Monday, January 30, 2012

ಐಕಲೇ........!!???

ಸಂಜೆ ಮಬ್ಬುಗತ್ತಲಾಗುತ್ತಲೇ ತಳಮಳ ಆರಂಭಗೊಂಡಿತ್ತು. ಇಡೀ ಊರೆಲ್ಲಾ ಹುಡುಕಿದರೂ ಮಲ್ಲಿಯ ಸುಳಿವಿಲ್ಲ. ''ಮಲ್ಲಿಯನ್ನು  ಹುಡುಕಿ ಹೊಡ್ಕೊಂಡ್ ಬರ್ಲಿಲ್ಲಾ ಅಂದ್ರೆ ಮನೆಯೊಳಗೆ ಜಾಗ ಇಲ್ಲ....,'' ಅಪ್ಪನ ಕಡಕ್ ಮಾತು ಹಾಗು ಬುಸುಗುಡುವ ವಧನದ ನೆನಪಾಗಿ ಮತ್ತಷ್ಡು ಆತಂಕ ಹೆಚ್ಚಾಯ್ತು. ಇಷ್ಟಕ್ಕೆಲ್ಲಾ ನಮ್ಮಣ್ಣನೇ ಕಾರಣ ಬೇಡಾ ಬೇಡಾ ಅಂದ್ರೂ ಚಂದ್ರೇಗೌಡ ಮತ್ತೆ ಅಶ್ವಥೀ ಜೊತೆ ನನ್ನನ್ನೂ ಸಿನೇಮಾಕ್ಕೆ ಕರೆದುಕೊಂಡು ಹೋಗಿದ್ದ. ಮ್ಯಾಟನೀ ಶೋ ಮುಗಿಸಿ ಮನೆಗೆ ಬಂದಿದ್ದ ನಮಗೆ ನಮ್ಮ ಮನೆಯ ಎಮ್ಮೆ ಮಲ್ಲಿ ಇನ್ನೂ ಬಂದಿಲ್ಲ ಅಂತ ಅಮ್ಮ ಹೇಳಿದಾಗಲೇ ಗಾಬರಿಯಾಗಿತ್ತು.  ಅವತ್ತು ಶನಿವಾರದ ರಜಾದಿನ. ಹೇಮಾವತಿ ಪಾರ್ಮ್ ನ ಒಳಗೆ ಎಮ್ಮೆಯನ್ನು ಮೇಯಿಸಿಕೊಂಡು ಬರ್ತೀವಿ ಅಂತಾ ರೀಲ್  ಬಿಟ್ಟು ಸಿನೇಮಾಕ್ಕೆ ಹೋಗಿದ್ದೆವು. ವಾಪಾಸ್ ಬಂದು ನೊಡಿದ್ರೆ  ಮಲ್ಲಿ ಇರಲ್ಲಿಲ್ಲ. ಸರಿ, ಮನೆಗೆ ಹೋಗಿರಬಹುದು ಅಂತಾ ಅಂತ ಮನೆಗೆ ಬಂದ್ರೆ ಅಲ್ಲೂ ಕೂಡ ಇಲ್ಲ....! ನಮ್ಮಣ್ಣ ಅದೇನೇನೋ ಸುಳ್ಳು ಹೇಳಿದ್ರೂ ಅದು ವರ್ಕೌಟ್ ಆಗಲೇ ಇಲ್ಲ.  ಕತ್ತಲು ಹೆಚ್ಚಾಗುತ್ತಿತ್ತು, ಗಲ್ಲಿ ಗಲ್ಲಿಯಲ್ಲೂ ಮಲ್ಲೇ ಏಗೋ......, ಮಲ್ಲೀ ಏಗೋ......, ಅಂತಾ ನಾವು ಕೂಗುತ್ತಿದ್ದ ಧ್ವನಿ ಪ್ರತಿಧ್ವನಿಸುತ್ತಿತ್ತು.
      ಅದು ಸವಿಯಾದ ಮುಂಜಾವು ಚೆಂಬು ಹಿಡಿದು ಹಾಲು ಕರೆಯಲು ಕೊಟ್ಟಿಗೆಗೆ ತೆರಳಿದ್ದ ನಮ್ಮಮ್ಮ ಐಕಲೇ....ಐಕಲೇ.......!!?? ( ಕೊಂಕಣಿ ಭಾಷೆಯಲ್ಲಿ ಹಾಗೆಂದರೆ ಕೇಳಿಸ್ತಾ...? ಅಂತಾ. ಸಾಮಾನ್ಯವಾಗಿ ಕೊಂಕಣಿ ಗೃಹಿಣಿಯರು ಗಂಡನನ್ನು ಹಾಗೇ ಕರೆಯುತ್ತಾರೆ)  ಅಂತಾ ಒಂದೇ ಸವನೆ ಅರಚಾಡಲಾರಂಭಿಸಿದರು. ಬೆಚ್ಚನೆ ಕೌದಿ ಹೊದ್ದು ಮಲಗಿದ್ದ ನಮ್ಮಣ್ಣ ಚಂಗನೆ ಒಂದೇ ಜಿಗಿತಕ್ಕೆ ಮುಂಬಾಗಿಲಿನಿಂದ ಅಂಗಳಕ್ಕೆ ಹಾರಿದ. ಬೆಳಗ್ಗಿನ ಛಳಿ ಮೈ ಮೇಲೆ ಬಿದ್ದ ಕೂಡಲೇ ಮುಂದಾಗುವ ಅನಾಹುತ ಅರಿತ ನಾನೂ ಕೂಡ ಅಷ್ಟೇ ವೇಗದಲ್ಲಿ ಅವನನ್ನು ಹಿಂಬಾಲಿಸಿದೆ.
        ಅದಕ್ಕೆ ಬಲವಾದ ಕಾರಣ ಇತ್ತು. ಹಿಂದಿನ ದಿನ ನಡುರಾತ್ರಿಯವರೆಗೂ ಹುಡುಕಾಡಿದರೂ ನಮಗೆ ಮಲ್ಲಿ ಸಿಕ್ಕಿರಲ್ಲಿಲ್ಲ. ಸ್ಟ್ರೀಟ್ ಲೈಟ್ ಗಳೇ ಇಲ್ಲದ ಕಾಲವದು. ಬೀದಿನಾಯಿಗಳು ನಮ್ಮ ಮೇಲೆ ಹಸಿದ ಹೆಬ್ಬುಲಿಗಳಂತೆ ಧಾಳಿ ಮಾಡುತ್ತಿದ್ದವು. ಹುಡುಕೀ ಹುಡುಕೀ ಸೋತ ನಮಗೆ ಅಮೀರ್ ಜಾನ್ ಸಾಹೇಬರ ಚಕ್ರ ಕಳಚಿದ ಎತ್ತಿನ ಬಂಡಿ ಬಳಿ ಮಲ್ಲಿಯಂತಹ ಆಕೃತಿಯೊಂದು ಕಂಡಿತು. ಕೂಡಲೇ ಅಲ್ಲಿಗೆ ಓಡಿದ ನಮ್ಮಣ್ಣ ಅದರ ಕೊರಳಿಗೆ ಹಗ್ಗ ಬಿಗಿದು ನನ್ನ ಕೈಗೆ ಕೊಟ್ಟ. ಕಡುಗತ್ತಲಾಗಿದ್ದರಿಂದ ನಾನೂ ಕೂಡ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲ್ಲಿಲ್ಲ. ಹಿಡ್ಕೊಳ್ಳೋ......., ನಾನು ಹೊಡಿತೀನಿ ಅಂತಾ ಮಲಗಿದ್ದ ಎಮ್ಮೆಯನ್ನು ಎಬ್ಬಿಸಿ ಬಾರು ಕೋಲಿನಿಂದ ಎರಡೇಟು ಭಾರಿಸಿದ. ಪಾಪ ಎಮ್ಮೆ, ದುಸುರಾ ಮಾತನಾಡದೇ ನನ್ನನ್ನು ಹಿಂಬಾಲಿಸತೊಡಗಿತು. ಮನೆ ತಲುಪಿದ ಕೂಡಲೇ ಅಪ್ಪನನ್ನು ಎಬ್ಬಿಸಿ '' ಅಪ್ಪಾ ಎಮ್ಮೆ ಅಟ್ಟಿಕೊಂಡು ಬಂದಿದ್ದೇವೆ ಅಂತಾ ಕೂಗಿ ಹೇಳಿದೆ. ನಿದ್ದೆಗಣ್ಣಿನಲ್ಲಿದ್ದ ಅವರು ಕಟ್ಟಾಕಿ ಬಿದ್ಕೊಳ್ಳಿ...., ಎಂದು ಮಗ್ಗಲು ಬದಲಾಯಿಸಿಕೊಂಡಿದ್ದರು. ಹಾಗೇ ಎಮ್ಮೆಯನ್ನು ಒಳಗಟ್ಟುವಾಗ ನಮ್ಮಣ್ಣ ಮುಸಿ ಮುಸಿ ನಗುತ್ತಿದ್ದ. ನನ್ನ ಮನಸ್ಸಿನಲ್ಲಿ ಸಣ್ಣ ಅನುಮಾನವೊಂದು ಆಗಲೇ ಹುಟ್ಟಿಕೊಂಡಿತ್ತು.
    ಅಮ್ಮನ ಕಿರುಚಾಟ ಕೇಳಿ ಅಪ್ಪ ಕೊಟ್ಟಿಗೆಯ ಒಳಗೋಡಿದರು. ಸ್ವಲ್ಪ ಸಮಯದ ನಂತರ ಜೋರಾಗಿ ನಗುತ್ತಲೇ ಹೊರಬಂದ್ರು. ನನಗೋ ಭಯವೇ ಭಯ........, ನಮ್ಮಣ್ಣನಿಗೆ ಸಂಪೂರ್ಣ ಗೊಂದಲ.  ಮುನ್ನೆಚ್ಚರಿಕೆ ಕ್ರಮವಾಗಿ ನಾವು ಮನೆಯಿಂದ ಸ್ವಲ್ಪಮುಂದೆ ಇದ್ದ ರಸ್ತೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ ಇದ್ದೆವು. ನಾನು ಅನುಮಾನ ಕ್ಲಿಯರ್ ಮಾಡಿಕೊಳ್ಳಲು ನಮ್ಮಣ್ಣನಿಗೆ  ''ಯಾಕೋ ಓಡ್ಬಂದೇ.....? ಅಂತಾ ಕೇಳಿದೆ. ಅದಕ್ಕವನು '' ಲೋ ರಾತ್ರಿ ಹೊಡ್ಕೊಂಡು ಬಂದಿರೋದು ನಮ್ಮ ಮಲ್ಲಿ ಅಲ್ಲಾ ಕಣೋ..., ಅಮೀರ್ ಜಾನ್ ಸಾಹೇಬ್ರ ವಯಸ್ಸಾಗಿರೋ ಕುರುಡ ಕೋಣ ಕಣೋ..., ತುಂಬಾ ತಡ ಆಗಿತ್ತಲ್ಲಾ...., ಅದ್ಕೇ ಅಪ್ಪನ್ನ ಯಾಮಾರಿಸೋಕೇ......., ಅಂತಾ ಮುಂದುವರೆಸುತ್ತಲೇ  ಇದ್ದ. ನಾನು ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ. ಬೆಳ್ಳಂಬೆಳಗ್ಗೇ ಬೆಂಬು ಹಿಡಿದುಕೊಂಡು ಹಾಲು ಕರೆಯಲು ಹೋಗಿದ್ದ ಅಮ್ಮನಿಗೆ ಗಾಬರಿಯಾಗದೇ ಇನ್ನೇನಾಗುತ್ತೇ ಹೇಳಿ.....? ಪಾಪ ಅದು ಸಾಧು ಕೋಣವಾಗಿದ್ದರಿಂದ ಯಾರಿಗೂ ಏನೂ ತೊಂದರೆ ಮಾಡಲ್ಲಿಲ್ಲ. ಅಪ್ಪನಿಗೆ ಕೋಪ ಬಂದಿತ್ತಾದರೂ ನಮ್ಮಣ್ಣನ ಸಾಂದರ್ಭಿಕ ಬುದ್ದಿವಂತಿಕೆ ಕಾರಣ ಮಾಪೀ ಸಿಕ್ಕಿತ್ತು.

Monday, January 23, 2012

ಮಕ್ಳು ಕಳ್ರು........,

        ಇವ್ರುನ್ನ ಯಾವತ್ತೂ ಇಲ್ಲಿ ನೋಡೇ ಇಲ್ಲ......, ನಮ್ಮೂರಿನ್ ನೆಂಟ್ರು ಕೂಡಾ ಅಲ್ಲಾ.....,!!ಗುಂಪು ಕಟ್ಕೊಂಡ್ ಬಂದಿರೋ ಇವ್ರೆಲ್ಲಾ ಅದೇನ್ ಹುಡುಕ್ತಾ ಆವ್ರೋ ಗೊತ್ತಿಲ್ಲ....,?!! ಇದ್ದಕ್ಕಿದ್ದಂತೆ ಊರಿನೊಳಗೆ ಬಂದಿದ್ದ ಐವರು ಅಗಂತುಕರನ್ನು ಕಂಡು ಶಂಕ್ರ ತಲೆಕೆರೆದುಕೊಂಡ. ಅವರು ಅವನ ಕಣ್ಣೆದುರೇ ಸುಳಿದಾಡುತ್ತಿದ್ದರು. ಅಷ್ಟೊತ್ತಿಗೇ ಅಲ್ಲಿ ಶಾಲೆ ಸಮೀಪ ಯಾರೋ ಹೆಂಗಸರು ಜೋರಾಗಿ ಮಾತನಾಡಿಕೊಳ್ಳುತ್ತಿದ್ದುದು ಶಂಕ್ರನ ಕಿವಿಗೆ ಬಿತ್ತು.
 ಬಾರೇ ಮ್ಯಾಕೇ ಯಾರೋ ಗೊತ್ತುಗುರಿ ಇಲ್ದೋರೂ ಚಂದ್ರೇಗೌಡ್ರು  ಹಿರಿಮಗ್ಳಾವ್ಳಲ್ಲಾ....., ಜಾನಕಿ....., ಅದೇ ಜಾನಿ ಜಾನಿ ಅಂತಾರಲ್ಲಾ.... ಅವ್ಳು ಕೈ ಹಿಡಿದು ಎಳುದ್ರಂತೇ....., ಅವ್ಳು ಕೊಸರಾಡ್ಕೊಂಡು ಒಂದೇ ಸವ್ನೇ ಬಡ್ಕೊಂಡು ಓಡ್  ಬಂದ್ಲಂತೇ...., ಯಾರೊ ಕಳ್ರ್ ಇದ್ದಂಗೆ ಇದ್ರಂತೆ ಕಣ್ರೀ.........!!!! ಸಖೇದಾಶ್ಚರ್ಯಗಳಿಂದ ಹೇಳುತ್ತಿದ್ದ ಅವಳ ಮಾತಲ್ಲಿ ಕಳ್ರೂ ಅನ್ನೋ ಪದ ಶಂಕ್ರನಿಗಷ್ಟೇ ಅಲ್ಲ, ಅಲ್ಲಿದ್ದ ಎಲ್ಲರ ಕಿವಿ ನಿಮಿರುವಂತೆ ಮಾಡಿತು. ಯಾಕಂದ್ರೆ ಹೊಳೆನರಸೀಪುರ ಪೊಲೀಸರು ಮೊನ್ನೆ ಮೊನ್ನೆಯಷ್ಟೇ ಈ ರೀತಿ ಅನುಮಾನ ಬರೋ ಜನ ಕಂಡ್ರೆ ಮಾಹಿತಿ ನೀಡಿ ಅಂತಾ ದೊಡ್ಡ ಚೀಟಿ ಬರೆದು ಊರ ಹೆಬ್ಬಾಗಿಲಿಗೆ ಅಂಟಿಸಿ ಹೋಗಿದ್ದರು.  ಅಲ್ಲಿ ದುಸುರಾ ಮಾತೇ ಇಲ್ಲ. ಊರೊಳಗೆ ಮಕ್ಕಳ ಕಳ್ಳರು ಬಂದಿದ್ದಾರೆ. ಇಲ್ಲಿ ಮಕ್ಕಳನ್ನು ಕದ್ದು ಉತ್ತರ ಕರ್ನಾಟಕದಲ್ಲಿ ನಿಧಿಗಾಗಿ ಬಲಿ ಕೊಡ್ತಾರೆ........., ಮತ್ತೆ ಕೆಲವರು ಕಣ್ಣು ಕಿತ್ತು ಬಿಕ್ಷೆ ಬೇಡಿಸ್ತಾರೆ..........., ಅನ್ನೋ ತೀರ್ಮಾನವೇ ಆಗಿ ಹೋಯ್ತು. ಅದು ಕಾಳ್ಗಿಚ್ಚಿನಂತೆ ಮನೆಯಿಂದ ಮನೆಗೆ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡ ಸುದ್ದಿಯೇ ಆಗಿ ಹೋಯ್ತು.
     ಹಾಗೇ ಸುದ್ದಿ ಹರವುತ್ತಿದ್ದ ಮಂಜೇಗೌಡನಿಗೆ ಊರಿನ ಅಂಗನವಾಡಿ ಬಳಿ ಆ ಐವರ ತಂಡ ಇರೋದು ಕಂಡೇ ಬಿಡ್ತು. ಏ.,,,,,,, ಇಲ್ಲೇ ಇದಾರೇ ಕಣುರ್ಲಾ...., ಬಲ್ಲಿ ಬಲ್ಲಿ ಬಲ್ಲಿ ಅಂತ ಜೋರಾಗಿ ಕೂಗಿಯೇ ಬಿಟ್ಟ.
      ಮಂಜೇಗೌಡನ ಧನಿಗೆ ಅಲ್ಲಿ ಹೆಂಗಸರು ಮಕ್ಕಳು ಸೇರಿದಂತೆ ನೂರಾರು ಮಂದಿಯ ದಂಡೇ ಸೇರಿತ್ತು. ಅವರಲ್ಲಿದ್ದ ಯಾರೋ ಒಬ್ಬ ಏನ್ ನೋಡ್ತಿದ್ದೀರ್ಲಾ ...? ಇಕ್ಕುರ್ಲಾ......, ಅಂತ ಆದೇಶ ಮಾಡಿ ಶುರುವಿಕ್ಕಿಕೊಂಡ. ಪೊರಕೆ, ಚಪ್ಪಲಿ, ದೊಣ್ಣೆ ಎಲ್ಲಾ ಸೇರಿದಂತೆ ಕೈಗೆ ಸಿಕ್ಕಿದರಲ್ಲಿ ಬಡಿದದ್ದೇ ಬಡಿದದ್ದು.
    ಹಾಗೇ ಒದೆ ತಿನ್ನುತ್ತಿದ್ದವನ ಪೈಕಿ ಒಬ್ಬಾತ ನಿಲ್ಸಿ...ನಿಲ್ಸೀ..., ನಾವು ಕಳ್ಳರಲ್ಲ..., ಕಳ್ಳರನ್ನ ಹಿಡಿಯೋಕೆ ಬಂದಿರೋ ಪೋಲಿಸ್ರು...ಅಂತ ಅರಚಾಡಲಾರಂಭಿಸಿದ. ಹೊಡೆಯುತ್ತಿದ್ದುದನ್ನು ನಿಲ್ಲಿಸಿದ ಅವರು ಏನೈತ್ಲಾ ಪ್ರೂಫೂ.....? ಅಂತಾ ವಿಚಾರಣೆಗೆ ಶುರುವಿಕ್ಕಿಕೊಂಡರು. ಗ್ರಹಚಾರಕ್ಕೆ ಅವರ ಪೈಕಿ ಒಬ್ಬನಲ್ಲಿ ಮಾತ್ರ ಐ.ಡಿ ಕಾರ್ಡ್ ಇತ್ತು. ಆದ್ರೆ ಗ್ರಾಮಸ್ಥರಿಗೆ ಇದರಿಂದ ನಂಬಿಕೆ ಬರಲ್ಲಿಲ್ಲ. ಡೂಪ್ಲಿಕೇಟು ಇರ್ಬೋದು........!? ಅನ್ನೋ ಅನುಮಾನ.
 '' ದಯವಿಟ್ಟು ಹೊಡೀಬೇಡಿ ಅನುಮಾನ ಇದ್ರೆ ನೀವು ಪೊಲೀಸರಿಗೆ ಪೋನ್ ಮಾಡಿ ಕರೆಸಿಕೊಳ್ಳಿ, ಎಲ್ಲಾ ಕ್ಲಿಯರ್ ಆಗುತ್ತೆ.'' ಸುಧಾರಿಸಿಕೊಳ್ಳುತ್ತಿದ್ದ ಒಬ್ಬಾತ ಕೈ ಮುಗಿದ.
        ಗ್ರಾಮಸ್ಥರಿಗೆ ಇದು ಸರಿ ಎನಿಸಿತು. ಕೂಡ್ಲೆ ಡಿ.ವೈ.ಎಸ್.ಪಿ ಪರಶುರಾಮ್ ಸಾಹೇಬರಿಗೆ ಪೋನ್ ಮಾಡಿದ್ರು. ಅದೇ ರೀತಿ ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಹಾಗು ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಗೂ ಮಾಹಿತಿ ರವಾನೆ ಮಾಡಿದ್ರು.
ಯಾವುದಕ್ಕೂ ಇರಲಿ ಅಂತಾ ಒಂದೆರೆಡು ಟಿ.ವಿ ಚಾನೆಲ್ ಗೂ  ವಿಷಯ ತಿಳಿಸಿದ್ದರು. ಅಷ್ಟೊತ್ತಿಗಾಗಲೇ ವಿಷಯ ಹಳ್ಳಿಯಿಂದ ಹಳ್ಳಗೆ ಹರಡಿದ್ದ ಕಾರಣ ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಆ ಐವರು ಅಗಂತುಕರನ್ನು ಊರಿನ ಸಮುದಾಯ ಭವನದ ಬಳಿ ಕಟ್ಟಿ ಹಾಕಲಾಗಿತ್ತು.
   ಅರ್ಧ ಘಂಟೆಯ ಒಳಗೆ ಅತ್ತೀಚೌಡೇನಹಳ್ಳಿ ಗ್ರಾಮಕ್ಕೆ ಪೊಲೀಸರ ಸೈನ್ಯವೇ ಧಾಳಿಯಿಟ್ಟಿತ್ತು. ಹಾಗೇ ತನಿಖೆ ನಡೆಸಿದ ಪೊಲೀಸರಿಗೆ ಆ ಐವರು ಕೂಡ ಪೊಲೀಸ್ ಪೇದೆಗಳು, ಸಕ್ಕರೆ ಲಾರಿಯೊಂದನ್ನು ಕದ್ದು ಈ ಗ್ರಾಮಕ್ಕೆ ತಂದಿರುವ ಖಚಿತ ಮಾಹಿತಿ ಆಧರಿಸಿ ಕಳ್ಳನನ್ನು ಹುಡುಕಿಕೊಂಡು ಬಂದಿದ್ದಾರೆ ಅನ್ನೋ ವಾಸ್ತವ ಸ್ಥಿತಿ ಅರಿವಾಗಿತ್ತು.
     ಸಿ.ಪಿ.ಐ ಗೋಪಾಲ್ ನಾಯಕ್ ಸಾಹೇಬರಿಗೆ ಕೆಂಡದಂತ ಕೋಪ. ಪೊಲೀಸರನ್ನೇ ಕಟ್ಟಿ ಹಾಕಿ ಥಳಿಸೋದು ಅಂದ್ರೇ ಸಾಮಾನ್ಯಾನಾ......?! ಯಾರಯ್ಯಾ ಹೊಡೆದೋವ್ರೂ....? ಅಂತ ಎಗರಾಡ ತೊಡಗಿದರು. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಗಲಾಟೆ ಜೋರಾಗತೊಡಗಿತು. ಯಾರೋ ಕಿಡಿಗೇಡಿಗಳು ಕಲ್ಲು ತೂರಾಡತೊಡಗಿದರು. ಇದರಿಂದ ಪೊಲೀಸರ ಜೀಪ್ ಗಳು, ಕ್ಯಾಮೆರಾಗಳು ಪುಡಿಯಾದವು. ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡರು.
      ಇವೆಲ್ಲಾ ಗಲಾಟೆಗಳ ನಡುವೆ ಆ ಊರಿನ ಆಕೃತಿಯೊಂದು ಕತ್ತಲಲ್ಲಿ ಮರೆಯಾಗಿ ಹೋಯ್ತು. ಆತ ದಾವಣಗೆರೆಯಿಂದ ಸಕ್ಕರೆ ಲಾರಿ ಕದ್ದು ತಂದಿದ್ದ ಕಳ್ಳ.............,
     ಈಗ ಪೊಲೀಸರು ಆ ರಾತ್ರಿ ಗಲಾಟೆ ಸಮಯದಲ್ಲಿ ತೆಗೆದ ಪೋಟೋಗಳನ್ನು ಹಿಡಿದು ಕಲ್ಲು ತೂರಿದ ಕಿಡಿಗೇಡಿಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಈಗಾಗಲೇ ಊರು ಬಿಟ್ಟಿದ್ದಾರೆ.

Tuesday, January 10, 2012

ಮನೆಯಂಗಳದ ಬೆಳಕು ಆರಬಾರದು......

ರಾಗಿ, ಜೋಳ, ಭತ್ತ,  ಅಡಿಕೆ ಜೊತೆಗೆ ಅವೆಲ್ಲವನ್ನೂ ಬೆಳೆಯುತ್ತಿದ್ದ ಮೂರೆಕರೆ ಹೊಲವನ್ನು ಮಾರಿದ ದುಡ್ಡು.......,
    ಕಣ್ಣೆದುರು ಬೆಳೆದು ನಿಂತ ಮಗಳು.......,
      ಅವಳ ಮದುವೆಗೆ ರಾಜ್ಯದ ಸಾವಂತರಾಜ ರೇವುಸಿದ್ದಣ್ಣೇಶ್ವರರನ್ನು ಕರೆಯಬೇಕು. ಊರ ಮಂದಿಗೆಲ್ಲಾ ಮೂರು ದಿನ ಮದುವೆ  ಹೆಸರಿನಲ್ಲಿ ಹಬ್ಬದೂಟ ಬಡಿಸಬೇಕು. ಮದುವೆಗೆ ಬಂದ ಎಲ್ಲರಿಗೂ ತಾಂಬೂಲದ ಜೊತೆಗೆ ಕಾಣಿಕೆ ಕೊಟ್ಟು ಕಳುಹಿಸಬೇಕು. ಬಂದ ಎಲ್ಲರೂ '' ಮಾದೇಗೌಡ..., ಇದು ಮದ್ವೆ ಅಲ್ಲ ಕಣೋ...., ಉತ್ಸವ,  ಉತ್ಸವ......'' ಅಂತಾ ಬಾಯ್ತುಂಬಾ ಹೊಗಳಬೇಕು.
ಮಾದೇಗೌಡ ತನ್ನಷ್ಟಕ್ಕೆ ತಾನೇ ಉಬ್ಬಿ ಹೋದ. ಮನೆಯೊಳಗೆ ಮಡದಿ ಮೀನಾಕ್ಷಿ ಮಗಳು ತನುಜಾ ಜೊತೆ ಮಲಗಿದ್ದಾಳೆ. ಈಗಲೂ ಆಕೆ ಪುಟ್ಟ ಮಕ್ಕಳಂತೆ ತಾಯಿಯ ತೋಳಿನ ಮೇಲೆ ತಲೆಯಿಟ್ಟು ಮುದುರಿ ಮಲಗಿಕೊಳ್ಳುತ್ತಾಳೆ. ಭಾರೀ ಅದೃಷ್ಟವಂತೆ ಅವಳು. ಅವಳ ಕಾಲ್ಗುಣವೋ ಏನೋ ಆಕೆ ಹುಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಗಿದೆ.  ದುಡಿದದ್ದೆಲ್ಲಾ ಬಂಗಾರವಾಗಿ ಅಪ್ಪ ಕೊಟ್ಟ ಒಂದೆಕರೆ ಹೊಲ ಈಗ ನಾಲ್ಕೆಕರೆ ಬೆಳೆದು ಬಿಟ್ಟಿದೆ. ಮುದ್ದಿನ ಮಗಳ ಸೊಬಗಿಗೆ ಬೆರಗಾದ ಪಕ್ಕದೂರಿನ ಜಮೀನ್ದಾರನ ಮಗ ಅವಳನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದಿದ್ದಾನೆ. ಶ್ರೀಮಂತರಲ್ಲಿ ಶ್ರೀಮಂತ.., ಚೆಲುವರಲ್ಲಿ ಚೆಲುವ. ಮಾದೇಗೌಡನಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ತನ್ನಪ್ಪ ತನಗೆ ಕೊಟಿದ್ದ ಹೊಲವನ್ನು ಉಳಿಸಿಕೊಂಡು ತಾನು   ಕಷ್ಟ ಪಟ್ಟು ಸಂಪಾದಿಸಿದ್ದ ಮೂರೆಕೆರೆ ಹೊಲವನ್ನು ಮಾರಿಬಿಟ್ಟ. ಈ ಬಾರಿ ಉತ್ತಮ ಇಳುವರಿ ಇದ್ದ ಕಾರಣ ದಾಸ್ತಾನು ಮಾಡಿದ್ದ ದವಸ ಧಾನ್ಯಗಳನ್ನೆಲ್ಲಾ ಮಾರುಕಟ್ಟೆಗೆ ಸಾಗಿಸಿದ್ದ. ಮಾದೇಗೌಡ ಬೆಳಕಾಗುವುದನ್ನೇ ಬೆರಗುಗಣ್ಣಿನಿಂದ ಕಾಯತೊಡಗಿದ.
    ಮುಂಜಾನೆ ಲಗುಬಗನೆ ಎದ್ದ ಮಾದೇಗೌಡ ಮನೆಯೆದುರೇ ಇದ್ದ ಹೊಲದತ್ತ ಹೊರಟ. ಅಲ್ಲಿ ಮಾವಿನ ಮರಗಳ ನಡುವೆ ಇದ್ದ ಎರಡು ಬಾಳೇಗಿಡಗಳ ಎದುರು ಸಮಾನಾಂತರವಾಗಿ ದೊಡ್ಡ ದೊಂದಿಯೊಂದನ್ನು ನೆಟ್ಟು ಅದಕ್ಕೆ ಎಣ್ಣೆ ಸುರಿದ. ಪತಿಯ ಜೊತೆ ತಾನೂ ಹೊಲಕ್ಕೆ ಬಂದಿದ್ದ ಮಡದಿ ಮೀನಾಕ್ಷಿ ಅಚ್ಚರಿಯಿಂದ ಏನ್ರೀ ಇದು.........? ಅಂತಾ ಹುಬ್ಬೇರಿಸಿದಳು.
    ಮೀನಾಕ್ಷೀ ನಾನು ಈಗ ಪೇಟೆಗೆ ಹೋಗ್ತಾ ಇದೀನಿ. ಅಲ್ಲಿ ತೋಟ ಹಾಗು ಧಾನ್ಯ ಮಾರಿದಕ್ಕೆ  ಶೆಟ್ಟಿ ಮುನ್ನೂರು ಬಂಗಾರದ ನಾಣ್ಯ ಕೊಡ್ತಾನೆ. ಅದ್ರಿಂದ ತನುಜಾಗೆ ಒಡವೆ ವಸ್ತ್ರ, ಬಟ್ಟೆ-ಬರೆ ಎಲ್ಲಾ ತರ್ತೀನಿ........, ಗೌಡನ ಮೊಗದಲ್ಲಿ ಸಂಭ್ರಮ ಲಾಸ್ಯವಾಡುತ್ತಿತ್ತು. ಅದೇನೋ ಸರೀರೀ....ಇದೇನಿದೂ ಇಷ್ಟು ದೊಡ್ಡ ದೊಂದಿ...? ಅದೂ ಹಗಲು ಹೊತ್ತಲ್ಲೀ......?!! ಮೀನಾಕ್ಷಿ ಯ ಮರುಪ್ರಶ್ನೆಗೆ ನಸುನಕ್ಕ ಮಾದೇಗೌಡ '' ಅದೂ ನನ್ನ ಪಾಲಿನ ಅದೃಷ್ಟದ ಬೆಳಕು. ಪೇಟೆಯಿಂದ ಗಾಡಿಕಟ್ಟಿಕೊಂಡು ಬರುವಾಗ ಕತ್ತಲಾಗುತ್ತೆ.  ನೀನು ಕತ್ತಲು ಹತ್ತುವ ಮುನ್ನವೇ ಈ ದೊಂದಿಯನ್ನು ಹತ್ತಿಸಿಡು. ಇವೊತ್ತಿನಿಂದ ತನುಜಾಳ ಮದುವೆ ಮುಗಿಯೋವರೆಗೂ ಈ ದೊಡ್ಡದೊಂದಿಗೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕು......,  ಮೆನೆಯಂಗಳಕ್ಕೆ ಬೀಳುವ ಈ ಬೆಳಕು ಮದುವೆ ಮುಗಿಯೋವರೆಗೂ ಆರಬಾರದು....., ಗಂಡನ ಕಾಳಜಿಗೆ ಮೀನಾಕ್ಷಿಯ ಕಣ್ಣಾಲಿಗಳಲ್ಲಿ ನೀರಾಡತೊಡಗಿತ್ತು.
        ಗಾಡಿ ಕಟ್ಟಿ ಹೊರಟ ಗೌಡನಿಗೆ ಖುಷಿಯೋ ಖುಷಿ. ಅಡುಗೆಯವರಿಂದ ಹಿಡಿದು ಪ್ರತಿಯೊಬ್ಬರಿಗೂ ಹಣ ಕೊಟ್ಟಿದ್ದಾಗಿದೆ. ನಿರೀಕ್ಷೆಯನ್ನೂ ಮೀರಿ ಒಡವೆ,ವಸ್ತ್ರ ಇತ್ಯಾದಿ ಕೊಂಡಿದ್ದಾಗಿದೆ. ಎಲ್ಲಾ ಕಳೆದು ನೂರೈವತ್ತು ಚಿನ್ನದ ನಾಣ್ಯ ಇನ್ನೂ ಮಿಕ್ಕಿದೆ. ಮಗಳ ಮದುವೆ ನಾನಂದುಕೊಂಡದ್ದಕ್ಕಿಂತ ಜೋರಾಗಿಯೇ ನಡೆಯುತ್ತೆ.
     ದಢ್...ಧಡ್..ಧಡಾರ್............, ಇದ್ದಕ್ಕಿದ್ದಂತೆ ರಸ್ತೆಯ ಮಾದೇಗೌಡನ ಎತ್ತಿನ ಗಾಡಿ ರಸ್ತೆಯ ಪಕ್ಕದ ಹೊಂಡಕ್ಕೆ ಉರುಳಿ ಬಿತ್ತು. ಗಾಡಿ ಓಡಿಸುತ್ತಿದ್ದ  ಆಳು ಸಣ್ಣನನ್ನು ಅದ್ಯಾರೋ ಮಾರಣಾಂತಿಕವಾಗಿ ಥಳಿಸುತ್ತಿದ್ದಾರೆ. ಗೌಡನ ಕಣ್ಣಿಗೆ ಮೆಣಸಿನ ಪುಡಿ ಎರಚಿದ ಒಬ್ಬ ಚೀರಾಡುತ್ತಿದ್ದ ಅವನ ಹೆಡೆಮುರಿ ಕಟ್ಟಿದ್ದಾನೆ.  ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗೌಡನ ಬಳಿಯಿದ್ದ ಚಿನ್ನದ ನಾಣ್ಯ,  ಒಡವೆ, ವಸ್ತ್ರ ಇತ್ಯಾದಿ ದರೋಡೆಕೋರರ ಪಾಲಾಗಿ ಹೋಗಿತ್ತು. ಆ ತಡರಾತ್ರಿಯಲ್ಲಿ ದಟ್ಟಕಾಡಿನ ನಡುವೆ ಗೌಡ ಹಾಗು ಆತನ ಕೆಲಸದಾಳಿನ ಚೀರಾಟ ಅಕ್ಷರಷಃ ಅರಣ್ಯ ರೋಧನವಾಗಿತ್ತು.
      ಬೆಳಕು ಹರಿಯುತ್ತಲೇ ದಾರಿಹೋಕರ ನೆರವಿನಿಂದ ಕಟ್ಟುಗಳನ್ನು ಬಿಚ್ಚಿಸಿಕೊಂಡ ಮಾದೇಗೌಡ ಏದುಸಿರು ಬಿಡುತ್ತಾ ಸೇನಾಧಿಪತಿ ಬಾಣಚಂದ್ರನ ಬಳಿ ಡೌಢಾಯಿಸಿದ. ಆತನ ರೋಧನವನ್ನು ಕಂಡ ಬಾಣಚಂದ್ರ ಒಡನೆಯೇ ತನ್ನ ಮುಖ್ಯ ಸೈನಿಕ ಪಾರ್ವತೀಶ ಹಾಗು ಆತನ ಸಹಾಯಕ ರಘುವೇಂದ್ರನನ್ನು ಕರೆಯಿಸಿ ದರೊಡೆಕೋರರನ್ನು ಹಿಡಿಯುವಂತೆ ಅಪ್ಪಣೆ ಮಾಡಿ ಕಳುಹಿಸಿ ಕೊಟ್ಟ.
      ಹಾಗೇ ಅಲ್ಲಿಂದ ಹೊರಟ ಮಾದೇಗೌಡನಿಗೆ ಬರಿಗೈಯಲ್ಲಿ ಮನೆಗೆ ತೆರಳಲು ಮನಸ್ಸಿರಲ್ಲಿಲ್ಲ. ಬಾಣಚಂದ್ರನ ಬಗ್ಗೆ ಅಪಾರ ನಂಬಿಕೆ ಇದ್ದ ಆತ ಅಂದು ಪೇಟೆಯಲ್ಲಿದ್ದ ಅಪೂರ್ವ ಛತ್ರದಲ್ಲಿ ತಂಗಲು ನಿರ್ಧರಿಸಿದ. ಹಾಗೇ ಅಲ್ಲಿಗೆ ತೆರಳಿದ ಆತನಿಗೆ ಆಘಾತವೊಂದು ಕಾದಿತ್ತು. ಛತ್ರದ ಕೋಣೆಯೊಂದರಲ್ಲಿ ಬಾಣಚಂದ್ರನ ಸೇನಾಧಿಪತಿ ಪರ್ವತೇಶ ಹಾಗು ಆತನ ಸಹಾಯಕ ರಘುವೇಂದ್ರ ಕಂಡರು. ಅವರ ಎದುರು ಆತನನ್ನು ದೋಚಿದ ದರೊಡೆಕೋರರು.......!. ಏನಾಗುತ್ತಿದೆ ಎಂದು ತಿಳಿಯಲು ಮಾದೇ ಗೌಡ ಅಲ್ಲೇ ಮರೆಯಲ್ಲಿ ಅವಿತು ಕುಳಿತ.
      ಅಟ್ಟಹಾಸ ಮಾಡುತ್ತಿದ್ದ ಪರ್ವತೇಶ ಹಾಗು ರಘುವೇಂದ್ರ  ಆ ದರೋಡೆಕೋರರಿಗೆ ''ಶಹಭಾಷ್ ಕಣ್ರೋ ಶಹಭಾಷ್..., ಒಳ್ಳೇ ಬೇಟೇನೇ ಆಡಿದ್ದೀರಾ......, ಈ ಸಲ ನಿಮ್ಮ ಪಾಲು ನೂರರಲ್ಲಿ ಇಪ್ಪತ್ತು..., ತಗೊಳ್ಳಿ.., ಹಂಚ್ಕೊಳ್ಳಿ....ಎನ್ನುತ್ತಿದ್ದರು.
      ಕೊತಕೊತನೆ ಕುದ್ದು ಹೋದ ಮಾದೇಗೌಡ ಕೋಣೆಯ ಒಳನುಗ್ಗಿದವನೇ ನೇರವಾಗಿ ಪರ್ವತೇಶನ ಕುತ್ತಿಗೆ ಪಟ್ಟಿ ಹಿಡಿದು ತನ್ನ ಎಡಗಾಲಿನ ಚಪ್ಪಲಿಯಿಂದ ರಪರಪನೆ ಬಾರಿಸಿದ. ಅದೇ ರೀತಿ ರಘುನಂದನನ್ನೂ ಕೂಡ ಅಟ್ಟಾಡಿಸಿ ಬಡಿದ. ಆದರೆ ದರೊಡೆಕೋರರು ಹಾಗು ಸೈನಿಕದ್ವೈಯರ ಶಕ್ತಿಯೆದುರು ಮಾದೇಗೌಡ ಸೋಲಲೇ ಬೇಕಾಯ್ತು. ಆತನನ್ನು ಸಾಯುವಂತೆ ಥಳಿಸಿದ ಅವರು ಊರಿನಿಂದ ಹೊರಗೆ ಕಾಡಿನೊಳಗೆ ಎಸೆದು ಬಂದರು. ಬಾಯ್ಬಿಟ್ಟರೆ ನಿನ್ನ ಇಡೀ ಕುಟುಂಬವನ್ನೇ ನಾಶ ಮಾಡುತ್ತೇ ವೆ ಅನ್ನೋ ಎಚ್ಚರಿಕೆ ನೀಡಿದ್ದರು.
                    ಮಾದೇಗೌಡನ ಕನಸಿನ ಗೋಪುರ ಕುಸಿದು ಹೋಗಿತ್ತು. ಮನೆಗೆ  ತೆರಳಿ 3 ದಿನಗಳಾಗಿವೆ. ಮಡದಿ ಹಾಗು ಮಗಳು ಕಾಯುತ್ತಿದ್ದಾರೆ. ಹಸಿದು, ಹಲ್ಲೆಗೊಳಗಾಗಿ ದಣಿದು ಹೋಗಿದ್ದ ಮಾದೇಗೌಡನಿಗೆ ಉಸಿರಾಡಲೂ ಬಲವಿಲ್ಲ. ಅದು ಹೇಗೇಗೋ ಕಷ್ಟ ಪಟ್ಟು  ಮನೆಯೆದುರಿಗೆ ಇದ್ದ ತನ್ನ ಹೊಲವನ್ನು ತಲುಪಿದ. ಮೀನಾಕ್ಷಿ ಮರೆತಿರಲ್ಲಿಲ್ಲ. ದೊಂದಿ ಹಚ್ಚಿದ್ದ ಕಾರಣ ಅದರ ಬೆಳಕು ಅಂಗಳದ ತುಂಬಾ ಕಾಣುತ್ತಿತ್ತು. ದೂರದಲ್ಲಿ ಅದರ ಇರಿವನ್ನು ಕಂಡ ಮಾದೇಗೌಡನಿಗೆ ಆ ಬೆಳಕಲ್ಲಿ ಮೀನಾಕ್ಷಿ ಹಾಗು ತನುಜಾಳ ಅಸ್ಪಷ್ಟ ರೂಪ ಕಾಣುತ್ತಿತ್ತು.
             ಅಂದಿನ ರಾತ್ರಿ ಅತ್ಯಂತ ಭಾರವಾಗಿ.....ನಿರೀಕ್ಷೆಗಳ ಜೊತೆ ಕಳೆದು ಹೋಯಿತು. ಮರುದಿನ  ಊರ ಮುಂದಿನ ಮರವೊಂದರಲ್ಲಿ ಮಾದೇಗೌಡನ ಶವ ಜೋತಾಡುತ್ತಿತ್ತು. ಇತ್ತ ಅವನ ಹೊಲದಲ್ಲಿ ಮೀನಾಕ್ಷಿ ಹೊತ್ತಿಸಿಟ್ಟ ದೊಂದಿ ಆರಿ ಹೊಗಿತ್ತು. ಆದರೆ ಕಟ್ಟೇಪುರ ವೇಶ್ಯಾಗಾರದಲ್ಲಿ ನರ್ತಕಿಯರ ಗೆಜ್ಜೆ ಸದ್ದು, ಮದಿರಿಯ ಮೋಜು ಹಾಗು ಜೂಜಿನ ಖುಷಿ ಮುಗಿದಿರಲ್ಲಿಲ್ಲ. ಪರ್ವತೇಶ ಹಾಗು ರಘುವೇಂದ್ರ ಮತ್ತಿನಲ್ಲಿ ತೂರಾಡುತ್ತಿದ್ದರು.
        ಇತ್ತ ಮಾದೇಗೌಡನ ಮನೆಯಲ್ಲಿ ರಣರೋಧನ. ಆತನ ಶವದ ಮೇಲೆ ಬಿದ್ದ ಆತನ ಮಡದಿ ಹಾಗು ಮಗಳು ಗೋಳಾಡುತ್ತಿದ್ದರು. ವಿಷಾದದ ಸಂಖೇತ ಎಂಬಂತೆ ಬಾಣಭಟ್ಟ ತಲೆಯಿಂದ ಪೇಟ ತೆಗೆದು ಕಂಕುಳಿಗೆ ಸಿಲುಕಿಸಿಕೊಂಡು ಮೌನವಾಗಿ ತಲೆ ತಗ್ಗಿಸಿ ನಿಂತಿದ್ದ.
     

Monday, January 2, 2012

ಬ್ಲಡ್ ಶುಗರ್....,

ನೀನು ಹೇಳ್ತಾ ಇರೋದು ನಿಜಾನೇನೋ.......? ಹಾಗೆನ್ನುತ್ತಿದ್ದ ಅವನ ಮುಖದಲ್ಲಿ ದುಗುಡ ಆತಂಕ ಎದ್ದು ಕಾಣುತ್ತಿತ್ತು.  ನನಗೋ ಒಳಗೊಳಗೇ ನಗು. ಪ್ರಾಣ ಹೋಗುತ್ತೆ ಅಂದ್ರೂ ಒಂದ್ರುಪಾಯಿ ಬಿಚ್ಚದ ಪಿಕ್ಟಾಸಿ........, ಬೇರೆಯವರ ಉದ್ದಾರ ಕಂಡು ಉರಿದುಕೊಳ್ಳುವ ಪರಮಲೋಭಿ.......,
       ಅವ ನನ್ನ ಸಹೋದ್ಯೋಗಿ ಅನ್ನೋ ಒಂದೇ ಕಾರಣಕ್ಕೆ ಅವನ ಜೊತೆ ನನಗೆ ಸಲುಗೆ ಇತ್ತೇ ವಿನಃ ಇನ್ಯಾವುದೇ ಪುಣ್ಯ ಕಾಯಕಕ್ಕೆ ಅವನ ಅಗತ್ಯ  ನನಗೆ ಇರಲ್ಲಿಲ್ಲ.  ಇವೊತ್ತು ಜೀವ ಭಯದಿಂದ ತತ್ತರಿಸಿ ಹೋಗಿದ್ದಾನೆ...., ಪದೇ ಪದೇ ಟಾಯ್ಲೆಟ್ಟಿಗೆ ಹೋಗ್ತಾ ಬರ್ತಾ ಇದ್ದಾನೆ. ಅವನ ವರ್ತನೆಯನ್ನು ಕಂಡ ನಾನು ಬೇಕಂತಲೇ ಅವನನ್ನು ಕೆಣಕಲು '' ಯಾಕೋ ಮೈಗೆ ಹುಷಾರಿಲ್ವೇನೋ........, ಹೊಟ್ಟೆ ಕೆಟ್ಟೋಗಿದ್ಯಾ......ಅಂತಾ ಕೇಳಿದೆ. ಗಾಬರಿ ಬಿದ್ದ ಅವನು ಇ...ಇ...ಇಲ್ಲಾ ಕಣೋ......ಅಂತಾ ಸಾವರಿಸಿಕೊಳ್ಳಲು ಯತ್ನಿಸುತ್ತಿದ್ದ. ನನಗೆ ನಗುವನ್ನು ಹತ್ತಿಕ್ಕಲು ಸಾಧ್ಯವೇ ಆಗುತ್ತಿಲ್ಲ. ಸತ್ಯ ಹೇಳೋಣ ಎಂದುಕೊಂಡೆ. ಆದ್ರೆ ಈ ಕಂಜೂಸ್ ಗೆ ಸ್ವಲ್ಪ ಜ್ಞಾನೋಧಯ ಆಗ್ಲಿ ಅಂತ ಕಂಟ್ರೋಲ್ ಮಾಡಿಕೊಂಡೆ.
    ಅಸಲಿಗೆ ಅವನ ಇವತ್ತಿನ ಅವಸ್ಥೆಗೆ ನಾನೇ ಕಾರಣ.   ಇದ್ದಕ್ಕಿದ್ದಂತೆ ಬ್ಲಡ್ ಶುಗರ್ ಬಗ್ಗೆ ಚರ್ಚೆ ಆರಂಭಿಸಿದ್ದ ಅವನಿಗೆ ಡಯಾಬಿಟಿಸ್ ಕಾಣಿಸಿಕೊಳ್ಳುವ ಮೊದಲ ಲಕ್ಷಣದ ಬಗ್ಗೆ ನನ್ನದೇ ಆದ ಅವಿಷ್ಕಾರಗಳ ರೀಲ್ ಬಿಟ್ಟಿದ್ದೆ. ಡಯಾಬಿಟೀಸ್ ಆರಂಭವಾಗಿ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೇ ಅದು ಮಿತಿ ಮೀರಿ ಹೋಗಿದ್ದರೆ ಅಂತಹ ರೋಗಿ ಮೂತ್ರ ಮಾಡುವಾಗ ಅದು ಸೋಪಿನ ನೊರೆಯಂತೆ ಆಗುತ್ತೆ ಎಂದಿದ್ದೆ. ಇನ್ನು ಅಂತಹವರಿಗೆ ಕೈ ಕಾಲು ನೋವು, ತಲೆಸುತ್ತು, ಸುಸ್ತು ಇತ್ಯಾದಿ ಮಾಮೂಲು......, ಕಿಡ್ನಿಗಳು ಕೊನೇಯ ಹಂಥಕ್ಕೆ ತಲುಪಿ ಕೊನೆ ಉಸಿರೆಳವ ದಿನಗಣನೆ ಆರಂಭ........, ಹಾರ್ಟ್ ಅಟ್ಯಾಕ್ ಆಗುವ ಸಂಭವ....., ಇತ್ಯಾದಿ ಇತ್ಯಾದಿಗಳನ್ನು ಹೇಳಿ ನಂಬಿಸಿ ಬಿಟ್ಟಿದ್ದೆ. ಎಲ್ಲಾ ಹೇಳಿದ ನಂತರ ನಿನಗೇನಾದ್ರೂ ಶುಗರ್ ಇದ್ಯೇನೋ...? ಅಂತಾ ಕೇಳಿದಾಗ ಗಾಬರಿ ಬಿದ್ದ ಅವನು ಏ......ಏ.....ಇಲ್ ಲ್ಲಾ ಪ್ಪಾ ಅಂತ ಅಂದಿದ್ದ.
ನಾನು ಅಷ್ಟಕ್ಕೇ ಸುಮ್ಮನಾಗಲ್ಲಿಲ್ಲ. ಒಂದ್ ನಿಮಿಷ ಬಂದೆ ಅಂತಾ ಎದ್ದವ ಸೀದಾ ಅವನ ರೂಂನಲ್ಲಿದ್ದ ಟಾಯ್ಲೆಟ್ ಗೆ ತೆರಳಿ ಕಮೋಡ್ ಒಳಗೆ  ಮನೆಯಿಂದ ತಂದಿದ್ದ ನೂರು ಗ್ರಾಂ ನಷ್ಟು ಡಿಟರ್ಜಂಟ್ ಪೌಡರ್ ಹಾಕಿ ಬಂದಿದ್ದೆ.
   ನನ್ನ ಪ್ಲಾನ್ ವರ್ಕ್ ಔಟ್ ಆಗಿತ್ತು. ನಾನು ಹೊರಟ ನಂತರ ಟಾಯ್ಲೆಟ್ ಗೆ ಹೋಗಿದ್ದ  ಅವನಿಗೆ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಯಾಕೆಂದ್ರೆ  ಮೂತ್ರ ಮಾಡುವಾಗ ಅಲ್ಲಿ ಇದ್ದಕ್ಕಿದ್ದಂತೆ ನೊರೆಯ ರಾಶಿಯೇ ಸೃಷ್ಟಿಯಾಗಿತ್ತು. ಗಾಬರಿ ಬಿದ್ದ ಅವನು ಪುನಃ ಫೋನ್ ಮಾಡಿ ನನ್ನನ್ನು ತನ್ನ ರೂಮಿಗೆ ಬರಲು ಕೋರಿಕೊಂಡಿದ್ದ. ಅಲ್ಲೂ ಕೂಡ ಬುದ್ದಿವಂತಿಕೆ ತೋರಿದ ಅವನು ನಾ ಬಿಟ್ಟ ರೀಲನ್ನು ನಿಜವೋ ಸುಳ್ಳೋ ಅಂತಾ ಕನ್ ಪರ್ಮ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದ.  ಏನೂ ತಿಳಿಯದ ಅಮಾಯಕನ ರೀತಿ ನಟಿಸಿದ ನಾನು '' ಹೌದು ಕಣೋ ....., ಯಾಕೆ ಈ ಪ್ರಶ್ನೆ ಕೇಳ್ತಾ ಇದ್ದೀಯಾ ಅಂತಾ ಮರುಪ್ರಶ್ನೆ ಮಾಡಿದೆ. ಅದಕ್ಕೆ ಅವ ಸುಮ್ಮನೆ ಕೇಳಿದೆ..." ಎಂದಷ್ಡೇ ಹೇಳಿ ನನ್ನನ್ನು ಮೆಲ್ಲ ಹೊರಗೆ ಸಾಗಹಾಕಿದ್ದ.
   ಮರುದಿನ ನೋಡ್ತೀನಿ ನನ್ನ ಕಂಜೂಸ್ ಗೆಳೆಯ ಮಹಾಶಯ ಅದ್ಯಾವುದೋ ವೈಧ್ಯರ ಬಳಿ ಹೋಗಿ ಅವರ ಸಲಹೆಯಂತೆ ಡಯಾಗ್ನಾಸ್ಟಿಕ್ ಲ್ಯಾಬ್ ನಲ್ಲಿ ಕ್ಯೂ ನಿಂತಿದ್ದ. ಕನಿಷ್ಟ ಒಂದೈದು ಸಾವಿರನಾದ್ರೂ ಕೈ ಬಿಟ್ಟಿರುತ್ತೆ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡ ನಾನು ಅಂದು ಸಂಜೆ ಅವನ ರೂಮಿಗೆ ಹೋಗಿದ್ದೆ.
      ಅವ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಳಿತಿದ್ದ.  ನನ್ನನ್ನು ಬೈಯುತ್ತಾನೆ ಎಂದುಕೊಂಡೆ. ಊಹುಂ ಅದು ಹಾಗಾಗಲ್ಲಿಲ್ಲ. ಕಣ್ತುಂಬಾ ನೀರು ತುಂಬಿಕೊಂಡ ಅವನು ಲೋ ನನಗೆ ಶುಗರ್ ಇದೆ ಕಣೋ.., ಇವೊತ್ತು ಟೆಸ್ಟ್ ಮಾಡಿದೆ 290 ಇದೆ ಅಂತಾ ರಿಪೋರ್ಟ್ ಬಂತು. ನೀನು ಹೇಳಿದ್ದು ನಿಜ ಆಯ್ತು ಕಣೋ ಅಂದ.
       ಈಗ ಅಳುವ ಸರದಿ ನನ್ನದಾಗಿತ್ತು.
      

Tuesday, December 20, 2011

ಎಲ್ಲಯ್ತೋ ಅಂತಃಪುರ.....?


"ರ್ರೀ  .....ರ್ರೀ.....ರ್ರೀ.......ಏಳ್ರೀ ಮೇಲೇ......, ಮನೆಹಾಳ್ ಕೆಲ್ಸ ಮಾಡಿ ಸುಖವಾಗಿ ಮಲ್ಗಿದ್ದೀರಲ್ರೀ........, ಏಳ್ರೀ ಮೇಲೆ.......,"
      ಕನಸ್ಸಿನಿಂದ ಎದ್ದು ಕಣ್ಬಿಟ್ಟ ನನ್ನ ಕಣ್ಣೆದುರು ಪತ್ನಿಯ ಚಂಡಿಕಾ ರೂಪ.....!.   ಕ್ಷಣ ಕಾಲ ಅವಾಕ್ಕಾದೆ. ಅದು ಕತ್ತಲು ಸರಿದು ಬೆಳಕು ಹುಟ್ಟುವ ಸಮಯ......,  ಭುಸುಗುಡುತ್ತಿದ್ದ ಕಾಳಿಂಗ ಸರ್ಪದಂತೆ ಕಾಣುತ್ತಿದ್ದ ಅವಳು ಕೈಯಲ್ಲಿದ್ದ ಮೊಬೈಲನ್ನು ಮುಖದ ಮುಂದೆ ಹಿಡಿದು ಯಾರ್ರೀ ಇದು....? ಅಂದ್ಲು. ಮೊಬೈಲ್ ಸ್ರೀನ್ ನೋಡಿದೆ ಏನೂ ಇರಲ್ಲಿಲ್ಲ. ನಗು ಬಂತು, ನಿದ್ದೆಯಿಂದ ಎದ್ದು ಏನೇನೋ ಮಾತಾಡ್ತಾ ಇದಾಳೆ ಅಂತಾ   '' ಲೇ ಅದು ಮೊಬೈಲ್ ಕಣೇ.., ಏನಾಯ್ತೇ ನಿನ್ಗೆ...? ಅಂತಾ ಮತ್ತೆ ಮಲಗಲು ಯತ್ನಿಸಿದೆ. ಈ ಬಾರಿ ಅವಳ ಕೋಪ ಮಳೆಗಾಲದಲ್ಲಿ ಭೋರ್ಗರೆವ ಜೋಗದ ಜಲಪಾತದಂತೆ....., ಸಂಪೂರ್ಣ ಓಪನ್ ಆದ ಕ್ರಸ್ಟ್ ಗೇಟ್ ನಿಂದ ದುಮ್ಮಿಕ್ಕಿ ಹರಿವ ಡ್ಯಾಂ ನೀರಿನಿಂತೆ...., ಇನ್ನೂ ಯಾವುದ್ಯಾವುದರಂತೆ ಕಾಣಿಸಿತು. ಸ್ವಲ್ಪ ಆತಂಕನೂ ಆಯಿತು.ಏ..ಏನೇ ಅದು ಅಂತಾ ಪೇಲವಾಗಿ ಪ್ರಶ್ನಿಸಿದೆ. ಯಾರ್ರೀ ಅವ್ಳು 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೀರಂತಲ್ಲಾ...? ನೀನ್ಯಾರೇ...? ಅಂತಾ ನನ್ನನ್ನೇ ಕೇಳ್ತಾ ಇದಾಳೆ, ಯಾರ್ರೀ ಅವ್ಳು. ಕೋಪದಲ್ಲಿ ಏದುಸಿರು ಬಿಡುತ್ತಾ ಕಿರುಚಾಡತೊಡಗಿದ್ದಳು. ಎದ್ದು ಓಡಿ ಹೋಗೋಣಾ ಅನ್ನಿಸುವಷ್ಟು ಪೀಕಲಾಟ ಶುರುವಾಯ್ತು. ಯಾಕಂದ್ರೇ ನಾನು ನಿಜವಾಗ್ಲೂ ಅಡ್ವಾನ್ಸ್ ಕೊಟ್ಟಿದ್ದೆ. ಆದ್ರೆ ಉದ್ದೇಶ ಒಳ್ಳೆಯದಾಗಿತ್ತು.
  ಅದು ಹಾಗಲ್ಲಮ್ಮಾ.., ಅಂತಾ ಮಾತಿಗೆ ಶುರುವಿಕ್ಕಿಕೊಂಡೆ. ಊಹೂಂ, ಇವಳು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಕಣ್ಣುಗಳು ಕೊಳಗಳಾಗಿದ್ದವು. ಕೊಡದಷ್ಟು ಕಣ್ಣಿರು ಕೂಡ ಬಸಿದು ಹೋಗತೊಡಗಿತ್ತು.
     ತಡರಾತ್ರಿಯಲ್ಲಿ ಯಡವಟ್ಟಾಗಿತ್ತು. ಹೈಟೆಕ್ ವೇಶ್ಯಾವಟಿಕೆಯ ಸ್ಟಿಂಗ್ ಆಪರೇಶನ್ ಮಾಡುವ ಉದ್ದೇಶದಿಂದ ದಂಧೆ ನಡೆಸುವ ಒಬ್ಬಾಕೆಯ ಜೊತೆ ಗಿರಾಕಿಯಂತೆ ನಟಿಸಿ ಪರಿಚಯ ಮಾಡಿಕೊಂಡು ಕೇರಳದ ಹುಡುಗೀರು ಬೇಕು ಅಂತಾ 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೆ. ಅವಳು ಹುಡುಗೀರು ಬಂದ ತಕ್ಷಣ ಪೋನ್ ಮಾಡ್ತೀನಿ ಅಂತಾ ಮೊಬೈಲ್ ನಂಬರ್ ಬರೆದುಕೊಂಡಿದ್ದಳು.  ಇದೆಲ್ಲವನ್ನೂ ನನ್ನ ಕ್ಯಾಮೆರಾಮೆನ್ ಶಿವಾಜಿ ಗೋಣಿಚೀಲದೊಳಗೆ ಕ್ಯಾಮೆರಾ ಅವಿತಿಟ್ಟು ಶೂಟ್ ಮಾಡಿಕೊಂಡಿದ್ದ
   ಯಾರಿಗ್ರೀ ಗೊತ್ತು ಈ ದಂಧೆವಾಲಿಗೆ ಅಷ್ಟೊಂದು ನಿಯತ್ತಿದೆ ಅಂತಾ....?  ಅಷ್ಟೊತ್ತಲ್ಲಿ ತನ್ನ ನಿಯತ್ತಿನ ಪ್ರದರ್ಶನ ಮಾಡೋಕೆ ನನ್ನ ಮೊಬೈಲ್ ಗೆ ಫೋನ್ ಮಾಡಿದ್ದಾಳೆ. ಪಾಪ, ಗಂಡ ಅನ್ನೋ ಪ್ರಾಣಿ ದುಡಿದು ದಣಿದು ಬಂದು ಮಲಗಿದ್ದಾನಲ್ಲಾ ಅಂತಾ ನನ್ನಾಕೆ ಪೋನ್ ರಿಸೀವ್ ಮಾಡಿದ್ದಾಳೆ.  ಅತ್ತಲ್ಲಿಂದ ಅವಳು ಅವಸರದಲ್ಲಿ ಹಾಯ್ ಚಿನ್ನಾ....., ಸಾವಿರ ರುಪಾಯಿ ಅಡ್ವಾನ್ಸ್ ಕೊಟ್ಟೋವ್ನು ಆರಾಮಾಗೇ ಮಲ್ಕೊಂಬಿಟ್ಟಿದ್ದೀಯಲ್ಲಾ......., ನಿನ್  ಕೇರಳದ್ ಮಹಾರಾಣೀರು ಬಂದಿದಾರೆ. ಅಂತಃಪುರ ಎಲ್ಲಯ್ತೋ.......ಡಾರ್ಲಿಂಗ್ ಅಂತಾ ಕೇಳಿ ಬಿಟ್ಟಿದ್ದಾಳೆ. ಉರಿದು ಬಿದ್ದ ನನ್ನ ಧರ್ಮಪತ್ನಿ ಆಕೆಗೆ ಮಂಗಳಾರತಿ ಮಾಡಿದ್ದಾಳೆ. ಅದಕ್ಕವಳು ಕೇರಳದವರು ಬೇಕು ಅಂದೋವ್ನು ಕನ್ನಡದವಳನ್ನ ಕರ್ಕೊಂಡು ಬಂದಿದ್ದಾನಾ.....? ಅಂತಾ ಮರುಪ್ರಶ್ನೆ ಹಾಕಿದ್ದಾಳೆ.........., ಯಾಕ್ರೀ ಬೇಕಿತ್ತೂ ಗ್ರಹಾಚಾರಾ......?.
ಅವಳಿಗೆ ರೀ ಡೈಯಲ್ ಮಾಡಿ ಲೇ ಬಿಕನಾಸಿ ಇವಳು ನನ್ನ ಹೆಂಡತಿ ಅಂತಾ ಬೈದೆ.  ನಿನ್ನ ಹೈ ಟೆಕ್ ದಂಧೆ ನಾಳೆ ನಮ್ಮ ಚಾನೆಲ್ ನಲ್ಲಿ ಸುದ್ದಿಯಾಗುತ್ತೇ ನೋಡ್ತಾ ಇರು ಅಂತಾ ಗುಡುಗಿದೆ. ಬೆದರಿದ ಅವಳು ಮೊಬೈಲ್  ಸ್ವಿಚ್ ಆಪ್ ಮಾಡಿದಳು.
     ಅವತ್ತು ಬೆಳಿಗ್ಗಿನ ಟಿಫಿನ್ ಖೋತಾ. ಈ ತಕ್ಷಣ ಆಪೀಸಿಗೆ ನಡೀರಿ ನಾನು ವಿಶ್ಯವಲ್ಸ್ ನೋಡಬೇಕು ಅಂತಾ ನನ್ನ ಹೆಂಡತಿ ಒಂದೇ ಸವನೆ ಹಠ ಹಿಡಿದಿದ್ದಳು. ಸ್ನಾನ ಮಾಡ್ಕೋತೀನಿ ಬಿಡೇ ಅಂದ್ರೂ ಬಿಡದೆ ನನ್ನನ್ನು ಬಲವಂತದಿಂದ ಆಪೀಸಿಗೆ ಎಳೆದು ತಂದಿದ್ದಳು. ಆಫೀಸಿನಲ್ಲಿ ಗಡದ್ದಾಗಿ ಮಲಗಿದ್ದ ಶಿವಾಜಿ ಬಡಬಡನೇ ಎದ್ದವನೇ ಕ್ಯಾಮೆರಾ ತಂದು ಕ್ಯಾಸೆಟ್ ರಿವೈಂಡ್ ಮಾಡಿ ಪ್ಲೇ ಮಾಡಿದ. ಆದರೆ ಎಲ್.ಸಿ.ಡಿ.ಯಲ್ಲಿ ಯಾವುದೇ ವಿಶ್ಯುವಲ್ಸ್ ಮೂಡಲ್ಲಿಲ್ಲ. ತಲೆ ಕೆರೆದುಕೊಂಡು ಮತ್ತೆ ಹಿಂದೆ ಮುಂದೆ ಮಾಡಿ ಪ್ಲೇ ಮಾಡಿದ. ಊಹೂಂ ಏನೂ ಇಲ್ಲ. ಪೆದ್ದುಪೆದ್ದಾಗಿ ನಗುತ್ತಾ ತಲೆಕೆರೆದುಕೊಂಡು 'ಸರ್ ಕ್ಯಾಮರಾ ಆನ್ ಮಾಡಿದ್ದೆ, ಆದ್ರೆ ರೆಕಾರ್ಡಿಂಗ್ ಬಟನ್ ಅದುಮಿರಲ್ಲಿಲ್ಲ ಅನ್ನೋದೆ......!? ನನಗೋ ಸುನಾಮಿಯಂತ ಕೋಪ. ಹೆಂಡತಿಯ ಮುಖ ನೊಡಲಾರದಷ್ಟು ಭಯ. ಹಾಂ....! ಅಂತಾ ಬಾಯ್ಬಿಟ್ಟ ನನ್ನನ್ನು ಕಂಡು ನನ್ನ ಹೆಂಡತಿ ಹೊಟ್ಟೆ ಹಿಡಿದು ನಗಲಾರಂಬಿಸಿದಳು
ಅಯ್ಯೋ...ಬಿಡ್ರಿ, ನಾವೆಷ್ಟು ಪೆದ್ದರು ಅಂತಾ ನನ್ನ ಹೆಂಡತಿಗೆ ಅರ್ಥವಾಗಿ ಸಂಸಾರ ಸರಿಯಾಯ್ತು. ಮೊಬೈಲ್ ನಲ್ಲಿ ನನ್ನ ಬದುಕು ಬಂಗಾರ ಮಾಡಲಿದ್ದ ಆ ಹೈ ಟೆಕ್ ಹೆಣ್ಣು ಮತ್ಯಾವತ್ತೂ ನನ್ನ ಕಣ್ಣಿಗೆ ಬೀಳಲೇ ಇಲ್ಲ.

Monday, December 19, 2011

ಉಗ್ರಗಾಮಿ......,

ಆತ ನಿಜವಾಗಲೂ ಆಗಂತುಕ. ಆ ಬಡಾವಣೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದ ಅವನು ರಸ್ತೆಯ ಉದ್ದಗಲವನ್ನು ಇಂಚಿಂಚೂ ಬಿಡದೆ ಕಣ್ಣಲ್ಲೇ ಅಳತೆ ಮಾಡಿಕೊಳ್ಳುತ್ತಿದ್ದ.  ಜೇಬಿನಿಂದ  ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಅದೇನೇನೋ ಬರೆದುಕೊಳ್ಳುತ್ತಿದ್ದ.  ಅವನ ಈ ವರ್ತನೆಯ ಬಗ್ಗೆ ಹಲವಾರು ಕಿಟಕಿಗಳಿಂದ  ಅನುಮಾನದ ನೋಟ ಹೊರಬಿದ್ದಿದ್ದವು.  ಆ ನೋಟಗಳ ಜೊತೆಗೆ ಹಲವರ ಎದೆ ಬಡಿತದ ವೇಗವೂ ಹೆಚ್ಚಾಗುತ್ತಿತ್ತು. ಅವನು ನಡೆಯುತ್ತಲೇ ಇದ್ದ.....,  ಆ ಬೀದಿಯಿಂದ ಈ ಬೀದಿಗೆ....., ಆ ಸರ್ಕಲ್ ನಿಂದ ಈ ಸರ್ಕಲ್ ಗೆ...., ಅಲ್ಲಿ ಯುವಕರ ಗುಂಪೊಂದು ಇವನನ್ನು ನೋಡಿತ್ತು. ಪಸ್ಟ್ ಮೈನ್ ಪಿಪ್ತ್ ಕ್ರಾಸ್ ನ ಲಲಿತಮ್ಮ ನೈನ್ತ್ ಕ್ರಾಸ್ ನಲ್ಲಿರುವ ಮಂಜುಳಕ್ಕನಿಗೆ ಫೋನ್ ಮಾಡಿದ್ಲು. '' ಏ ಮಂಜುಳಾ ಇಲ್ಯಾವನೋ ಬಂದಾವ್ನೆ ಕಣೇ....., ನೋಡೋಕೆ ಕಳ್ಳನ್ ಥರಾ ಕಾಣ್ತಾವ್ನೇ......, ಅದಕ್ಕವಳು ಗಾಬರಿ ಬಿದ್ದು '' ಅಯ್ಯಯ್ಯೋ ಅಲ್ಲಿಗೂ ಬಂದಿದಾನಾ....? ಅದೇ ಬಿಳಿ ದೊಗಲೆ ಶರ್ಟೂ.., ಪೈಜಾಮಾ ಹಾಕಿದಾನಲ್ಲಾ......?!! ಅವ್ನೇ ತಾನೇ.....? ಲಲಿತಮ್ನನ ಹಣೆಯಲ್ಲಿ ಬೆವರಿಳಿಯಲು ಆರಂಭವಾಯ್ತು. ಯಾಕಂದ್ರೆ ಅವನು ಅವಳ ಮನೆಯ ಮುಂದೆಯೇ ನಿಂತು ಅದೇನನ್ನೋ ಗುರುತು ಹಾಕಿಕೊಳ್ಳುತ್ತಿದ್ದ. ಹೂಂ...ಹೂಂ...., ಅಂತಾ ಉಗುಳಿ ನುಂಗಿಕೊಂಡ ಲಲಿತಮ್ಮ ಪೋನ್ ಕುಕ್ಕಿದಳು. ಭಯದಿಂದಲೇ ಕಳ್ಳ ಹೆಜ್ಜೆ ಇಡುತ್ತಾ ಬಂದು ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅವ ಅಲ್ಲಿರಲ್ಲಿಲ್ಲ. ಲಲಿತಮ್ಮನಿಗೆ ಬಾಗಿಲು ತೆರೆಯಲೂ ಭಯ. ಅಡುಗೆ ಮನೆಯೊಳಗೆ ಇದ್ದಕ್ಕಿದ್ದಂತೆ ಪಾತ್ರೆ ಕೆಳಕ್ಕೆ ಬಿದ್ದ ಸದ್ದು. ಕಿಟಾರನೇ ಕಿರುಚಿದ ಲಲಿತಮ್ಮ ಮನೆಯ ಬಾಗಿಲು ತೆಗೆದು ಹೊರಗೋಡಿದಳು. ಅವಳ ಬೊಬ್ಬೆಗೆ ಬೆದರಿದ ಕಳ್ಳಬೆಕ್ಕೊಂದು ಅಡುಗೆ ಮನೆಯಿಂದ ಅವಳ ಜೊತೆಗೇ ಓಡಿ ಬಂತು.
          ಬೀದಿ ಬೀದಿ ಅಲೆಯುತ್ತಿದ್ದ ಆ ಆಗಂತುಕ ಆಟವಾಡುತ್ತಿದ್ದ ಮಕ್ಕಳ ಗುಂಪಿನ ಬಳಿ ಬಂದು ನಿಂತ. ಚಲ್ ಮೇರೇ ಗೋಡೇ ಚಲ್  ಚಲ್ ಚಲ್ ಅಂತಾ ಹಿಂದಿ ಹಾಡು ಹಾಡತೊಡಗಿದೆ. ಆ ಹಾಡಿಗೆ ತಕ್ಕಂತೆ ತಾನು ಹಾವಭಾವ ಪ್ರದರ್ಶಿಸತೊಡಗಿದೆ. ಮಕ್ಕಳಿಗೆ ವಿಚಿತ್ರ ಎನ್ನಿಸಿದರೂ ಅದೇನೋ ಒಂದು ರೀತಿಯ ಖುಷಿ. ಅವನ ನಟನೆಗೆ ಹಾಸ್ಯಕ್ಕೆ ಮನಸೋತ ಅವರಲ್ಲಿ ಅದ್ಯಾವುದೋ ಅವ್ಯಕ್ತ ಆಪ್ತ ಭಾವ..........,
        ಮಕ್ಕಳ ಜೊತೆ ಕಟ್ಟೆಯ ಮೇಲೆ ಕುಳಿತ ಅವನು ಮೆರಾ ನಾಮ್ ದಾದಾಪೀರ್ ಎಂದ. ಮಕ್ಕಳೂ ಕೂಡ ಏ..... ದಾದಪೀರ್ ಅಂತಾ ಚಪ್ಪಾಳೆ ತಟ್ಟಿ  ಕುಣಿದಾಡಿದವು. ಖುಷಿಯೋ ಖುಷಿ. 
     ಲಲಿತಮ್ಮ ಗಾಬರಿಯಿಂದ ಕೂಗಿ ಹೊರಗೋಡಿ ಬಂದಿದ್ದನ್ನು ಕಂಡ ಆ ಕ್ರಾಸ್ ನ ಮಹಿಳೆಯರೆಲ್ಲಾ ಮನೆಯಿಂದ ಹೊರಗೆ ಬಂದರು. ಎಲ್ಲರಿಗೂ ಆ  ಆಗಂತುಕನ ಬಗ್ಗೆ ಭಯ. ಹತ್ತಾರು ಮಹಿಳೆಯರು......ನೂರಕ್ಕೂ ಹೆಚ್ಚು ಫೋನ್ ಕಾಲ್.......,   
    ಕ್ಷಣ ಮಾತ್ರದಲ್ಲಿ ಅಲ್ಲಿ ಮೂವತ್ತಕ್ಕೂ ಹೆಚ್ಚು ಯುವಕರು ಹಾಜರಾದರು. ಹಾಗೇ ಸೈನ್ಯ ಕಟ್ಟಿ ಹೊರಟ ಆ ಯುವಕರಿಗೆ ಮಕ್ಕಳ ಜೊತೆ ಆಟವಾಡುತ್ತಿದ್ದ ಆ ಆಗಂತುಕ ಕಂಡ. ಕೊಳೆಯಾದ ಬಿಳಿ ಪೈಜಾಮ, ದೊಗಲೆ ಶರ್ಟ್, ಉದ್ದದ ಗಡ್ಡ. ತಲೆಯ ಮೇಲೊಂದು ಬಿಳಿ ಟೋಪಿ ಅದಕ್ಕೆ ವಿಚಿತ್ರವಾಗಿ ಸುತ್ತಿರುವ ದಾರ.........., 
     ಏ ಟೆರರಿಸ್ಟ್ ಕಣೋ........, ಗುಂಪಿನಲ್ಲಿದ್ದ ಒಬ್ಬ ಕೂಗಿ ಹೇಳಿದ. ಡೌಟೇ ಇಲ್ಲ ಮಗಾ...ಮತ್ತೊಬ್ಬ ಧನಿ ಸೇರಿಸಿದ.  ಎಲ್ಲರೂ ಅವನತ್ತ ನುಗ್ಗಿ ಬಂದರು. ಗಾಬರಿಗೊಂಡ ಅವ ಎದ್ದು ನಿಂತು ಭಾಯ್ ಸಾಬ್ ಕ್ಯಾ ಹುವಾ.......?  ಅಂತಾ ನಡುಗುತ್ತಾ ಕೇಳಿದ. ಯಾರೋ ನೀನು..........? ಏನ್ ಹೆಸ್ರು......? ಇಲ್ಲೇನ್ಮಾಡ್ತಿದ್ದೀಯಾ.......? ಗುಂಪಿನ ಮುಖಂಡ ಒಂದೇ ಸವನೆ ಕೇಳಲಾರಂಭಿಸಿದ. ಅವನಿಗೆ ಕನ್ನಡ ಅರ್ಥವಾಗುತ್ತಾ ಇಲ್ಲ. ಅಲ್ಲಿದ್ದವರ ಪೈಕಿ ಯಾರೋ ಒಬ್ಬ ನಾಮ್...ನಾಮ್ ಎಂದು ಕೈಯಾಡಿಸಿದ. ಧಾದಾಫೀರ್ ಮೆರಾ ನಾಮ್ ದಾಧಫೀರ್ .............., ಕ್ಯಾ ಚಾಹಿಯೇ ಆಪ್ ಲೋಗೋಂಕೋ.......? ಆತ ಕೇಳುತ್ತೇ ಇದ್ದ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಅವರು ಅವನನ್ನು ನಾಯಿ ಬಡಿದಂತೆ ಬಡಿಯಲಾರಂಭಿಸಿದರು. ಅವನ ಕಿರುಚಾಡಲಾರಂಬಿಸಿದ. ಇವೆಲ್ಲವನ್ನೂ ಕಂಡ ಮಕ್ಕಳು ಗಾಬರಿಬಿದ್ದು ದಿಕ್ಕೆಟ್ಟು ಓಡಿ ಮನೆ ಸೇರಿಕೊಂಡವು.
        ಉಗ್ರಗಾಮಿ ಅನ್ನೋ ಪದ ಕಿವಿಗೆ ಬಿದ್ದಿದ್ದೇ ತಡ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ  ಆ ಕೃಶಕಾಯ ಆಗಂತುಕ ಅರೆ ಜೀವವಾಗಿ ಹೋಗಿದ್ದ. ಅದೇನನ್ನೋ ಸಾಧಿಸಿದ ಖುಷಿಯಲ್ಲಿ ಯುವಕರು ಮೀಸೆ ತಿರುವಿಕೊಂಡು ನಿಂತಿದ್ದರು. ಅವರಲ್ಲೊಬ್ಬ ಅವನ ಕೈ ಕಾಲುಗಳಿಗೆ ಹಗ್ಗ ಬಿಗಿಯಲಾರಂಬಿಸಿದ್ದ.
       ಇನ್ನೇನು ಅವನನ್ನು ಪೊಲೀಸ್ ಜೀಪಿಗೆ ಹತ್ತಿಸಿಕೊಳ್ಳಬೇಕು. ಆಗ ಅಲ್ಲಿ ತನ್ನ ಮೂವರು ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಜೊತೆ ಓಡಿ ಬಂದ ಮಹಿಳೆಯೊಬ್ಬಳು ಗೋಳಾಡಲಾರಂಭಿಸಿದಳು. ಹಿಂದಿ ಭಾಷೆ ಸ್ಪಷ್ಟವಾಗಿ ಬರುತ್ತಿದ್ದ ಪೊಲೀಸ್ ಪೇದೆ ಇಸ್ಮಾಯಿಲ್ ಬಳಿ ತನ್ನ ಹಾಗು ಆ ಆಗಂತುಕನ ಗುರುತು ಹೇಳಿಕೊಂಡಳು. ಇಸ್ಮಾಯಿಲ್ ನಡುಗಿ ಹೋದ...ಅವನ ಬಾಯಿಂದ ಮಾತೇ ಬರಲ್ಲಿಲ್ಲ.
ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ರಾಜಾಸ್ಥಾನದಿಂದ ನಮ್ಮೂರಿಗೆ ಬಂದಿದ್ದ ಕುಟುಂಬವದು. ದಾಧಾಪೀರ್ ಕುಲ್ಪೀ, ರಸ್ಕ್, ಸೋನ್ ಪಾಪ್ಪುಡಿ ಇತ್ಯಾದಿ ಉತ್ತರ ಭಾರತೀಯ ತಿಂಡಿಗಳನ್ನು ತಯಾರಿಸಿ ಗಾಡಿಯಲ್ಲಿ ಹೇರಿಕೊಂಡು ಮಾರುವ ವ್ಯಕ್ತಿ. ನಮ್ಮೂರಿಗೆ ನಿನ್ನೆಯಷ್ಟೇ ಬಂದಿದ್ದ ಅವನು ತನ್ನ ಮನೆಯಿಂದ ದಾರಿ ತಪ್ಪದಿರಲಿ ಅಂತಾ ತನ್ನದೇ ರೂಟ್ ಮ್ಯಾಪ್ ಬರೆದುಕೊಳ್ಳುತ್ತಿದ್ದ. ಮಕ್ಕಳಿಂದಲೇ ಅವನಿಗೆ ವ್ಯಾಪಾರ ಆಗಬೇಕಿದ್ದ ಕಾರಣ ಅವರ ಪ್ರೆಂಡ್ ಶಿಪ್ ಮಾಡಿಕೊಳ್ಳುತ್ತಿದ್ದ. ಪಕ್ಕದ ಊರಿನ ಗಲ್ಲಿಗಲ್ಲಿಯಲ್ಲೂ ಕೂಡ ಈ ದಾಧಫೀರ್ ಮಕ್ಕಳಿಗೆಲ್ಲಾ ದಾಧಾ ಮಾಮ ಅಂತಾನೇ ಫೇಮಸ್ ಆಗಿದ್ದ. ಇವನ ಸೌಮ್ಯ ವರ್ತನೆ ಹಾಗು ಹಾಡುಗಾರಿಕೆಗೆ ಆ ಊರವರು ಇವನಿಗೆ ಸನ್ಮಾನ ಮಾಡಿದ್ದರು. 
     ಈ ಎಲ್ಲಾ ವಿಷಯ ಕೇಳುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಯುವಕರು ಒಬ್ಬೊಬ್ಬರಾಗಿ ಅಲ್ಲಿಂದ ಕಾಲ್ಕಿತ್ತರು. ತೆರೆದಿದ್ದ ಮನೆಯ ಕಿಟಕಿಗಳು ಮುಚ್ಚಿಕೊಂಡವು. ಧೂಳೆಬ್ಬಿಸಿ ಹೋದ ಪೊಲೀಸ್ ಜೀಪಿನತ್ತ ದುಃಖದ ನೋಟ ಬೀರಿದ ಆಕೆ ಅಳುತ್ತಿದ್ದ ಗಂಡನನ್ನು ಎದೆಗೊರಗಿಸಿಕೊಂಡು ಅವನ ಕಣ್ಣೀರು ಒರೆಸಿದಳು. ಅವರ ಜೊತೆಯಲ್ಲಿದ್ದ ಆ ಮೂರು ಹೆಣ್ಣು ಮಕ್ಕಳು ರೋಧಿಸುತ್ತಲೇ ಇದ್ದವು. 
      ಆ ಎಲ್ಲಾ ಮನೆಗಳಲ್ಲೂ ಮೌನ ಮುರಿದುಕೊಂಡು ಬಿದ್ದಿದ್ದು. ನಿಟ್ಟುಸಿರಿನ ಸಣ್ಣ ಸದ್ದಿನ ನಡುವೆ ಛೇ.., ಪಾಪ ಹೀಗಾಗಬಾರದಿತ್ತು ಅನ್ನೋ ಭಾವುಕತೆ ಲಹರಿಯೋಪಾದಿಯಲ್ಲಿ ಹರಿಯುತ್ತಿತ್ತು.

Friday, December 9, 2011

ಪಾಪ......, ಹಾಸನ್

ಸರ್..., ನಿಮಗೆ ಒಬ್ಬ ಹುಡುಗಿ ಫೋನ್ ಮಾಡ್ತಾಳೆ.

ಸಂತೇ ಸೇರುವ ಮುನ್ನಾ.....!!!???

   ಸರ್,  ದೇವ್ರಾಣೆಗೂ  ಹೇಳ್ತೀನಿ..., ನಿಮ್ ಚಾನೆಲ್ ನಂಬರ್ ಒನ್ ಸರ್,  ನನ್ಗಂತೂ ಬೆಳಿಗ್ಗೆ ಎದ್ದ್ ತಕ್ಷಣ ಅದನ್ನ ನೋಡ್ನಿಲ್ಲಾಂದ್ರೆ ಸಮಾಧಾನನೇ ಆಗಲ್ಲಾ....., ನೀವ್ ಬಿಡಿ ಸಾರ್ ನಿಮ್ಮಂಗೆ  ಬೇರೆ ಯಾವ ಟೀವಿನೋರು ಸುದ್ದಿ ಮಾಡಲ್ಲ....., 
                  ಆತ ಬೆಳ್ಳಬೆಳಗ್ಗೇನೇ ನನ್ನನ್ನು ಎಬ್ಬಿಸಿ ವಾಯಲಿನ್ ಥರ ಕೊಯ್ಯತೊಡಗಿದ್ದ. ಆ ವರಸೇಲೇ ಆತ ಒಬ್ಬ ಪುಡಾರಿ ಅನ್ನೋದು ನನಗೆ ಅರ್ಥವಾಗಿತ್ತು. ಕಷ್ಟ ಪಟ್ಟು ಮಾತನ್ನು ಅರ್ಧಕ್ಕೆ ತುಂಡರಿಸಿ   ಸರಿ, ನನ್ನಿಂದ ನಿಮಗೆ ಏನಾಗ್ಬೇಕು ಅಂತಾ ಹೇಳಿ ಪ್ಲೀಸ್........., ಅಂದೆ. ನನ್ನ ಅವಸರದಲ್ಲಿ ಅಸಹನೆಯನ್ನು ಸ್ಪಷ್ಟವಾಗಿ ಗುರುತಿಸಿದ ಆತ ಕೊಂಚ ಸಾವರಿಸಿಕೊಂಡು   ಏ..ಏನಿಲ್ಲಾ ನಮ್ ಊರಲ್ಲಿ ಒಬ್ಬ ಟ್ರ್ಯಾಕ್ಟರ್ ಡ್ರೈವರ್ ಅಪ್ಪ ಅಮ್ಮ  ಇಲ್ಲದ ಬಡಪಾಯಿ ಹೆಣ್ಣು ಮಗಳಿಗೆ ಮದ್ವೆ ಆಗ್ತೀನಿ ಅಂತಾ ನಂಬ್ಸಿ ಮೋಸ ಮಾಡವ್ನೆ.  ಪಾಪ ಅವ್ಳು ಹೊಳೆಗ್ ಬೀಳಾಕ್ ಓಯ್ತಾ ಇದ್ಲು....., ನಾವ್ ಊರ್ ಹಿರಿಕ್ರು ಎಲ್ಲಾ ಸೇರಿ ಅವ್ನುನ್ನ ಹಿಡಿದ್  ಕೂರ್ಸೀವಿ. ಈಗ ಮಾವಿನ್ ಕೆರೆ ಬೆಟ್ದಾಗೆ ಮದ್ವೆ ಮಾಡೋಕ್ ಓಯ್ತಾ ಇದೀವಿ ಬತ್ತೀರಾ ಸಾ....? ಅಂತ ಅವನ ಅಗತ್ಯವನ್ನು ತೆರೆದಿಟ್ಟ.  ಅದರ ಜೊತೆಗೆ ನಿಮ್ಮುನ್ನ ಬುಟ್ರೆ ಬೇರೆ ಯಾರಿಗೂ ವಿಷ್ಯ ಹೇಳಿಲ್ಲಾ..........., ಅನ್ನೋ Extra ಡೈಲಾಗ್ ಬೇರೆ ಸೇರಿಸಿ ಬಿಟ್ಟ.        
  ಈ ದಿನದ ಸೂಪರ್ ಓಪನಿಂಗ್ ಅಂದ್ಕೊಂಡ ನಾನು ನನ್ನ ಕ್ಯಾಮೆರಾಮೆನ್ ಜೊತೆ ಮಾವಿನಕೆರೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆ.  ಆ ಕೊರೆಯುವ ಚಳಿಯಲ್ಲೂ Exclusive ನ್ಯೂಸ್ ಬಾರಿಸುವ ಉತ್ಸಾಹ ನಮ್ಮದಾಗಿತ್ತು.                                                          ಹಾಗೋ ಹೀಗೋ ಬೆಟ್ಟ ಸೇರಿದ ನಮಗೆ ಪರಮಾಶ್ಚರ್ಯ ಕಾದಿತ್ತು. ಯಾಕೇಂದ್ರೆ ಅಲ್ಲಿ ಮದುವೆ ಜೋಡಿ ಅಥ್ವಾ ಅವರ ಪಟಾಲಂ ನ ಸುಳಿವೇ ಇರಲ್ಲಿಲ್ಲ.  ಅನುಮಾನಗೊಂಡ ನಾನು ಆ ಮಹಾಶಯನಿಗೆ ಫೋನಾಯಿಸಿದೆ. '' ಬತ್ತಾ ಇದೀವಿ ಸಾ......, ಅಲ್ಲೇ ಇರಿ ಐದು ನಿಮ್ಶ....ಬಂದೇ ಬುಟ್ವೀ....ಅಂದ.
  ಸಧ್ಯ ಸ್ಟೋರಿ ಮಿಸ್ ಆಗ್ಲಿಲ್ವಲ್ಲಾ ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.  ಆದ್ರೆ ಆ ಕ್ಷಣದ ದುರಂತ ಅನ್ನೋ ಥರ ಅಲ್ಲಿ ಇದ್ದಕ್ಕಿದ್ದಂತೇ ಸುವರ್ಣ ಚಾನೆಲ್ ನ ವರದಿಗಾರ ವೇಣುಕುಮಾರ ಭಯಾನಕ ಸ್ಪೀಡ್ ನಲ್ಲಿ ಬೆಟ್ಟ ಏರಿ ಬಂದೇ ಬಿಡೋದೇ.......? ನನಗೆ Exclusive ಅಂತಾ ಹೇಳಿದ್ದ ಆ ಮಹಾಶಯನ ಮೇಲೆ ಇನ್ನಿಲ್ಲದ ಕೋಪ. ವೇಣು ನನಗೆ ಸ್ನೇಹಿತನಾಗಿದ್ದರೂ ಸುದ್ದಿ ವಿಚಾರದಲ್ಲಿ ಮಾತ್ರ ದುಶ್ಮನ್ ಆಗಿದ್ದ. ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಪೇಲವ ನಗೆ ನಕ್ಕೆವು. ಪಕ್ಕದಲ್ಲೇ ಬಂದು ಕುಳಿತ ವೇಣು ಕೊಸರಾಡಿಕೊಂಡು '' ಅಣ್ಣಾ ನಿನ್ ಗೆ ಹೆಂಗೋ ಗೊತ್ತಾಯ್ತು. ಅಂತ  ಕೇಳೇ ಬಿಟ್ಟ. ಕೋಪದಿಂದ ನಾನು '' ಯಾಕೇ....? ನಿಮ್ ಚಾನಲ್ ಗೆ ಮಾತ್ರ ಹೇಳ್ಬೇಕು ಅಂತಾ ಬಾಂಡ್ ಏನಾದ್ರೂ ಇದ್ಯಾ......? ಅಂತ ಮರುಪ್ರಶ್ನೆ ಹಾಕಿದೆ.   '' ಹಂಗಲ್ವೋ ನನ್ಗೆ ಇನ್ ಪಾರ್ಮ್ ಮಾಡಿದವ ನನ್ನೊಬ್ಬನಿಗೆ ಬಿಟ್ಟು ಯಾರಿಗೂ ವಿಷಯ ಹೇಳಿಲ್ಲ ಅಂದಿದ್ದ.........., ಅಂತ ವಿವರಿಸತೊಡಗಿದ. ಯಾರವನು ಅಂತಾ ಕೇಳಿದ್ರೆ ಆ ಮಹಾಶಯನ ಹೆಸರು ಹೇಳೋದೇ.......? ಎಲಲಾ ಮಹಾಶಯಾ........, ಚೆನ್ನಾಗೇ ಗೇಮ್ ಹಾಕಿದ್ದೀ....ಅಂತ ಮನಸಾರೆ ಅವನನ್ನ ಬೈದುಕೊಳ್ಳತೊಡಗಿದೆವು.   ಅಷ್ಟರಲ್ಲಿ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು. ಬಂಡೆಯೊಂದರ ಮರೆಯಿಂದ  ಕಸ್ತೂರಿ ಚಾನಲ್ ನ ಕ್ಯಾಮೆರಾಮೆನ್ ಬಿಳಿಗಿರಿ ಶ್ರೀನಿವಾಸ್ ರಿಪೋರ್ಟರ್ ಸುರೇಶ್ ನಗ್ತಾ ನಗ್ತಾ ಹೊರ ಬಂದು ಬಿಟ್ರು. ದೇವಸ್ಥಾನದ ಅದ್ಯಾವುದೋ ಮೂಲೆಯಿಂದ ಉದಯ ಟಿವಿ ಅತಿಖ್ ಕೂಡ ಎಂಟ್ರಿ ಕೊಟ್ರು. ಅಲ್ಲಿಗೆ ಎಲ್ಲಾ ಮುಗಿದೇ ಹೋಗಿತ್ತು. ಆ ಮಹಾಶಯ ಆ Extra ಡೈಲಾಗನ್ನು ಎಲ್ಲರಿಗೂ ಹೇಳಿ ಎಲ್ಲರೂ ಬೆಳ್ಳಗ್ಗೇನೇ ಬೆಟ್ಟ ಹತ್ತುವಂತೆ ಮಾಡಿದ್ದ. ಇನ್ನೇನು ಮಾಡೋದು.., ವೃತ್ತಿ ಬಾಂಧವರು ತಾನೇ.....? ಎಲ್ಲರೂ ಒಂದಾಗಿ ಕಲೆತು ಹರಟೆ ತಮಾಷೆ ಇತ್ಯಾದಿ ಶುರು ಮಾಡಿದ್ವು....., ನನಗೆ ಅಲ್ಲೊಂದು ಕೊರತೆ ಎದ್ದು ಕಾಣತೊಡಗಿತು. ಅದು ಈ ಟಿವಿಯ ಅಂಬಿಕಾ ಪ್ರಸಾದ್.......,  ಛೇ ಅವರೊಬ್ಬರು ಮಾತ್ರ ಇಲ್ವಲ್ಲಾ ಅಂತ ಕನವರಿಸಿದೆ ಅಷ್ಟೇ........, ಕ್ಯಾಮೇರಾನ ಕೈ ಯಲ್ಲಿ ಹಿಡಿದುಕೊಂಡೇ ನಮ್ಮ ಹಿಂಬದಿಯ ಬಂಡೆ ಮರೆಯಿಂದ ಹೊರಬಂದ ಪ್ರಸಾದ್ '' ಹೌದು ಸ್ವಾಮಿ.., ನಾನು ಇದೀನಿ....ಸಂತೆ ಸೇರೋ ಮುಂಚೆ ಗಂಟು ಕಳ್ಳರು ಸೇರ್ಕೊಂಡ್ರು ಅನ್ನೋ ಹಾಗೇ..........., ಅನ್ನೋದೆ....? ನಮ್ಮ ನಗುವಿಗೆ ಪಾರವೇ ಇರಲ್ಲಿಲ್ಲ. ಯಾಕಂದ್ರೇ ನಾವು ನಿಜವಾಗ್ಲೂ ಕಳ್ಳರ ರೀತಿ ಒಬ್ಬರಿಗೊಬ್ಬರು ವಿಷಯ ತಿಳಿಸದೇ ಬೆಟ್ಟಕ್ಕೆ ಬಂದಿದ್ದೆವು. ಎಲ್ಲರಿಗೂ Exclusive ನ್ಯೂಸ್ ಮಾಡುವ ತವಕ. ಯಾವನೋ ಒಬ್ಬ ಹಳ್ಳೀ ಲೀಡರ್ ನಿಂದ ನಾವೆಲ್ಲಾ ಮೂರ್ಕರಾಗಿದ್ದೆವು. ಸುಮಾರು ಒಂದು ಘಂಟೆ ತಡವಾಗಿ ಬಂದ ಆ ಮಹಾಶಯ ಬಂದು ನಮ್ಮನ್ನು ನೋಡಿ ನಕ್ಕನಾದ್ರೂ ನಾವ್ಯಾರೂ ನಗಲ್ಲಿಲ್ಲ. ಮದುವೆ ಮನೆಯಲ್ಲಿ ಅವನಿಗೆ ಬಾಯಿಗೆ ಬಂದಂತೆ ಜಾಡಿಸುವ ಮನಸ್ಸಿತ್ತಾದ್ರೂ ಯಾರೂ ಕೂಡ ಆ ದೈರ್ಯ ಮಾಡಲ್ಲಿಲ್ಲ.  ಅನಾಥ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಿದ ಆತ್ಮತೃಪ್ತಿಯ ಜೊತೆಗೆ ಮರಳಿ ಗೂಡಿಗೆ ಸೇರಿದೆವು.

Sunday, November 20, 2011

ಡ್ರಾಪ್ ಕೊಡ್ತೀರಾ ಪ್ಲೀಸ್.......?

ಏನೇ ಹೇಳಿ....., ಜೇಬಲ್ಲಿ ಪರ್ಸ್ ಇಡೋದೇ ಒಂದು ರೀತಿಯ ಸ್ಟಾಂಡರ್ಡ್.  ಅದರಲ್ಲಿ ಕಾಸಿರ್ಲಿ ಅಥ್ವಾ ಹಳೇಯ ಪೇಪರ್ ಚೂರುಗಳಿರ್ಲಿ  ಪ್ಯಾಂಟ್ ಹಿಂಬಾಗದ ಪಾಕೆಟ್ ನಲ್ಲಿ ಅದು ಇದ್ದು ದಪ್ಪದಪ್ಪಾಗಿ ಎದ್ದು ಕಂಡ್ರೆ ಅದೊಂಥರಾ ಖುಷಿ. ಐದು ರುಪಾಯಿ ಆದ್ರೂ ಸರೀನೇ....., ದಪ್ಪದಪ್ಪದಾಗಿರೋ ಪರ್ಸನ್ನ ಕಿಸೆಯಿಂದ ಕಸಕ್ಕನೆ ಎಳೆದು, ಎರಡೆಳೆಯಾಗಿ ತೆರೆದು, ನೋಟನ್ನು ಎಳೆದು ಕೊಡ್ತಾ ಇದ್ರೆ........! ಸುತ್ತ ಮುತ್ತಲ ಜನರೆಲ್ಲಾ ಯಾವನೋ ಶ್ರೀಮಂತ ಅಂತಾ ಅಂದ್ಕೋತಾರೆ ಅನ್ನೋ ಕಲ್ಪನೆ.
     ಇಷ್ಟೆಲ್ಲಾ ತಿಳಿದುಕೊಂಡಿದ್ದ ನನಗೆ ನಾನಿಡುವ ಪರ್ಸ್ ಕೂಡ ಅಷ್ಟೇ ಸ್ಟಾಂಡರ್ಡ್  ಆಗಿರಬೇಕು ಅಂತ ಅನ್ನಿಸಿತ್ತು. ಅದಕ್ಕೆ ಪೂರಕ ಎಂಬಂತೆ ನನ್ನ ಗೆಳೆಯ ರಫಿಕ್ ಒಂದು ಪರ್ಸನ್ನು ನನಗೆ ಗಿಪ್ಟ್ ಕೊಟ್ಟಿದ್ದ. ಸೊಂಟದ ಅಳತೆಗೆ ಸರಿದೂಗುವ ಪ್ಯಾಂಟ್ ಇದ್ದರೂ ಸೊಂಟವೇ ಇಲ್ಲದಂತೆ ಜಾರಿ ಹೋಗುವ ಪ್ಯಾಂಟ್ ಹಾಕಿಕೊಳ್ಳುವಂತಹ ಸ್ಟೈಲ್ ಮಾಡೋದ್ರಲ್ಲಿ..., ನ್ಯೂ ಜನರೇಶನ್ ಅನ್ನೋ ಹೆಸರಲ್ಲಿ ಚಿತ್ರವಿಚಿತ್ರ ವೇಷ ಹಾಕಿಸೋದರಲ್ಲಿ ಅವ ಭಯಂಕರ ರುಸ್ತುಮ ಬಿಡಿ.
ಎಷ್ಟೇ ಆದ್ರೂ ಗೆಳೆಯ ಕೊಟ್ಟ ಪರ್ಸ್..., ಹಾಗಂತ ಅದನ್ನು ಖಾಲಿ ಬಿಡೋಕಾಗುತ್ಯೇ.....?  ತಿಂಗಳ ಮೊದಲ ವಾರದಲ್ಲಿ ನನ್ನ ಸಂಬಳ ತನ್ನ ಕೈ ಸೇರುವವರೆಗೆ ಪ್ರೀತಿಯ ನಯಾಗರವಾಗಿ ನಂತರ ರಣಭಯಂಕರವಾಗುವ ನನ್ನ ಮನದನ್ನೆ ಎದುರು ಮೂರು ನೂರರ ನೋಟಿಗಾಗಿ ಕೈ ಒಡ್ಡಿದೆ.
    ಅಯ್ಯೋ ,,, ಇದ್ದಿದ್ದೇ ಬಿಡ್ರಿ,   ಸಾವಿರ ಸಾವಿರ ಹಣವನ್ನು ನನ್ನ ಅಕೌಂಟ್ ನಿಂದ ಪೀಕುವ ನನ್ನ ರಾಜರಾಜೇಶ್ವರಿ ನೂರರ ಮೂರು ನೋಟು ಕೊಡೋಕೆ ಮುನ್ನೂರು ಪ್ರಶ್ನೆ ಕೇಳಿ ಅಷ್ಟ ಸಹಸ್ರನಾಮಾರ್ಚನೆ ಮಾಡೀ.........., ಕೊಡುವಷ್ಟರಲ್ಲಿ ಬೆಳಗ್ಗಿನ 10 ಘಂಟೆಯಾಗಿತ್ತು. ಎಷ್ಟೇ ಆಗ್ಲೀ ಅವಳ ಸಿಡಿ ಸಿಡಿ ವಧನವೇ ನನಗೆ ಶುಭ ಶಕುನ ಅಲ್ವೇ....?  ಬೈಕನ್ನೇರಿ ಆಪೀಸ್ ನತ್ತ ಹೊರಟೆ. ಶಾಂತಿನಗರದಿಂದ  ಸಾಲಗಾಮೆ ರಸ್ತೆಯಲ್ಲಿ ಸಾಗುವ ಮಾರ್ಗ ಮಧ್ಯ  ನಂದು ವರ್ಕ್ ಶಾಪ್ ಎದುರು ಒಬ್ಬ ಸುಂದರಾಂಗಿ ನನ್ನ ಬೈಕ್ ಗೆ ಕೈ ತೋರಿಸಿದಳು. ಕಕ್ಕಾಬಿಕ್ಕಿಯಾದ ನಾನು ಹಿಂದೆ ತಿರುಗಿ ನೋಡಿದೆ....., ಯಾರೂ ಇಲ್ಲಾ....!!!?. ಅಚ್ಚರಿಯಾಯಿತು. ಟೈಟ್ ಜೀನ್ಸ್,  ಟೀ ಶರ್ಟ್......, ಹವಳದಂತಹ ತುಟಿಗೆ ಮೆತ್ತಿರುವ ಕೆಂಬಣ್ಣ...., ಆಹಾ.., ಮೋಹನಾಂಗಿ ಅನ್ನೋದ್ರಲ್ಲಿ  ಎರಡು ಮಾತೇ ಇಲ್ಲ. ಅದ್ಯಾಕೋ ಸಣ್ಣ ನಡುಕ ಹುಟ್ಟಿದ್ರೂ ಸಾವರಿಸಿಕೊಂಡು ಬೈಕ್ ನಿಲ್ಲಿಸಿದೆ. ಅವಳೆಷ್ಟು ಚೆಲುವೆಯೋ ಅವಳ ನಗು ಅದರ ನೂರರಷ್ಟು ಚೆಲುವು. ಒಂದೇ ಬಾರಿ ಸಾವಿರ ಸಾವಿರ ವೋಲ್ಟ್ ನಷ್ಟು ವಿದ್ಯುತ್ ಪ್ರವಹಿಸಿದ ಅನುಭವ. .....,
       ಡ್ರಾಪ್ ಕೊಡ್ತೀರಾ....ಪ್ಲೀಸ್.....? ಅವಳ ಧ್ವನಿ.., ಅದು ಧ್ವನಿಯಲ್ಲ......., ವೀಣಾನಾಧ. ಕಳೆದು ಹೋಗುತ್ತಿದ್ದ ನನ್ನನ್ನು ಅವಳು ಸರ್, ಬಸ್ ಸ್ಟ್ಯಾಂಡ್ ತನಕ ಡ್ರಾಪ್ ಕೊಡ್ತೀರಾ ಅಂತ ಕೇಳಿದಳು. ರಂಭೆಯೋರ್ವಳು ಬೈಕನ್ನೇರುವಾಗ ನಾನೇಕೆ ಬೇಡಾ ಎನ್ನಲಿ...? ಆ ಕ್ಷಣಕ್ಕೆ ನನ್ನ ಪತ್ನಿಯ ನೆನಪಾದರೂ ದೈರ್ಯ ತಂದುಕೊಂಡು ವೈ ನಾಟ್.....ಪ್ಲೀಸ್ ಅಂತ ಒಂದಷ್ಟು ಮುಂದೆ ಜರುಗಿ ಕುಳಿತೆ. ಹಾಗೇ ನನ್ನ ಬೈಕ್ ಎಡಕಲ್ಲು ಗುಡ್ಡದ ಮೇಲೆ ಸ್ಟೈಲ್ ನಲ್ಲಿ ಬಸ್ ಸ್ಟ್ಯಾಂಡ್ ಕಡೆಗೆ ಹೊರಟಿತ್ತು. ಅವಳು ತುಂಬಾ ಮಾತನಾಡಿದಳು... ಎಲ್ಲದಕ್ಕೂ ಹೂಂ...ಹೂಂ ಅಂದೆ. ಬೈಕ್ ನಿಂದ ಕೆಳಗಿಳಿದ ನಂತರ ಟಾಟಾ ಮಾಡಿದಳು. ಸಾಧ್ಯವಾದಷ್ಟು ಮಾದಕವಾಗಿ ನಕ್ಕು ನಾನೂ ಕೂಡ ಹಾಗೇ ಮಾಡಿದೆ. ಅದೊಂದು ರಸಮಯ ಅನುಭವ ನೀಡಿದ ಗಾಡ್ ಗೆ ಥ್ಯಾಂಕ್ಸ್ ಹೇಳಿ  ಪೆಟ್ರೋಲ್ ಹಾಕಿಸಿಕೊಂಡು ಬರಲು ಬಂಕ್ ನತ್ತ ಹೊರಟೆ.
      ನೂರು ರುಪಾಯಿಯ ಪೆಟ್ರೋಲ್ ಹಾಕಿಸಿದ ನಾನು ಹೊಸ ಪರ್ಸ್ ನೊಳಗೆ ಬೆರಳು ತೂರಿಸಿ ಸ್ಠೈಲ್ ಆಗಿ ನೋಟು ತೆಗೆದು ಕೊಡಲು ಜೇಬಿಗೆ ಕೈ ಹಾಕಿದೆ. ಪರ್ಸ್ ಇರಲ್ಲಿಲ್ಲ. ಗಾಬರಿ ಬಿದ್ದು ಎಲ್ಲಾ ಜೇಬುಗಳನ್ನು ತಡಕಾಡಿದೆ....ಊಹೂಂ ಪರ್ಸ್ ಇಲ್ಲ. ಆಗ ನನಗೆ ಸಹ್ಯಾದ್ರಿ ಥಿಯೇಟರ್ ಬಳಿ ಬೈಕ್ ನಲ್ಲಿ ಹಂಪ್ ಅವೈಡ್ ಮಾಡಲು ಬ್ರೇಕ್ ಹಾಕಿದ್ದು.....ಆ ಹುಡುಗಿ ನನ್ನ ಬೆನ್ನಿಗೆ ಅಂಟಿ ನಂತರ ಸೊಂಟ ಹಿಡಿದು ಹಿಂದೆ ಜರುಗಿದ್ದು ನೆನಪಾಯ್ತು.
          ಥತ್..., ಊರವರ ಪೆದ್ದುತನ ಸುದ್ದಿ ಮಾಡೋ ನಾನು ಪೆದ್ದುಪೆದ್ದಾಗಿ ಪರ್ಸ್ ಕಳೆದುಕೊಂಡಿದ್ದೆ. ಬಂಕ್ ನವ ಪರಿಚಯ ಇದ್ದ ಕಾರಣ ಆ ತಕ್ಷಣಕ್ಕೆ ಹಣ ಕೊಡಲೇಬೇಕಾದ ಅಗತ್ಯ ಬರಲ್ಲಿಲ್ಲ. ಅವೊತ್ತಿನಿಂದ ನಾನು ಪರಿಚಯ ಇಲ್ಲದ ಯಾವುದೇ ಹೆಣ್ಣು ಮಗಳನ್ನ ನನ್ನ ಬೈಕ್ ಹತ್ತಿಸುತ್ತಿಲ್ಲ...., ಜೊತೆಗೆ ಪರ್ಸ್ ಇಡುವ ಧೈರ್ಯವನ್ನೂ ಮಾಡಿಲ್ಲ.

Tuesday, November 15, 2011

ಆಪರೇಶನ್ ಗೋ ಮಾತೆ.....,

ಅದು Exact message..........,
   ಹಾಸನದ ಎ.ಪಿ.ಎಂ.ಸಿ ಯಾರ್ಡ್ ಹಿಂಭಾಗದ ಗೇಟ್ ಬಳಿ ಐದು ಲಾರಿಗಳಲ್ಲಿ ಗೋವುಗಳನ್ನು ಲೋಡ್ ಮಾಡಿದ್ದಾರೆ. ರಾತ್ರಿ 10 ಘಂಟೆ ಸುಮಾರಿಗೆ ಅವುಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತೆ. ಹಾಸನ ಪೆನ್ ಶನ್ ಮೊಹಲ್ಲಾ ನಿವಾಸಿ ಸಾಬು      ( ಹೆಸರು ಬದಲಾಯಿಸಿದೆ) ಅನ್ನೋವ್ನು ಅವುಗಳನ್ನ ಸಕಲೇಶಪುರದ ಶಿರಾಡಿ ಗಡಿಯವರೆಗೆ ಪಾಸ್ ಮಾಡುತ್ತಾನೆ. ಅಲ್ಲಿಂದ ಮಂಗಳೂರಿನ ಟೀಮ್ ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೆ..........,
     ನನಗೆ ಇದರ ಅಸಲೀಯತ್ತನ್ನು ಅರಿಯುವ ಹಾಗು ಅಷ್ಟೇ ರೋಚಕವಾಗಿ ಈ ಸುದ್ದಿ ಚಿತ್ರೀಕರಿಸುವ ಮನಸ್ಸಾಯ್ತು. ನನ್ನ ಆಗಿನ ಕ್ಯಾಮೆರಾಮೆನ್ ಶಿವಾಜಿಗೆ ಇದೆಲ್ಲವನ್ನೂ ವಿವರಿಸಿದೆ.  ಶಿವಾಜಿ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಲೇಬೇಕು.  ಹೊಟ್ಟೆ ತುಂಬಾ ಊಟ ಇದ್ದರೆ ಸಾಕು, ಅವನದು ಮಗುವಿನಂತ ಮನಸ್ಸು.  ಅದೆಂತಹ  ಕಷ್ಟಕರ ಕೆಲಸವೇ ಇರಲಿ, ಸಾಕ್ಷಾತ್ ಛತ್ರಪತಿ ಶಿವಾಜಿಯಂತೆ ನುಗ್ಗುವ ಅಪ್ರತಿಮ ದೈರ್ಯಶಾಲಿ. ಅವನಂತಹ ಕ್ಯಾಮೆರಾಮೆನ್ ಬಲು ಅಪರೂಪ ಬಿಡಿ.
     ಆಗ ನನ್ನ ಬಳಿ ಕಾರು ಇರಲ್ಲಿಲ್ಲ. ಹಾಗಾಗಿ ನನ್ನ  ನನ್ನ ಸ್ನೇಹಿತ ಬಾಲಿಯಣ್ಣನ ಬಳಿ ಕಾರು ಕೇಳಿದೆ.  ಅದೇನೋ ಒಳ್ಳೇ ಜೋಶ್ ನಲ್ಲಿದ್ದ ಅವರೂ ಕೂಡ ನಮ್ಮ ಜೊತೆ  ಹೊರಟೇ ಬಿಟ್ರು.  ಇದೇ ವೇಳೆ ಸಕಲೇಶಪುರದ್ಲಲಿದ್ದ ನನ್ನ ಗೆಳೆಯ ಧ್ಯಾನ್ ಪೂಣಚ್ಚನಿಗೆ ಮಾಹಿತಿ ನೀಡಿದ್ದೆ. ಅವ  ಈಗ ಜನಶ್ರೀ ಚಾನೆಲ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ.
            ನಮ್ಮ ಪ್ಲಾನ್ ನಂತೆ ಆಪರೇಶನ್ ಸ್ಟಾರ್ಟ್  ಆಯ್ತು.  ಅಲ್ಲಿ ಎ.ಪಿ.ಎಂ.ಸಿ ಯಾರ್ಡ್ ನ ಹಿಂಬಾಗದ ಗೇಟ್ ಬಳಿ ಗೋವುಗಳನ್ನು ಅಮಾನವೀಯವಾಗಿ ಲಾರಿಗಳಿಗೆ ಲೋಡ್  ಮಾಡುತ್ತಿದ್ದುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡೆವು. ರಾತ್ರಿ 10.30 ರ ಸುಮಾರಿಗೆ ಆ ಐದು ಲಾರಿಗಳು ಒಂದೋದಾಗಿ ಸಕಲೇಶಪುರದತ್ತ ಹೊರಟವು.
     ನಿಜವಾಗ್ಲೂ ಅದು ರಣ ಸ್ಪೀಡ್....., ನೀವು ನಂಬಲಿಕ್ಕಿಲ್ಲ. ಆ ಕತ್ತಲ ಹಾದಿಯಲ್ಲಿ ಎಲ್ಲಾ ಲಾರಿಗಳು ಸರಿಸುಮಾರು 100 ಕಿಲೋಮೀಟರ್ ವೇಗದಲ್ಲಿ ಹೊರಟಿದ್ದವು. ಅವುಗಳನ್ನ  ಛೇಸ್ ಮಾಡೋದಿರ್ಲಿ.., ಧೂಳು ಕೂಡ ಹಿಡಿಯೋಕೆ ನಮ್ಮಿಂದ ಸಾಧ್ಯವಾಗಲ್ಲಿಲ್ಲ. ನಾನು ತಕ್ಷಣ ಧ್ಯಾನ್ ಗೆ  ಯಾವುದಾದ್ರೂ ಕಾಯಿನ್ ಬೂತ್ ನಿಂದ ಸಕಲೇಶಪುರ ನಗರ ಠಾಣೆಗೆ ಪೋನ್ ಮಾಡಿ ಮಾಹಿತಿ ನೀಡುವಂತೆ ಹೇಳಿದೆ. ಸೇಫರ್ ಸೈಡ್ ಅಂತ ಅವ ನಾವು ಹೇಳಿದಂತೆ ಮಾಡಿದ್ದ.
     ಸಕಲೇಶಪುರ ತಲುಪಿದ ನಮಗೆ ನಿಜವಾಗ್ಲೂ ಖುಷಿಯಾಯ್ತು ಯಾಕೆಂದ್ರೆ ಆ ಎಲ್ಲಾ ಲಾರಿಗಳು ನಗರ ಠಾಣೆ ಎದುರು ಸಾಲಾಗಿ ನಿಂತಿದ್ದವು.  ಪೊಲೀಸರ ಕಾರ್ಯ ದಕ್ಷತೆಗೆ ಮೆಚ್ಚಿದ ನಾವು ಕಾರ್ ನಿಂದ ಕೆಳಗಿಳಿದು ಲಾರಿಗಳ ವಿಶ್ಯುವಲ್ಸ್ ಮಾಡತೊಡಗಿದೆವು. ಆದ್ರೆ ಏನಾಶ್ಚರ್ಯ.....?  ಸ್ಟೇಷನ್ ನಿಂದ  ಇದ್ದಕ್ಕಿದ್ದಂತೆ ಓಡಿ ಬಂದ ಲಾರಿ ಚಾಲಕರು ಲಾರಿ ಹತ್ತಿ  ಹೊರಟೇ ಬಿಟ್ರು...,
    ನಮಗೆ ಅದನ್ನು ಪ್ರಶ್ನೆ ಮಾಡುವಷ್ಟು ಸಮಯ  ಇರಲ್ಲಿಲ್ಲ. ನಾವು ಕೂಡ  ಎಲ್ಲಾ ಲಾರಿಗಳನ್ನು ಹಿಂದಿಕ್ಕಿ ಕಪ್ಪಳ್ಳಿ ಗ್ರಾಮದ ಬಳಿ ನಮ್ಮ ವ್ಯಾನ್ ನಿಲ್ಲಿಸಿದೆವು.
           ಸರಿಯಾಗಿ ಐದು ನಿಮಿಷಕ್ಕೆ ಎಲ್ಲಾ ಲಾರಿಗಳು ಕಪ್ಪಳ್ಳಿ ಸಮೀಪ ಬಂದವು.  ಬಾಲಿಯಣ್ಣ ಹಾಗು ಧ್ಯಾನ್ ರಸ್ತೆಯಲ್ಲಿ ಲಾರಿ ನಿಲ್ಲಿಸುವಂತೆ ಅಡ್ಡ ನಿಂತರು. ನಿಲ್ಲಿಸಬಹುದು ಎಂಬ  ಆತ್ಮವಿಶ್ವಾಸ ಕೂಡ ಅವರಲ್ಲಿತ್ತು. ಇನ್ನೇನು ಹತ್ತಿರ.......ಹತ್ತಿರಾ...,   ಆ ಲಾರಿಗಳು ನಿಲ್ಲುವುದಿರಲಿ..., ಯಾವ ಸ್ಪೀಡ್ ನಲ್ಲಿ ಬಂದವೋ ಅದೇ ಸ್ಪೀಡ್ ನಲ್ಲಿ ಇವರ ಮೇಲೆ ಬಂದೇ ಬಿಟ್ವು.
     ಕ್ಷಣ ಮಾತ್ರದಲ್ಲಿ ಅಪಾಯವನ್ನು ಗ್ರಹಿಸಿದ ಧ್ಯಾನ್  ಹಾಗು ಬಾಲಿಯಣ್ಣ ಅಲ್ಲಿಂದ ಪಕ್ಕಕ್ಕೆ ಜಿಗಿದು ಪ್ರಾಣ  ಉಳಿಸಿಕೊಂಡ್ರು.  ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ನಾವೆಲ್ಲರೂ ಗಾಬರಿಯಾಗಿದ್ದೆವು. ಗೋವುಗಳನ್ನು ಸಾಗಿಸುವ ಕಟುಕರು ಮನುಷ್ಯರ ಪ್ರಾಣವನ್ನೂ ತೆಗೆಯಲು ಹೇಸೋದಿಲ್ಲ ಅನ್ನೋ ಸತ್ಯವನ್ನು ಸ್ವತಃ ಅನುಭವಿಸಿದೆವು.
ಎಲ್ಲವೂ ನಮ್ಮ ಸ್ಪೀಡನ್ನು ಮೀರಿ ಹೋಗಿದ್ದವು. ಆದ್ರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಯುವಕರ ಗುಂಪೊಂದು ಆ ಎಲ್ಲಾ ಲಾರಿಗಳ ಮೇಲೆ ಕಲ್ಲು ತೂರುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು. ಕುತೂಹಲ ತಡೆಯದ ನಾನು ಅವರ ಬಳಿ ಹೋಗಿ ಯಾಕೆ ಕಲ್ಲು ತೂರುತ್ತಾ ಇದ್ದೀರಾ.....? ಅಂತ ಕೇಳಿದೆ.
       ಅವರಲ್ಲೊಬ್ಬ  " ಸಾರ್...., ಈ ರಸ್ತೇಲಿ ಐದು ಲಾರೀಲಿ ದನಗಳನ್ನ ಕೇರಳಕ್ಕೆ ತಗೊಂಡು ಹೋದ್ರು ಸಾರ್...., ನಾನು ಇದುನ್ನ ಟಿವಿ ನೋರಿಗೆ ಹೇಳಿದ್ದೆ. ಅವ್ರು  ಬರ್ಲಿಲ್ಲ..,ಯಾವ್ದುಕ್ಕೂ ತಾಕತ್  ಬೇಕು ಸಾರ್...,  ನಮ್ ಕೈಲಿ ಗೋಮಾತೇನಾ ಕಾಪಾಡೋಕೆ ಆಗ್ಲಿಲ್ಲ.  ಆದ್ರೆ ಸಾಗಿಸ್ತಾ ಇದ್ದ  ಎಲ್ಲಾ ಲಾರಿಗಳ ಗಾಜು ಪುಡಿ ಪುಡಿ ಮಾಡಿದ್ವೀ....., " ಎಂದ.
   ಅವನು ಕುಡಿದಿದ್ದ.  ಆದ್ರೆ  ಆತನ ಕಳಕಳಿಗೆ ನಶೆ ಏರಿರಲ್ಲಿಲ್ಲ.  ಅಲ್ಲಿ ನಾವು ಯಾರು ಅಂತ ಅವನಿಗೆ ನಮ್ಮಿಂದ ಹೇಳೋಕೆ ಸಾಧ್ಯ ಆಗ್ಲಿಲ್ಲ.  ಮತ್ತದೇ ಬೇಸರ...ವ್ಯವಸ್ಥೆಯ ವಿರುದ್ದ ಅಸಹನೆಯನ್ನು ಹಂಚಿಕೊಂಡು ಹಾಸನದ ಹಾದಿ ಹಿಡಿದೆವು. ಸಕಲೇಶಪುರದ ಟೋಲ್ ಗೇಟ್ ನ ಬಳಿ ಅಂದಿನ ನಗರ ಠಾಣಾ ಇನ್ಸ್ ಪೆಕ್ಟರ್ ಜೀಪ್ ನಿಂತಿತ್ತು. ಡ್ರೈವರ್ ಹೊರಗೆ ನಿಂತು ಸಿಗರೇಟು ಸೇದುತ್ತಾ ಬಂದ ಬಂದ ವಾಹನಗಳಿಗೆ ಕೈ ತೋರಿಸುತ್ತಿದ್ದ.