ್ ಕಾಲ್ ಕೊಡ್ತೀನಿ ನೋಟ್ ಮಾಡಿಕೊಳ್ಳಿ ಎಂದು ಮಿಸ್ಡ್ ಕಾಲ್ ಕೊಟ್ಟ.....................,
ದಾಯೆ ಬೋಡಿತ್ತುಂಡು ಮಾರಾಯ್ರೇ............., ಆತನ ಕಣೆದುರೇ ನನ್ನ ಮೊಬೈಲ್ ನಲ್ಲಿ ಆ ನಂಬರ್ ಹುಚ್ಚುನಾಯಿ ಎಂಬ ಹೆಸರಿನಲ್ಲಿ ಡಿಸ್ ಪ್ಲೇ ಆಗಿಬಿಡೋದೇ....? . ಆತನಿಗೆ ತಕ್ಷಣ  ಅದು ಅರ್ಥ  ಆಗ್ಲಲಿಲ್ಲ. ತಕ್ಷಣ ಎಚ್ಚೆತ್ತ ನಾನು   '' ಸಾರ್ ನಿಮ್ಮ ಹೆಸರು ಹೂವಣ್ಣನಾ....? ಎಂದೆ. ಇಲ್ಲಾ....ಇಲ್ಲಾ ನನ್ನ ಹೆಸರು ಅದಲ್ಲ ಎಂದುಬಿಟ್ಟ.  '' ಓಹ್, ಕ್ಷಮಿಸಿ ಇದು ನಿಮ್ಮ ಮಿಸ್ ಕಾಲ್ ಅಲ್ಲ ಅನ್ನಿಸುತ್ತೆ ...ಯಾವನೋ ಒಬ್ಬ ಹೂವಣ್ಣ ಅಂತಾ ಸುಳ್ ಸುಳ್ಳೇ ಪೋನ್ ಮಾಡಿ ತಲೆ ತಿನ್ತಾ ಇರ್ತಾನೆ. ಇದು ಅವನದ್ದು ಮಿಸ್ಡ್ ಕಾಲ್ ಇರ್ಬೇಕು.... ಅವನ ಗ್ರಹಾಚಾರ ಬಿಡಿಸ್ತೀನಿ ಇರಿ.... , ಹಾಗೆನ್ನುತ್ತಲೇ ಆ ನಂಬರನ್ನು ಡಿಲೀಟ್ ಮಾಡಿ '' ನೀವು ಮಿಸ್ ಕಾಲ್ ಕೊಡಿ ಸಾರ್ ಎಂದೆ. ಆದ್ರೆ ಅವ ಮಾತ್ರ  '' ಇ...ಇ...ಈ ನಂಬರ್ ಬೇಡ ಇನ್ನೊಂದು ನಂಬರ್ ಇದೆ ಅದ್ರಿಂದ ಮಿಸ್ ಕಾಲ್ ಕೊಡ್ತೀನಿ ಅಂತ ಬೇರೆ ನಂಬರ್ ನಿಂದ ರಿಂಗ್ ಮಾಡಿದ.  I am extreamly sorry..,  ಆ ನಂಬರ್ ಕೂಡ ತರಲೆ ಅನ್ನೋ ಹೆಸರಲ್ಲಿ ಫೀಡಾಗಿತ್ತು. ಆದ್ರೆ ಈ ಬಾರಿ Display ಅವನಿಗೆ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದೆ.