Tuesday, December 20, 2011

ಎಲ್ಲಯ್ತೋ ಅಂತಃಪುರ.....?


"ರ್ರೀ  .....ರ್ರೀ.....ರ್ರೀ.......ಏಳ್ರೀ ಮೇಲೇ......, ಮನೆಹಾಳ್ ಕೆಲ್ಸ ಮಾಡಿ ಸುಖವಾಗಿ ಮಲ್ಗಿದ್ದೀರಲ್ರೀ........, ಏಳ್ರೀ ಮೇಲೆ.......,"
      ಕನಸ್ಸಿನಿಂದ ಎದ್ದು ಕಣ್ಬಿಟ್ಟ ನನ್ನ ಕಣ್ಣೆದುರು ಪತ್ನಿಯ ಚಂಡಿಕಾ ರೂಪ.....!.   ಕ್ಷಣ ಕಾಲ ಅವಾಕ್ಕಾದೆ. ಅದು ಕತ್ತಲು ಸರಿದು ಬೆಳಕು ಹುಟ್ಟುವ ಸಮಯ......,  ಭುಸುಗುಡುತ್ತಿದ್ದ ಕಾಳಿಂಗ ಸರ್ಪದಂತೆ ಕಾಣುತ್ತಿದ್ದ ಅವಳು ಕೈಯಲ್ಲಿದ್ದ ಮೊಬೈಲನ್ನು ಮುಖದ ಮುಂದೆ ಹಿಡಿದು ಯಾರ್ರೀ ಇದು....? ಅಂದ್ಲು. ಮೊಬೈಲ್ ಸ್ರೀನ್ ನೋಡಿದೆ ಏನೂ ಇರಲ್ಲಿಲ್ಲ. ನಗು ಬಂತು, ನಿದ್ದೆಯಿಂದ ಎದ್ದು ಏನೇನೋ ಮಾತಾಡ್ತಾ ಇದಾಳೆ ಅಂತಾ   '' ಲೇ ಅದು ಮೊಬೈಲ್ ಕಣೇ.., ಏನಾಯ್ತೇ ನಿನ್ಗೆ...? ಅಂತಾ ಮತ್ತೆ ಮಲಗಲು ಯತ್ನಿಸಿದೆ. ಈ ಬಾರಿ ಅವಳ ಕೋಪ ಮಳೆಗಾಲದಲ್ಲಿ ಭೋರ್ಗರೆವ ಜೋಗದ ಜಲಪಾತದಂತೆ....., ಸಂಪೂರ್ಣ ಓಪನ್ ಆದ ಕ್ರಸ್ಟ್ ಗೇಟ್ ನಿಂದ ದುಮ್ಮಿಕ್ಕಿ ಹರಿವ ಡ್ಯಾಂ ನೀರಿನಿಂತೆ...., ಇನ್ನೂ ಯಾವುದ್ಯಾವುದರಂತೆ ಕಾಣಿಸಿತು. ಸ್ವಲ್ಪ ಆತಂಕನೂ ಆಯಿತು.ಏ..ಏನೇ ಅದು ಅಂತಾ ಪೇಲವಾಗಿ ಪ್ರಶ್ನಿಸಿದೆ. ಯಾರ್ರೀ ಅವ್ಳು 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೀರಂತಲ್ಲಾ...? ನೀನ್ಯಾರೇ...? ಅಂತಾ ನನ್ನನ್ನೇ ಕೇಳ್ತಾ ಇದಾಳೆ, ಯಾರ್ರೀ ಅವ್ಳು. ಕೋಪದಲ್ಲಿ ಏದುಸಿರು ಬಿಡುತ್ತಾ ಕಿರುಚಾಡತೊಡಗಿದ್ದಳು. ಎದ್ದು ಓಡಿ ಹೋಗೋಣಾ ಅನ್ನಿಸುವಷ್ಟು ಪೀಕಲಾಟ ಶುರುವಾಯ್ತು. ಯಾಕಂದ್ರೇ ನಾನು ನಿಜವಾಗ್ಲೂ ಅಡ್ವಾನ್ಸ್ ಕೊಟ್ಟಿದ್ದೆ. ಆದ್ರೆ ಉದ್ದೇಶ ಒಳ್ಳೆಯದಾಗಿತ್ತು.
  ಅದು ಹಾಗಲ್ಲಮ್ಮಾ.., ಅಂತಾ ಮಾತಿಗೆ ಶುರುವಿಕ್ಕಿಕೊಂಡೆ. ಊಹೂಂ, ಇವಳು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಕಣ್ಣುಗಳು ಕೊಳಗಳಾಗಿದ್ದವು. ಕೊಡದಷ್ಟು ಕಣ್ಣಿರು ಕೂಡ ಬಸಿದು ಹೋಗತೊಡಗಿತ್ತು.
     ತಡರಾತ್ರಿಯಲ್ಲಿ ಯಡವಟ್ಟಾಗಿತ್ತು. ಹೈಟೆಕ್ ವೇಶ್ಯಾವಟಿಕೆಯ ಸ್ಟಿಂಗ್ ಆಪರೇಶನ್ ಮಾಡುವ ಉದ್ದೇಶದಿಂದ ದಂಧೆ ನಡೆಸುವ ಒಬ್ಬಾಕೆಯ ಜೊತೆ ಗಿರಾಕಿಯಂತೆ ನಟಿಸಿ ಪರಿಚಯ ಮಾಡಿಕೊಂಡು ಕೇರಳದ ಹುಡುಗೀರು ಬೇಕು ಅಂತಾ 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೆ. ಅವಳು ಹುಡುಗೀರು ಬಂದ ತಕ್ಷಣ ಪೋನ್ ಮಾಡ್ತೀನಿ ಅಂತಾ ಮೊಬೈಲ್ ನಂಬರ್ ಬರೆದುಕೊಂಡಿದ್ದಳು.  ಇದೆಲ್ಲವನ್ನೂ ನನ್ನ ಕ್ಯಾಮೆರಾಮೆನ್ ಶಿವಾಜಿ ಗೋಣಿಚೀಲದೊಳಗೆ ಕ್ಯಾಮೆರಾ ಅವಿತಿಟ್ಟು ಶೂಟ್ ಮಾಡಿಕೊಂಡಿದ್ದ
   ಯಾರಿಗ್ರೀ ಗೊತ್ತು ಈ ದಂಧೆವಾಲಿಗೆ ಅಷ್ಟೊಂದು ನಿಯತ್ತಿದೆ ಅಂತಾ....?  ಅಷ್ಟೊತ್ತಲ್ಲಿ ತನ್ನ ನಿಯತ್ತಿನ ಪ್ರದರ್ಶನ ಮಾಡೋಕೆ ನನ್ನ ಮೊಬೈಲ್ ಗೆ ಫೋನ್ ಮಾಡಿದ್ದಾಳೆ. ಪಾಪ, ಗಂಡ ಅನ್ನೋ ಪ್ರಾಣಿ ದುಡಿದು ದಣಿದು ಬಂದು ಮಲಗಿದ್ದಾನಲ್ಲಾ ಅಂತಾ ನನ್ನಾಕೆ ಪೋನ್ ರಿಸೀವ್ ಮಾಡಿದ್ದಾಳೆ.  ಅತ್ತಲ್ಲಿಂದ ಅವಳು ಅವಸರದಲ್ಲಿ ಹಾಯ್ ಚಿನ್ನಾ....., ಸಾವಿರ ರುಪಾಯಿ ಅಡ್ವಾನ್ಸ್ ಕೊಟ್ಟೋವ್ನು ಆರಾಮಾಗೇ ಮಲ್ಕೊಂಬಿಟ್ಟಿದ್ದೀಯಲ್ಲಾ......., ನಿನ್  ಕೇರಳದ್ ಮಹಾರಾಣೀರು ಬಂದಿದಾರೆ. ಅಂತಃಪುರ ಎಲ್ಲಯ್ತೋ.......ಡಾರ್ಲಿಂಗ್ ಅಂತಾ ಕೇಳಿ ಬಿಟ್ಟಿದ್ದಾಳೆ. ಉರಿದು ಬಿದ್ದ ನನ್ನ ಧರ್ಮಪತ್ನಿ ಆಕೆಗೆ ಮಂಗಳಾರತಿ ಮಾಡಿದ್ದಾಳೆ. ಅದಕ್ಕವಳು ಕೇರಳದವರು ಬೇಕು ಅಂದೋವ್ನು ಕನ್ನಡದವಳನ್ನ ಕರ್ಕೊಂಡು ಬಂದಿದ್ದಾನಾ.....? ಅಂತಾ ಮರುಪ್ರಶ್ನೆ ಹಾಕಿದ್ದಾಳೆ.........., ಯಾಕ್ರೀ ಬೇಕಿತ್ತೂ ಗ್ರಹಾಚಾರಾ......?.
ಅವಳಿಗೆ ರೀ ಡೈಯಲ್ ಮಾಡಿ ಲೇ ಬಿಕನಾಸಿ ಇವಳು ನನ್ನ ಹೆಂಡತಿ ಅಂತಾ ಬೈದೆ.  ನಿನ್ನ ಹೈ ಟೆಕ್ ದಂಧೆ ನಾಳೆ ನಮ್ಮ ಚಾನೆಲ್ ನಲ್ಲಿ ಸುದ್ದಿಯಾಗುತ್ತೇ ನೋಡ್ತಾ ಇರು ಅಂತಾ ಗುಡುಗಿದೆ. ಬೆದರಿದ ಅವಳು ಮೊಬೈಲ್  ಸ್ವಿಚ್ ಆಪ್ ಮಾಡಿದಳು.
     ಅವತ್ತು ಬೆಳಿಗ್ಗಿನ ಟಿಫಿನ್ ಖೋತಾ. ಈ ತಕ್ಷಣ ಆಪೀಸಿಗೆ ನಡೀರಿ ನಾನು ವಿಶ್ಯವಲ್ಸ್ ನೋಡಬೇಕು ಅಂತಾ ನನ್ನ ಹೆಂಡತಿ ಒಂದೇ ಸವನೆ ಹಠ ಹಿಡಿದಿದ್ದಳು. ಸ್ನಾನ ಮಾಡ್ಕೋತೀನಿ ಬಿಡೇ ಅಂದ್ರೂ ಬಿಡದೆ ನನ್ನನ್ನು ಬಲವಂತದಿಂದ ಆಪೀಸಿಗೆ ಎಳೆದು ತಂದಿದ್ದಳು. ಆಫೀಸಿನಲ್ಲಿ ಗಡದ್ದಾಗಿ ಮಲಗಿದ್ದ ಶಿವಾಜಿ ಬಡಬಡನೇ ಎದ್ದವನೇ ಕ್ಯಾಮೆರಾ ತಂದು ಕ್ಯಾಸೆಟ್ ರಿವೈಂಡ್ ಮಾಡಿ ಪ್ಲೇ ಮಾಡಿದ. ಆದರೆ ಎಲ್.ಸಿ.ಡಿ.ಯಲ್ಲಿ ಯಾವುದೇ ವಿಶ್ಯುವಲ್ಸ್ ಮೂಡಲ್ಲಿಲ್ಲ. ತಲೆ ಕೆರೆದುಕೊಂಡು ಮತ್ತೆ ಹಿಂದೆ ಮುಂದೆ ಮಾಡಿ ಪ್ಲೇ ಮಾಡಿದ. ಊಹೂಂ ಏನೂ ಇಲ್ಲ. ಪೆದ್ದುಪೆದ್ದಾಗಿ ನಗುತ್ತಾ ತಲೆಕೆರೆದುಕೊಂಡು 'ಸರ್ ಕ್ಯಾಮರಾ ಆನ್ ಮಾಡಿದ್ದೆ, ಆದ್ರೆ ರೆಕಾರ್ಡಿಂಗ್ ಬಟನ್ ಅದುಮಿರಲ್ಲಿಲ್ಲ ಅನ್ನೋದೆ......!? ನನಗೋ ಸುನಾಮಿಯಂತ ಕೋಪ. ಹೆಂಡತಿಯ ಮುಖ ನೊಡಲಾರದಷ್ಟು ಭಯ. ಹಾಂ....! ಅಂತಾ ಬಾಯ್ಬಿಟ್ಟ ನನ್ನನ್ನು ಕಂಡು ನನ್ನ ಹೆಂಡತಿ ಹೊಟ್ಟೆ ಹಿಡಿದು ನಗಲಾರಂಬಿಸಿದಳು
ಅಯ್ಯೋ...ಬಿಡ್ರಿ, ನಾವೆಷ್ಟು ಪೆದ್ದರು ಅಂತಾ ನನ್ನ ಹೆಂಡತಿಗೆ ಅರ್ಥವಾಗಿ ಸಂಸಾರ ಸರಿಯಾಯ್ತು. ಮೊಬೈಲ್ ನಲ್ಲಿ ನನ್ನ ಬದುಕು ಬಂಗಾರ ಮಾಡಲಿದ್ದ ಆ ಹೈ ಟೆಕ್ ಹೆಣ್ಣು ಮತ್ಯಾವತ್ತೂ ನನ್ನ ಕಣ್ಣಿಗೆ ಬೀಳಲೇ ಇಲ್ಲ.

Monday, December 19, 2011

ಉಗ್ರಗಾಮಿ......,

ಆತ ನಿಜವಾಗಲೂ ಆಗಂತುಕ. ಆ ಬಡಾವಣೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದ ಅವನು ರಸ್ತೆಯ ಉದ್ದಗಲವನ್ನು ಇಂಚಿಂಚೂ ಬಿಡದೆ ಕಣ್ಣಲ್ಲೇ ಅಳತೆ ಮಾಡಿಕೊಳ್ಳುತ್ತಿದ್ದ.  ಜೇಬಿನಿಂದ  ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಅದೇನೇನೋ ಬರೆದುಕೊಳ್ಳುತ್ತಿದ್ದ.  ಅವನ ಈ ವರ್ತನೆಯ ಬಗ್ಗೆ ಹಲವಾರು ಕಿಟಕಿಗಳಿಂದ  ಅನುಮಾನದ ನೋಟ ಹೊರಬಿದ್ದಿದ್ದವು.  ಆ ನೋಟಗಳ ಜೊತೆಗೆ ಹಲವರ ಎದೆ ಬಡಿತದ ವೇಗವೂ ಹೆಚ್ಚಾಗುತ್ತಿತ್ತು. ಅವನು ನಡೆಯುತ್ತಲೇ ಇದ್ದ.....,  ಆ ಬೀದಿಯಿಂದ ಈ ಬೀದಿಗೆ....., ಆ ಸರ್ಕಲ್ ನಿಂದ ಈ ಸರ್ಕಲ್ ಗೆ...., ಅಲ್ಲಿ ಯುವಕರ ಗುಂಪೊಂದು ಇವನನ್ನು ನೋಡಿತ್ತು. ಪಸ್ಟ್ ಮೈನ್ ಪಿಪ್ತ್ ಕ್ರಾಸ್ ನ ಲಲಿತಮ್ಮ ನೈನ್ತ್ ಕ್ರಾಸ್ ನಲ್ಲಿರುವ ಮಂಜುಳಕ್ಕನಿಗೆ ಫೋನ್ ಮಾಡಿದ್ಲು. '' ಏ ಮಂಜುಳಾ ಇಲ್ಯಾವನೋ ಬಂದಾವ್ನೆ ಕಣೇ....., ನೋಡೋಕೆ ಕಳ್ಳನ್ ಥರಾ ಕಾಣ್ತಾವ್ನೇ......, ಅದಕ್ಕವಳು ಗಾಬರಿ ಬಿದ್ದು '' ಅಯ್ಯಯ್ಯೋ ಅಲ್ಲಿಗೂ ಬಂದಿದಾನಾ....? ಅದೇ ಬಿಳಿ ದೊಗಲೆ ಶರ್ಟೂ.., ಪೈಜಾಮಾ ಹಾಕಿದಾನಲ್ಲಾ......?!! ಅವ್ನೇ ತಾನೇ.....? ಲಲಿತಮ್ನನ ಹಣೆಯಲ್ಲಿ ಬೆವರಿಳಿಯಲು ಆರಂಭವಾಯ್ತು. ಯಾಕಂದ್ರೆ ಅವನು ಅವಳ ಮನೆಯ ಮುಂದೆಯೇ ನಿಂತು ಅದೇನನ್ನೋ ಗುರುತು ಹಾಕಿಕೊಳ್ಳುತ್ತಿದ್ದ. ಹೂಂ...ಹೂಂ...., ಅಂತಾ ಉಗುಳಿ ನುಂಗಿಕೊಂಡ ಲಲಿತಮ್ಮ ಪೋನ್ ಕುಕ್ಕಿದಳು. ಭಯದಿಂದಲೇ ಕಳ್ಳ ಹೆಜ್ಜೆ ಇಡುತ್ತಾ ಬಂದು ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅವ ಅಲ್ಲಿರಲ್ಲಿಲ್ಲ. ಲಲಿತಮ್ಮನಿಗೆ ಬಾಗಿಲು ತೆರೆಯಲೂ ಭಯ. ಅಡುಗೆ ಮನೆಯೊಳಗೆ ಇದ್ದಕ್ಕಿದ್ದಂತೆ ಪಾತ್ರೆ ಕೆಳಕ್ಕೆ ಬಿದ್ದ ಸದ್ದು. ಕಿಟಾರನೇ ಕಿರುಚಿದ ಲಲಿತಮ್ಮ ಮನೆಯ ಬಾಗಿಲು ತೆಗೆದು ಹೊರಗೋಡಿದಳು. ಅವಳ ಬೊಬ್ಬೆಗೆ ಬೆದರಿದ ಕಳ್ಳಬೆಕ್ಕೊಂದು ಅಡುಗೆ ಮನೆಯಿಂದ ಅವಳ ಜೊತೆಗೇ ಓಡಿ ಬಂತು.
          ಬೀದಿ ಬೀದಿ ಅಲೆಯುತ್ತಿದ್ದ ಆ ಆಗಂತುಕ ಆಟವಾಡುತ್ತಿದ್ದ ಮಕ್ಕಳ ಗುಂಪಿನ ಬಳಿ ಬಂದು ನಿಂತ. ಚಲ್ ಮೇರೇ ಗೋಡೇ ಚಲ್  ಚಲ್ ಚಲ್ ಅಂತಾ ಹಿಂದಿ ಹಾಡು ಹಾಡತೊಡಗಿದೆ. ಆ ಹಾಡಿಗೆ ತಕ್ಕಂತೆ ತಾನು ಹಾವಭಾವ ಪ್ರದರ್ಶಿಸತೊಡಗಿದೆ. ಮಕ್ಕಳಿಗೆ ವಿಚಿತ್ರ ಎನ್ನಿಸಿದರೂ ಅದೇನೋ ಒಂದು ರೀತಿಯ ಖುಷಿ. ಅವನ ನಟನೆಗೆ ಹಾಸ್ಯಕ್ಕೆ ಮನಸೋತ ಅವರಲ್ಲಿ ಅದ್ಯಾವುದೋ ಅವ್ಯಕ್ತ ಆಪ್ತ ಭಾವ..........,
        ಮಕ್ಕಳ ಜೊತೆ ಕಟ್ಟೆಯ ಮೇಲೆ ಕುಳಿತ ಅವನು ಮೆರಾ ನಾಮ್ ದಾದಾಪೀರ್ ಎಂದ. ಮಕ್ಕಳೂ ಕೂಡ ಏ..... ದಾದಪೀರ್ ಅಂತಾ ಚಪ್ಪಾಳೆ ತಟ್ಟಿ  ಕುಣಿದಾಡಿದವು. ಖುಷಿಯೋ ಖುಷಿ. 
     ಲಲಿತಮ್ಮ ಗಾಬರಿಯಿಂದ ಕೂಗಿ ಹೊರಗೋಡಿ ಬಂದಿದ್ದನ್ನು ಕಂಡ ಆ ಕ್ರಾಸ್ ನ ಮಹಿಳೆಯರೆಲ್ಲಾ ಮನೆಯಿಂದ ಹೊರಗೆ ಬಂದರು. ಎಲ್ಲರಿಗೂ ಆ  ಆಗಂತುಕನ ಬಗ್ಗೆ ಭಯ. ಹತ್ತಾರು ಮಹಿಳೆಯರು......ನೂರಕ್ಕೂ ಹೆಚ್ಚು ಫೋನ್ ಕಾಲ್.......,   
    ಕ್ಷಣ ಮಾತ್ರದಲ್ಲಿ ಅಲ್ಲಿ ಮೂವತ್ತಕ್ಕೂ ಹೆಚ್ಚು ಯುವಕರು ಹಾಜರಾದರು. ಹಾಗೇ ಸೈನ್ಯ ಕಟ್ಟಿ ಹೊರಟ ಆ ಯುವಕರಿಗೆ ಮಕ್ಕಳ ಜೊತೆ ಆಟವಾಡುತ್ತಿದ್ದ ಆ ಆಗಂತುಕ ಕಂಡ. ಕೊಳೆಯಾದ ಬಿಳಿ ಪೈಜಾಮ, ದೊಗಲೆ ಶರ್ಟ್, ಉದ್ದದ ಗಡ್ಡ. ತಲೆಯ ಮೇಲೊಂದು ಬಿಳಿ ಟೋಪಿ ಅದಕ್ಕೆ ವಿಚಿತ್ರವಾಗಿ ಸುತ್ತಿರುವ ದಾರ.........., 
     ಏ ಟೆರರಿಸ್ಟ್ ಕಣೋ........, ಗುಂಪಿನಲ್ಲಿದ್ದ ಒಬ್ಬ ಕೂಗಿ ಹೇಳಿದ. ಡೌಟೇ ಇಲ್ಲ ಮಗಾ...ಮತ್ತೊಬ್ಬ ಧನಿ ಸೇರಿಸಿದ.  ಎಲ್ಲರೂ ಅವನತ್ತ ನುಗ್ಗಿ ಬಂದರು. ಗಾಬರಿಗೊಂಡ ಅವ ಎದ್ದು ನಿಂತು ಭಾಯ್ ಸಾಬ್ ಕ್ಯಾ ಹುವಾ.......?  ಅಂತಾ ನಡುಗುತ್ತಾ ಕೇಳಿದ. ಯಾರೋ ನೀನು..........? ಏನ್ ಹೆಸ್ರು......? ಇಲ್ಲೇನ್ಮಾಡ್ತಿದ್ದೀಯಾ.......? ಗುಂಪಿನ ಮುಖಂಡ ಒಂದೇ ಸವನೆ ಕೇಳಲಾರಂಭಿಸಿದ. ಅವನಿಗೆ ಕನ್ನಡ ಅರ್ಥವಾಗುತ್ತಾ ಇಲ್ಲ. ಅಲ್ಲಿದ್ದವರ ಪೈಕಿ ಯಾರೋ ಒಬ್ಬ ನಾಮ್...ನಾಮ್ ಎಂದು ಕೈಯಾಡಿಸಿದ. ಧಾದಾಫೀರ್ ಮೆರಾ ನಾಮ್ ದಾಧಫೀರ್ .............., ಕ್ಯಾ ಚಾಹಿಯೇ ಆಪ್ ಲೋಗೋಂಕೋ.......? ಆತ ಕೇಳುತ್ತೇ ಇದ್ದ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಅವರು ಅವನನ್ನು ನಾಯಿ ಬಡಿದಂತೆ ಬಡಿಯಲಾರಂಭಿಸಿದರು. ಅವನ ಕಿರುಚಾಡಲಾರಂಬಿಸಿದ. ಇವೆಲ್ಲವನ್ನೂ ಕಂಡ ಮಕ್ಕಳು ಗಾಬರಿಬಿದ್ದು ದಿಕ್ಕೆಟ್ಟು ಓಡಿ ಮನೆ ಸೇರಿಕೊಂಡವು.
        ಉಗ್ರಗಾಮಿ ಅನ್ನೋ ಪದ ಕಿವಿಗೆ ಬಿದ್ದಿದ್ದೇ ತಡ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ  ಆ ಕೃಶಕಾಯ ಆಗಂತುಕ ಅರೆ ಜೀವವಾಗಿ ಹೋಗಿದ್ದ. ಅದೇನನ್ನೋ ಸಾಧಿಸಿದ ಖುಷಿಯಲ್ಲಿ ಯುವಕರು ಮೀಸೆ ತಿರುವಿಕೊಂಡು ನಿಂತಿದ್ದರು. ಅವರಲ್ಲೊಬ್ಬ ಅವನ ಕೈ ಕಾಲುಗಳಿಗೆ ಹಗ್ಗ ಬಿಗಿಯಲಾರಂಬಿಸಿದ್ದ.
       ಇನ್ನೇನು ಅವನನ್ನು ಪೊಲೀಸ್ ಜೀಪಿಗೆ ಹತ್ತಿಸಿಕೊಳ್ಳಬೇಕು. ಆಗ ಅಲ್ಲಿ ತನ್ನ ಮೂವರು ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಜೊತೆ ಓಡಿ ಬಂದ ಮಹಿಳೆಯೊಬ್ಬಳು ಗೋಳಾಡಲಾರಂಭಿಸಿದಳು. ಹಿಂದಿ ಭಾಷೆ ಸ್ಪಷ್ಟವಾಗಿ ಬರುತ್ತಿದ್ದ ಪೊಲೀಸ್ ಪೇದೆ ಇಸ್ಮಾಯಿಲ್ ಬಳಿ ತನ್ನ ಹಾಗು ಆ ಆಗಂತುಕನ ಗುರುತು ಹೇಳಿಕೊಂಡಳು. ಇಸ್ಮಾಯಿಲ್ ನಡುಗಿ ಹೋದ...ಅವನ ಬಾಯಿಂದ ಮಾತೇ ಬರಲ್ಲಿಲ್ಲ.
ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ರಾಜಾಸ್ಥಾನದಿಂದ ನಮ್ಮೂರಿಗೆ ಬಂದಿದ್ದ ಕುಟುಂಬವದು. ದಾಧಾಪೀರ್ ಕುಲ್ಪೀ, ರಸ್ಕ್, ಸೋನ್ ಪಾಪ್ಪುಡಿ ಇತ್ಯಾದಿ ಉತ್ತರ ಭಾರತೀಯ ತಿಂಡಿಗಳನ್ನು ತಯಾರಿಸಿ ಗಾಡಿಯಲ್ಲಿ ಹೇರಿಕೊಂಡು ಮಾರುವ ವ್ಯಕ್ತಿ. ನಮ್ಮೂರಿಗೆ ನಿನ್ನೆಯಷ್ಟೇ ಬಂದಿದ್ದ ಅವನು ತನ್ನ ಮನೆಯಿಂದ ದಾರಿ ತಪ್ಪದಿರಲಿ ಅಂತಾ ತನ್ನದೇ ರೂಟ್ ಮ್ಯಾಪ್ ಬರೆದುಕೊಳ್ಳುತ್ತಿದ್ದ. ಮಕ್ಕಳಿಂದಲೇ ಅವನಿಗೆ ವ್ಯಾಪಾರ ಆಗಬೇಕಿದ್ದ ಕಾರಣ ಅವರ ಪ್ರೆಂಡ್ ಶಿಪ್ ಮಾಡಿಕೊಳ್ಳುತ್ತಿದ್ದ. ಪಕ್ಕದ ಊರಿನ ಗಲ್ಲಿಗಲ್ಲಿಯಲ್ಲೂ ಕೂಡ ಈ ದಾಧಫೀರ್ ಮಕ್ಕಳಿಗೆಲ್ಲಾ ದಾಧಾ ಮಾಮ ಅಂತಾನೇ ಫೇಮಸ್ ಆಗಿದ್ದ. ಇವನ ಸೌಮ್ಯ ವರ್ತನೆ ಹಾಗು ಹಾಡುಗಾರಿಕೆಗೆ ಆ ಊರವರು ಇವನಿಗೆ ಸನ್ಮಾನ ಮಾಡಿದ್ದರು. 
     ಈ ಎಲ್ಲಾ ವಿಷಯ ಕೇಳುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಯುವಕರು ಒಬ್ಬೊಬ್ಬರಾಗಿ ಅಲ್ಲಿಂದ ಕಾಲ್ಕಿತ್ತರು. ತೆರೆದಿದ್ದ ಮನೆಯ ಕಿಟಕಿಗಳು ಮುಚ್ಚಿಕೊಂಡವು. ಧೂಳೆಬ್ಬಿಸಿ ಹೋದ ಪೊಲೀಸ್ ಜೀಪಿನತ್ತ ದುಃಖದ ನೋಟ ಬೀರಿದ ಆಕೆ ಅಳುತ್ತಿದ್ದ ಗಂಡನನ್ನು ಎದೆಗೊರಗಿಸಿಕೊಂಡು ಅವನ ಕಣ್ಣೀರು ಒರೆಸಿದಳು. ಅವರ ಜೊತೆಯಲ್ಲಿದ್ದ ಆ ಮೂರು ಹೆಣ್ಣು ಮಕ್ಕಳು ರೋಧಿಸುತ್ತಲೇ ಇದ್ದವು. 
      ಆ ಎಲ್ಲಾ ಮನೆಗಳಲ್ಲೂ ಮೌನ ಮುರಿದುಕೊಂಡು ಬಿದ್ದಿದ್ದು. ನಿಟ್ಟುಸಿರಿನ ಸಣ್ಣ ಸದ್ದಿನ ನಡುವೆ ಛೇ.., ಪಾಪ ಹೀಗಾಗಬಾರದಿತ್ತು ಅನ್ನೋ ಭಾವುಕತೆ ಲಹರಿಯೋಪಾದಿಯಲ್ಲಿ ಹರಿಯುತ್ತಿತ್ತು.

Friday, December 9, 2011

ಪಾಪ......, ಹಾಸನ್

ಸರ್..., ನಿಮಗೆ ಒಬ್ಬ ಹುಡುಗಿ ಫೋನ್ ಮಾಡ್ತಾಳೆ.

ಸಂತೇ ಸೇರುವ ಮುನ್ನಾ.....!!!???

   ಸರ್,  ದೇವ್ರಾಣೆಗೂ  ಹೇಳ್ತೀನಿ..., ನಿಮ್ ಚಾನೆಲ್ ನಂಬರ್ ಒನ್ ಸರ್,  ನನ್ಗಂತೂ ಬೆಳಿಗ್ಗೆ ಎದ್ದ್ ತಕ್ಷಣ ಅದನ್ನ ನೋಡ್ನಿಲ್ಲಾಂದ್ರೆ ಸಮಾಧಾನನೇ ಆಗಲ್ಲಾ....., ನೀವ್ ಬಿಡಿ ಸಾರ್ ನಿಮ್ಮಂಗೆ  ಬೇರೆ ಯಾವ ಟೀವಿನೋರು ಸುದ್ದಿ ಮಾಡಲ್ಲ....., 
                  ಆತ ಬೆಳ್ಳಬೆಳಗ್ಗೇನೇ ನನ್ನನ್ನು ಎಬ್ಬಿಸಿ ವಾಯಲಿನ್ ಥರ ಕೊಯ್ಯತೊಡಗಿದ್ದ. ಆ ವರಸೇಲೇ ಆತ ಒಬ್ಬ ಪುಡಾರಿ ಅನ್ನೋದು ನನಗೆ ಅರ್ಥವಾಗಿತ್ತು. ಕಷ್ಟ ಪಟ್ಟು ಮಾತನ್ನು ಅರ್ಧಕ್ಕೆ ತುಂಡರಿಸಿ   ಸರಿ, ನನ್ನಿಂದ ನಿಮಗೆ ಏನಾಗ್ಬೇಕು ಅಂತಾ ಹೇಳಿ ಪ್ಲೀಸ್........., ಅಂದೆ. ನನ್ನ ಅವಸರದಲ್ಲಿ ಅಸಹನೆಯನ್ನು ಸ್ಪಷ್ಟವಾಗಿ ಗುರುತಿಸಿದ ಆತ ಕೊಂಚ ಸಾವರಿಸಿಕೊಂಡು   ಏ..ಏನಿಲ್ಲಾ ನಮ್ ಊರಲ್ಲಿ ಒಬ್ಬ ಟ್ರ್ಯಾಕ್ಟರ್ ಡ್ರೈವರ್ ಅಪ್ಪ ಅಮ್ಮ  ಇಲ್ಲದ ಬಡಪಾಯಿ ಹೆಣ್ಣು ಮಗಳಿಗೆ ಮದ್ವೆ ಆಗ್ತೀನಿ ಅಂತಾ ನಂಬ್ಸಿ ಮೋಸ ಮಾಡವ್ನೆ.  ಪಾಪ ಅವ್ಳು ಹೊಳೆಗ್ ಬೀಳಾಕ್ ಓಯ್ತಾ ಇದ್ಲು....., ನಾವ್ ಊರ್ ಹಿರಿಕ್ರು ಎಲ್ಲಾ ಸೇರಿ ಅವ್ನುನ್ನ ಹಿಡಿದ್  ಕೂರ್ಸೀವಿ. ಈಗ ಮಾವಿನ್ ಕೆರೆ ಬೆಟ್ದಾಗೆ ಮದ್ವೆ ಮಾಡೋಕ್ ಓಯ್ತಾ ಇದೀವಿ ಬತ್ತೀರಾ ಸಾ....? ಅಂತ ಅವನ ಅಗತ್ಯವನ್ನು ತೆರೆದಿಟ್ಟ.  ಅದರ ಜೊತೆಗೆ ನಿಮ್ಮುನ್ನ ಬುಟ್ರೆ ಬೇರೆ ಯಾರಿಗೂ ವಿಷ್ಯ ಹೇಳಿಲ್ಲಾ..........., ಅನ್ನೋ Extra ಡೈಲಾಗ್ ಬೇರೆ ಸೇರಿಸಿ ಬಿಟ್ಟ.        
  ಈ ದಿನದ ಸೂಪರ್ ಓಪನಿಂಗ್ ಅಂದ್ಕೊಂಡ ನಾನು ನನ್ನ ಕ್ಯಾಮೆರಾಮೆನ್ ಜೊತೆ ಮಾವಿನಕೆರೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆ.  ಆ ಕೊರೆಯುವ ಚಳಿಯಲ್ಲೂ Exclusive ನ್ಯೂಸ್ ಬಾರಿಸುವ ಉತ್ಸಾಹ ನಮ್ಮದಾಗಿತ್ತು.                                                          ಹಾಗೋ ಹೀಗೋ ಬೆಟ್ಟ ಸೇರಿದ ನಮಗೆ ಪರಮಾಶ್ಚರ್ಯ ಕಾದಿತ್ತು. ಯಾಕೇಂದ್ರೆ ಅಲ್ಲಿ ಮದುವೆ ಜೋಡಿ ಅಥ್ವಾ ಅವರ ಪಟಾಲಂ ನ ಸುಳಿವೇ ಇರಲ್ಲಿಲ್ಲ.  ಅನುಮಾನಗೊಂಡ ನಾನು ಆ ಮಹಾಶಯನಿಗೆ ಫೋನಾಯಿಸಿದೆ. '' ಬತ್ತಾ ಇದೀವಿ ಸಾ......, ಅಲ್ಲೇ ಇರಿ ಐದು ನಿಮ್ಶ....ಬಂದೇ ಬುಟ್ವೀ....ಅಂದ.
  ಸಧ್ಯ ಸ್ಟೋರಿ ಮಿಸ್ ಆಗ್ಲಿಲ್ವಲ್ಲಾ ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.  ಆದ್ರೆ ಆ ಕ್ಷಣದ ದುರಂತ ಅನ್ನೋ ಥರ ಅಲ್ಲಿ ಇದ್ದಕ್ಕಿದ್ದಂತೇ ಸುವರ್ಣ ಚಾನೆಲ್ ನ ವರದಿಗಾರ ವೇಣುಕುಮಾರ ಭಯಾನಕ ಸ್ಪೀಡ್ ನಲ್ಲಿ ಬೆಟ್ಟ ಏರಿ ಬಂದೇ ಬಿಡೋದೇ.......? ನನಗೆ Exclusive ಅಂತಾ ಹೇಳಿದ್ದ ಆ ಮಹಾಶಯನ ಮೇಲೆ ಇನ್ನಿಲ್ಲದ ಕೋಪ. ವೇಣು ನನಗೆ ಸ್ನೇಹಿತನಾಗಿದ್ದರೂ ಸುದ್ದಿ ವಿಚಾರದಲ್ಲಿ ಮಾತ್ರ ದುಶ್ಮನ್ ಆಗಿದ್ದ. ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಪೇಲವ ನಗೆ ನಕ್ಕೆವು. ಪಕ್ಕದಲ್ಲೇ ಬಂದು ಕುಳಿತ ವೇಣು ಕೊಸರಾಡಿಕೊಂಡು '' ಅಣ್ಣಾ ನಿನ್ ಗೆ ಹೆಂಗೋ ಗೊತ್ತಾಯ್ತು. ಅಂತ  ಕೇಳೇ ಬಿಟ್ಟ. ಕೋಪದಿಂದ ನಾನು '' ಯಾಕೇ....? ನಿಮ್ ಚಾನಲ್ ಗೆ ಮಾತ್ರ ಹೇಳ್ಬೇಕು ಅಂತಾ ಬಾಂಡ್ ಏನಾದ್ರೂ ಇದ್ಯಾ......? ಅಂತ ಮರುಪ್ರಶ್ನೆ ಹಾಕಿದೆ.   '' ಹಂಗಲ್ವೋ ನನ್ಗೆ ಇನ್ ಪಾರ್ಮ್ ಮಾಡಿದವ ನನ್ನೊಬ್ಬನಿಗೆ ಬಿಟ್ಟು ಯಾರಿಗೂ ವಿಷಯ ಹೇಳಿಲ್ಲ ಅಂದಿದ್ದ.........., ಅಂತ ವಿವರಿಸತೊಡಗಿದ. ಯಾರವನು ಅಂತಾ ಕೇಳಿದ್ರೆ ಆ ಮಹಾಶಯನ ಹೆಸರು ಹೇಳೋದೇ.......? ಎಲಲಾ ಮಹಾಶಯಾ........, ಚೆನ್ನಾಗೇ ಗೇಮ್ ಹಾಕಿದ್ದೀ....ಅಂತ ಮನಸಾರೆ ಅವನನ್ನ ಬೈದುಕೊಳ್ಳತೊಡಗಿದೆವು.   ಅಷ್ಟರಲ್ಲಿ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು. ಬಂಡೆಯೊಂದರ ಮರೆಯಿಂದ  ಕಸ್ತೂರಿ ಚಾನಲ್ ನ ಕ್ಯಾಮೆರಾಮೆನ್ ಬಿಳಿಗಿರಿ ಶ್ರೀನಿವಾಸ್ ರಿಪೋರ್ಟರ್ ಸುರೇಶ್ ನಗ್ತಾ ನಗ್ತಾ ಹೊರ ಬಂದು ಬಿಟ್ರು. ದೇವಸ್ಥಾನದ ಅದ್ಯಾವುದೋ ಮೂಲೆಯಿಂದ ಉದಯ ಟಿವಿ ಅತಿಖ್ ಕೂಡ ಎಂಟ್ರಿ ಕೊಟ್ರು. ಅಲ್ಲಿಗೆ ಎಲ್ಲಾ ಮುಗಿದೇ ಹೋಗಿತ್ತು. ಆ ಮಹಾಶಯ ಆ Extra ಡೈಲಾಗನ್ನು ಎಲ್ಲರಿಗೂ ಹೇಳಿ ಎಲ್ಲರೂ ಬೆಳ್ಳಗ್ಗೇನೇ ಬೆಟ್ಟ ಹತ್ತುವಂತೆ ಮಾಡಿದ್ದ. ಇನ್ನೇನು ಮಾಡೋದು.., ವೃತ್ತಿ ಬಾಂಧವರು ತಾನೇ.....? ಎಲ್ಲರೂ ಒಂದಾಗಿ ಕಲೆತು ಹರಟೆ ತಮಾಷೆ ಇತ್ಯಾದಿ ಶುರು ಮಾಡಿದ್ವು....., ನನಗೆ ಅಲ್ಲೊಂದು ಕೊರತೆ ಎದ್ದು ಕಾಣತೊಡಗಿತು. ಅದು ಈ ಟಿವಿಯ ಅಂಬಿಕಾ ಪ್ರಸಾದ್.......,  ಛೇ ಅವರೊಬ್ಬರು ಮಾತ್ರ ಇಲ್ವಲ್ಲಾ ಅಂತ ಕನವರಿಸಿದೆ ಅಷ್ಟೇ........, ಕ್ಯಾಮೇರಾನ ಕೈ ಯಲ್ಲಿ ಹಿಡಿದುಕೊಂಡೇ ನಮ್ಮ ಹಿಂಬದಿಯ ಬಂಡೆ ಮರೆಯಿಂದ ಹೊರಬಂದ ಪ್ರಸಾದ್ '' ಹೌದು ಸ್ವಾಮಿ.., ನಾನು ಇದೀನಿ....ಸಂತೆ ಸೇರೋ ಮುಂಚೆ ಗಂಟು ಕಳ್ಳರು ಸೇರ್ಕೊಂಡ್ರು ಅನ್ನೋ ಹಾಗೇ..........., ಅನ್ನೋದೆ....? ನಮ್ಮ ನಗುವಿಗೆ ಪಾರವೇ ಇರಲ್ಲಿಲ್ಲ. ಯಾಕಂದ್ರೇ ನಾವು ನಿಜವಾಗ್ಲೂ ಕಳ್ಳರ ರೀತಿ ಒಬ್ಬರಿಗೊಬ್ಬರು ವಿಷಯ ತಿಳಿಸದೇ ಬೆಟ್ಟಕ್ಕೆ ಬಂದಿದ್ದೆವು. ಎಲ್ಲರಿಗೂ Exclusive ನ್ಯೂಸ್ ಮಾಡುವ ತವಕ. ಯಾವನೋ ಒಬ್ಬ ಹಳ್ಳೀ ಲೀಡರ್ ನಿಂದ ನಾವೆಲ್ಲಾ ಮೂರ್ಕರಾಗಿದ್ದೆವು. ಸುಮಾರು ಒಂದು ಘಂಟೆ ತಡವಾಗಿ ಬಂದ ಆ ಮಹಾಶಯ ಬಂದು ನಮ್ಮನ್ನು ನೋಡಿ ನಕ್ಕನಾದ್ರೂ ನಾವ್ಯಾರೂ ನಗಲ್ಲಿಲ್ಲ. ಮದುವೆ ಮನೆಯಲ್ಲಿ ಅವನಿಗೆ ಬಾಯಿಗೆ ಬಂದಂತೆ ಜಾಡಿಸುವ ಮನಸ್ಸಿತ್ತಾದ್ರೂ ಯಾರೂ ಕೂಡ ಆ ದೈರ್ಯ ಮಾಡಲ್ಲಿಲ್ಲ.  ಅನಾಥ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಿದ ಆತ್ಮತೃಪ್ತಿಯ ಜೊತೆಗೆ ಮರಳಿ ಗೂಡಿಗೆ ಸೇರಿದೆವು.