Tuesday, February 21, 2012

ಅಬಲೆ.....,

ಪತ್ರಿಕೆಗಳ ಮೇಲೆ ಕಣ್ಣು ಹಾಯಿಸುತ್ತಿದ್ದ ವಿಕಾಸ್ ಇನ್ನೇನು ಮನೆಗೆ ಹೊರಡಬೇಕು ಎಂದುಕೊಳ್ಳುವಷ್ಟರಲ್ಲಿ ಆ ಯುವತಿ ಕಛೇರಿಯ ಒಳಗಡಿಯಿಟ್ಟಳು. ಸುಮಾರು 22 ರಿಂದ 26 ರ ವೊಳಗಿನ ತರುಣಿ.  ವಿಷಾದ ತುಂಬಿದ್ದ ಅವಳ ಮುಖವನ್ನು ಕಂಡಾಕ್ಷಣವೇ ಇದು ಲವ್ ಫೆಲ್ಯೂರ್ ಕೇಸ್ ಇರಬೇಕು ಅನ್ನೋದು ಅವನಿಗೆ ಹೊಳೆದಿತ್ತು. '' ಸಾರ್, ವಿಕಾಸ್ ಅಂದ್ರೆ ನೀವೇನಾ...? ಮೌನ ಮುರಿದ ಹುಡುಗಿಗೆ ಆತ ಹೌದು ಎನ್ನುವ ಉತ್ತರ ಕೊಟ್ಟ. ಹೇಳಿ ಏನಾಗಬೇಕು....?
   ಸಾರ್..., ಹಾಗೆಂದ ಆಕೆ  ಕೆಲಕಾಲ ಜೋರಾಗಿ ಅಳಲಾರಂಭಿಸಿದಳು. ವಿಕಾಸ್ ಆಕೆಯನ್ನು ತಡೆಯುವ ಪ್ರಯತ್ನ ಮಾಡಲ್ಲಿಲ್ಲ. ಯಾಕೇಂದ್ರೆ ಆಕೆಯ ಮನಸ್ಸು ಹಗುರಾಗುವವರೆಗೆ ಅವಳು ಅಳದಿದ್ದರೆ ಪೂರ್ತಿ ಕಥೆ ಕೇಳಲು ಇಡೀ ದಿನ ಬೇಕಾಗುತ್ತೆ. ತನ್ನಷ್ಟಕ್ಕೆ ತನ್ನನ್ನು ಸಮಾಧಾನ ಮಾಡಿಕೊಂಡ ಅವಳು ಮಾತಿಗೆ ಶುರುವಿಕ್ಕಿಕೊಂಡಳು.
ಸಾರ್ ನನ್ನ ಹೆಸರು ನಯನ ಅಂತಾ, ಹೊಳೆನರಸೀಪುರದವಳು.  ಚನ್ನಪ್ಪ ಹಾಗು ಸುಮಿತ್ರ ಅನ್ನೋ ಲಿಂಗಾಯಿತ ದಂಪತಿಗಳು ನನ್ನನ್ನ ಬಾಲ್ಯದಲ್ಲೇ ದತ್ತು ತೆಗೆದುಕೊಂಡು ಸಾಕಿ ಬೆಳೆಸಿದ್ದಾರೆ. ನಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಅಶೋಕ ಅನ್ನೋ ನೀಚ ನನ್ನನ್ನು ಕಳೆದ 9 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದ. ......, ಆಕೆ ಮಾತನಾಡುತ್ತಿದ್ದಾಗ ವಿಕಾಸ್ ಕಛೇರಿಯ ಜವಾನ ಕೀರ್ತಿ ಒಳಗಡಿಯಿಟ್ಟ. ಆತನನ್ನು ಕಂಡ ನಯನ ಕೆಲಕಾಲ ವಿಚಲಿತಳಾದಳು.  ಅರ್ಧಕ್ಕೇ ಮಾತು ತುಂಡರಿಸಿದ ಅವಳು ಸಾರ್ ನಾನು ಬರ್ತೀನಿ ಸಾರ್ ನಿಮ್ಮತ್ರ ಇನ್ನೊಂದ್ಸಲ ಫೋನ್ ಮಾಡಿ ಮಾತಾಡ್ತೀನಿ ಅಂತಾ ಹೊರಡೋಕೆ ಪ್ರಯತ್ನಿಸಿದಳು. ಆದರೆ ಆಕೆಯನ್ನು ತಡೆದ ವಿಕಾಸ್ ಕುಳಿತುಕೊಳ್ಳುವಂತೆ ಸೂಚಿಸಿ ಕೀರ್ತಿಗೆ ಬೇರೆ ಕೆಲಸ ಹಚ್ಚಿ ಹೊರಗಟ್ಟಿದ. ಆತ ಹೊರಹೋದ ನಂತರ ನಯನ ಮತ್ತೆ ತನ್ನ ಕಥೆ ಮುಂದುವರೆಸಿದಳು
  ಪ್ರೀತಿ ಅನ್ನೋ ಹೆಸರಲ್ಲಿ ನನ್ನನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡ ಅಶೋಕ ನನ್ನ ಹತ್ರ ಸಾಕಷ್ಟು ಹಣ ತಗೋಂಡು ಮಜಾ ಉಡಾಯಿಸ್ತಾ ಇದ್ದ. ಆದ್ರೆ ಮದುವೆ ವಿಚಾರ ಬಂದಾಗ ಮಾತ್ರ ಏನೇನೋ ಸಬೂಬು ಹೇಳಿ ಜಾರಿಕೊಳ್ತಾ ಇದ್ದ. ಕಳೆದ ಏಳು ತಿಂಗಳ ಹಿಂದೆ ಅವನಿಗೆ ಅವನ ಮನೆಯಲ್ಲಿ ಮದುವೆ ಮಾಡೋ ಏರ್ಪಾಟು ನಡಿತಾ ಇದೇ ಅಂತಾ ಗೊತ್ತಾದಾಗ ರಂಪ ಮಾಡಿದೆ. ಅದಕ್ಕೆ ಅವನು ನನ್ನನ್ನ ಬೆಂಗಳೂರಿನ ಮಾಯಸಂದ್ರದಲ್ಲಿರೋ ಮುನೇಶ್ವರ ಟೆಂಪಲ್ ಗೆ ಕರ್ಕೊಂಡು ಹೋಗಿ ಮದುವೆ ಆದ. ಆವಾಗ ತೆಗೆದ ಫೋಟೋಗಳು ಸಾರ್ ಇವು....., ಒಂದಷ್ಟು ಫೋಟೋಗಳನ್ನ ವಿಕಾಸ್ ಟೇಬಲ್ ಮೇಲೆ ಹರವಿದಳು.
ಪೋಟೋಗಳನ್ನು ಸೂಕ್ಷ್ಮವಾಗಿ ನೋಡಿದ ವಿಕಾಸ್ '' ಸರಿ ಮುಂದೇನಾಯ್ತು ಹೇಳಮ್ಮ...'' ಎಂದ.
       ಮದುವೆಯಾದ ತಕ್ಷಣ ಅಮಾಯಕನ ರೀತಿ ನಾಟಕವಾಡಿದ ಅವನು  '' ಮುಂದಿನ ತಿಂಗಳು ನನ್ ತಂಗಿ ಮದುವೆ ಇದೆ. ಅಲ್ಲೀವರೆಗೂ ನೀ ನಿಮ್ಮನೇಲೇ ಇರು. ನಂತ್ರ ನಾನು ನನ್ನ ಮನೆಯವರನ್ನ ಒಪ್ಪಿಸಿ ನಿನ್ನನ್ನ ಕರ್ಕೊಂಡು ಹೋಗ್ತೀನಿ ಅಂತಾ ಗೋಗರೆದ. ನಾನೂ ಅವನ ಮಾತು ನಂಬಿ ಅದರಂತೆ ಮನೆಗೆ ಹೋಗೋಕೆ ಒಪ್ಪಿಕೊಂಡೆ. ಹಾಗೇ ನನ್ನನ್ನು ಮನೆಗೆ ಬಿಟ್ಟ ಅಶೋಕ ಮತ್ತೆ ವಾಪಾಸ್ ಬರಲೇ ಇಲ್ಲ. ಈಗ ಚನ್ನರಾಯಪಟ್ಟಣದ ಬಾಗೇಹೊಳೆ ಗ್ರಾಮದ ಹುಡುಗಿ ಜೊತೆ ಅವನ ಮದುವೆ ತಯಾರಿ ನಡೀತಾ ಇದೆ ಸಾರ್....., ದಯವಿಟ್ಟು ಹೆಲ್ಪ್ ಮಾಡಿ ಸಾರ್....ಆಕೆ ಮತ್ತೆ ಕಣ್ಣೀರಾದಳು.
ಹೇದರಬೇಡಮ್ಮಾ ನಿನ್ನ ಗೋಳಿನ ಕಥೆಯ ಬಗ್ಗೆ ನಾವು ನಮ್ಮ ಪತ್ರಿಕೇಲಿ ಬರೀತೀವಿ. ನೀನು ಹೊಳೆನರಸೀಪುರದ ಡಿ.ವೈ.ಎಸ್.ಪಿ ಸೇರಿದಂತೆ ಅಲ್ಲಿರೋ ಸರ್ಕಲ್ ಇನ್ಸ್ ಪೆಕ್ಟರ್ ಸೂರಪ್ಪನಿಗೆ ಕಂಪ್ಲೇಂಟ್ ಕೊಡು. ಅವರು ನಿನಗೆ ಹೆಲ್ಪ್ ಮಾಡುತ್ತಾರೆ ಎಂದು ಸಲಹೆ  ನೀಡಿದ. ಅಷ್ಟರಲ್ಲಾಗಲೇ ಆಫೀಸಿಗೆ ಮರಳಿದ್ದ ಕೀರ್ತಿ ಬಾಗಿಲ ಮರೆಯಲ್ಲಿ ನರಿಯಂತೆ ನಿಂತು ಕಿವಿಯನ್ನು ಒಳತೂರಿಸಿ ಎಲ್ಲವನ್ನೂ ಕೇಳಿಸಿಕೊಂಡಿದ್ದ.
  ಹೀಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಹೋದ ನಯನಳಿಗೆ ವಿಜಯಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಗದೀಶ ಸಾಥ್ ನೀಡಿದ. ಸೂರಪ್ಪ ಅಶೋಕನನ್ನು ಕರೆಸಿ ಹೀನಾಮಾನವಾಗಿ ಬೈದು ಬುದ್ದಿ ಹೇಳಿದ. ಮದುವೆ ಮಾಡಿಕೊಳ್ಳೋಲ್ಲ ಅಂದ್ರೆ ಅರೆಸ್ಟ್ ಮಾಡುತ್ತೇನೆ ಅಂತಾ ಬೆದರಿಸಿದ. ತನಗಿನ್ನು ಮೋಸವಾಗಲಾರದು ಎಂದು ನಂಬಿದ ನಯನ ನಿಟ್ಟುಸಿರು ಬಿಟ್ಟಳು.
ಅದೊಂದು ರಾತ್ರಿ ಬರೀ ಚರ್ಚೆ, ಮಾತುಕತೆ, ಭರವಸೆಗಳಲ್ಲೇ ಕಳೆದು ಹೋಯಿತು. ಮರುದಿನ ಅಶೋಕನನ್ನು ಕರೆ ತರಲು ಸ್ಟೇಷನ್ ಗೆ ಹೋಗಿದ್ದ ನಯನಳಿಗೆ ಅಚ್ಷರಿ ಕಾದಿತ್ತು. ಅಶೋಕನ ವಿರುದ್ದ ಮಾತನಾಡುತ್ತಿದ್ದ ವಿಜಯಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಗದೀಶ '' ಒಂದು ಲಕ್ಷ ಕೊಡಿಸುತ್ತೇನೆ ರಾಜಿ ಮಾಡಿಕೋ..ಅವನು ಇನ್ನೊಂದು ಮದುವೆ ಆಗುತ್ತಾನೆ ಜೊತೆಗೆ ನಿನ್ನನ್ನೂ ಇಟ್ಟುಕೊಳ್ಳುತ್ತಾನೆ ಎಂದ. ಇದನ್ನೊಪ್ಪದ ನಯನ ಅಲ್ಲಿದ್ದ ಸೂರಪ್ಪನ ಬಳಿ ನ್ಯಾಯ ಕೇಳಿದರೆ ಆತ ಅಶೋಕ ತಪ್ಪಿಸಿಕೊಂಡು ಹೋಗಿದ್ದಾನೆ. ನಿನಗೆ ಸಿಕ್ಕರೆ ಹಿಡ್ಕೊಂಡ್ ಬಂದು ಕೊಡು ಕೇಸ್ ಹಾಕುತ್ತೇನೆ ಎಂದ. ನಯನಳಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ವಿಕಾಸ್ ವಿಕಾಸ ಪತ್ರಿಕೆಯಲ್ಲಿ ಅವಳಂದುಕೊಂಡಂತೆ ಸುದ್ದಿ ಪ್ರಕಟವಾಗಿರಲ್ಲಿಲ್ಲ. ಕೀರ್ತಿ ಹಾಗು ಅಶೋಕ ಬಾಲ್ಯದ ಗೆಳೆಯರಾಗಿದ್ದ ಕಾರಣ ಎಡಿಟರ್ ವಿಕಾಸ್ ನ ಮನವೊಲಿಸುವಲ್ಲಿ ಕೀರ್ತಿ ಯಶಸ್ವೀಯಾಗಿದ್ದ. ವಿಕಾಸ್ ಗೆ 30 ಸಾವಿರ, ಜಗದೀಶನಿಗೆ 20 ಸಾವಿರ, ಸೂರಪ್ಪನಿಗೆ 50 ಸಾವಿರದ ಲೆಕ್ಕದಲ್ಲಿ ಒಂದು ಲಕ್ಷಕ್ಕೆ ಅಮಾಯಕ ಹೆಣ್ಣು ಮಗಳು ನಯನಳ ಬದುಕು ಹರಾಜಾಗಿತ್ತು.

Monday, February 13, 2012

ಸೆರೆ.......,

ನೀ ಅಂದುಕೊಂಡಂತೇ ಯಾವುದೂ ಆಗಲಾರದು. ಬೇಡದ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದೀಯಾ...., ಸುಮ್ಮನೆ ನಮ್ಮ ಜೊತೆ ಹೊರಡು ಅಪಾಯ ಹತ್ತಿರದಲ್ಲಿದೆ.....,
       ದೊಡ್ಡನ ಮಾತು ಕೇಳಿದರೂ ಕೇಳದವನಂತೆ ಗುಂಡ ಮೊರದಗಲದ ಕಿವಿಯಲುಗಾಡಿಸತೊಡಗಿದ.  ಅವನಿಗೆ ದೊಡ್ಡನ ಸಹವಾಸದಿಂದ ಹೊರಬಂದರೆ ಸಾಕು ಎಂಬಂತಾಗಿತ್ತು. ಯಾವಾಗಲೂ ಉಪದೇಶ ಮಾಡುತ್ತಾನೆ.., ಒಕ್ಕಣ್ಣ   ಇವನು. ಹೆಜ್ಜೆ ಇಡಬೇಕಾದರೂ ಬಗ್ಗಿ ನೆಲ ನೋಡಿ ನಡೆಯುತ್ತಾನೆ. ಇರುವೆಗಳನ್ನೂ ಕೊಲ್ಲದ ಪರಮ ಸಾಧು. ಆದರೂ ಜನ  ಇವನತ್ತ ಅನುಮಾನದ ನೋಟ ಬೀರುತ್ತಾರೆ.  ದೇಹದ ಗಾತ್ರದಲ್ಲಿ ಇಬ್ಬರೂ ಒಂದೇ ರೀತಿ ಇದ್ದೇವೆ. ಅವನಿಗೆ 60 ರ  ಆಜುಬಾಜು.., ನಾನಿನ್ನೂ ಇಪ್ಪತ್ತರ ತರುಣ.  ಹೊಳೆದಂಡೆಯಲ್ಲಿ ಸ್ನಾನ ಮಾಡಿ ಬಂದು ನಾ ನಿಂತರೆ ಮಿರ ಮಿರ ಮಿಂಚುವ ನನ್ನ ಅಂಗಸೌಷ್ಟವಕ್ಕೆ ಹಾಗು ನನ್ನ ಗಡಸುಗಾರಿಕೆಗೆ ಇಪ್ಪತ್ತು ಕಿಲೋಮೀಟರ್ ನಿಂದಲೂ ಮದನೆಯರು ಓಡೋಡಿ ಬರುತ್ತಾರೆ. ನನ್ನನ್ನು ಕಂಡರೆ ಊರ ಜನ ಬಿದ್ದೇನೋ ಕೆಟ್ಟೇನೋ ಅಂತಾ ಕಿರುಚಾಡಿಕೊಂಡು ಓಡುತ್ತಾರೆ.  ನನಗ್ಯಾರ ಭಯ....? ನಾನೇಕೆ ಹೆದರಬೇಕು.....?!.
 ಗುಂಡನ ಮನಸ್ಸಿನಲ್ಲಿ ವಿಚಾರಗಳು ವೇಗವಾಗಿ ಓಡುತ್ತಿದ್ದವು. ಅವನಂತೂ ಈ ಕಾಡು ಬಿಟ್ಟು ಕದಲಲಾರೆ ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದು ಬಿಟ್ಟಿದ್ದ.
       ಹೊರಡೋ ಕಂದ..,  ಇನ್ನು ಸಮಯ  ಇಲ್ಲ. ಬೆಳಕಾಗುವ ಮುಂಚೆ ನಾವು ಉಂಬಳಿ ಬೆಟ್ಟ ದಾಟಿ ಕೊಡಗಿನ ಕಾಡನ್ನು ಪ್ರವೇಶ ಮಾಡಬೇಕು. ನನಗೆ ಮೊದಲೇ ಸರಿಯಾಗಿ ದೃಷ್ಟಿ ಇಲ್ಲ..., ನಡೆಯುವ ಶಕ್ತಿ ಕೂಡ ಕಮ್ಮಿಯಾಗಿದೆ....., ದೊಡ್ಡನ ಮಾತು ಗುಂಡನಿಗೆ ಅಸಹನೀಯವಾಗತೊಡಗಿತು. ಸೊಂಡಿಲನ್ನು ಮೇಲೆತ್ತಿ ಜೋರಾಗಿ ಘೀಳಿಟ್ಟ ಅವ  ಇಲ್ಲಾ ನಾ ಬರೋಲ್ಲಾ..., ನಾನ್ಯಾಕೆ ಮನುಷ್ಯರಿಗೆ ಹೆದರಲಿ...? ಅವರಿಂದ ಏನೂ ಮಾಡೋಕೆ ಸಾಧ್ಯವಿಲ್ಲ.
    ಹೊತ್ತಿನ ಜೊತೆಗೆ ಆತಂಕ ಕೂಡ ಹೆಚ್ಚುತ್ತಿದೆ. ಸಹನೆ ಕಳೆದುಕೊಂಡ ದೊಡ್ಡ ತನ್ನ ಕೊಂಬಿನಿಂದ ಗುಂಡನ ತೊಡೆಗೆ ಬಲವಾಗಿ ತಿವಿದ '' ಕಾಗನೂರು, ಮಗ್ಗೆ, ಉಂಬಳಿಬೆಟ್ಟ ಸುತ್ತ ಮುತ್ತ  ಎಷ್ಟು ಮಂದಿ ನರಮಾನವರನ್ನ ಕೊಂದಿಲ್ಲ ನೀನು...? ನಿನ್ನಿಂದ ನಮ್ಮ  ಇಡೀ  ಸಂಕುಲಕ್ಕೇ ಅಪಾಯ ಶುರುವಾಗಿದೆ. ಈಗಾಗಲೇ ವೆಂಕಟೇಶ ಅನ್ನೋ ಮನುಷ್ಯ ನಿನ್ನ ಫೋಟೋ ತೆಗೆದುಕೊಂಡು ಹೋಗಿದ್ದಾನೆ. ನಿನ್ನನ್ನೇ ಸೆರೆ ಹಿಡಿಯೋಕೆ ಅಂತಾ ನೂರಾರು ಜನ ಬಂದಿದ್ದಾರೆ. ಹೊಳೆ ದಡದಲ್ಲಿ ಟೆಂಟ್ ಕೂಡ ಹಾಕಿದ್ದಾರೆ. ನಮ್ಮಿಂದ ಹೊರಹೋಗಿ ಜನರ ಜೊತೆ ಪಳಗಿರೋ ಅಭಿಮನ್ಯು, ಭರತ, ಅರ್ಜುನ, ಮೇರಿ ಸೇರಿದಂತೆ ಹಲವರು ಬಂದಿದ್ದಾರೆ. ಕಾಡನ್ನ ಕಾಯೋ ಮಂದಣ್ಣ ನಿನ್ನನ್ನ ಹಿಡಿಯದೇ ಈ ಜಾಗ ಬಿಟ್ಟು ಕದಲೋದಿಲ್ಲ ಅಂತಾ ಪ್ರಮಾಣ ಮಾಡಿದ್ದಾರೆ  ಹೀಗಿದ್ರೂ ಹುಡುಗಾಟ ಆಡ್ತೀಯಾ....? ಸುಮ್ಮನೇ ನಮ್ಮ ತಂಡದ ಜೊತೆ ನಡೆಯೋದು ಕಲಿ..,..., ಅಧಿಕಾರಯುತವಾಗಿ ಗದರಿದ. ಆದರೆ ಅದಾಗಲೇ ಸೊಕ್ಕಿ ಹೋಗಿದ್ದ ಗುಂಡನಿಗೆ ದೊಡ್ಡನ  ಈ ಯಾವುದೇ ಮಾತುಗಳು ಕಿವಿಯ ಮೇಲೆ ಬೀಳಲ್ಲಿಲ್ಲ. ಬದಲಿಗೆ ಆತ ಕಾಲು ಕೆದರಿ ದೊಡ್ಡನ ವಿರುದ್ದವೇ ಯುದ್ದಕ್ಕೆ ನಿಂತ. ದೊಡ್ಡನ ಒಕ್ಕಣ್ಣಿನಲ್ಲಿ ಹತಾಷೆಯ ಕಣ್ಣೀರು ಧಾರೆಯಾಗಿ ಸುರಿಯತೊಡಗಿತು.
         ವಂಶೋದ್ದಾರಕನಿವನು....., ಇರುವವರ ಪೈಕಿ ಅತ್ಯಂತ ಎತ್ತರ ಹಾಗು ಬಲಶಾಲಿ. ಆದ್ರೆ ಅಭಿಮನ್ಯುವಿನ ತಂಡದ ಎದುರು ಇವನ ಆಟ ನಡೆಯುವುದಿಲ್ಲ. ಹಠಕ್ಕೆ ಬಿದ್ದು ಅನ್ಯಾಯವಾಗಿ ಸೆರೆ ಸಿಗುತ್ತಾನೆ....., ಇಲ್ಲಾ ಇಲ್ಲಾ ಹಾಗಾಗಬಾರದು.  ಎಂದು ಅದೇನೋ ಲೆಕ್ಕಾಚಾರ ಹಾಕಿಕೊಂಡ ದೊಡ್ಡ ಅ್ಲಲಿಂದ ಹತ್ತು ಹೆಜ್ಜೆ ಮುಂದೆ ನಡೆದು ತನ್ನ ಹಿಂಡನ್ನು ತಲುಪಿದ. ನಂತರ ಚೋಮನಿಗೆ ಹಿಂಡಿನ  ಉಸ್ತುವಾರಿ ವಹಿಸಿ ಕೊಡಗಿನ ಕಾಡಿಗೆ ತೆರಳುವಂತೆ ಹೇಳಿ ಕಳುಹಿಸಿದ. ದೊಡ್ಡನ ಅಪ್ಪಣೆ ಮೇರೆಗೆ ಇಪ್ಪತ್ತೈದು ಆನೆಗಳು ಕೊಡಗಿನತ್ತ ಹೆಜ್ಜೆ ಹಾಕಿದವು.
   ಅದೊಂದು ರಾತ್ರಿ ಹತಾಷೆಯ ಜೊತೆಗೆ ಅತ್ಯಂತ ಭಾರವಾಗಿ ಕಳೆದು ಹೋಯಿತು. ಮರುದಿನ ಬೆಳಿಗ್ಗೆ ಉಂಬಳಿ ಬೆಟ್ಟದ ಸಮೀಪ ಜನರು ಗಿಜಿಗುಡುವ ಸದ್ದು....., ದೊಡ್ಡನನ್ನು ಕಂಡರೂ ಕಾಣದಂತೆ ಗುಂಡ ಕಾಡಿನಲ್ಲಿ ಬಗನೇ ಮರವನ್ನು ಮುರಿದು ತಿನ್ನುವುದರಲ್ಲಿ ತಲ್ಲೀನನಾಗಿದ್ದ.  ಅವನಿಂದ ಸ್ವಲ್ಪ ದೂರದಲ್ಲಿ ದೊಡ್ಡ ನಿಂತುಕೊಂಡಿದ್ದ.
     ಆಗ ಅವರಿಬ್ಬರ ನಡುವಿನ ಮೌನವನ್ನು ಭೇದಿಸುವಂತೆ ಗುಂಡಿನ ಭಾರೀ ಸದ್ದೊಂದು ಅಲ್ಲಿ ಪ್ರತಿಧ್ವನಿಸಿತು. ಗಾಬರಿಗೊಂಡ ಗುಂಡ ತಲೆಯೆತ್ತಿ ನೋಡಿದರೆ ಅಲ್ಲಿ ದೂರದಲ್ಲಿ ಕೋವಿ ಹಿಡಿದು ನಿಂತಿದ್ದ ಮನುಷ್ಯ ವೆಂಕಟೇಶ್ ಕಂಡ. ಇತ್ತ ಒಕ್ಕಣ್ಣ ದೊಡ್ಡ ಹುಚ್ಚೇರಿದಂತೆ ಕಾಡಿನೊಳಗೆ ಓಡತೊಡಗಿದ. ನೂರಾರು ಮಂದಿ ಮನುಷ್ಯರು ಅವನ ಹಿಂದೆ ಓಡತೊಡಗಿದರು. ಪ್ರಜ್ಞೆ ತಪ್ಪಿ ಬಿದ್ದ ದೊಡ್ಡನ ಮೇಲೆ ಕೆಲವರು ಜೋರಾಗಿ ನೀರು ಸುರಿಯುತ್ತಿದ್ದರೆ ಮತ್ತೆ ಕೆಲವರು ಅವನ ಬಾಲದಲ್ಲಿದ್ದ ಕೂದಲು ಕಿತ್ತುಕೊಳ್ಳತೊಡಗಿದ್ದರು. ಹೆದರಿದ ಗುಂಡ ಪೊದೆಗಳ ಮರೆಯಲ್ಲಿ ಅವಿತುಕೊಂಡ
        ಸಂಜೆಯ ಸುಮಾರಿಗೆ ದೂರದ ಗದ್ದೆಯೊಂದರಲ್ಲಿ ಅಭಿಮನ್ಯು ನೇತೃತ್ವದಲ್ಲಿ ನಾಲ್ಕಾರು ಆನೆಗಳು ದೊಡ್ಡನನ್ನು ತಿವಿದು ತಿವಿದು ಎಳೆದುಕೊಂಡು ಹೋಗುತ್ತಿದ್ದವು. ಅವನ ಕಾಲಿಗೆ ದೊಡ್ಡ ಸೆಣಬಿನ ಹಗ್ಗವನ್ನು ಬಿಗಿಯಲಾಗಿತ್ತು. ನೋವು ತಡೆಯಲಾರದೇ ಅವ ಚೀರಾಡುತ್ತಿದ್ದ.  '' ಗುಂಡಾ..., ಈಗಲಾದರೂ ಓಡು.. ತಪ್ಪಿಸಿಕೋ.. ಈ ಜನರು ನನ್ನನ್ನ ನೀನು ಅಂತಾ ತಿಳಿದುಕೊಂಡಿದ್ದಾರೆ...., ನಾ ನಿನಗಾಗಿ ಸೆರೆ ಸಿಕ್ಕಿದ್ದೇನೆ....ಓಡು...ಓಡು ತಪ್ಪಿಸಿಕೋ.....''
    ಅಭಿಮನ್ಯುವಿಗೆ ಎಲ್ಲಾ ಅರ್ಥವಾಗಿದ್ದರೂ ಮನುಷ್ಯರಿಗೆ ಅದನ್ನು ಹೇಳಲು ಸಾಧ್ಯವಿಲ್ಲ.  ಅಕಸ್ಮಾತ್ ಈತನನ್ನು ತಿವಿಯದೇ ಇದ್ದರೆ ಮೇಲಿರುವ ಮಾವುತ ಅಂಕುಶದಿಂದ ನನ್ನನ್ನು ತಿವಿಯುತ್ತಾನೆ..., ಹಾಗೆಂದುಕೊಂಡು ತನ್ನ ಕೆಲಸ ಮುಂದುವರೆಸಿದ
  ನೋವು ತಾಳದ ದೊಡ್ಡ ಘೀಳಿಡುತ್ತಲೇ ಇದ್ದ. ಕೊಡಗಿನ ಕಾಡಿನತ್ತ ಹೆಜ್ಜೆ ಹಾಕುತ್ತಿದ್ದ ಗುಂಡನ ಕಣ್ಣ ತುಂಬಾ ನೀರು ತುಂಬಿಕೊಂಡಿತ್ತು.