Monday, March 26, 2012

ಸಂಜೆಯಾಗಿ ಹೋಗಿದೆ....

   ನಿನ್ನ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಇದೇ ಜಾಗದಲ್ಲಿ ನಾನು ಮತ್ತು ನಿನ್ನ ಅಪ್ಪ ದೊಡ್ಡ ಚಪ್ಪರ ನೆಟ್ಟಿದ್ದೆವು. ಆಗ ಈ ಊರು ಅಷ್ಟೇನೂ ಬೆಳೆದಿರಲ್ಲಿಲ್ಲ, ಅಲ್ಲೊಂದು ಇಲ್ಲೊಂದು ಮನೆ. ಆದರೆ ಚಪ್ಪರದ ತುಂಬಾ ಜನರೋ ಜನ. ನೆಂಟರಿಷ್ಟರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳ ತುಂಬಾ ಜನ ಬಂದಿದ್ರು......., ಅವತ್ತಿನ ಗೌಜಿ ಕಣ್ಣಿಗೆ ಕಟ್ಟಿದ ಹಾಗಿದೆ.
     ಅಮ್ಮನ ಮುಖದಲ್ಲಿ ಅದೇನೋ ಮಂದಹಾಸ. ಕಣ್ಣುಗಳಲ್ಲಿ ಸಾಕ್ಷಾತ್ ದೇವತೆಯ ಕಳೆ. ಕಳೆದ ಹಲವು ತಿಂಗಳಿನಿಂದ ಮೌನವಾಗಿದ್ದ ಅಮ್ಮ  ತಾನು ಬಾಳಿ ಬದುಕಿದ ಮನೆಯಂಗಳಕ್ಕೆ ಕಾಲಿಟ್ಟ ಕೂಡಲೇ ಮಗುವಾಗಿದ್ದಾರೆ. ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.
    ಏ...ಪುಟ್ಟಾ...., ಇದು ಭಾರೀ ಶಾಮಿಯಾನ ಕಣೋ....., ಇಲ್ಲಿ ಸ್ಟೇಜ್ ಕೂಡ ಹಾಕಿದ್ದಾರೆ. ತುಂಬಾನೆ ಚೆನ್ನಾಗಿದೆ ಮಗ. ಇಲ್ಲಿ ಈಗ ನಿನ್ನ ಮಗನ ಅಲ್ಲಲ್ಲಾ ನನ್ನ ಮಗನ ಹುಟ್ಟು ಹಬ್ಬ ಅಂದ್ರೇ..., ನನಗಂತೂ ಹೆಮ್ಮೇನೇ......, ನಿಮ್ಮಪ್ಪ ಇದ್ದಿದ್ರೇ ಮಿಂಚು..ಮಿಂಚಿನ ಹಾಗೇ ಓಡಾಡಿಕೊಂಡಿರೋರು. ಉತ್ಸಾಹದ ನಡುವೆಯೂ ಅಮ್ಮನ ಕಣ್ಣಿನಾಳದಲ್ಲಿ ನೋವಿನ ಗುರುತು ಮೂಡಿ ಮರೆಯಾಗಿತ್ತು. ಅದುವರೆಗೂ ಸುಮ್ಮನಿದ್ದ ಅವನು ಹೊಸ ಸೀರೆ ಹಾಗು ಅಮ್ಮನ ಒಡವೆಗಳ ಪುಟ್ಟ ಪೆಟ್ಟೆಗೆಯೊಂದನ್ನ ಆಕೆಯ ಮುಂದೆ ಹಿಡಿದ.
    ಅಮ್ಮಾ ......,ನೆಂಟರಿಷ್ಟರು ಬರೋ ಹೊತ್ತಾಯ್ತು. ಹೋಗಿ ಸ್ನಾನ ಮಾಡಿ ಹೊಸಸೀರೆ ಉಟ್ಕೊಂಡು ಬಾ..., ಆಕೆ ಮಗನತ್ತ ದಿಟ್ಟಿಸಿ ನೋಡಿದಳು. ಅವನ ಮೊಗರಾವಿಂದದಲ್ಲಿ ಕಿಂಚಿತ್ತೂ ಕಳೆ ಇಲ್ಲ. ಸೋತು ಜಡ್ಡುಗಟ್ಟಿದ ಮುಖಕ್ಕೆ ಬಣ್ಣ ಬಳಿದಂತಿದೆ.  ಅವನ ನಿಲುವಲ್ಲಿ ಹತಾಷ ಭಾವ ಎದ್ದು ಕಾಣುತ್ತಿದೆ. ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಅಪ್ಪ ಎದೆಯೊಡೆದು ಸತ್ತ ಅನ್ನೋ ಅಪರಾಧಿ ಭಾವ ಅವನನ್ನು ಇನ್ನೂ ಕಾಡುತ್ತಿದೆ ಎಂದೆಣಿಸತೊಡಗಿತ್ತು. ಆದರೆ ಕೇಳುವಂತಿಲ್ಲ.
    ನೆಂಟರಿಷ್ಟರು, ಗೆಳೆಯರು,ಅವರು, ಇವರು ಎಲ್ಲಾ ಬಂದರು. ಜೋಯಿಸರು ಮಂತ್ರವನ್ನು ಪಠಿಸತೊಡಗಿದರು. ಅವನು ಮಗುವಿನ ಕಿವಿಯಲ್ಲಿ ಆಕಾಶ್, ಆಕಾಶ್, ಆಕಾಶ್ ಅಂತ ಉಸುರಿದ. ನಾಮಕರಣ ಶಾಸ್ತ್ರ ಸಾಂಗ್ಯವಾಯ್ತು. 
    ಬಂದವರಿಗೆಲ್ಲಾ ಹಬ್ಬದ ಅಡುಗೆ. ಮೊಮ್ಮಗುವಿನ ಜೊತೆ ರೇಷ್ಡೆ ಸೀರೆ ಹಾಗು ಚಿನ್ನಾಭರಣ ಧರಿಸಿ ನಿಂತ ಆಕೆಯ ಫೋಟೋ ತೆಗೆದದ್ದೇ ತೆಗೆದದ್ದು. ಬಂದವರಿಗೆಲ್ಲಾ ಆಕೆಯನ್ನು ಕಂಡಾಗ ಅದೇನೋ ಒಂಥರಾ ಆತ್ಮಿಕ ಆನಂದ. ಅಂತಹ ಮಹಾನ್ ಸಾಧ್ವಿ ಅವಳು. ಆಕೆಯ ಪರಿಶ್ರಮದಿಂದ ಈತ ದೊಡ್ಡ ಅಧಿಕಾರಿಯಾಗಿ ಬೆಳೆದು ನಿಂತಿದ್ದಾನೆ. ಊರಲ್ಲೆಲ್ಲಾ ಬಹುದೊಡ್ಡ ಹೆಸರು ಮಾಡಿದ್ದಾನೆ. ತಾಯಿ ಹಾಗು ಮಗ ಎಂದರೆ ಹೀಗಿರಬೇಕು......, ಬಂದವರಲ್ಲಿ ಈ ಮಾತು ಹೇಳದೇ ಯಾರೂ ಹೋಗಿಲ್ಲ.
    ಊರಿನ ಮಂದಿ ಖಾಲಿಯಾದರು. ನೆಂಟರು ಹೊರಟರು. ಆಳುಗಳು ಕೆಲಸ ಮುಗಿಸಿ ಕೈ ಕಟ್ಟಿ ನಿಂತರು. ಎಲ್ಲರಿಗೂ ಹೊರಡುವ ತವಕ. ಅತ್ಯಂತ ಗೌರವಯುತವಾಗಿ ಫಲತಾಂಬೂಲದ ಜೊತೆಗೆ ಈತ ಎಲ್ಲರನ್ನೂ ಬೀಳ್ಕೊಟ್ಟ.  ಮನೆಯಲ್ಲಿದ್ದ ಜನಗಳ ಸಂಖ್ಯೆ ಕರಗಿತ್ತು.
          ಪುಟ್ಟಾ ಅಲ್ಲಿ ಆ ಹಲಸಿನ ಮರ ಇದೆಯಲ್ವಾ...., ಅಲ್ಲಿ ನಾನು ಬಸಲೇಸೊಪ್ಪಿನ ಬಳ್ಳಿ ನೆಟ್ಟಿದ್ದೆ. ನೀ ಆರನೇ ಕ್ಲಾಸ್ ಓದೋವರ್ಗೂ ಆ ಬಳ್ಲಿಯಿಂದ ಕತ್ತರಿಸಿದ ಸೊಪ್ಪನ್ನ ಮಾರಿ ನಿನ್ನನ್ನ.......ಆಕೆಯ ಮಾತು ಮುಂದುವರೆದಿತ್ತು. ಆದರೆ ಅವನಿಗೆ ಅದರಲ್ಲಿ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ದೂರದಲ್ಲಿ ಅವನ ಕೈ ಹಿಡಿದಾಕೆ ಅವನಿಗೆ ಕಣ್ಸನ್ನೆ ಮಾಡಿ ಕರೆದಳು. ಅವನು ಮನೆಯೊಳಗೆ ಹೋದವ ಮತ್ತೆ ಹೊರಗೆ ಬಂದ. ಅಮ್ಮ ಇನ್ನೂ ಏನೋ ಹೇಳುತ್ತಲೇ ಇದ್ದಳು. ಅದನ್ನು ಅರ್ಧಕ್ಕೆ ನಿಲ್ಲಿಸಿದ ಆತ 
   ಅಮ್ಮಾ...., ಹೊರಡೋಣ್ವಾ....? ಅಂತ ವಿನಮ್ರನಾಗಿ ಕೇಳಿದ. ಅವನೆದೆಯಲ್ಲಿ ನೆಟ್ಟ ನೋವಿನ ಶೂಲ ಅಸಹಾಯಕತೆಯ ಚೀತ್ಕಾರವಾಗುವುದೇನೋ ಎಂಬ ಭಯ ಆಕೆಗೆ. ಅವಳು ಮತ್ತಷ್ಟು ಖುಷಿಯಾದಳು.
   ಓ.., ಹೌದಲ್ವಾ...? ಸಂಜೆಯಾಗಿ ಹೋಗಿದೆ........! ಗೊತ್ತೇ ಆಗಿಲ್ಲಾ ನೋಡು. ಹಾಗೆಂದವಳು ಕೋಣೆಯೊಳಗೆ ಹೋಗಿ ಧರಿಸಿದ್ದ ಹೊಸ ಸೀರೆ ಬದಲಾಯಿಸಿ ತಾನು ಮೊದಲು ಉಟ್ಟಿದ್ದ ಹಳೇಯ ಮಾಸಲು ಸೀರೆ ಉಟ್ಟುಕೊಂಡಳು.  ಹಾಗು ಆಭರಣಗಳನ್ನು ಪೆಟ್ಟಿಗೆಯಲ್ಲಿಟ್ಟು ಸೀರೆ ಹಾಗು ಅದನ್ನು ಮಗನ ಕೈಗಿತ್ತಳು. ಅವನು ಅವೆಲ್ಲವನ್ನೂ ತನ್ನ ಹೆಂಡತಿಯ ಕೈಗಿತ್ತ.  ಆಕೆ ಲಗುಬಗೆಯಿಂದ ಒಳಸೇರಿ ಮುಂಬಾಗಿಲು ಹಾಕಿ ಚಿಲಕ ಜಡಿದುಕೊಂಡಳು.
     ಹೈವೇ ಯಲ್ಲಿ ಆತನ ಕಾರು ಓಡುತ್ತಿತ್ತು. ಆತನ ಪಕ್ಕದಲ್ಲಿ ಆತನನ್ನು ಹೆತ್ತತಾಯಿ ಕುಳಿತಿದ್ದಾರೆ. ಏನನ್ನೂ ವ್ಯಕ್ತಪಡಿಸಲಾಗದ ಅಸಹಾಯಕತೆ  ಸ್ಥಿತಿ ಅವನದು. ಕಣ್ಣಿನಿಂದ ಧಾರಾಕಾರವಾಗಿ ನೀರು ಇಳಿಯತೊಡಗುತ್ತೆ. ಅದನ್ನು ಕಂಡ ಅವನ್ನಮ್ಮ ಯಾಕಪ್ಪಾ ಅಳ್ತಾ ಇದ್ದೀಯಾ...? ಅಂತಾ ಕೇಳುತ್ತಾಳೆ. ಅದಕ್ಕವನು ಇಲ್ಲಾಮ್ಮ ಅಳ್ತಾ ಇಲ್ಲಾ..ಗಾಳಿ ಜೋರಾಗಿ ಬೀಸ್ತಾ ಇದೆ ನೋಡು, ಅದು ಕಣ್ಣಿಗೆ ರಾಚಿ ಕಣ್ಣೀರು ಬರ್ತಾ ಇದೆ ಎನ್ನುತ್ತಾನೆ. ಓ ಹೌದಾ....? ಎನ್ನುತ್ತಾ ಆಕೆ ಸುಮ್ಮನಾಗುತ್ತಾಳೆ. ಇಬ್ಬರಿಗೂ ಅದು ಸುಳ್ಳು ಎನ್ನುವುದು ಗೊತ್ತಿದೆ. ಆದರೆ ಅದನ್ನು ಕೆದಕುತ್ತಾ ಹೋದರೆ ತನ್ನ ಕಂದ ಮತ್ತಷ್ಟು ಕಣ್ಣೀರಾಗುತ್ತಾನಲ್ಲಾ ಎಂದು ಆಕೆ ಸುಮ್ಮನಾಗಿ ಬಿಡುತ್ತಾಳೆ. ಇದು ಆತನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಮಾರಂಭದಲ್ಲೂ ಮರುಕಳಿಸುತ್ತೆ.
    ಆ ಹೈಟೆಕ್ ವೃದ್ದಾಶ್ರಮದ ಎದುರು ಅವನ ಕಾರು ಬರುತ್ತಿದ್ದಂತೇ ಲಗುಬಗೆಯಿಂದ ಓಡಿ ಬಂದ ಸಿಬ್ಬಂದಿ ಬಾಗಿಲು ತೆರೆಯುತ್ತಾರೆ. ಅವ ಕಾರಿನಿಂದಿಳಿದು ಮುಂದಿನ ಡೋರ್ ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆ ಅವಕಾಶ ನೀಡದ  ಆ ತಾಯಿ ತಾನೇ ಕಾರಿನಿಂದ ಕೆಳಗಿಳಿದು ಪರ್ವಾಗಿಲ್ಲ ಬಿಡು ಕಂದಾ ಎನ್ನುತ್ತಾರೆ. ಆತನ ಹಾಗು ಆಕೆಯ ಎದೆಗೆ ಒಮ್ಮೆಗೆ ಸಾವಿರ ಸಾವಿರ ಭಲ್ಲೆಗಳು ತಿವಿಯುತ್ತವೆ. ಅಸಾಧ್ಯ ವೇದನೆ......, ಆದರೆ ಇಬ್ಬರೂ ವ್ಯಕ್ತಪಡಿಸಿಕೊಳ್ಲುವುದಿಲ್ಲ.
      ಉಸಿರನ್ನೊಮ್ಮೆ ಎಳೆದುಕೊಂಡ ಆತ ಅಮ್ಮಾ...., ಬರ್ತೀನಮ್ಮಾ..., ಎನ್ನುತ್ತಾನೆ. ಅವನಷ್ಟೇ ತಾಳ್ಮೆಯಿಂದ ಆಕೆ ಕೂಡ ಆಯ್ತು ಪುಟ್ಟಾ ಹೋಗಿ ಬಾ...ಜೋಪಾನ ಮಗನೇ ಎನ್ನುತ್ತಾಳೆ. ಇನ್ನೊಂದು ಕ್ಷಣ ಅಲ್ಲಿದ್ದರೂ ಎದೆಯೊಳಗಿರುವ ನೋವಿನ ಕಟ್ಟೆ ಒಡೆದು ಹೋಗುತ್ತೆ...ನಾನಳುವುದನ್ನು ಕಂಡರೆ ಅಮ್ಮನ ಉಸಿರೇ ಉಡುಗಿ ಹೋಗುತ್ತೆ..., ಅವನೆಂದುಕೊಳ್ಳುತ್ತಾನೆ. ಬೇಗ ಹೊರಡು ಕಂದಾ...., ನನ್ನ ಕಣ್ಣೀರು ನಿನ್ನನ್ನು ಮತ್ತಷ್ಟು ದುಃಖಿತನನ್ನಾಗಿಸಬಾರದು ಅಂತಾ ಅವಳೆಂದುಕೊಳ್ಳುತ್ತಾಳೆ.
       ಅಮ್ಮನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅವನು ಹೊರಡುತ್ತಾನೆ. ಕಾರಿನ ಎಲ್ಲಾ ಗ್ಲಾಸ್ ಗಳನ್ನು ಮೇಲೇರಿಸಿಕೊಂಡು ಸ್ಟೀರಿಯೋ ಸದ್ದನ್ನು ಜೋರಾಗಿಸಿ ವೇಗವಾಗಿ ಕಾರು ಚಲಾಯಿಸುತ್ತಾನೆ. ಈಗವನು ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವುದಿಲ್ಲ. ಅಜ್ಞಾತ ಸ್ಥಳದಲ್ಲಿ ಕಾರು ನಿಲ್ಲಿಸಿ ಜೋರಾಗಿ ಅಳುತ್ತಾನೆ. ಕಿರುಚುತ್ತಾನೆ. ಎದೆ ಎದೆ ಬಡಿದುಕೊಳ್ಳುತ್ತಾನೆ. ವೃದ್ದಾಶ್ರಮದ ಕೊಠಡಿಯ ಮೂಲೆಯಲ್ಲಿ ಕುಳಿತ ಅವನಮ್ಮ  ಕೂಡ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಕಂದಾ ನೀ ಅಳಬೇಡ ಚೆನ್ನಾಗಿರು. ನಿನ್ನದೇನು ತಪ್ಪಿಲ್ಲ ಅನ್ನೋದು ನನಗೆ ಗೊತ್ತಿದೆ ಎಂದು ಹಾರೈಸುತ್ತಾಳೆ. ಅದೊಂದು ಸಂಜೆ ಹಾಗೆ ದುಃಖದ ಹನಿಗಳ ಜೊತೆಗೆ ಜಾರಿ ಹೋಗುತ್ತೆ.


       

Monday, March 19, 2012

ಹೆಣ್ಣು ಬೇಟೆ...,

ಅವಳೊಮ್ಮೆ ಉಸಿರು ಬಿಗಿ ಹಿಡಿದು ಆ ಆಳದತ್ತ ಕಣ್ಣು ಹಾಯಿಸಿದಳು.....,
      ಹಚ್ಚ ಹಸಿರು....., ತಂಗಾಳಿಯ ನಡುವೆ ಹಕ್ಕಿಗಳ ಕಲರವ......, ಉನ್ಮಾದದ ಉತ್ತುಂಗ.....,  ಚೆಲುವನ್ನೆಲ್ಲಾ ಒಡಲಲ್ಲಿ ತುಂಬಿಕೊಂಡಿರುವ ರಕ್ಕಸ ಗುಂಡಿ ಅದು.  ಬೆರಗು ಸವಿಯುತ್ತವೆ ಕಣ್ಣುಗಳು..., ಆದ್ರೆ ಆ ಆಳದ ಅಳತೆ ಮಾಡಿದರೆ ಎಂಥಹವರ  ಎದೆಯ ನಗಾರಿ ಗುಂಡಿನ ಸದ್ದಿನಂತೆ ಹೊಡೆದುಕೊಳ್ಳುತ್ತೆ.. ಅಂತಹ ಪ್ರಪಾತದ ತಲೆಯ ಮೇಲೆ ಆಕೆ ನಿಂತಿದ್ದಾಳೆ.  ಭಯವಾಯ್ತು. ಆದರೆ ಆ ಭಯವನ್ನು ಮೀರಿಸಿ ಸವಾಲು ಹಾಕಲೇ ಬೇಕು. ಒಂದಡಿ ಮುಂದಿಟ್ಟರೂ ಸಾವಿರ ಸಾವಿರ ಅಡಿಗಳ ಆಳಕ್ಕೆ ಉರುಳಿ ಬೀಳುತ್ತಾಳೆ.  ಹೆಕ್ಕೋದಕ್ಕೆ ಮೂಳೆಗಳೂ ಸಿಗೋಲ್ಲ.  ಸಿಗುತ್ತವೆ ಅಂದ್ರೂ ಆ ಆಳಕ್ಕಿಳಿಯುವ ಗಂಡೆದೆ ಯಾರಿಗೂ ಇಲ್ಲ.
        ಅವಳು ಕಣ್ಮುಚ್ಚಿಕೊಂಡಳು. ಹೌದು, ಎಲ್ಲದಕ್ಕೂ ಅಂತ್ಯ ಹಾಡಲೇ ಬೇಕು. ಅದ್ಕಕಿರುವುದು ಇದೊಂದೇ ಮಾರ್ಗ.ಇನ್ನು ತಡ ಮಾಡಬಾರದು. ದೇಹವೆಲ್ಲಾ ಕಿವಿಯಾಯ್ತು...ಯಾವುದೋ ಸದ್ದಿನ ಕಾತುರ....., ಅಂತರಂಗದ ತುಂಬಾ ತಹತಹ.
      ದೂರದಲ್ಲೆಲ್ಲೋ ಕಿಟಾರನೆ ಹುಡುಗಿ ಕಿರುಚಿದ ಸದ್ದು. ಅಯ್ಯಯ್ಯೋ...ಅಣ್ಣಾ ನಿಮ್ ಕಾಲ್ ಹಿಡಿತೀನಿ..., ಬಿಟ್ ಬಿಡಿ ಪ್ಲೀಸ್......, ಇವಳಿಗೆ ಆ ಸದ್ದು ಕೇಳುತ್ತಿದೆ. ಅದು ಅಸಹನೀಯವಾಗಿ ಮುಂದುವರೆಯುತ್ತಿದೆ. ಅಲ್ಯಾರೋ ಪೋಟೋ ತೆಗೀತಾ ಇದಾರೆ. ಮೊಬೈಲ್ ನಲ್ಲಿ ತಮ್ಮ ವಿಕೃತಗಳ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಅವಳು ಅಸಹಾಯಕತೆಯಿಂದ ಕೂಗುತ್ತಿದ್ದಾಳೆ. ಆಕೆಯ ಜೊತೆಗಿದ್ದ ಆಕೆಯ ಪ್ರಿಯಕರ ಈ ದುಷ್ಟರ ಎದುರು ಮುದುಡಿ ಹೋಗಿದ್ದಾನೆ. ಅವಳು ಕಿರುಚುತ್ತಿದ್ದಾಳೆ. ಇವಳ ಮುಚ್ಚಿದ ಕಣ್ಣೆವೆ ಛೇದಿಸಿ ಹನಿಗಳು ಕೆನ್ನೆಗಳ ಮೇಲೆ ಅಸಹಾಯಕತೆಯ ಗೆರೆ ಬರೆಯುತ್ತಿವೆ.
      ಅಷ್ಟರಲ್ಲಿ ಅವರಲ್ಲೊಬ್ಬ ಇವಳನ್ನು ನೋಡಿದ. ಎತ್ತರದ ನಿಲುವು...., ಸುಂದರ ಮೈಕಟ್ಟು.., ಬಳುಕುವ ಬಳ್ಳಿಯಂತಿರುವ ಇವಳು ಸುಂದರಿ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಅವರು ಆ ಹುಡುಗಿಯನ್ನು ಕೈ ಬಿಟ್ಟು ಇವಳ ಬಳಿ ಓಡೋಡಿ ಬಂದರು. ಕಾಡುಮೃಗಗಳಿಂದ ತಪ್ಪಿಸಿಕೊಂಡಂತೆ ಇವರ ಕೈಗೆ ಸಿಲುಕಿ ನಲುಗುತ್ತಿದ್ದ ಹುಡುಗಿ ಹಾಗು ಆಕೆಯ ಪ್ರಿಯಕರ ಕಾಡಿನಿಂದ ಊರಿನತ್ತ ಓಟ ಕಿತ್ತರು.
    ವಾವ್.......! ಎಂತಾ ಚೆಂದ ಇದ್ದೀ ಮಾರಾಯ್ತೀ...? ಇಷ್ಟೊಳ್ಳೇ ದೇಹಸಿರಿ ಇಟ್ಕೊಂಡು ಸಾಯೋಕ್ ಹೋಯ್ತೀದ್ದೀ....?! ಅಲಲಲೇ ....., ನಾವ್ ಬಿಟ್ಟೇವೆ ನಿನ್ನಾ....., ಹೆಂಗಿದ್ರೂ ಸಾಯ್ತೀ... ಸಾಯೋಕು ಮುನ್ನಾ ನಮ್ಗೊಂದಿಷ್ಟು ರಸದೌತಣ ಬಡಿಸು....., ಅವ ಆಕೆಯ ಹೆಗಲ ಮೇಲೆ ಕೈಯಿಟ್ಟ. ಅವಳು ಕಣ್ಬಿಟ್ಟಳು.
       ನಾಲ್ವರು ಹಸಿದ ಕಾಮಿಗಳು. ಒಬ್ಬಳೇ ಒಬ್ಬಳು ಸುಂದರಾಂಗಿ. ಸಿನೆಮಾ ತಾರೆಯರನ್ನೂ ಮೀರಿಸುವ ಚೆಲುವೆ ಅವಳು. ಪ್ರತಿಭಟಸೋಕೆ ಧ್ವನಿ ಇಲ್ಲ. ಅದರ ಅಗತ್ಯವೂ ಆಕೆಗೆ ಇದ್ದಂತಿರಲ್ಲಿಲ್ಲ. ನಿರ್ಭಾವುಕಳಾಗಿ ಅವರತ್ತ ನೋಡಿದಳು. ಅವರಿಗೆ ಕಾಯುವಷ್ಟು ಸಮಾಧಾನವೇ  ಇರಲ್ಲಿಲ್ಲ. ಅನಾಮತ್ತಾಗಿ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದ ಅವರು ಒಬ್ಬರ ನಂತರ ಒಬ್ಬರಂತೆ ಆಕೆಯ ಮೇಲೆರಗಿದರು. ಅವಳು ಪ್ರತಿಭಟಿಸಲ್ಲಿಲ್ಲ, ಕೂಗಾಡಲ್ಲಿಲ್ಲ, ಕನಿಷ್ಟ ಪಕ್ಷ ಒಂದು ಹನಿ ಕಣ್ಣೀರು ಕೂಡ ಆಕೆಯ ಕಣ್ಣಿನಿಂದ ಉದುರಲ್ಲಿಲ್ಲ.
     ಎಲ್ಲಾ ಮುಗಿದ ಮೇಲೆ ಅವರೆಲ್ಲಾ ಬಹಳ ದಣಿದಿದ್ದರು. ಒಂದೆಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅದುವರೆಗೂ ನಿರ್ಭಾವುಕಳಾಗಿದ್ದ ಆಕೆಯಲ್ಲಿ ಆಗ ಅದ್ಯಾವುದೋ ಜೀವಸಂಚಾರವಾದಂತೆ ಕಂಡು ಬಂತು. ಅವ್ಯಕ್ತ ತೃಪ್ತಿ ಸಣ್ಣ ನಗುವಾಗಿ ತುಟಿಯ ಮೇಲೆ ಲಾಸ್ಯಾವಾಡತೊಡಗಿತು.
       ತಂಡದ ನಾಯಕನಿಗೆ ಈಕೆಯ ಬಗ್ಗೆ ಅದೇನೋ ಕುತೂಹಲ.  ಅಲ್ವೇ.., ನಾವೆಷ್ಟೋ ಮಂದ್ ಹುಡ್ಗೀರ್ ನೋಡೀವಿ. ಆದ್ರೆ ನೀ ಒಂಥರಾ ವಿಚಿತ್ರ ಇದ್ದೀ ನೋಡು.  ಯಾಕ್ ಸಾಯೋಕ್  ಹೊಂಟೀ....? ಅಂತಾ ಕೆಣಕಿದ.
    ನಾನ್ ಸಾಯೋಕ್ ಹೊಂಟಿದ್ದೇ ಅಂತ್ ನಿಂಗ್ ಯಾರಂದ್ರೂ....? ಕೋಗಿಲೆಯಂತಹ ಧ್ವನಿ. ಅಲ್ಲೀವರೆಗೆ ಸುಮ್ಮನಿದ್ದ ಆಕೆ ಮಾತನಾಡಿದಳು. ಅವರೆಲ್ಲರಿಗೂ ಅಚ್ಚರಿಯೋ ಅಚ್ಚರಿ. ಅವಳು ಮಾತು ಮುಂದುವರೆಸಿದಳು. ಸಾವನ್ನೇ ಬಗಲಲ್ಲಿ ಕಟ್ಟಾಕಿಕೊಂಡಾಕೆ ನಾ. ಆದ್ರೆ ಸಾಯೋಕ್ ಮುನ್ನಾ ಒಳ್ಳೇ ಕೆಲಸ ಮಾಡಿ ಸಾಯೋಣ ಅಂಬುದ್ ನನ್ನಾಸೆ. ಅವಳ ಮಾತು ಒಗೊಟೊಗಟಾಗಿತ್ತು.  '' ಅದೇನಮ್ಮೀ ನಾಲಕ್ ಮಂದಿಗೆ ಸುಖ ಕೊಟ್ ಸಾಯೋಣಾಂತಿದ್ದೀಯೇನ್ ಮತ್ತೆ....., ಅವ ಗಹಗಹಿಸಿ ನಗತೊಡಗಿದ.
    ಅವಳು ನಗತೊಡಗಿದಳು. ಮೊದಲು ಸಣ್ಣದಾಗಿದ್ದ ನಗು ಭೋರ್ಗರೆಯತೊಡಗಿತು. ಹೊಟ್ಟೆ ಹಿಡಿದು ನಗಲಾರಂಭಿಸಿದಳು. ಇವರೆಲ್ಲರಿಗೆ ಅದ್ಯಾವುದೋ ಆತಂಕ... ಎಲ್ಲರ ಹಣೆಗಳ ಮೇಲೆ ಬೆವರು ಹನಿಗಟ್ಟಿದೆ. ತಣ್ಣಗಿದ್ದ ಆ ವಾತಾವರಣ ಯಾಕೋ ಬಿಸಿಯಾಗತೊಡಗಿದೆ. ಅವಳು ಮಾತನಾಡತೊಡಗಿದಳು.
   ಇದೇ ಮೊದಲಲ್ಲೋ ನಾಯಿಗಳ...,  ನಾಲ್ಕು ವರ್ಷದ ಕೆಳಗೆ ನೀವು ನಾಲ್ಕು ಮಂದಿ ನನ್ನನ್ನು ಕೆಡಿಸಿ ನನ್ನ ಗೆಳೆಯ ರಾಹುಲ್ ನನ್ನ ಇದೇ ಗುಂಡಿಗೆ ಎಸೆದಿದ್ರಿ. ನಂತ್ರ ನನ್ನ ನಗ್ನ ದೇಹದ ವಿಡಿಯೋ ಮಾಡಿ ಊರೂರಿಗೆ ಹಂಚಿದ್ರಿ......, ನೆನಪಿದೆಯೇನ್ರೋ....? ಈಗವಳ ಧ್ವನಿಯಲ್ಲಿ ಆಕ್ರೋಶವಿತ್ತು. ಗೆಳೆಯನ ನೆನಪು ಹಾಗು ಪ್ರತಿಕಾರದ ಕೆಚ್ಚು ಎದ್ದು ಕಾಣುತ್ತಿತ್ತು.
      ನೀ...ನೀ... ಅದೇ ಶಂಬಣ್ಣನ ಮಗಳಲ್ವಾ......? ಅವ ಗಾಬರಿಯಿಂದ ಕೇಳಿದ. ಹೌದೋ    ಆ ಶಂಬಣ್ಣನ ಮಗಳೇ ನಾನು. ಅಮ್ಮ ಇಲ್ಲದ ನನಗೆ ಅಪ್ಪನೇ ಎಲ್ಲಾ ಆಗಿದ್ದ. ನೀವು ಮಾಡಿದ ಕೆಲಸದಿಂದ ನೊಂದು ಅವ ವಿಷ ಕುಡಿದು ಸತ್ತ.  ಶೀಲವಂತೆಯಾಗಿ ಬದುಕುತ್ತಿದ್ದ ನನಗೆ ಸಮಾಜ ಸೂಳೆ ಪಟ್ಟ ಕಟ್ಟಿತು. ಅವಳ ಆಕ್ರೋಶ ಹೆಚ್ಚುತ್ತಲೇ ಇತ್ತು.   ಅವನು ಕೋಪ ತಣಿಸಲು ಮಾತು ತುಂಡರಿಸಿದ    ನೀ ಊರ್ ಬಿಟ್ಹೋಗಿಯಲ್ಲಾ..... ....? ಅನ್ನೋಕೆ ಯತ್ನಿಸಿದ
     ಹೇಳ್ತೀನೋ ಕೇಳು...., ಊರ್ ಬಿಟ್ಟ ನಾನು ಗರತಿಯಾಗಿ ಬದುಕ್ಲಿಕ್ಕೆ ಸಾಧ್ಯ ಆಗ್ಲಿಲ್ಲ. ನಾ ಸೂಳೇನೇ ಆದೆ.  ಹಾಳಾಗಿ ಹೋದೆ. ನೀವೂ ಕೂಡ ಇಲ್ಲಿಗೆ ಬರೋ ಹೆಣ್ಣು ಮಕ್ಕಳನ್ನ ಹಾಳು ಮಾಡ್ತಾನೇ ಇದೀರಾ ಅನ್ನೋದು ನನಗೆ ತಿಳೀತು. ಈಗ ಅದನ್ನ ನಿಲ್ಸಿ ಪುಣ್ಯ ಕಟ್ಟಿಕೊಳ್ಳೋಣ ಅಂತ ಬಂದೆ.
      ಈಗ ನಗುವ ಸರದಿ ಆ ನಾಲ್ವರದ್ದು. ಹೇಗೆ ಬೇಕೋ ಹಾಗೆ ನಗಲಾರಂಭಿಸಿದರು. ಹೆಣ್ಣುಗಳ ಬೇಟೆ ನಿಲ್ಲಿಸ್ತೀಯಾ....? ಈಗಷ್ಟೇ ಹದ್ದಿಗೆ ಮಾಂಸ ಆದಂಗೆ ಆಗೋಗಿದ್ದೀಯಾ...., ನೀನು...ನೀನು.....ನಿಲ್ಲುಸ್ತೀಯಾ....?  ಅವಳಲ್ಲಿ ಅಷ್ಟೇ ದೃಢತೆ ಇತ್ತು
     ಪಾಪಿಗಳ....., ನಿಮ್ಮ ಅಂತ್ಯ ಕಾಲ ಬಂದಿದೆ. ನಿಮ್ಮಿಂದ ಹಾಳಾಗಿ ಹೋದ ನನಗೆ ಈಗ ಹೆಚ್.ಐ.ವಿ ಇದೆ. ಈಗ ಸುಖ ಅಂತ ಅಂದ್ಕೊಂಡ್ರಲ್ಲಾ..., ಅದು ನಿಮ್ಮ ಜೀವನದ ಕೊನೇಯ ಸುಖ. ನೀವು ನನ್ನ ಹತ್ತಿರ ಬರುವ ಕೆಲವೇ ನಿಮಿಷಗಳ ಮೊದಲು ನನ್ನ ಕಥೆಯನ್ನ ನಿಮ್ಮೂರ ಮುಖಂಡರಿಗೆ ಹೇಳಿದ್ದೇನೆ. ಇನ್ನು ಈಗ ಏನಾಗಬಹುದು ಅನ್ನೋದನ್ನ ಕೂಡ ವಿವರಿಸಿದ್ದೇನೆ.  ಅವಳ ಮಾತು ಮುಗಿಯುವ ಹಂಥದಲ್ಲಿ ಆ ಊರಿನ ಹಿರಿಯರು ಕಾಡಿನೊಳಕ್ಕೆ ಬಂದರು. ಅವರ ಜೊತೆ ಕಾಡಿನಿಂದ ತಪ್ಪಿಸಿಕೊಂಡು ಹೋಗಿದ್ದ ಯುವ ಪ್ರೇಮಿಗಳು ಇದ್ದರು.
    ಆ ನಂತರ ಅವಳು ಅವರು ಸುತ್ತಮುತ್ತಲ ಕಾಡಿನಲ್ಲಿ ಎ್ಲಲಿಯೂ ಕಾಣ ಸಿಗಲ್ಲಿಲ್ಲ. ಹೆಚ್.ಐ.ವಿ ಪೀಡಿತ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ವಿಚಾರ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತ್ತು.
   ಆ ರಕ್ಕಸಗುಂಡಿಯಿಂದ ಏನೋ ದುರ್ನಾತ ಬರುತ್ತಿದೆ ಅಂತಾ ಜನ ಅರಣ್ಯಇಲಾಖೆಗೆ ಪದೇ ಪದೇ ದೂರು ನೀಡಿದ್ರೂ ಅವರು ಸ್ಥಳಕ್ಕೆ ಬರುವ ಗೋಜಿಗೆ ಹೋಗಲ್ಲಿಲ್ಲ. ಬದಲಿಗೆ ವಿಚಿತ್ರ ಕಾಯಿಲೆ ಬಂದು ಕೆಲವು ಕಾಡುಪ್ರಾಣಿಗಳು ಮೃತಪಟ್ಟಿವೆ. ಈಗಾಗಲೇ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂಬ ಷರಾ ಬರೆದು ಸುಮ್ಮನಾದ್ರು.

   

Monday, March 5, 2012

ಬಿಗ್ ಟೋಪಿ ಬಜಾರ್....,

ಪುರುಸೊತ್ತು ಇದ್ದಾಗ ಮನೆಯ ಮೂಲೆ ಮೂಲೆಗಳನ್ನೂ ಬಿಡದೆ ಕೆರೆದು ಕ್ಲೀನ್ ಮಾಡುವಾಕೆ ನಮ್ಮತ್ತೆ. ಬೆಳ್ಳಂಬೆಳಗ್ಗಿನ  ಐದೂವರೆಗೆ ಏಳುವ ಅರುವತ್ತೆರೆಡರ ಹರೆಯದ ನನ್ನತ್ತೆ ರತ್ನಮ್ಮ ದೇವರಿಗೆ ಕೈ ಮುಗಿದು ಕೈಯಲ್ಲಿ ಪೊರಕೆ ಹಿಡಿದರೆಂದರೆ ಮುಗೀತು....., ಅಂಗಳ ಹಾಗು ಮನೆ ಗುಡಿಸಿ, ಒರೆಸಿ ಸಾರಿಸಿ ಅಡುಗೆ ಮನೆ ಹೊಕ್ಕುವಾಗ ಹತ್ತೂವರೆ ದಾಟಿರುತ್ತೆ.  ಅದೇನಾಶ್ಚರ್ಯ....?!  ಇವತ್ತು ನನ್ನತ್ತೆ ಜೊತೆ ನನ್ನ ಅರ್ಧಾಂಗಿ ಕೂಡ ಸೇರಿಕೊಂಡಿದ್ದಾಳೆ.  ಇಬ್ಬರೂ ಹಳೇ ಪೊರಕೆಯಿಂದ ಹಿಡಿದು ಸಿಕ್ಕ ಸಿಕ್ಕ ನಿರುಪಯುಕ್ತ ವಸ್ತುಗಳನ್ನೆಲ್ಲಾ ಗುಡ್ಡೆ ಹಾಕುತ್ತಿದ್ದಾರೆ....! ಕುತೂಹಲ ತಡೆಯದ ನಾನು ಲೇ...... ಬೇರೆ ಮನೆಗೇನಾದ್ರೂ ಶಿಪ್ಟ್ ಆಗ್ತಾ ಇದೀವೇನೇ....? ಅಂತಾ ಪ್ರಶ್ನೆ ಮಾಡಿದೆ. ಅದಕ್ಕವಳು ಪೇಪರ್ ಓದ್ತಾ ಇದೀರಾ ತಾನೇ....? ಸುಮ್ನೆ ನಿಮ್ ಕೆಲ್ಸ ನೀವ್ ಮಾಡಿ...,  ಇದು ಕೊನೇಯ ಚೀಲ ತುಂಬಿ ಬಿಡ್ತೀನಿ... ನಮ್ಮ ತಂಟೆಗೆ ಬರಬೇಡಿ...., ಅಂತಾ ಮತ್ತೆ ತನ್ಮಯಳಾಗಿಬಿಡಬೇಕೆ....? ತೀರಾ ಕಸಿವಿಸಿಯಾಯ್ತು.
   ಛಲ  ಬಿಡದ ನಾನು ಅಲ್ವೇ...., ಕೊನೇಯ ಚೀಲ ಅಂತಾ ಇದೀಯ ಮನೇಲಿರೋ ಮತ್ತೊಂದು ನಿರುಪಯುಕ್ತ ಕಾಸ್ಟ್ಲೀ ಹಳೇ ವಸ್ತುವೊಂದನ್ನ ಮರೆತೇ ಬಿಟ್ಟೆಯಲ್ಲಾ....? ಇರು, ಚೀಲ ತರ್ತೀನಿ ..., ಅಂತಾ ಎದ್ದು ಹೊರಟೆ.   ಅದುವರೆಗೂ ತನ್ನದೇ ಲೋಕದಲ್ಲಿ ಕಳೆದು ಹೋಗಿದ್ದ ನನ್ನ ಮನದನ್ನೆ ಹಾಂ, ಏನ್ರೀ ಅದು.....? ಅಂದಾಗ ಗಾಬರಿಬೀಳಬೇಡ್ವೇ..., ಹಳೇ ವಸ್ತುಗಳನ್ನ ತುಂಬ್ತಾ ಇದ್ದಾರಲ್ಲಾ...., ನಿಮ್ಮಮ್ಮ ಅವರನ್ನೂ ತುಂಬಿಬಿಡು ಅಂತಂದು ಎಕರಾಮಕರಾ ಉಗಿಸಿಕೊಂಡೆ.
   ಅಷ್ಟರಲ್ಲಿ ಮನೆ ಮುಂದೆ ಲಾರಿಯೊಂದು ಬಂದು ನಿಂತ ಸದ್ದಾಯಿತು. ನಮ್ಮತ್ತೆ ಖುಷಿಖುಷಿಯಾಗಿ ಹೊರಗೋಡಿದವರೇ ಲಾರಿಯಲ್ಲಿ ಬಂದವರನ್ನು '' ಬನ್ನಿ ಬನ್ನಿ ಒಳಗ್ ಬನ್ನಿ ....., ಅಂತಾ ಸ್ವಾಗತಿಸಿದ್ದಾಯ್ತು.  ಹಾಗೆ ಒಳಗಡಿಯಿಟ್ಟ ಪುಣ್ಯಾತ್ಮರು ನನ್ನ ಅತ್ತೆ ಹಾಗು ನನ್ನಾಕೆ ಜೋಡಿಸಿದ್ದ ಹಳೇಯ ವಸ್ತುಗಳನ್ನೆಲ್ಲಾ ಲೆಕ್ಕ ಹಾಕತೊಡಗಿದರು. ಟೈರ್ ಗೆ ಐವತ್ತು.., ಪೇಪರ್ ಕೇಜಿಗೆ ಮೂವತ್ತು..., ಕಬ್ಬಿಣ  ಎಪ್ಪತ್ತು...., ಅದಕ್ಕಿಷ್ಟು ಇದ್ಕಕಿಷ್ಟು..., ಏನೇನೋ ಲೆಕ್ಕಾಚಾರ. ಪೇಪರ್ ತೂಕ ಮಾಡಲು ಶಾಂತಿನಗರ ಸರ್ಕಲ್ ನಿಂದ ಚಿಕನ್ ಅಂಗಡಿ ಕೀರ್ತಿ ತನ್ನ  ಎಲೆಕ್ಟ್ರಾನಿಕ್ ಸ್ಕೇಲ್ ತಂದು ಕೊಟ್ಟು ಉಪಕಾರ ಮಾಡಿದ. ಸುಮಾರು ಅರ್ಧ ಘಂಟೆ ಲೆಕ್ಕಾಚಾರ ಮಾಡಿದ ಆ ತಂಡದ ಮುಖ್ಯಸ್ಥ ಕಟ್ಟ ಕಡೇಯದಾಗಿ ನನ್ನತ್ತ ನೋಡಿ ಮುಗುಳ್ನಕ್ಕ.
       '' ಸಾರ್ ನಾವು ಬಿಗ್ ಟೋಪಿ ಬಜಾರ್ ನವ್ರು... ನೀವೂ.....ಅದೇ ಇವ್ರಲ್ವಾ....? ಅಂತ ಕಣ್ಣರಳಿಸಿದ. ನಾನೂ ಕೂಡ ಅಷ್ಟೇ ವಿನಮ್ರನಾಗಿ ಹಾಂ...ಹಾಂ...  ನಾನೂ ....ಅದೇ ಅವ್ರೇ...ಅಂತಾ ಕ್ಲಿಯರ್ ಮಾಡಿಬಿಟ್ಟೆ. ಅಷ್ಟಕ್ಕೆ ಮಾತು ನಿಲ್ಲಿಸಿದ ನನ್ನ ಶ್ರೀಮತಿಗೆ ಮೇಡಂ ಎಲ್ಲಾ ಸೇರಿ ನೈನ್ಟೀನ್ ಥೌಸೆಂಡ್  ನೈನ್ ನೈನ್ಟೀಪೈವ್ ಆಗಿದೆ. ಸಾರ್ ನಮಗೆಲ್ಲಾ ಪರಿಚಯ  ಇರೋ ಕಾರಣ ಫೈವ್ ರುಪೀಸ್ ಪ್ರೀ ಇರ್ಲಿ ಬಿಡಿ. ಥಾಂಕ್ಯು ಮೇಡಂ..., ನೀವು ನಮ್ಮ ಬಿಗ್ ಟೋಪಿ ಬಜಾರ್ ಗೆ ಬಂದು ಈ ನೈನ್ಟೀನ್ ಥೌಸೆಂಡ್  ನೈನ್ ನೈನ್ಟೀಪೈವ್ ರುಪೀಸ್ ನ ಕೂಪನ್ ಬಳಸಿ ಶಾಪಿಂಗ್ ಮಾಡ್ ಬಹುದು.  ಓ.ಕೆ ಬೈ ಸಾರ್ ಎನ್ನುತ್ತಾ ಕೈಯಾಡಿಸುತ್ತಿದ್ದವ ಚಪ್ಪಲಿ ಸ್ಟ್ಯಾಂಡ್ ನಲ್ಲಿದ್ದ ನನ್ನ ಕಿತ್ತು ಹೋದ ಹಳೇ ಲೆದರ್ ಚಪ್ಪಲಿಯನ್ನು ಕೈಗೆತಿಕೊಂಡ. ಸರ್, ಇಫ್ ಯೂ ಡೋಂಟ್ ಮೈಂಡ್ ಇದನ್ನೂ ನಾನು ತಗೋಬಹುದಾ....? ಬೂಸ್ಟ್ ಹತ್ತಿದ್ದ ಚಪ್ಪಲಿಯನ್ನು ಅವ ಮೇಲೆತ್ತಿ ಹಿಡಿದುಕೊಂಡು ಕೇಳಿದ ರೀತಿ ನಿಜಕ್ಕೂ ಗಾಬರಿ ಬೀಳಿಸುವಂತಿತ್ತು.
     '' ಅಲ್ಲಯ್ಯಾ ಹಳೇ ಚಪ್ಪಲಿ ಕಣೋ ಅದು...., ಬಿಕ್ಷುಕರೂ ಹಾಕ್ಕೊಳ್ಳೋಲ್ಲಾ...., ದೃಷ್ಟಿ ಕಟ್ಟೋಕೆ ಅಂತಾ ಇಟ್ಟಿದ್ದೆ ಅಂತಾ ಸಮಜಾಯಿಷಿ ನೀಡಿದೆ. ಅದಕ್ಕವನು ನೋ ಸಾರ್ ನಮ್ ಬಿಗ್ ಬಾಸ್ ಗೆ ಇಂತಹ ಹಳೇ ಚಪ್ಪಲಿ, ಹರಿದ ಚಡ್ಡಿ, ಸೇರಿದಂತೆ ಗಬ್ಬು ಗಬ್ಬಾಗಿರುವ ಸಾಮಾನುಗಳೆಂದರೆ ಭಾರೀ ಇಷ್ಟ. ಕ್ಯಾನ್ ಐ ಹ್ಯಾವ್ ಇಟ್ ಪ್ಲೀಸ್ ಅಂತಾ ಗೋಗರೆದ.
   ಪಕ್ಕದಲ್ಲೇ ನಿಂತಿದ್ದ ನನ್ನ ಮಡದಿ ನನ್ನ ಪಕ್ಕೆ ತಿವಿದು '' ರ್ರೀ.., 20 ಸಾವಿರಕ್ಕೆ ಕೂಪನ್ ಕೊಟ್ಟಿದ್ದಾರೆ...ಪಿಟ್ಟಾಸಿ ಥರಾ ಆಡ್ಬೇಡಿ ಕೊಟ್ಬಿಡಿ ಅನ್ನೋ  ಆದೇಶ ನೀಡಿದ್ಲು. ನಾನೂ ಕೂಡ ಹೂಂ ಅಂದುಬಿಟ್ಟೆ.
       ಮರುದಿನ ಸಂಭ್ರಮವೋ ಸಂಭ್ರಮ. ಮಕ್ಕಳು ಮರಿಗಳನ್ನೆಲ್ಲಾ ಕಟ್ಟಿಕೊಂಡು ಬಿಗ್ ಟೋಪಿ ಬಜಾರಿಗೆ ಹೋಗಿದ್ದೇ ಹೋಗಿದ್ದು. 20 ಸಾವಿರದ ಐಟಂಗಳೆಂದರೆ ಸಾಮಾನ್ಯನಾ....? ಓವೆನ್ನೂ..ಕುಕ್ಕರ್ರೂ..., ಪ್ರಿಜ್ಜು...., ಅದೂ ಇದೂ ಎಲ್ಲಾ ಕನಸೋ ಕನಸು. ಬಾಗಿಲಲ್ಲಿ ಸಿಕ್ಕ ಯಾರೋ ಮ್ಯಾನೇಜರ್ '' ಸರ್ ನೀವೂ...? ಉದ್ಘಾರವೆಳೆದ. ನಾನು ತಕ್ಷಣನೇ ಹಾಂ..., ಅವ್ರೇ ನಾನು ಅಂದೆ.
ಸರ್, ಅಕ್ಚುವಲಿ ನಾನು ಈ ಕೂಪನ್ ಬಗ್ಗೆ ನಿಮಗೊಂದಿಷ್ಟು ಎಕ್ಸ್ ಪ್ಲೈನ್ ಮಾಡ್ಬೇಕು ಅಂತ ಶುರುವಿಕ್ಕಿಕೊಂಡ. '' ನಿಮಗೆ ಈ ಕೂಪನ್ ಗಳು ವರ್ಕ್ ಔಟ್ ಆಗ್ಬೇಕು ಅಂತಾ ನಾವು ನಿಮ್ಮ ಖರೀದಿಯ ಮೇಲೆ 30 ಪರ್ಸೇಂಟ್ ಡಿಸ್ಕೌಂಟ್ ಇಟ್ಟಿದ್ದೇವೆ. ಅಂದ್ರೆ ನೀವು ಸಾವಿರ ರೂಪಾಯಿ ಬಿಸಿನೆಸ್ ಮಾಡಿದ್ರೆ ನಿಮ್ಮ ಕೂಪನ್ ಗಳಲ್ಲಿ ಮುನ್ನೂರು ರೂಪಾಯಿ ಲೆಸ್ ಆಗುತ್ತೆ. ಹತ್ತು ಸಾವಿರಕ್ಕೆ ಮೂರುಸಾವಿರ ಇಪ್ಪತ್ತಕ್ಕೆ ಆರು, ಮೂವತ್ತಕ್ಕೆ ಒಂಬತ್ತು.... ಈ ರೀತಿ ಕಮಿಟ್ ಮೆಂಟ್ ಸಾರ್......ಅಂತ ನಸುನಕ್ಕ.        ಅಯ್ಯೋ ನಿನ್ ಕಮಿಟ್ ಮೆಂಟ್ ಗಿಷ್ಟು....., ಅಂತಾ ಮನಸ್ಸಲ್ಲೇ ಅಂದುಕೊಂಡವ ಬಿಗ್ ಟೋಪಿ ಬಜಾರ್ ನ ಮೂರನೇ ಮಹಡಿಯಲ್ಲಿದ್ದ ನನ್ನ ಪತ್ನಿಶಿರೋಮಣಿಯತ್ತ  ಓಡೋಡಿ ಬಂದು ಏದುಸಿರು ಬಿಡುತ್ತಾ ವಿಷಯವನ್ನು ವಿವರಿಸಿದೆ. ನಿನ್ ಇಪ್ಪತ್ತು ಸಾವಿರ ಕೂಪನ್ ಮನೆ ಹಾಳಾಗಿ ಹೋಗ್ಲಿ...., ನನ್  ಎಪ್ಪತ್ತು ಸಾವಿರ  ಎಕ್ಕುಟ್ಟು ಹೋಗುತ್ತೆ ಬಾರೇ... ಅಂತಾ ಗೋಗರೆದೆ.
    ಪೆಚ್ಚುಪೆಚ್ಚಾಗಿ ನನ್ನತ್ತ ನೋಡಿದ ನನ್ನವಳು '' ರ್ರೀ ಅಲ್ನೋಡ್ರೀ...ಎದುರು ಮನೆ ಪಾರ್ವತಕ್ಕ, ಮೀನಾಕ್ಷಿ, ವನಜಾ ಎಲ್ರೂ ಅವರವರ ಮನೆಯವ್ರ ಜೊತೆ ಬಂದಿಲ್ವಾ....?
       ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ಬಿಗ್ ಟೋಪಿ ಬಜಾರ್ ನ ಹಳೇ ಸಾಮಾನ್ ಕೂಪನ್ ನಿಂದ ಸುಮಾರು ಅರುವತ್ತು ಸಾವಿರ ಸಾಲದ ಹೊರೆ ನನ್ನ ಹೆಗಲ ಮೇಲೇರಿತ್ತು.   ದೂರದಲ್ಲಿ ಎದುರು ಮನೆ ಪಾರ್ವತಕ್ಕ, ಮೀನಾಕ್ಷಿ, ವನಜಾ ಎಲ್ಲರ ಗಂಡಂದಿರು ಬೆಪ್ಪುತಕ್ಕಡಿಗಳಂತೆ ನಿಂತಿದ್ದು ಕಂಡು ಒಳಗೊಳಗೇ ನಗು ಬಂತು.

Tuesday, February 21, 2012

ಅಬಲೆ.....,

ಪತ್ರಿಕೆಗಳ ಮೇಲೆ ಕಣ್ಣು ಹಾಯಿಸುತ್ತಿದ್ದ ವಿಕಾಸ್ ಇನ್ನೇನು ಮನೆಗೆ ಹೊರಡಬೇಕು ಎಂದುಕೊಳ್ಳುವಷ್ಟರಲ್ಲಿ ಆ ಯುವತಿ ಕಛೇರಿಯ ಒಳಗಡಿಯಿಟ್ಟಳು. ಸುಮಾರು 22 ರಿಂದ 26 ರ ವೊಳಗಿನ ತರುಣಿ.  ವಿಷಾದ ತುಂಬಿದ್ದ ಅವಳ ಮುಖವನ್ನು ಕಂಡಾಕ್ಷಣವೇ ಇದು ಲವ್ ಫೆಲ್ಯೂರ್ ಕೇಸ್ ಇರಬೇಕು ಅನ್ನೋದು ಅವನಿಗೆ ಹೊಳೆದಿತ್ತು. '' ಸಾರ್, ವಿಕಾಸ್ ಅಂದ್ರೆ ನೀವೇನಾ...? ಮೌನ ಮುರಿದ ಹುಡುಗಿಗೆ ಆತ ಹೌದು ಎನ್ನುವ ಉತ್ತರ ಕೊಟ್ಟ. ಹೇಳಿ ಏನಾಗಬೇಕು....?
   ಸಾರ್..., ಹಾಗೆಂದ ಆಕೆ  ಕೆಲಕಾಲ ಜೋರಾಗಿ ಅಳಲಾರಂಭಿಸಿದಳು. ವಿಕಾಸ್ ಆಕೆಯನ್ನು ತಡೆಯುವ ಪ್ರಯತ್ನ ಮಾಡಲ್ಲಿಲ್ಲ. ಯಾಕೇಂದ್ರೆ ಆಕೆಯ ಮನಸ್ಸು ಹಗುರಾಗುವವರೆಗೆ ಅವಳು ಅಳದಿದ್ದರೆ ಪೂರ್ತಿ ಕಥೆ ಕೇಳಲು ಇಡೀ ದಿನ ಬೇಕಾಗುತ್ತೆ. ತನ್ನಷ್ಟಕ್ಕೆ ತನ್ನನ್ನು ಸಮಾಧಾನ ಮಾಡಿಕೊಂಡ ಅವಳು ಮಾತಿಗೆ ಶುರುವಿಕ್ಕಿಕೊಂಡಳು.
ಸಾರ್ ನನ್ನ ಹೆಸರು ನಯನ ಅಂತಾ, ಹೊಳೆನರಸೀಪುರದವಳು.  ಚನ್ನಪ್ಪ ಹಾಗು ಸುಮಿತ್ರ ಅನ್ನೋ ಲಿಂಗಾಯಿತ ದಂಪತಿಗಳು ನನ್ನನ್ನ ಬಾಲ್ಯದಲ್ಲೇ ದತ್ತು ತೆಗೆದುಕೊಂಡು ಸಾಕಿ ಬೆಳೆಸಿದ್ದಾರೆ. ನಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಅಶೋಕ ಅನ್ನೋ ನೀಚ ನನ್ನನ್ನು ಕಳೆದ 9 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದ. ......, ಆಕೆ ಮಾತನಾಡುತ್ತಿದ್ದಾಗ ವಿಕಾಸ್ ಕಛೇರಿಯ ಜವಾನ ಕೀರ್ತಿ ಒಳಗಡಿಯಿಟ್ಟ. ಆತನನ್ನು ಕಂಡ ನಯನ ಕೆಲಕಾಲ ವಿಚಲಿತಳಾದಳು.  ಅರ್ಧಕ್ಕೇ ಮಾತು ತುಂಡರಿಸಿದ ಅವಳು ಸಾರ್ ನಾನು ಬರ್ತೀನಿ ಸಾರ್ ನಿಮ್ಮತ್ರ ಇನ್ನೊಂದ್ಸಲ ಫೋನ್ ಮಾಡಿ ಮಾತಾಡ್ತೀನಿ ಅಂತಾ ಹೊರಡೋಕೆ ಪ್ರಯತ್ನಿಸಿದಳು. ಆದರೆ ಆಕೆಯನ್ನು ತಡೆದ ವಿಕಾಸ್ ಕುಳಿತುಕೊಳ್ಳುವಂತೆ ಸೂಚಿಸಿ ಕೀರ್ತಿಗೆ ಬೇರೆ ಕೆಲಸ ಹಚ್ಚಿ ಹೊರಗಟ್ಟಿದ. ಆತ ಹೊರಹೋದ ನಂತರ ನಯನ ಮತ್ತೆ ತನ್ನ ಕಥೆ ಮುಂದುವರೆಸಿದಳು
  ಪ್ರೀತಿ ಅನ್ನೋ ಹೆಸರಲ್ಲಿ ನನ್ನನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡ ಅಶೋಕ ನನ್ನ ಹತ್ರ ಸಾಕಷ್ಟು ಹಣ ತಗೋಂಡು ಮಜಾ ಉಡಾಯಿಸ್ತಾ ಇದ್ದ. ಆದ್ರೆ ಮದುವೆ ವಿಚಾರ ಬಂದಾಗ ಮಾತ್ರ ಏನೇನೋ ಸಬೂಬು ಹೇಳಿ ಜಾರಿಕೊಳ್ತಾ ಇದ್ದ. ಕಳೆದ ಏಳು ತಿಂಗಳ ಹಿಂದೆ ಅವನಿಗೆ ಅವನ ಮನೆಯಲ್ಲಿ ಮದುವೆ ಮಾಡೋ ಏರ್ಪಾಟು ನಡಿತಾ ಇದೇ ಅಂತಾ ಗೊತ್ತಾದಾಗ ರಂಪ ಮಾಡಿದೆ. ಅದಕ್ಕೆ ಅವನು ನನ್ನನ್ನ ಬೆಂಗಳೂರಿನ ಮಾಯಸಂದ್ರದಲ್ಲಿರೋ ಮುನೇಶ್ವರ ಟೆಂಪಲ್ ಗೆ ಕರ್ಕೊಂಡು ಹೋಗಿ ಮದುವೆ ಆದ. ಆವಾಗ ತೆಗೆದ ಫೋಟೋಗಳು ಸಾರ್ ಇವು....., ಒಂದಷ್ಟು ಫೋಟೋಗಳನ್ನ ವಿಕಾಸ್ ಟೇಬಲ್ ಮೇಲೆ ಹರವಿದಳು.
ಪೋಟೋಗಳನ್ನು ಸೂಕ್ಷ್ಮವಾಗಿ ನೋಡಿದ ವಿಕಾಸ್ '' ಸರಿ ಮುಂದೇನಾಯ್ತು ಹೇಳಮ್ಮ...'' ಎಂದ.
       ಮದುವೆಯಾದ ತಕ್ಷಣ ಅಮಾಯಕನ ರೀತಿ ನಾಟಕವಾಡಿದ ಅವನು  '' ಮುಂದಿನ ತಿಂಗಳು ನನ್ ತಂಗಿ ಮದುವೆ ಇದೆ. ಅಲ್ಲೀವರೆಗೂ ನೀ ನಿಮ್ಮನೇಲೇ ಇರು. ನಂತ್ರ ನಾನು ನನ್ನ ಮನೆಯವರನ್ನ ಒಪ್ಪಿಸಿ ನಿನ್ನನ್ನ ಕರ್ಕೊಂಡು ಹೋಗ್ತೀನಿ ಅಂತಾ ಗೋಗರೆದ. ನಾನೂ ಅವನ ಮಾತು ನಂಬಿ ಅದರಂತೆ ಮನೆಗೆ ಹೋಗೋಕೆ ಒಪ್ಪಿಕೊಂಡೆ. ಹಾಗೇ ನನ್ನನ್ನು ಮನೆಗೆ ಬಿಟ್ಟ ಅಶೋಕ ಮತ್ತೆ ವಾಪಾಸ್ ಬರಲೇ ಇಲ್ಲ. ಈಗ ಚನ್ನರಾಯಪಟ್ಟಣದ ಬಾಗೇಹೊಳೆ ಗ್ರಾಮದ ಹುಡುಗಿ ಜೊತೆ ಅವನ ಮದುವೆ ತಯಾರಿ ನಡೀತಾ ಇದೆ ಸಾರ್....., ದಯವಿಟ್ಟು ಹೆಲ್ಪ್ ಮಾಡಿ ಸಾರ್....ಆಕೆ ಮತ್ತೆ ಕಣ್ಣೀರಾದಳು.
ಹೇದರಬೇಡಮ್ಮಾ ನಿನ್ನ ಗೋಳಿನ ಕಥೆಯ ಬಗ್ಗೆ ನಾವು ನಮ್ಮ ಪತ್ರಿಕೇಲಿ ಬರೀತೀವಿ. ನೀನು ಹೊಳೆನರಸೀಪುರದ ಡಿ.ವೈ.ಎಸ್.ಪಿ ಸೇರಿದಂತೆ ಅಲ್ಲಿರೋ ಸರ್ಕಲ್ ಇನ್ಸ್ ಪೆಕ್ಟರ್ ಸೂರಪ್ಪನಿಗೆ ಕಂಪ್ಲೇಂಟ್ ಕೊಡು. ಅವರು ನಿನಗೆ ಹೆಲ್ಪ್ ಮಾಡುತ್ತಾರೆ ಎಂದು ಸಲಹೆ  ನೀಡಿದ. ಅಷ್ಟರಲ್ಲಾಗಲೇ ಆಫೀಸಿಗೆ ಮರಳಿದ್ದ ಕೀರ್ತಿ ಬಾಗಿಲ ಮರೆಯಲ್ಲಿ ನರಿಯಂತೆ ನಿಂತು ಕಿವಿಯನ್ನು ಒಳತೂರಿಸಿ ಎಲ್ಲವನ್ನೂ ಕೇಳಿಸಿಕೊಂಡಿದ್ದ.
  ಹೀಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಹೋದ ನಯನಳಿಗೆ ವಿಜಯಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಗದೀಶ ಸಾಥ್ ನೀಡಿದ. ಸೂರಪ್ಪ ಅಶೋಕನನ್ನು ಕರೆಸಿ ಹೀನಾಮಾನವಾಗಿ ಬೈದು ಬುದ್ದಿ ಹೇಳಿದ. ಮದುವೆ ಮಾಡಿಕೊಳ್ಳೋಲ್ಲ ಅಂದ್ರೆ ಅರೆಸ್ಟ್ ಮಾಡುತ್ತೇನೆ ಅಂತಾ ಬೆದರಿಸಿದ. ತನಗಿನ್ನು ಮೋಸವಾಗಲಾರದು ಎಂದು ನಂಬಿದ ನಯನ ನಿಟ್ಟುಸಿರು ಬಿಟ್ಟಳು.
ಅದೊಂದು ರಾತ್ರಿ ಬರೀ ಚರ್ಚೆ, ಮಾತುಕತೆ, ಭರವಸೆಗಳಲ್ಲೇ ಕಳೆದು ಹೋಯಿತು. ಮರುದಿನ ಅಶೋಕನನ್ನು ಕರೆ ತರಲು ಸ್ಟೇಷನ್ ಗೆ ಹೋಗಿದ್ದ ನಯನಳಿಗೆ ಅಚ್ಷರಿ ಕಾದಿತ್ತು. ಅಶೋಕನ ವಿರುದ್ದ ಮಾತನಾಡುತ್ತಿದ್ದ ವಿಜಯಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಗದೀಶ '' ಒಂದು ಲಕ್ಷ ಕೊಡಿಸುತ್ತೇನೆ ರಾಜಿ ಮಾಡಿಕೋ..ಅವನು ಇನ್ನೊಂದು ಮದುವೆ ಆಗುತ್ತಾನೆ ಜೊತೆಗೆ ನಿನ್ನನ್ನೂ ಇಟ್ಟುಕೊಳ್ಳುತ್ತಾನೆ ಎಂದ. ಇದನ್ನೊಪ್ಪದ ನಯನ ಅಲ್ಲಿದ್ದ ಸೂರಪ್ಪನ ಬಳಿ ನ್ಯಾಯ ಕೇಳಿದರೆ ಆತ ಅಶೋಕ ತಪ್ಪಿಸಿಕೊಂಡು ಹೋಗಿದ್ದಾನೆ. ನಿನಗೆ ಸಿಕ್ಕರೆ ಹಿಡ್ಕೊಂಡ್ ಬಂದು ಕೊಡು ಕೇಸ್ ಹಾಕುತ್ತೇನೆ ಎಂದ. ನಯನಳಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ವಿಕಾಸ್ ವಿಕಾಸ ಪತ್ರಿಕೆಯಲ್ಲಿ ಅವಳಂದುಕೊಂಡಂತೆ ಸುದ್ದಿ ಪ್ರಕಟವಾಗಿರಲ್ಲಿಲ್ಲ. ಕೀರ್ತಿ ಹಾಗು ಅಶೋಕ ಬಾಲ್ಯದ ಗೆಳೆಯರಾಗಿದ್ದ ಕಾರಣ ಎಡಿಟರ್ ವಿಕಾಸ್ ನ ಮನವೊಲಿಸುವಲ್ಲಿ ಕೀರ್ತಿ ಯಶಸ್ವೀಯಾಗಿದ್ದ. ವಿಕಾಸ್ ಗೆ 30 ಸಾವಿರ, ಜಗದೀಶನಿಗೆ 20 ಸಾವಿರ, ಸೂರಪ್ಪನಿಗೆ 50 ಸಾವಿರದ ಲೆಕ್ಕದಲ್ಲಿ ಒಂದು ಲಕ್ಷಕ್ಕೆ ಅಮಾಯಕ ಹೆಣ್ಣು ಮಗಳು ನಯನಳ ಬದುಕು ಹರಾಜಾಗಿತ್ತು.

Monday, February 13, 2012

ಸೆರೆ.......,

ನೀ ಅಂದುಕೊಂಡಂತೇ ಯಾವುದೂ ಆಗಲಾರದು. ಬೇಡದ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದೀಯಾ...., ಸುಮ್ಮನೆ ನಮ್ಮ ಜೊತೆ ಹೊರಡು ಅಪಾಯ ಹತ್ತಿರದಲ್ಲಿದೆ.....,
       ದೊಡ್ಡನ ಮಾತು ಕೇಳಿದರೂ ಕೇಳದವನಂತೆ ಗುಂಡ ಮೊರದಗಲದ ಕಿವಿಯಲುಗಾಡಿಸತೊಡಗಿದ.  ಅವನಿಗೆ ದೊಡ್ಡನ ಸಹವಾಸದಿಂದ ಹೊರಬಂದರೆ ಸಾಕು ಎಂಬಂತಾಗಿತ್ತು. ಯಾವಾಗಲೂ ಉಪದೇಶ ಮಾಡುತ್ತಾನೆ.., ಒಕ್ಕಣ್ಣ   ಇವನು. ಹೆಜ್ಜೆ ಇಡಬೇಕಾದರೂ ಬಗ್ಗಿ ನೆಲ ನೋಡಿ ನಡೆಯುತ್ತಾನೆ. ಇರುವೆಗಳನ್ನೂ ಕೊಲ್ಲದ ಪರಮ ಸಾಧು. ಆದರೂ ಜನ  ಇವನತ್ತ ಅನುಮಾನದ ನೋಟ ಬೀರುತ್ತಾರೆ.  ದೇಹದ ಗಾತ್ರದಲ್ಲಿ ಇಬ್ಬರೂ ಒಂದೇ ರೀತಿ ಇದ್ದೇವೆ. ಅವನಿಗೆ 60 ರ  ಆಜುಬಾಜು.., ನಾನಿನ್ನೂ ಇಪ್ಪತ್ತರ ತರುಣ.  ಹೊಳೆದಂಡೆಯಲ್ಲಿ ಸ್ನಾನ ಮಾಡಿ ಬಂದು ನಾ ನಿಂತರೆ ಮಿರ ಮಿರ ಮಿಂಚುವ ನನ್ನ ಅಂಗಸೌಷ್ಟವಕ್ಕೆ ಹಾಗು ನನ್ನ ಗಡಸುಗಾರಿಕೆಗೆ ಇಪ್ಪತ್ತು ಕಿಲೋಮೀಟರ್ ನಿಂದಲೂ ಮದನೆಯರು ಓಡೋಡಿ ಬರುತ್ತಾರೆ. ನನ್ನನ್ನು ಕಂಡರೆ ಊರ ಜನ ಬಿದ್ದೇನೋ ಕೆಟ್ಟೇನೋ ಅಂತಾ ಕಿರುಚಾಡಿಕೊಂಡು ಓಡುತ್ತಾರೆ.  ನನಗ್ಯಾರ ಭಯ....? ನಾನೇಕೆ ಹೆದರಬೇಕು.....?!.
 ಗುಂಡನ ಮನಸ್ಸಿನಲ್ಲಿ ವಿಚಾರಗಳು ವೇಗವಾಗಿ ಓಡುತ್ತಿದ್ದವು. ಅವನಂತೂ ಈ ಕಾಡು ಬಿಟ್ಟು ಕದಲಲಾರೆ ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದು ಬಿಟ್ಟಿದ್ದ.
       ಹೊರಡೋ ಕಂದ..,  ಇನ್ನು ಸಮಯ  ಇಲ್ಲ. ಬೆಳಕಾಗುವ ಮುಂಚೆ ನಾವು ಉಂಬಳಿ ಬೆಟ್ಟ ದಾಟಿ ಕೊಡಗಿನ ಕಾಡನ್ನು ಪ್ರವೇಶ ಮಾಡಬೇಕು. ನನಗೆ ಮೊದಲೇ ಸರಿಯಾಗಿ ದೃಷ್ಟಿ ಇಲ್ಲ..., ನಡೆಯುವ ಶಕ್ತಿ ಕೂಡ ಕಮ್ಮಿಯಾಗಿದೆ....., ದೊಡ್ಡನ ಮಾತು ಗುಂಡನಿಗೆ ಅಸಹನೀಯವಾಗತೊಡಗಿತು. ಸೊಂಡಿಲನ್ನು ಮೇಲೆತ್ತಿ ಜೋರಾಗಿ ಘೀಳಿಟ್ಟ ಅವ  ಇಲ್ಲಾ ನಾ ಬರೋಲ್ಲಾ..., ನಾನ್ಯಾಕೆ ಮನುಷ್ಯರಿಗೆ ಹೆದರಲಿ...? ಅವರಿಂದ ಏನೂ ಮಾಡೋಕೆ ಸಾಧ್ಯವಿಲ್ಲ.
    ಹೊತ್ತಿನ ಜೊತೆಗೆ ಆತಂಕ ಕೂಡ ಹೆಚ್ಚುತ್ತಿದೆ. ಸಹನೆ ಕಳೆದುಕೊಂಡ ದೊಡ್ಡ ತನ್ನ ಕೊಂಬಿನಿಂದ ಗುಂಡನ ತೊಡೆಗೆ ಬಲವಾಗಿ ತಿವಿದ '' ಕಾಗನೂರು, ಮಗ್ಗೆ, ಉಂಬಳಿಬೆಟ್ಟ ಸುತ್ತ ಮುತ್ತ  ಎಷ್ಟು ಮಂದಿ ನರಮಾನವರನ್ನ ಕೊಂದಿಲ್ಲ ನೀನು...? ನಿನ್ನಿಂದ ನಮ್ಮ  ಇಡೀ  ಸಂಕುಲಕ್ಕೇ ಅಪಾಯ ಶುರುವಾಗಿದೆ. ಈಗಾಗಲೇ ವೆಂಕಟೇಶ ಅನ್ನೋ ಮನುಷ್ಯ ನಿನ್ನ ಫೋಟೋ ತೆಗೆದುಕೊಂಡು ಹೋಗಿದ್ದಾನೆ. ನಿನ್ನನ್ನೇ ಸೆರೆ ಹಿಡಿಯೋಕೆ ಅಂತಾ ನೂರಾರು ಜನ ಬಂದಿದ್ದಾರೆ. ಹೊಳೆ ದಡದಲ್ಲಿ ಟೆಂಟ್ ಕೂಡ ಹಾಕಿದ್ದಾರೆ. ನಮ್ಮಿಂದ ಹೊರಹೋಗಿ ಜನರ ಜೊತೆ ಪಳಗಿರೋ ಅಭಿಮನ್ಯು, ಭರತ, ಅರ್ಜುನ, ಮೇರಿ ಸೇರಿದಂತೆ ಹಲವರು ಬಂದಿದ್ದಾರೆ. ಕಾಡನ್ನ ಕಾಯೋ ಮಂದಣ್ಣ ನಿನ್ನನ್ನ ಹಿಡಿಯದೇ ಈ ಜಾಗ ಬಿಟ್ಟು ಕದಲೋದಿಲ್ಲ ಅಂತಾ ಪ್ರಮಾಣ ಮಾಡಿದ್ದಾರೆ  ಹೀಗಿದ್ರೂ ಹುಡುಗಾಟ ಆಡ್ತೀಯಾ....? ಸುಮ್ಮನೇ ನಮ್ಮ ತಂಡದ ಜೊತೆ ನಡೆಯೋದು ಕಲಿ..,..., ಅಧಿಕಾರಯುತವಾಗಿ ಗದರಿದ. ಆದರೆ ಅದಾಗಲೇ ಸೊಕ್ಕಿ ಹೋಗಿದ್ದ ಗುಂಡನಿಗೆ ದೊಡ್ಡನ  ಈ ಯಾವುದೇ ಮಾತುಗಳು ಕಿವಿಯ ಮೇಲೆ ಬೀಳಲ್ಲಿಲ್ಲ. ಬದಲಿಗೆ ಆತ ಕಾಲು ಕೆದರಿ ದೊಡ್ಡನ ವಿರುದ್ದವೇ ಯುದ್ದಕ್ಕೆ ನಿಂತ. ದೊಡ್ಡನ ಒಕ್ಕಣ್ಣಿನಲ್ಲಿ ಹತಾಷೆಯ ಕಣ್ಣೀರು ಧಾರೆಯಾಗಿ ಸುರಿಯತೊಡಗಿತು.
         ವಂಶೋದ್ದಾರಕನಿವನು....., ಇರುವವರ ಪೈಕಿ ಅತ್ಯಂತ ಎತ್ತರ ಹಾಗು ಬಲಶಾಲಿ. ಆದ್ರೆ ಅಭಿಮನ್ಯುವಿನ ತಂಡದ ಎದುರು ಇವನ ಆಟ ನಡೆಯುವುದಿಲ್ಲ. ಹಠಕ್ಕೆ ಬಿದ್ದು ಅನ್ಯಾಯವಾಗಿ ಸೆರೆ ಸಿಗುತ್ತಾನೆ....., ಇಲ್ಲಾ ಇಲ್ಲಾ ಹಾಗಾಗಬಾರದು.  ಎಂದು ಅದೇನೋ ಲೆಕ್ಕಾಚಾರ ಹಾಕಿಕೊಂಡ ದೊಡ್ಡ ಅ್ಲಲಿಂದ ಹತ್ತು ಹೆಜ್ಜೆ ಮುಂದೆ ನಡೆದು ತನ್ನ ಹಿಂಡನ್ನು ತಲುಪಿದ. ನಂತರ ಚೋಮನಿಗೆ ಹಿಂಡಿನ  ಉಸ್ತುವಾರಿ ವಹಿಸಿ ಕೊಡಗಿನ ಕಾಡಿಗೆ ತೆರಳುವಂತೆ ಹೇಳಿ ಕಳುಹಿಸಿದ. ದೊಡ್ಡನ ಅಪ್ಪಣೆ ಮೇರೆಗೆ ಇಪ್ಪತ್ತೈದು ಆನೆಗಳು ಕೊಡಗಿನತ್ತ ಹೆಜ್ಜೆ ಹಾಕಿದವು.
   ಅದೊಂದು ರಾತ್ರಿ ಹತಾಷೆಯ ಜೊತೆಗೆ ಅತ್ಯಂತ ಭಾರವಾಗಿ ಕಳೆದು ಹೋಯಿತು. ಮರುದಿನ ಬೆಳಿಗ್ಗೆ ಉಂಬಳಿ ಬೆಟ್ಟದ ಸಮೀಪ ಜನರು ಗಿಜಿಗುಡುವ ಸದ್ದು....., ದೊಡ್ಡನನ್ನು ಕಂಡರೂ ಕಾಣದಂತೆ ಗುಂಡ ಕಾಡಿನಲ್ಲಿ ಬಗನೇ ಮರವನ್ನು ಮುರಿದು ತಿನ್ನುವುದರಲ್ಲಿ ತಲ್ಲೀನನಾಗಿದ್ದ.  ಅವನಿಂದ ಸ್ವಲ್ಪ ದೂರದಲ್ಲಿ ದೊಡ್ಡ ನಿಂತುಕೊಂಡಿದ್ದ.
     ಆಗ ಅವರಿಬ್ಬರ ನಡುವಿನ ಮೌನವನ್ನು ಭೇದಿಸುವಂತೆ ಗುಂಡಿನ ಭಾರೀ ಸದ್ದೊಂದು ಅಲ್ಲಿ ಪ್ರತಿಧ್ವನಿಸಿತು. ಗಾಬರಿಗೊಂಡ ಗುಂಡ ತಲೆಯೆತ್ತಿ ನೋಡಿದರೆ ಅಲ್ಲಿ ದೂರದಲ್ಲಿ ಕೋವಿ ಹಿಡಿದು ನಿಂತಿದ್ದ ಮನುಷ್ಯ ವೆಂಕಟೇಶ್ ಕಂಡ. ಇತ್ತ ಒಕ್ಕಣ್ಣ ದೊಡ್ಡ ಹುಚ್ಚೇರಿದಂತೆ ಕಾಡಿನೊಳಗೆ ಓಡತೊಡಗಿದ. ನೂರಾರು ಮಂದಿ ಮನುಷ್ಯರು ಅವನ ಹಿಂದೆ ಓಡತೊಡಗಿದರು. ಪ್ರಜ್ಞೆ ತಪ್ಪಿ ಬಿದ್ದ ದೊಡ್ಡನ ಮೇಲೆ ಕೆಲವರು ಜೋರಾಗಿ ನೀರು ಸುರಿಯುತ್ತಿದ್ದರೆ ಮತ್ತೆ ಕೆಲವರು ಅವನ ಬಾಲದಲ್ಲಿದ್ದ ಕೂದಲು ಕಿತ್ತುಕೊಳ್ಳತೊಡಗಿದ್ದರು. ಹೆದರಿದ ಗುಂಡ ಪೊದೆಗಳ ಮರೆಯಲ್ಲಿ ಅವಿತುಕೊಂಡ
        ಸಂಜೆಯ ಸುಮಾರಿಗೆ ದೂರದ ಗದ್ದೆಯೊಂದರಲ್ಲಿ ಅಭಿಮನ್ಯು ನೇತೃತ್ವದಲ್ಲಿ ನಾಲ್ಕಾರು ಆನೆಗಳು ದೊಡ್ಡನನ್ನು ತಿವಿದು ತಿವಿದು ಎಳೆದುಕೊಂಡು ಹೋಗುತ್ತಿದ್ದವು. ಅವನ ಕಾಲಿಗೆ ದೊಡ್ಡ ಸೆಣಬಿನ ಹಗ್ಗವನ್ನು ಬಿಗಿಯಲಾಗಿತ್ತು. ನೋವು ತಡೆಯಲಾರದೇ ಅವ ಚೀರಾಡುತ್ತಿದ್ದ.  '' ಗುಂಡಾ..., ಈಗಲಾದರೂ ಓಡು.. ತಪ್ಪಿಸಿಕೋ.. ಈ ಜನರು ನನ್ನನ್ನ ನೀನು ಅಂತಾ ತಿಳಿದುಕೊಂಡಿದ್ದಾರೆ...., ನಾ ನಿನಗಾಗಿ ಸೆರೆ ಸಿಕ್ಕಿದ್ದೇನೆ....ಓಡು...ಓಡು ತಪ್ಪಿಸಿಕೋ.....''
    ಅಭಿಮನ್ಯುವಿಗೆ ಎಲ್ಲಾ ಅರ್ಥವಾಗಿದ್ದರೂ ಮನುಷ್ಯರಿಗೆ ಅದನ್ನು ಹೇಳಲು ಸಾಧ್ಯವಿಲ್ಲ.  ಅಕಸ್ಮಾತ್ ಈತನನ್ನು ತಿವಿಯದೇ ಇದ್ದರೆ ಮೇಲಿರುವ ಮಾವುತ ಅಂಕುಶದಿಂದ ನನ್ನನ್ನು ತಿವಿಯುತ್ತಾನೆ..., ಹಾಗೆಂದುಕೊಂಡು ತನ್ನ ಕೆಲಸ ಮುಂದುವರೆಸಿದ
  ನೋವು ತಾಳದ ದೊಡ್ಡ ಘೀಳಿಡುತ್ತಲೇ ಇದ್ದ. ಕೊಡಗಿನ ಕಾಡಿನತ್ತ ಹೆಜ್ಜೆ ಹಾಕುತ್ತಿದ್ದ ಗುಂಡನ ಕಣ್ಣ ತುಂಬಾ ನೀರು ತುಂಬಿಕೊಂಡಿತ್ತು.

Monday, January 30, 2012

ಐಕಲೇ........!!???

ಸಂಜೆ ಮಬ್ಬುಗತ್ತಲಾಗುತ್ತಲೇ ತಳಮಳ ಆರಂಭಗೊಂಡಿತ್ತು. ಇಡೀ ಊರೆಲ್ಲಾ ಹುಡುಕಿದರೂ ಮಲ್ಲಿಯ ಸುಳಿವಿಲ್ಲ. ''ಮಲ್ಲಿಯನ್ನು  ಹುಡುಕಿ ಹೊಡ್ಕೊಂಡ್ ಬರ್ಲಿಲ್ಲಾ ಅಂದ್ರೆ ಮನೆಯೊಳಗೆ ಜಾಗ ಇಲ್ಲ....,'' ಅಪ್ಪನ ಕಡಕ್ ಮಾತು ಹಾಗು ಬುಸುಗುಡುವ ವಧನದ ನೆನಪಾಗಿ ಮತ್ತಷ್ಡು ಆತಂಕ ಹೆಚ್ಚಾಯ್ತು. ಇಷ್ಟಕ್ಕೆಲ್ಲಾ ನಮ್ಮಣ್ಣನೇ ಕಾರಣ ಬೇಡಾ ಬೇಡಾ ಅಂದ್ರೂ ಚಂದ್ರೇಗೌಡ ಮತ್ತೆ ಅಶ್ವಥೀ ಜೊತೆ ನನ್ನನ್ನೂ ಸಿನೇಮಾಕ್ಕೆ ಕರೆದುಕೊಂಡು ಹೋಗಿದ್ದ. ಮ್ಯಾಟನೀ ಶೋ ಮುಗಿಸಿ ಮನೆಗೆ ಬಂದಿದ್ದ ನಮಗೆ ನಮ್ಮ ಮನೆಯ ಎಮ್ಮೆ ಮಲ್ಲಿ ಇನ್ನೂ ಬಂದಿಲ್ಲ ಅಂತ ಅಮ್ಮ ಹೇಳಿದಾಗಲೇ ಗಾಬರಿಯಾಗಿತ್ತು.  ಅವತ್ತು ಶನಿವಾರದ ರಜಾದಿನ. ಹೇಮಾವತಿ ಪಾರ್ಮ್ ನ ಒಳಗೆ ಎಮ್ಮೆಯನ್ನು ಮೇಯಿಸಿಕೊಂಡು ಬರ್ತೀವಿ ಅಂತಾ ರೀಲ್  ಬಿಟ್ಟು ಸಿನೇಮಾಕ್ಕೆ ಹೋಗಿದ್ದೆವು. ವಾಪಾಸ್ ಬಂದು ನೊಡಿದ್ರೆ  ಮಲ್ಲಿ ಇರಲ್ಲಿಲ್ಲ. ಸರಿ, ಮನೆಗೆ ಹೋಗಿರಬಹುದು ಅಂತಾ ಅಂತ ಮನೆಗೆ ಬಂದ್ರೆ ಅಲ್ಲೂ ಕೂಡ ಇಲ್ಲ....! ನಮ್ಮಣ್ಣ ಅದೇನೇನೋ ಸುಳ್ಳು ಹೇಳಿದ್ರೂ ಅದು ವರ್ಕೌಟ್ ಆಗಲೇ ಇಲ್ಲ.  ಕತ್ತಲು ಹೆಚ್ಚಾಗುತ್ತಿತ್ತು, ಗಲ್ಲಿ ಗಲ್ಲಿಯಲ್ಲೂ ಮಲ್ಲೇ ಏಗೋ......, ಮಲ್ಲೀ ಏಗೋ......, ಅಂತಾ ನಾವು ಕೂಗುತ್ತಿದ್ದ ಧ್ವನಿ ಪ್ರತಿಧ್ವನಿಸುತ್ತಿತ್ತು.
      ಅದು ಸವಿಯಾದ ಮುಂಜಾವು ಚೆಂಬು ಹಿಡಿದು ಹಾಲು ಕರೆಯಲು ಕೊಟ್ಟಿಗೆಗೆ ತೆರಳಿದ್ದ ನಮ್ಮಮ್ಮ ಐಕಲೇ....ಐಕಲೇ.......!!?? ( ಕೊಂಕಣಿ ಭಾಷೆಯಲ್ಲಿ ಹಾಗೆಂದರೆ ಕೇಳಿಸ್ತಾ...? ಅಂತಾ. ಸಾಮಾನ್ಯವಾಗಿ ಕೊಂಕಣಿ ಗೃಹಿಣಿಯರು ಗಂಡನನ್ನು ಹಾಗೇ ಕರೆಯುತ್ತಾರೆ)  ಅಂತಾ ಒಂದೇ ಸವನೆ ಅರಚಾಡಲಾರಂಭಿಸಿದರು. ಬೆಚ್ಚನೆ ಕೌದಿ ಹೊದ್ದು ಮಲಗಿದ್ದ ನಮ್ಮಣ್ಣ ಚಂಗನೆ ಒಂದೇ ಜಿಗಿತಕ್ಕೆ ಮುಂಬಾಗಿಲಿನಿಂದ ಅಂಗಳಕ್ಕೆ ಹಾರಿದ. ಬೆಳಗ್ಗಿನ ಛಳಿ ಮೈ ಮೇಲೆ ಬಿದ್ದ ಕೂಡಲೇ ಮುಂದಾಗುವ ಅನಾಹುತ ಅರಿತ ನಾನೂ ಕೂಡ ಅಷ್ಟೇ ವೇಗದಲ್ಲಿ ಅವನನ್ನು ಹಿಂಬಾಲಿಸಿದೆ.
        ಅದಕ್ಕೆ ಬಲವಾದ ಕಾರಣ ಇತ್ತು. ಹಿಂದಿನ ದಿನ ನಡುರಾತ್ರಿಯವರೆಗೂ ಹುಡುಕಾಡಿದರೂ ನಮಗೆ ಮಲ್ಲಿ ಸಿಕ್ಕಿರಲ್ಲಿಲ್ಲ. ಸ್ಟ್ರೀಟ್ ಲೈಟ್ ಗಳೇ ಇಲ್ಲದ ಕಾಲವದು. ಬೀದಿನಾಯಿಗಳು ನಮ್ಮ ಮೇಲೆ ಹಸಿದ ಹೆಬ್ಬುಲಿಗಳಂತೆ ಧಾಳಿ ಮಾಡುತ್ತಿದ್ದವು. ಹುಡುಕೀ ಹುಡುಕೀ ಸೋತ ನಮಗೆ ಅಮೀರ್ ಜಾನ್ ಸಾಹೇಬರ ಚಕ್ರ ಕಳಚಿದ ಎತ್ತಿನ ಬಂಡಿ ಬಳಿ ಮಲ್ಲಿಯಂತಹ ಆಕೃತಿಯೊಂದು ಕಂಡಿತು. ಕೂಡಲೇ ಅಲ್ಲಿಗೆ ಓಡಿದ ನಮ್ಮಣ್ಣ ಅದರ ಕೊರಳಿಗೆ ಹಗ್ಗ ಬಿಗಿದು ನನ್ನ ಕೈಗೆ ಕೊಟ್ಟ. ಕಡುಗತ್ತಲಾಗಿದ್ದರಿಂದ ನಾನೂ ಕೂಡ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲ್ಲಿಲ್ಲ. ಹಿಡ್ಕೊಳ್ಳೋ......., ನಾನು ಹೊಡಿತೀನಿ ಅಂತಾ ಮಲಗಿದ್ದ ಎಮ್ಮೆಯನ್ನು ಎಬ್ಬಿಸಿ ಬಾರು ಕೋಲಿನಿಂದ ಎರಡೇಟು ಭಾರಿಸಿದ. ಪಾಪ ಎಮ್ಮೆ, ದುಸುರಾ ಮಾತನಾಡದೇ ನನ್ನನ್ನು ಹಿಂಬಾಲಿಸತೊಡಗಿತು. ಮನೆ ತಲುಪಿದ ಕೂಡಲೇ ಅಪ್ಪನನ್ನು ಎಬ್ಬಿಸಿ '' ಅಪ್ಪಾ ಎಮ್ಮೆ ಅಟ್ಟಿಕೊಂಡು ಬಂದಿದ್ದೇವೆ ಅಂತಾ ಕೂಗಿ ಹೇಳಿದೆ. ನಿದ್ದೆಗಣ್ಣಿನಲ್ಲಿದ್ದ ಅವರು ಕಟ್ಟಾಕಿ ಬಿದ್ಕೊಳ್ಳಿ...., ಎಂದು ಮಗ್ಗಲು ಬದಲಾಯಿಸಿಕೊಂಡಿದ್ದರು. ಹಾಗೇ ಎಮ್ಮೆಯನ್ನು ಒಳಗಟ್ಟುವಾಗ ನಮ್ಮಣ್ಣ ಮುಸಿ ಮುಸಿ ನಗುತ್ತಿದ್ದ. ನನ್ನ ಮನಸ್ಸಿನಲ್ಲಿ ಸಣ್ಣ ಅನುಮಾನವೊಂದು ಆಗಲೇ ಹುಟ್ಟಿಕೊಂಡಿತ್ತು.
    ಅಮ್ಮನ ಕಿರುಚಾಟ ಕೇಳಿ ಅಪ್ಪ ಕೊಟ್ಟಿಗೆಯ ಒಳಗೋಡಿದರು. ಸ್ವಲ್ಪ ಸಮಯದ ನಂತರ ಜೋರಾಗಿ ನಗುತ್ತಲೇ ಹೊರಬಂದ್ರು. ನನಗೋ ಭಯವೇ ಭಯ........, ನಮ್ಮಣ್ಣನಿಗೆ ಸಂಪೂರ್ಣ ಗೊಂದಲ.  ಮುನ್ನೆಚ್ಚರಿಕೆ ಕ್ರಮವಾಗಿ ನಾವು ಮನೆಯಿಂದ ಸ್ವಲ್ಪಮುಂದೆ ಇದ್ದ ರಸ್ತೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ ಇದ್ದೆವು. ನಾನು ಅನುಮಾನ ಕ್ಲಿಯರ್ ಮಾಡಿಕೊಳ್ಳಲು ನಮ್ಮಣ್ಣನಿಗೆ  ''ಯಾಕೋ ಓಡ್ಬಂದೇ.....? ಅಂತಾ ಕೇಳಿದೆ. ಅದಕ್ಕವನು '' ಲೋ ರಾತ್ರಿ ಹೊಡ್ಕೊಂಡು ಬಂದಿರೋದು ನಮ್ಮ ಮಲ್ಲಿ ಅಲ್ಲಾ ಕಣೋ..., ಅಮೀರ್ ಜಾನ್ ಸಾಹೇಬ್ರ ವಯಸ್ಸಾಗಿರೋ ಕುರುಡ ಕೋಣ ಕಣೋ..., ತುಂಬಾ ತಡ ಆಗಿತ್ತಲ್ಲಾ...., ಅದ್ಕೇ ಅಪ್ಪನ್ನ ಯಾಮಾರಿಸೋಕೇ......., ಅಂತಾ ಮುಂದುವರೆಸುತ್ತಲೇ  ಇದ್ದ. ನಾನು ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ. ಬೆಳ್ಳಂಬೆಳಗ್ಗೇ ಬೆಂಬು ಹಿಡಿದುಕೊಂಡು ಹಾಲು ಕರೆಯಲು ಹೋಗಿದ್ದ ಅಮ್ಮನಿಗೆ ಗಾಬರಿಯಾಗದೇ ಇನ್ನೇನಾಗುತ್ತೇ ಹೇಳಿ.....? ಪಾಪ ಅದು ಸಾಧು ಕೋಣವಾಗಿದ್ದರಿಂದ ಯಾರಿಗೂ ಏನೂ ತೊಂದರೆ ಮಾಡಲ್ಲಿಲ್ಲ. ಅಪ್ಪನಿಗೆ ಕೋಪ ಬಂದಿತ್ತಾದರೂ ನಮ್ಮಣ್ಣನ ಸಾಂದರ್ಭಿಕ ಬುದ್ದಿವಂತಿಕೆ ಕಾರಣ ಮಾಪೀ ಸಿಕ್ಕಿತ್ತು.

Monday, January 23, 2012

ಮಕ್ಳು ಕಳ್ರು........,

        ಇವ್ರುನ್ನ ಯಾವತ್ತೂ ಇಲ್ಲಿ ನೋಡೇ ಇಲ್ಲ......, ನಮ್ಮೂರಿನ್ ನೆಂಟ್ರು ಕೂಡಾ ಅಲ್ಲಾ.....,!!ಗುಂಪು ಕಟ್ಕೊಂಡ್ ಬಂದಿರೋ ಇವ್ರೆಲ್ಲಾ ಅದೇನ್ ಹುಡುಕ್ತಾ ಆವ್ರೋ ಗೊತ್ತಿಲ್ಲ....,?!! ಇದ್ದಕ್ಕಿದ್ದಂತೆ ಊರಿನೊಳಗೆ ಬಂದಿದ್ದ ಐವರು ಅಗಂತುಕರನ್ನು ಕಂಡು ಶಂಕ್ರ ತಲೆಕೆರೆದುಕೊಂಡ. ಅವರು ಅವನ ಕಣ್ಣೆದುರೇ ಸುಳಿದಾಡುತ್ತಿದ್ದರು. ಅಷ್ಟೊತ್ತಿಗೇ ಅಲ್ಲಿ ಶಾಲೆ ಸಮೀಪ ಯಾರೋ ಹೆಂಗಸರು ಜೋರಾಗಿ ಮಾತನಾಡಿಕೊಳ್ಳುತ್ತಿದ್ದುದು ಶಂಕ್ರನ ಕಿವಿಗೆ ಬಿತ್ತು.
 ಬಾರೇ ಮ್ಯಾಕೇ ಯಾರೋ ಗೊತ್ತುಗುರಿ ಇಲ್ದೋರೂ ಚಂದ್ರೇಗೌಡ್ರು  ಹಿರಿಮಗ್ಳಾವ್ಳಲ್ಲಾ....., ಜಾನಕಿ....., ಅದೇ ಜಾನಿ ಜಾನಿ ಅಂತಾರಲ್ಲಾ.... ಅವ್ಳು ಕೈ ಹಿಡಿದು ಎಳುದ್ರಂತೇ....., ಅವ್ಳು ಕೊಸರಾಡ್ಕೊಂಡು ಒಂದೇ ಸವ್ನೇ ಬಡ್ಕೊಂಡು ಓಡ್  ಬಂದ್ಲಂತೇ...., ಯಾರೊ ಕಳ್ರ್ ಇದ್ದಂಗೆ ಇದ್ರಂತೆ ಕಣ್ರೀ.........!!!! ಸಖೇದಾಶ್ಚರ್ಯಗಳಿಂದ ಹೇಳುತ್ತಿದ್ದ ಅವಳ ಮಾತಲ್ಲಿ ಕಳ್ರೂ ಅನ್ನೋ ಪದ ಶಂಕ್ರನಿಗಷ್ಟೇ ಅಲ್ಲ, ಅಲ್ಲಿದ್ದ ಎಲ್ಲರ ಕಿವಿ ನಿಮಿರುವಂತೆ ಮಾಡಿತು. ಯಾಕಂದ್ರೆ ಹೊಳೆನರಸೀಪುರ ಪೊಲೀಸರು ಮೊನ್ನೆ ಮೊನ್ನೆಯಷ್ಟೇ ಈ ರೀತಿ ಅನುಮಾನ ಬರೋ ಜನ ಕಂಡ್ರೆ ಮಾಹಿತಿ ನೀಡಿ ಅಂತಾ ದೊಡ್ಡ ಚೀಟಿ ಬರೆದು ಊರ ಹೆಬ್ಬಾಗಿಲಿಗೆ ಅಂಟಿಸಿ ಹೋಗಿದ್ದರು.  ಅಲ್ಲಿ ದುಸುರಾ ಮಾತೇ ಇಲ್ಲ. ಊರೊಳಗೆ ಮಕ್ಕಳ ಕಳ್ಳರು ಬಂದಿದ್ದಾರೆ. ಇಲ್ಲಿ ಮಕ್ಕಳನ್ನು ಕದ್ದು ಉತ್ತರ ಕರ್ನಾಟಕದಲ್ಲಿ ನಿಧಿಗಾಗಿ ಬಲಿ ಕೊಡ್ತಾರೆ........., ಮತ್ತೆ ಕೆಲವರು ಕಣ್ಣು ಕಿತ್ತು ಬಿಕ್ಷೆ ಬೇಡಿಸ್ತಾರೆ..........., ಅನ್ನೋ ತೀರ್ಮಾನವೇ ಆಗಿ ಹೋಯ್ತು. ಅದು ಕಾಳ್ಗಿಚ್ಚಿನಂತೆ ಮನೆಯಿಂದ ಮನೆಗೆ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡ ಸುದ್ದಿಯೇ ಆಗಿ ಹೋಯ್ತು.
     ಹಾಗೇ ಸುದ್ದಿ ಹರವುತ್ತಿದ್ದ ಮಂಜೇಗೌಡನಿಗೆ ಊರಿನ ಅಂಗನವಾಡಿ ಬಳಿ ಆ ಐವರ ತಂಡ ಇರೋದು ಕಂಡೇ ಬಿಡ್ತು. ಏ.,,,,,,, ಇಲ್ಲೇ ಇದಾರೇ ಕಣುರ್ಲಾ...., ಬಲ್ಲಿ ಬಲ್ಲಿ ಬಲ್ಲಿ ಅಂತ ಜೋರಾಗಿ ಕೂಗಿಯೇ ಬಿಟ್ಟ.
      ಮಂಜೇಗೌಡನ ಧನಿಗೆ ಅಲ್ಲಿ ಹೆಂಗಸರು ಮಕ್ಕಳು ಸೇರಿದಂತೆ ನೂರಾರು ಮಂದಿಯ ದಂಡೇ ಸೇರಿತ್ತು. ಅವರಲ್ಲಿದ್ದ ಯಾರೋ ಒಬ್ಬ ಏನ್ ನೋಡ್ತಿದ್ದೀರ್ಲಾ ...? ಇಕ್ಕುರ್ಲಾ......, ಅಂತ ಆದೇಶ ಮಾಡಿ ಶುರುವಿಕ್ಕಿಕೊಂಡ. ಪೊರಕೆ, ಚಪ್ಪಲಿ, ದೊಣ್ಣೆ ಎಲ್ಲಾ ಸೇರಿದಂತೆ ಕೈಗೆ ಸಿಕ್ಕಿದರಲ್ಲಿ ಬಡಿದದ್ದೇ ಬಡಿದದ್ದು.
    ಹಾಗೇ ಒದೆ ತಿನ್ನುತ್ತಿದ್ದವನ ಪೈಕಿ ಒಬ್ಬಾತ ನಿಲ್ಸಿ...ನಿಲ್ಸೀ..., ನಾವು ಕಳ್ಳರಲ್ಲ..., ಕಳ್ಳರನ್ನ ಹಿಡಿಯೋಕೆ ಬಂದಿರೋ ಪೋಲಿಸ್ರು...ಅಂತ ಅರಚಾಡಲಾರಂಭಿಸಿದ. ಹೊಡೆಯುತ್ತಿದ್ದುದನ್ನು ನಿಲ್ಲಿಸಿದ ಅವರು ಏನೈತ್ಲಾ ಪ್ರೂಫೂ.....? ಅಂತಾ ವಿಚಾರಣೆಗೆ ಶುರುವಿಕ್ಕಿಕೊಂಡರು. ಗ್ರಹಚಾರಕ್ಕೆ ಅವರ ಪೈಕಿ ಒಬ್ಬನಲ್ಲಿ ಮಾತ್ರ ಐ.ಡಿ ಕಾರ್ಡ್ ಇತ್ತು. ಆದ್ರೆ ಗ್ರಾಮಸ್ಥರಿಗೆ ಇದರಿಂದ ನಂಬಿಕೆ ಬರಲ್ಲಿಲ್ಲ. ಡೂಪ್ಲಿಕೇಟು ಇರ್ಬೋದು........!? ಅನ್ನೋ ಅನುಮಾನ.
 '' ದಯವಿಟ್ಟು ಹೊಡೀಬೇಡಿ ಅನುಮಾನ ಇದ್ರೆ ನೀವು ಪೊಲೀಸರಿಗೆ ಪೋನ್ ಮಾಡಿ ಕರೆಸಿಕೊಳ್ಳಿ, ಎಲ್ಲಾ ಕ್ಲಿಯರ್ ಆಗುತ್ತೆ.'' ಸುಧಾರಿಸಿಕೊಳ್ಳುತ್ತಿದ್ದ ಒಬ್ಬಾತ ಕೈ ಮುಗಿದ.
        ಗ್ರಾಮಸ್ಥರಿಗೆ ಇದು ಸರಿ ಎನಿಸಿತು. ಕೂಡ್ಲೆ ಡಿ.ವೈ.ಎಸ್.ಪಿ ಪರಶುರಾಮ್ ಸಾಹೇಬರಿಗೆ ಪೋನ್ ಮಾಡಿದ್ರು. ಅದೇ ರೀತಿ ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಹಾಗು ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಗೂ ಮಾಹಿತಿ ರವಾನೆ ಮಾಡಿದ್ರು.
ಯಾವುದಕ್ಕೂ ಇರಲಿ ಅಂತಾ ಒಂದೆರೆಡು ಟಿ.ವಿ ಚಾನೆಲ್ ಗೂ  ವಿಷಯ ತಿಳಿಸಿದ್ದರು. ಅಷ್ಟೊತ್ತಿಗಾಗಲೇ ವಿಷಯ ಹಳ್ಳಿಯಿಂದ ಹಳ್ಳಗೆ ಹರಡಿದ್ದ ಕಾರಣ ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಆ ಐವರು ಅಗಂತುಕರನ್ನು ಊರಿನ ಸಮುದಾಯ ಭವನದ ಬಳಿ ಕಟ್ಟಿ ಹಾಕಲಾಗಿತ್ತು.
   ಅರ್ಧ ಘಂಟೆಯ ಒಳಗೆ ಅತ್ತೀಚೌಡೇನಹಳ್ಳಿ ಗ್ರಾಮಕ್ಕೆ ಪೊಲೀಸರ ಸೈನ್ಯವೇ ಧಾಳಿಯಿಟ್ಟಿತ್ತು. ಹಾಗೇ ತನಿಖೆ ನಡೆಸಿದ ಪೊಲೀಸರಿಗೆ ಆ ಐವರು ಕೂಡ ಪೊಲೀಸ್ ಪೇದೆಗಳು, ಸಕ್ಕರೆ ಲಾರಿಯೊಂದನ್ನು ಕದ್ದು ಈ ಗ್ರಾಮಕ್ಕೆ ತಂದಿರುವ ಖಚಿತ ಮಾಹಿತಿ ಆಧರಿಸಿ ಕಳ್ಳನನ್ನು ಹುಡುಕಿಕೊಂಡು ಬಂದಿದ್ದಾರೆ ಅನ್ನೋ ವಾಸ್ತವ ಸ್ಥಿತಿ ಅರಿವಾಗಿತ್ತು.
     ಸಿ.ಪಿ.ಐ ಗೋಪಾಲ್ ನಾಯಕ್ ಸಾಹೇಬರಿಗೆ ಕೆಂಡದಂತ ಕೋಪ. ಪೊಲೀಸರನ್ನೇ ಕಟ್ಟಿ ಹಾಕಿ ಥಳಿಸೋದು ಅಂದ್ರೇ ಸಾಮಾನ್ಯಾನಾ......?! ಯಾರಯ್ಯಾ ಹೊಡೆದೋವ್ರೂ....? ಅಂತ ಎಗರಾಡ ತೊಡಗಿದರು. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಗಲಾಟೆ ಜೋರಾಗತೊಡಗಿತು. ಯಾರೋ ಕಿಡಿಗೇಡಿಗಳು ಕಲ್ಲು ತೂರಾಡತೊಡಗಿದರು. ಇದರಿಂದ ಪೊಲೀಸರ ಜೀಪ್ ಗಳು, ಕ್ಯಾಮೆರಾಗಳು ಪುಡಿಯಾದವು. ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡರು.
      ಇವೆಲ್ಲಾ ಗಲಾಟೆಗಳ ನಡುವೆ ಆ ಊರಿನ ಆಕೃತಿಯೊಂದು ಕತ್ತಲಲ್ಲಿ ಮರೆಯಾಗಿ ಹೋಯ್ತು. ಆತ ದಾವಣಗೆರೆಯಿಂದ ಸಕ್ಕರೆ ಲಾರಿ ಕದ್ದು ತಂದಿದ್ದ ಕಳ್ಳ.............,
     ಈಗ ಪೊಲೀಸರು ಆ ರಾತ್ರಿ ಗಲಾಟೆ ಸಮಯದಲ್ಲಿ ತೆಗೆದ ಪೋಟೋಗಳನ್ನು ಹಿಡಿದು ಕಲ್ಲು ತೂರಿದ ಕಿಡಿಗೇಡಿಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಈಗಾಗಲೇ ಊರು ಬಿಟ್ಟಿದ್ದಾರೆ.

Tuesday, January 10, 2012

ಮನೆಯಂಗಳದ ಬೆಳಕು ಆರಬಾರದು......

ರಾಗಿ, ಜೋಳ, ಭತ್ತ,  ಅಡಿಕೆ ಜೊತೆಗೆ ಅವೆಲ್ಲವನ್ನೂ ಬೆಳೆಯುತ್ತಿದ್ದ ಮೂರೆಕರೆ ಹೊಲವನ್ನು ಮಾರಿದ ದುಡ್ಡು.......,
    ಕಣ್ಣೆದುರು ಬೆಳೆದು ನಿಂತ ಮಗಳು.......,
      ಅವಳ ಮದುವೆಗೆ ರಾಜ್ಯದ ಸಾವಂತರಾಜ ರೇವುಸಿದ್ದಣ್ಣೇಶ್ವರರನ್ನು ಕರೆಯಬೇಕು. ಊರ ಮಂದಿಗೆಲ್ಲಾ ಮೂರು ದಿನ ಮದುವೆ  ಹೆಸರಿನಲ್ಲಿ ಹಬ್ಬದೂಟ ಬಡಿಸಬೇಕು. ಮದುವೆಗೆ ಬಂದ ಎಲ್ಲರಿಗೂ ತಾಂಬೂಲದ ಜೊತೆಗೆ ಕಾಣಿಕೆ ಕೊಟ್ಟು ಕಳುಹಿಸಬೇಕು. ಬಂದ ಎಲ್ಲರೂ '' ಮಾದೇಗೌಡ..., ಇದು ಮದ್ವೆ ಅಲ್ಲ ಕಣೋ...., ಉತ್ಸವ,  ಉತ್ಸವ......'' ಅಂತಾ ಬಾಯ್ತುಂಬಾ ಹೊಗಳಬೇಕು.
ಮಾದೇಗೌಡ ತನ್ನಷ್ಟಕ್ಕೆ ತಾನೇ ಉಬ್ಬಿ ಹೋದ. ಮನೆಯೊಳಗೆ ಮಡದಿ ಮೀನಾಕ್ಷಿ ಮಗಳು ತನುಜಾ ಜೊತೆ ಮಲಗಿದ್ದಾಳೆ. ಈಗಲೂ ಆಕೆ ಪುಟ್ಟ ಮಕ್ಕಳಂತೆ ತಾಯಿಯ ತೋಳಿನ ಮೇಲೆ ತಲೆಯಿಟ್ಟು ಮುದುರಿ ಮಲಗಿಕೊಳ್ಳುತ್ತಾಳೆ. ಭಾರೀ ಅದೃಷ್ಟವಂತೆ ಅವಳು. ಅವಳ ಕಾಲ್ಗುಣವೋ ಏನೋ ಆಕೆ ಹುಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಗಿದೆ.  ದುಡಿದದ್ದೆಲ್ಲಾ ಬಂಗಾರವಾಗಿ ಅಪ್ಪ ಕೊಟ್ಟ ಒಂದೆಕರೆ ಹೊಲ ಈಗ ನಾಲ್ಕೆಕರೆ ಬೆಳೆದು ಬಿಟ್ಟಿದೆ. ಮುದ್ದಿನ ಮಗಳ ಸೊಬಗಿಗೆ ಬೆರಗಾದ ಪಕ್ಕದೂರಿನ ಜಮೀನ್ದಾರನ ಮಗ ಅವಳನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದಿದ್ದಾನೆ. ಶ್ರೀಮಂತರಲ್ಲಿ ಶ್ರೀಮಂತ.., ಚೆಲುವರಲ್ಲಿ ಚೆಲುವ. ಮಾದೇಗೌಡನಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ತನ್ನಪ್ಪ ತನಗೆ ಕೊಟಿದ್ದ ಹೊಲವನ್ನು ಉಳಿಸಿಕೊಂಡು ತಾನು   ಕಷ್ಟ ಪಟ್ಟು ಸಂಪಾದಿಸಿದ್ದ ಮೂರೆಕೆರೆ ಹೊಲವನ್ನು ಮಾರಿಬಿಟ್ಟ. ಈ ಬಾರಿ ಉತ್ತಮ ಇಳುವರಿ ಇದ್ದ ಕಾರಣ ದಾಸ್ತಾನು ಮಾಡಿದ್ದ ದವಸ ಧಾನ್ಯಗಳನ್ನೆಲ್ಲಾ ಮಾರುಕಟ್ಟೆಗೆ ಸಾಗಿಸಿದ್ದ. ಮಾದೇಗೌಡ ಬೆಳಕಾಗುವುದನ್ನೇ ಬೆರಗುಗಣ್ಣಿನಿಂದ ಕಾಯತೊಡಗಿದ.
    ಮುಂಜಾನೆ ಲಗುಬಗನೆ ಎದ್ದ ಮಾದೇಗೌಡ ಮನೆಯೆದುರೇ ಇದ್ದ ಹೊಲದತ್ತ ಹೊರಟ. ಅಲ್ಲಿ ಮಾವಿನ ಮರಗಳ ನಡುವೆ ಇದ್ದ ಎರಡು ಬಾಳೇಗಿಡಗಳ ಎದುರು ಸಮಾನಾಂತರವಾಗಿ ದೊಡ್ಡ ದೊಂದಿಯೊಂದನ್ನು ನೆಟ್ಟು ಅದಕ್ಕೆ ಎಣ್ಣೆ ಸುರಿದ. ಪತಿಯ ಜೊತೆ ತಾನೂ ಹೊಲಕ್ಕೆ ಬಂದಿದ್ದ ಮಡದಿ ಮೀನಾಕ್ಷಿ ಅಚ್ಚರಿಯಿಂದ ಏನ್ರೀ ಇದು.........? ಅಂತಾ ಹುಬ್ಬೇರಿಸಿದಳು.
    ಮೀನಾಕ್ಷೀ ನಾನು ಈಗ ಪೇಟೆಗೆ ಹೋಗ್ತಾ ಇದೀನಿ. ಅಲ್ಲಿ ತೋಟ ಹಾಗು ಧಾನ್ಯ ಮಾರಿದಕ್ಕೆ  ಶೆಟ್ಟಿ ಮುನ್ನೂರು ಬಂಗಾರದ ನಾಣ್ಯ ಕೊಡ್ತಾನೆ. ಅದ್ರಿಂದ ತನುಜಾಗೆ ಒಡವೆ ವಸ್ತ್ರ, ಬಟ್ಟೆ-ಬರೆ ಎಲ್ಲಾ ತರ್ತೀನಿ........, ಗೌಡನ ಮೊಗದಲ್ಲಿ ಸಂಭ್ರಮ ಲಾಸ್ಯವಾಡುತ್ತಿತ್ತು. ಅದೇನೋ ಸರೀರೀ....ಇದೇನಿದೂ ಇಷ್ಟು ದೊಡ್ಡ ದೊಂದಿ...? ಅದೂ ಹಗಲು ಹೊತ್ತಲ್ಲೀ......?!! ಮೀನಾಕ್ಷಿ ಯ ಮರುಪ್ರಶ್ನೆಗೆ ನಸುನಕ್ಕ ಮಾದೇಗೌಡ '' ಅದೂ ನನ್ನ ಪಾಲಿನ ಅದೃಷ್ಟದ ಬೆಳಕು. ಪೇಟೆಯಿಂದ ಗಾಡಿಕಟ್ಟಿಕೊಂಡು ಬರುವಾಗ ಕತ್ತಲಾಗುತ್ತೆ.  ನೀನು ಕತ್ತಲು ಹತ್ತುವ ಮುನ್ನವೇ ಈ ದೊಂದಿಯನ್ನು ಹತ್ತಿಸಿಡು. ಇವೊತ್ತಿನಿಂದ ತನುಜಾಳ ಮದುವೆ ಮುಗಿಯೋವರೆಗೂ ಈ ದೊಡ್ಡದೊಂದಿಗೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕು......,  ಮೆನೆಯಂಗಳಕ್ಕೆ ಬೀಳುವ ಈ ಬೆಳಕು ಮದುವೆ ಮುಗಿಯೋವರೆಗೂ ಆರಬಾರದು....., ಗಂಡನ ಕಾಳಜಿಗೆ ಮೀನಾಕ್ಷಿಯ ಕಣ್ಣಾಲಿಗಳಲ್ಲಿ ನೀರಾಡತೊಡಗಿತ್ತು.
        ಗಾಡಿ ಕಟ್ಟಿ ಹೊರಟ ಗೌಡನಿಗೆ ಖುಷಿಯೋ ಖುಷಿ. ಅಡುಗೆಯವರಿಂದ ಹಿಡಿದು ಪ್ರತಿಯೊಬ್ಬರಿಗೂ ಹಣ ಕೊಟ್ಟಿದ್ದಾಗಿದೆ. ನಿರೀಕ್ಷೆಯನ್ನೂ ಮೀರಿ ಒಡವೆ,ವಸ್ತ್ರ ಇತ್ಯಾದಿ ಕೊಂಡಿದ್ದಾಗಿದೆ. ಎಲ್ಲಾ ಕಳೆದು ನೂರೈವತ್ತು ಚಿನ್ನದ ನಾಣ್ಯ ಇನ್ನೂ ಮಿಕ್ಕಿದೆ. ಮಗಳ ಮದುವೆ ನಾನಂದುಕೊಂಡದ್ದಕ್ಕಿಂತ ಜೋರಾಗಿಯೇ ನಡೆಯುತ್ತೆ.
     ದಢ್...ಧಡ್..ಧಡಾರ್............, ಇದ್ದಕ್ಕಿದ್ದಂತೆ ರಸ್ತೆಯ ಮಾದೇಗೌಡನ ಎತ್ತಿನ ಗಾಡಿ ರಸ್ತೆಯ ಪಕ್ಕದ ಹೊಂಡಕ್ಕೆ ಉರುಳಿ ಬಿತ್ತು. ಗಾಡಿ ಓಡಿಸುತ್ತಿದ್ದ  ಆಳು ಸಣ್ಣನನ್ನು ಅದ್ಯಾರೋ ಮಾರಣಾಂತಿಕವಾಗಿ ಥಳಿಸುತ್ತಿದ್ದಾರೆ. ಗೌಡನ ಕಣ್ಣಿಗೆ ಮೆಣಸಿನ ಪುಡಿ ಎರಚಿದ ಒಬ್ಬ ಚೀರಾಡುತ್ತಿದ್ದ ಅವನ ಹೆಡೆಮುರಿ ಕಟ್ಟಿದ್ದಾನೆ.  ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗೌಡನ ಬಳಿಯಿದ್ದ ಚಿನ್ನದ ನಾಣ್ಯ,  ಒಡವೆ, ವಸ್ತ್ರ ಇತ್ಯಾದಿ ದರೋಡೆಕೋರರ ಪಾಲಾಗಿ ಹೋಗಿತ್ತು. ಆ ತಡರಾತ್ರಿಯಲ್ಲಿ ದಟ್ಟಕಾಡಿನ ನಡುವೆ ಗೌಡ ಹಾಗು ಆತನ ಕೆಲಸದಾಳಿನ ಚೀರಾಟ ಅಕ್ಷರಷಃ ಅರಣ್ಯ ರೋಧನವಾಗಿತ್ತು.
      ಬೆಳಕು ಹರಿಯುತ್ತಲೇ ದಾರಿಹೋಕರ ನೆರವಿನಿಂದ ಕಟ್ಟುಗಳನ್ನು ಬಿಚ್ಚಿಸಿಕೊಂಡ ಮಾದೇಗೌಡ ಏದುಸಿರು ಬಿಡುತ್ತಾ ಸೇನಾಧಿಪತಿ ಬಾಣಚಂದ್ರನ ಬಳಿ ಡೌಢಾಯಿಸಿದ. ಆತನ ರೋಧನವನ್ನು ಕಂಡ ಬಾಣಚಂದ್ರ ಒಡನೆಯೇ ತನ್ನ ಮುಖ್ಯ ಸೈನಿಕ ಪಾರ್ವತೀಶ ಹಾಗು ಆತನ ಸಹಾಯಕ ರಘುವೇಂದ್ರನನ್ನು ಕರೆಯಿಸಿ ದರೊಡೆಕೋರರನ್ನು ಹಿಡಿಯುವಂತೆ ಅಪ್ಪಣೆ ಮಾಡಿ ಕಳುಹಿಸಿ ಕೊಟ್ಟ.
      ಹಾಗೇ ಅಲ್ಲಿಂದ ಹೊರಟ ಮಾದೇಗೌಡನಿಗೆ ಬರಿಗೈಯಲ್ಲಿ ಮನೆಗೆ ತೆರಳಲು ಮನಸ್ಸಿರಲ್ಲಿಲ್ಲ. ಬಾಣಚಂದ್ರನ ಬಗ್ಗೆ ಅಪಾರ ನಂಬಿಕೆ ಇದ್ದ ಆತ ಅಂದು ಪೇಟೆಯಲ್ಲಿದ್ದ ಅಪೂರ್ವ ಛತ್ರದಲ್ಲಿ ತಂಗಲು ನಿರ್ಧರಿಸಿದ. ಹಾಗೇ ಅಲ್ಲಿಗೆ ತೆರಳಿದ ಆತನಿಗೆ ಆಘಾತವೊಂದು ಕಾದಿತ್ತು. ಛತ್ರದ ಕೋಣೆಯೊಂದರಲ್ಲಿ ಬಾಣಚಂದ್ರನ ಸೇನಾಧಿಪತಿ ಪರ್ವತೇಶ ಹಾಗು ಆತನ ಸಹಾಯಕ ರಘುವೇಂದ್ರ ಕಂಡರು. ಅವರ ಎದುರು ಆತನನ್ನು ದೋಚಿದ ದರೊಡೆಕೋರರು.......!. ಏನಾಗುತ್ತಿದೆ ಎಂದು ತಿಳಿಯಲು ಮಾದೇ ಗೌಡ ಅಲ್ಲೇ ಮರೆಯಲ್ಲಿ ಅವಿತು ಕುಳಿತ.
      ಅಟ್ಟಹಾಸ ಮಾಡುತ್ತಿದ್ದ ಪರ್ವತೇಶ ಹಾಗು ರಘುವೇಂದ್ರ  ಆ ದರೋಡೆಕೋರರಿಗೆ ''ಶಹಭಾಷ್ ಕಣ್ರೋ ಶಹಭಾಷ್..., ಒಳ್ಳೇ ಬೇಟೇನೇ ಆಡಿದ್ದೀರಾ......, ಈ ಸಲ ನಿಮ್ಮ ಪಾಲು ನೂರರಲ್ಲಿ ಇಪ್ಪತ್ತು..., ತಗೊಳ್ಳಿ.., ಹಂಚ್ಕೊಳ್ಳಿ....ಎನ್ನುತ್ತಿದ್ದರು.
      ಕೊತಕೊತನೆ ಕುದ್ದು ಹೋದ ಮಾದೇಗೌಡ ಕೋಣೆಯ ಒಳನುಗ್ಗಿದವನೇ ನೇರವಾಗಿ ಪರ್ವತೇಶನ ಕುತ್ತಿಗೆ ಪಟ್ಟಿ ಹಿಡಿದು ತನ್ನ ಎಡಗಾಲಿನ ಚಪ್ಪಲಿಯಿಂದ ರಪರಪನೆ ಬಾರಿಸಿದ. ಅದೇ ರೀತಿ ರಘುನಂದನನ್ನೂ ಕೂಡ ಅಟ್ಟಾಡಿಸಿ ಬಡಿದ. ಆದರೆ ದರೊಡೆಕೋರರು ಹಾಗು ಸೈನಿಕದ್ವೈಯರ ಶಕ್ತಿಯೆದುರು ಮಾದೇಗೌಡ ಸೋಲಲೇ ಬೇಕಾಯ್ತು. ಆತನನ್ನು ಸಾಯುವಂತೆ ಥಳಿಸಿದ ಅವರು ಊರಿನಿಂದ ಹೊರಗೆ ಕಾಡಿನೊಳಗೆ ಎಸೆದು ಬಂದರು. ಬಾಯ್ಬಿಟ್ಟರೆ ನಿನ್ನ ಇಡೀ ಕುಟುಂಬವನ್ನೇ ನಾಶ ಮಾಡುತ್ತೇ ವೆ ಅನ್ನೋ ಎಚ್ಚರಿಕೆ ನೀಡಿದ್ದರು.
                    ಮಾದೇಗೌಡನ ಕನಸಿನ ಗೋಪುರ ಕುಸಿದು ಹೋಗಿತ್ತು. ಮನೆಗೆ  ತೆರಳಿ 3 ದಿನಗಳಾಗಿವೆ. ಮಡದಿ ಹಾಗು ಮಗಳು ಕಾಯುತ್ತಿದ್ದಾರೆ. ಹಸಿದು, ಹಲ್ಲೆಗೊಳಗಾಗಿ ದಣಿದು ಹೋಗಿದ್ದ ಮಾದೇಗೌಡನಿಗೆ ಉಸಿರಾಡಲೂ ಬಲವಿಲ್ಲ. ಅದು ಹೇಗೇಗೋ ಕಷ್ಟ ಪಟ್ಟು  ಮನೆಯೆದುರಿಗೆ ಇದ್ದ ತನ್ನ ಹೊಲವನ್ನು ತಲುಪಿದ. ಮೀನಾಕ್ಷಿ ಮರೆತಿರಲ್ಲಿಲ್ಲ. ದೊಂದಿ ಹಚ್ಚಿದ್ದ ಕಾರಣ ಅದರ ಬೆಳಕು ಅಂಗಳದ ತುಂಬಾ ಕಾಣುತ್ತಿತ್ತು. ದೂರದಲ್ಲಿ ಅದರ ಇರಿವನ್ನು ಕಂಡ ಮಾದೇಗೌಡನಿಗೆ ಆ ಬೆಳಕಲ್ಲಿ ಮೀನಾಕ್ಷಿ ಹಾಗು ತನುಜಾಳ ಅಸ್ಪಷ್ಟ ರೂಪ ಕಾಣುತ್ತಿತ್ತು.
             ಅಂದಿನ ರಾತ್ರಿ ಅತ್ಯಂತ ಭಾರವಾಗಿ.....ನಿರೀಕ್ಷೆಗಳ ಜೊತೆ ಕಳೆದು ಹೋಯಿತು. ಮರುದಿನ  ಊರ ಮುಂದಿನ ಮರವೊಂದರಲ್ಲಿ ಮಾದೇಗೌಡನ ಶವ ಜೋತಾಡುತ್ತಿತ್ತು. ಇತ್ತ ಅವನ ಹೊಲದಲ್ಲಿ ಮೀನಾಕ್ಷಿ ಹೊತ್ತಿಸಿಟ್ಟ ದೊಂದಿ ಆರಿ ಹೊಗಿತ್ತು. ಆದರೆ ಕಟ್ಟೇಪುರ ವೇಶ್ಯಾಗಾರದಲ್ಲಿ ನರ್ತಕಿಯರ ಗೆಜ್ಜೆ ಸದ್ದು, ಮದಿರಿಯ ಮೋಜು ಹಾಗು ಜೂಜಿನ ಖುಷಿ ಮುಗಿದಿರಲ್ಲಿಲ್ಲ. ಪರ್ವತೇಶ ಹಾಗು ರಘುವೇಂದ್ರ ಮತ್ತಿನಲ್ಲಿ ತೂರಾಡುತ್ತಿದ್ದರು.
        ಇತ್ತ ಮಾದೇಗೌಡನ ಮನೆಯಲ್ಲಿ ರಣರೋಧನ. ಆತನ ಶವದ ಮೇಲೆ ಬಿದ್ದ ಆತನ ಮಡದಿ ಹಾಗು ಮಗಳು ಗೋಳಾಡುತ್ತಿದ್ದರು. ವಿಷಾದದ ಸಂಖೇತ ಎಂಬಂತೆ ಬಾಣಭಟ್ಟ ತಲೆಯಿಂದ ಪೇಟ ತೆಗೆದು ಕಂಕುಳಿಗೆ ಸಿಲುಕಿಸಿಕೊಂಡು ಮೌನವಾಗಿ ತಲೆ ತಗ್ಗಿಸಿ ನಿಂತಿದ್ದ.
     

Monday, January 2, 2012

ಬ್ಲಡ್ ಶುಗರ್....,

ನೀನು ಹೇಳ್ತಾ ಇರೋದು ನಿಜಾನೇನೋ.......? ಹಾಗೆನ್ನುತ್ತಿದ್ದ ಅವನ ಮುಖದಲ್ಲಿ ದುಗುಡ ಆತಂಕ ಎದ್ದು ಕಾಣುತ್ತಿತ್ತು.  ನನಗೋ ಒಳಗೊಳಗೇ ನಗು. ಪ್ರಾಣ ಹೋಗುತ್ತೆ ಅಂದ್ರೂ ಒಂದ್ರುಪಾಯಿ ಬಿಚ್ಚದ ಪಿಕ್ಟಾಸಿ........, ಬೇರೆಯವರ ಉದ್ದಾರ ಕಂಡು ಉರಿದುಕೊಳ್ಳುವ ಪರಮಲೋಭಿ.......,
       ಅವ ನನ್ನ ಸಹೋದ್ಯೋಗಿ ಅನ್ನೋ ಒಂದೇ ಕಾರಣಕ್ಕೆ ಅವನ ಜೊತೆ ನನಗೆ ಸಲುಗೆ ಇತ್ತೇ ವಿನಃ ಇನ್ಯಾವುದೇ ಪುಣ್ಯ ಕಾಯಕಕ್ಕೆ ಅವನ ಅಗತ್ಯ  ನನಗೆ ಇರಲ್ಲಿಲ್ಲ.  ಇವೊತ್ತು ಜೀವ ಭಯದಿಂದ ತತ್ತರಿಸಿ ಹೋಗಿದ್ದಾನೆ...., ಪದೇ ಪದೇ ಟಾಯ್ಲೆಟ್ಟಿಗೆ ಹೋಗ್ತಾ ಬರ್ತಾ ಇದ್ದಾನೆ. ಅವನ ವರ್ತನೆಯನ್ನು ಕಂಡ ನಾನು ಬೇಕಂತಲೇ ಅವನನ್ನು ಕೆಣಕಲು '' ಯಾಕೋ ಮೈಗೆ ಹುಷಾರಿಲ್ವೇನೋ........, ಹೊಟ್ಟೆ ಕೆಟ್ಟೋಗಿದ್ಯಾ......ಅಂತಾ ಕೇಳಿದೆ. ಗಾಬರಿ ಬಿದ್ದ ಅವನು ಇ...ಇ...ಇಲ್ಲಾ ಕಣೋ......ಅಂತಾ ಸಾವರಿಸಿಕೊಳ್ಳಲು ಯತ್ನಿಸುತ್ತಿದ್ದ. ನನಗೆ ನಗುವನ್ನು ಹತ್ತಿಕ್ಕಲು ಸಾಧ್ಯವೇ ಆಗುತ್ತಿಲ್ಲ. ಸತ್ಯ ಹೇಳೋಣ ಎಂದುಕೊಂಡೆ. ಆದ್ರೆ ಈ ಕಂಜೂಸ್ ಗೆ ಸ್ವಲ್ಪ ಜ್ಞಾನೋಧಯ ಆಗ್ಲಿ ಅಂತ ಕಂಟ್ರೋಲ್ ಮಾಡಿಕೊಂಡೆ.
    ಅಸಲಿಗೆ ಅವನ ಇವತ್ತಿನ ಅವಸ್ಥೆಗೆ ನಾನೇ ಕಾರಣ.   ಇದ್ದಕ್ಕಿದ್ದಂತೆ ಬ್ಲಡ್ ಶುಗರ್ ಬಗ್ಗೆ ಚರ್ಚೆ ಆರಂಭಿಸಿದ್ದ ಅವನಿಗೆ ಡಯಾಬಿಟಿಸ್ ಕಾಣಿಸಿಕೊಳ್ಳುವ ಮೊದಲ ಲಕ್ಷಣದ ಬಗ್ಗೆ ನನ್ನದೇ ಆದ ಅವಿಷ್ಕಾರಗಳ ರೀಲ್ ಬಿಟ್ಟಿದ್ದೆ. ಡಯಾಬಿಟೀಸ್ ಆರಂಭವಾಗಿ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೇ ಅದು ಮಿತಿ ಮೀರಿ ಹೋಗಿದ್ದರೆ ಅಂತಹ ರೋಗಿ ಮೂತ್ರ ಮಾಡುವಾಗ ಅದು ಸೋಪಿನ ನೊರೆಯಂತೆ ಆಗುತ್ತೆ ಎಂದಿದ್ದೆ. ಇನ್ನು ಅಂತಹವರಿಗೆ ಕೈ ಕಾಲು ನೋವು, ತಲೆಸುತ್ತು, ಸುಸ್ತು ಇತ್ಯಾದಿ ಮಾಮೂಲು......, ಕಿಡ್ನಿಗಳು ಕೊನೇಯ ಹಂಥಕ್ಕೆ ತಲುಪಿ ಕೊನೆ ಉಸಿರೆಳವ ದಿನಗಣನೆ ಆರಂಭ........, ಹಾರ್ಟ್ ಅಟ್ಯಾಕ್ ಆಗುವ ಸಂಭವ....., ಇತ್ಯಾದಿ ಇತ್ಯಾದಿಗಳನ್ನು ಹೇಳಿ ನಂಬಿಸಿ ಬಿಟ್ಟಿದ್ದೆ. ಎಲ್ಲಾ ಹೇಳಿದ ನಂತರ ನಿನಗೇನಾದ್ರೂ ಶುಗರ್ ಇದ್ಯೇನೋ...? ಅಂತಾ ಕೇಳಿದಾಗ ಗಾಬರಿ ಬಿದ್ದ ಅವನು ಏ......ಏ.....ಇಲ್ ಲ್ಲಾ ಪ್ಪಾ ಅಂತ ಅಂದಿದ್ದ.
ನಾನು ಅಷ್ಟಕ್ಕೇ ಸುಮ್ಮನಾಗಲ್ಲಿಲ್ಲ. ಒಂದ್ ನಿಮಿಷ ಬಂದೆ ಅಂತಾ ಎದ್ದವ ಸೀದಾ ಅವನ ರೂಂನಲ್ಲಿದ್ದ ಟಾಯ್ಲೆಟ್ ಗೆ ತೆರಳಿ ಕಮೋಡ್ ಒಳಗೆ  ಮನೆಯಿಂದ ತಂದಿದ್ದ ನೂರು ಗ್ರಾಂ ನಷ್ಟು ಡಿಟರ್ಜಂಟ್ ಪೌಡರ್ ಹಾಕಿ ಬಂದಿದ್ದೆ.
   ನನ್ನ ಪ್ಲಾನ್ ವರ್ಕ್ ಔಟ್ ಆಗಿತ್ತು. ನಾನು ಹೊರಟ ನಂತರ ಟಾಯ್ಲೆಟ್ ಗೆ ಹೋಗಿದ್ದ  ಅವನಿಗೆ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಯಾಕೆಂದ್ರೆ  ಮೂತ್ರ ಮಾಡುವಾಗ ಅಲ್ಲಿ ಇದ್ದಕ್ಕಿದ್ದಂತೆ ನೊರೆಯ ರಾಶಿಯೇ ಸೃಷ್ಟಿಯಾಗಿತ್ತು. ಗಾಬರಿ ಬಿದ್ದ ಅವನು ಪುನಃ ಫೋನ್ ಮಾಡಿ ನನ್ನನ್ನು ತನ್ನ ರೂಮಿಗೆ ಬರಲು ಕೋರಿಕೊಂಡಿದ್ದ. ಅಲ್ಲೂ ಕೂಡ ಬುದ್ದಿವಂತಿಕೆ ತೋರಿದ ಅವನು ನಾ ಬಿಟ್ಟ ರೀಲನ್ನು ನಿಜವೋ ಸುಳ್ಳೋ ಅಂತಾ ಕನ್ ಪರ್ಮ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದ.  ಏನೂ ತಿಳಿಯದ ಅಮಾಯಕನ ರೀತಿ ನಟಿಸಿದ ನಾನು '' ಹೌದು ಕಣೋ ....., ಯಾಕೆ ಈ ಪ್ರಶ್ನೆ ಕೇಳ್ತಾ ಇದ್ದೀಯಾ ಅಂತಾ ಮರುಪ್ರಶ್ನೆ ಮಾಡಿದೆ. ಅದಕ್ಕೆ ಅವ ಸುಮ್ಮನೆ ಕೇಳಿದೆ..." ಎಂದಷ್ಡೇ ಹೇಳಿ ನನ್ನನ್ನು ಮೆಲ್ಲ ಹೊರಗೆ ಸಾಗಹಾಕಿದ್ದ.
   ಮರುದಿನ ನೋಡ್ತೀನಿ ನನ್ನ ಕಂಜೂಸ್ ಗೆಳೆಯ ಮಹಾಶಯ ಅದ್ಯಾವುದೋ ವೈಧ್ಯರ ಬಳಿ ಹೋಗಿ ಅವರ ಸಲಹೆಯಂತೆ ಡಯಾಗ್ನಾಸ್ಟಿಕ್ ಲ್ಯಾಬ್ ನಲ್ಲಿ ಕ್ಯೂ ನಿಂತಿದ್ದ. ಕನಿಷ್ಟ ಒಂದೈದು ಸಾವಿರನಾದ್ರೂ ಕೈ ಬಿಟ್ಟಿರುತ್ತೆ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡ ನಾನು ಅಂದು ಸಂಜೆ ಅವನ ರೂಮಿಗೆ ಹೋಗಿದ್ದೆ.
      ಅವ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಳಿತಿದ್ದ.  ನನ್ನನ್ನು ಬೈಯುತ್ತಾನೆ ಎಂದುಕೊಂಡೆ. ಊಹುಂ ಅದು ಹಾಗಾಗಲ್ಲಿಲ್ಲ. ಕಣ್ತುಂಬಾ ನೀರು ತುಂಬಿಕೊಂಡ ಅವನು ಲೋ ನನಗೆ ಶುಗರ್ ಇದೆ ಕಣೋ.., ಇವೊತ್ತು ಟೆಸ್ಟ್ ಮಾಡಿದೆ 290 ಇದೆ ಅಂತಾ ರಿಪೋರ್ಟ್ ಬಂತು. ನೀನು ಹೇಳಿದ್ದು ನಿಜ ಆಯ್ತು ಕಣೋ ಅಂದ.
       ಈಗ ಅಳುವ ಸರದಿ ನನ್ನದಾಗಿತ್ತು.