Monday, March 19, 2012

ಹೆಣ್ಣು ಬೇಟೆ...,

ಅವಳೊಮ್ಮೆ ಉಸಿರು ಬಿಗಿ ಹಿಡಿದು ಆ ಆಳದತ್ತ ಕಣ್ಣು ಹಾಯಿಸಿದಳು.....,
      ಹಚ್ಚ ಹಸಿರು....., ತಂಗಾಳಿಯ ನಡುವೆ ಹಕ್ಕಿಗಳ ಕಲರವ......, ಉನ್ಮಾದದ ಉತ್ತುಂಗ.....,  ಚೆಲುವನ್ನೆಲ್ಲಾ ಒಡಲಲ್ಲಿ ತುಂಬಿಕೊಂಡಿರುವ ರಕ್ಕಸ ಗುಂಡಿ ಅದು.  ಬೆರಗು ಸವಿಯುತ್ತವೆ ಕಣ್ಣುಗಳು..., ಆದ್ರೆ ಆ ಆಳದ ಅಳತೆ ಮಾಡಿದರೆ ಎಂಥಹವರ  ಎದೆಯ ನಗಾರಿ ಗುಂಡಿನ ಸದ್ದಿನಂತೆ ಹೊಡೆದುಕೊಳ್ಳುತ್ತೆ.. ಅಂತಹ ಪ್ರಪಾತದ ತಲೆಯ ಮೇಲೆ ಆಕೆ ನಿಂತಿದ್ದಾಳೆ.  ಭಯವಾಯ್ತು. ಆದರೆ ಆ ಭಯವನ್ನು ಮೀರಿಸಿ ಸವಾಲು ಹಾಕಲೇ ಬೇಕು. ಒಂದಡಿ ಮುಂದಿಟ್ಟರೂ ಸಾವಿರ ಸಾವಿರ ಅಡಿಗಳ ಆಳಕ್ಕೆ ಉರುಳಿ ಬೀಳುತ್ತಾಳೆ.  ಹೆಕ್ಕೋದಕ್ಕೆ ಮೂಳೆಗಳೂ ಸಿಗೋಲ್ಲ.  ಸಿಗುತ್ತವೆ ಅಂದ್ರೂ ಆ ಆಳಕ್ಕಿಳಿಯುವ ಗಂಡೆದೆ ಯಾರಿಗೂ ಇಲ್ಲ.
        ಅವಳು ಕಣ್ಮುಚ್ಚಿಕೊಂಡಳು. ಹೌದು, ಎಲ್ಲದಕ್ಕೂ ಅಂತ್ಯ ಹಾಡಲೇ ಬೇಕು. ಅದ್ಕಕಿರುವುದು ಇದೊಂದೇ ಮಾರ್ಗ.ಇನ್ನು ತಡ ಮಾಡಬಾರದು. ದೇಹವೆಲ್ಲಾ ಕಿವಿಯಾಯ್ತು...ಯಾವುದೋ ಸದ್ದಿನ ಕಾತುರ....., ಅಂತರಂಗದ ತುಂಬಾ ತಹತಹ.
      ದೂರದಲ್ಲೆಲ್ಲೋ ಕಿಟಾರನೆ ಹುಡುಗಿ ಕಿರುಚಿದ ಸದ್ದು. ಅಯ್ಯಯ್ಯೋ...ಅಣ್ಣಾ ನಿಮ್ ಕಾಲ್ ಹಿಡಿತೀನಿ..., ಬಿಟ್ ಬಿಡಿ ಪ್ಲೀಸ್......, ಇವಳಿಗೆ ಆ ಸದ್ದು ಕೇಳುತ್ತಿದೆ. ಅದು ಅಸಹನೀಯವಾಗಿ ಮುಂದುವರೆಯುತ್ತಿದೆ. ಅಲ್ಯಾರೋ ಪೋಟೋ ತೆಗೀತಾ ಇದಾರೆ. ಮೊಬೈಲ್ ನಲ್ಲಿ ತಮ್ಮ ವಿಕೃತಗಳ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಅವಳು ಅಸಹಾಯಕತೆಯಿಂದ ಕೂಗುತ್ತಿದ್ದಾಳೆ. ಆಕೆಯ ಜೊತೆಗಿದ್ದ ಆಕೆಯ ಪ್ರಿಯಕರ ಈ ದುಷ್ಟರ ಎದುರು ಮುದುಡಿ ಹೋಗಿದ್ದಾನೆ. ಅವಳು ಕಿರುಚುತ್ತಿದ್ದಾಳೆ. ಇವಳ ಮುಚ್ಚಿದ ಕಣ್ಣೆವೆ ಛೇದಿಸಿ ಹನಿಗಳು ಕೆನ್ನೆಗಳ ಮೇಲೆ ಅಸಹಾಯಕತೆಯ ಗೆರೆ ಬರೆಯುತ್ತಿವೆ.
      ಅಷ್ಟರಲ್ಲಿ ಅವರಲ್ಲೊಬ್ಬ ಇವಳನ್ನು ನೋಡಿದ. ಎತ್ತರದ ನಿಲುವು...., ಸುಂದರ ಮೈಕಟ್ಟು.., ಬಳುಕುವ ಬಳ್ಳಿಯಂತಿರುವ ಇವಳು ಸುಂದರಿ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಅವರು ಆ ಹುಡುಗಿಯನ್ನು ಕೈ ಬಿಟ್ಟು ಇವಳ ಬಳಿ ಓಡೋಡಿ ಬಂದರು. ಕಾಡುಮೃಗಗಳಿಂದ ತಪ್ಪಿಸಿಕೊಂಡಂತೆ ಇವರ ಕೈಗೆ ಸಿಲುಕಿ ನಲುಗುತ್ತಿದ್ದ ಹುಡುಗಿ ಹಾಗು ಆಕೆಯ ಪ್ರಿಯಕರ ಕಾಡಿನಿಂದ ಊರಿನತ್ತ ಓಟ ಕಿತ್ತರು.
    ವಾವ್.......! ಎಂತಾ ಚೆಂದ ಇದ್ದೀ ಮಾರಾಯ್ತೀ...? ಇಷ್ಟೊಳ್ಳೇ ದೇಹಸಿರಿ ಇಟ್ಕೊಂಡು ಸಾಯೋಕ್ ಹೋಯ್ತೀದ್ದೀ....?! ಅಲಲಲೇ ....., ನಾವ್ ಬಿಟ್ಟೇವೆ ನಿನ್ನಾ....., ಹೆಂಗಿದ್ರೂ ಸಾಯ್ತೀ... ಸಾಯೋಕು ಮುನ್ನಾ ನಮ್ಗೊಂದಿಷ್ಟು ರಸದೌತಣ ಬಡಿಸು....., ಅವ ಆಕೆಯ ಹೆಗಲ ಮೇಲೆ ಕೈಯಿಟ್ಟ. ಅವಳು ಕಣ್ಬಿಟ್ಟಳು.
       ನಾಲ್ವರು ಹಸಿದ ಕಾಮಿಗಳು. ಒಬ್ಬಳೇ ಒಬ್ಬಳು ಸುಂದರಾಂಗಿ. ಸಿನೆಮಾ ತಾರೆಯರನ್ನೂ ಮೀರಿಸುವ ಚೆಲುವೆ ಅವಳು. ಪ್ರತಿಭಟಸೋಕೆ ಧ್ವನಿ ಇಲ್ಲ. ಅದರ ಅಗತ್ಯವೂ ಆಕೆಗೆ ಇದ್ದಂತಿರಲ್ಲಿಲ್ಲ. ನಿರ್ಭಾವುಕಳಾಗಿ ಅವರತ್ತ ನೋಡಿದಳು. ಅವರಿಗೆ ಕಾಯುವಷ್ಟು ಸಮಾಧಾನವೇ  ಇರಲ್ಲಿಲ್ಲ. ಅನಾಮತ್ತಾಗಿ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದ ಅವರು ಒಬ್ಬರ ನಂತರ ಒಬ್ಬರಂತೆ ಆಕೆಯ ಮೇಲೆರಗಿದರು. ಅವಳು ಪ್ರತಿಭಟಿಸಲ್ಲಿಲ್ಲ, ಕೂಗಾಡಲ್ಲಿಲ್ಲ, ಕನಿಷ್ಟ ಪಕ್ಷ ಒಂದು ಹನಿ ಕಣ್ಣೀರು ಕೂಡ ಆಕೆಯ ಕಣ್ಣಿನಿಂದ ಉದುರಲ್ಲಿಲ್ಲ.
     ಎಲ್ಲಾ ಮುಗಿದ ಮೇಲೆ ಅವರೆಲ್ಲಾ ಬಹಳ ದಣಿದಿದ್ದರು. ಒಂದೆಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅದುವರೆಗೂ ನಿರ್ಭಾವುಕಳಾಗಿದ್ದ ಆಕೆಯಲ್ಲಿ ಆಗ ಅದ್ಯಾವುದೋ ಜೀವಸಂಚಾರವಾದಂತೆ ಕಂಡು ಬಂತು. ಅವ್ಯಕ್ತ ತೃಪ್ತಿ ಸಣ್ಣ ನಗುವಾಗಿ ತುಟಿಯ ಮೇಲೆ ಲಾಸ್ಯಾವಾಡತೊಡಗಿತು.
       ತಂಡದ ನಾಯಕನಿಗೆ ಈಕೆಯ ಬಗ್ಗೆ ಅದೇನೋ ಕುತೂಹಲ.  ಅಲ್ವೇ.., ನಾವೆಷ್ಟೋ ಮಂದ್ ಹುಡ್ಗೀರ್ ನೋಡೀವಿ. ಆದ್ರೆ ನೀ ಒಂಥರಾ ವಿಚಿತ್ರ ಇದ್ದೀ ನೋಡು.  ಯಾಕ್ ಸಾಯೋಕ್  ಹೊಂಟೀ....? ಅಂತಾ ಕೆಣಕಿದ.
    ನಾನ್ ಸಾಯೋಕ್ ಹೊಂಟಿದ್ದೇ ಅಂತ್ ನಿಂಗ್ ಯಾರಂದ್ರೂ....? ಕೋಗಿಲೆಯಂತಹ ಧ್ವನಿ. ಅಲ್ಲೀವರೆಗೆ ಸುಮ್ಮನಿದ್ದ ಆಕೆ ಮಾತನಾಡಿದಳು. ಅವರೆಲ್ಲರಿಗೂ ಅಚ್ಚರಿಯೋ ಅಚ್ಚರಿ. ಅವಳು ಮಾತು ಮುಂದುವರೆಸಿದಳು. ಸಾವನ್ನೇ ಬಗಲಲ್ಲಿ ಕಟ್ಟಾಕಿಕೊಂಡಾಕೆ ನಾ. ಆದ್ರೆ ಸಾಯೋಕ್ ಮುನ್ನಾ ಒಳ್ಳೇ ಕೆಲಸ ಮಾಡಿ ಸಾಯೋಣ ಅಂಬುದ್ ನನ್ನಾಸೆ. ಅವಳ ಮಾತು ಒಗೊಟೊಗಟಾಗಿತ್ತು.  '' ಅದೇನಮ್ಮೀ ನಾಲಕ್ ಮಂದಿಗೆ ಸುಖ ಕೊಟ್ ಸಾಯೋಣಾಂತಿದ್ದೀಯೇನ್ ಮತ್ತೆ....., ಅವ ಗಹಗಹಿಸಿ ನಗತೊಡಗಿದ.
    ಅವಳು ನಗತೊಡಗಿದಳು. ಮೊದಲು ಸಣ್ಣದಾಗಿದ್ದ ನಗು ಭೋರ್ಗರೆಯತೊಡಗಿತು. ಹೊಟ್ಟೆ ಹಿಡಿದು ನಗಲಾರಂಭಿಸಿದಳು. ಇವರೆಲ್ಲರಿಗೆ ಅದ್ಯಾವುದೋ ಆತಂಕ... ಎಲ್ಲರ ಹಣೆಗಳ ಮೇಲೆ ಬೆವರು ಹನಿಗಟ್ಟಿದೆ. ತಣ್ಣಗಿದ್ದ ಆ ವಾತಾವರಣ ಯಾಕೋ ಬಿಸಿಯಾಗತೊಡಗಿದೆ. ಅವಳು ಮಾತನಾಡತೊಡಗಿದಳು.
   ಇದೇ ಮೊದಲಲ್ಲೋ ನಾಯಿಗಳ...,  ನಾಲ್ಕು ವರ್ಷದ ಕೆಳಗೆ ನೀವು ನಾಲ್ಕು ಮಂದಿ ನನ್ನನ್ನು ಕೆಡಿಸಿ ನನ್ನ ಗೆಳೆಯ ರಾಹುಲ್ ನನ್ನ ಇದೇ ಗುಂಡಿಗೆ ಎಸೆದಿದ್ರಿ. ನಂತ್ರ ನನ್ನ ನಗ್ನ ದೇಹದ ವಿಡಿಯೋ ಮಾಡಿ ಊರೂರಿಗೆ ಹಂಚಿದ್ರಿ......, ನೆನಪಿದೆಯೇನ್ರೋ....? ಈಗವಳ ಧ್ವನಿಯಲ್ಲಿ ಆಕ್ರೋಶವಿತ್ತು. ಗೆಳೆಯನ ನೆನಪು ಹಾಗು ಪ್ರತಿಕಾರದ ಕೆಚ್ಚು ಎದ್ದು ಕಾಣುತ್ತಿತ್ತು.
      ನೀ...ನೀ... ಅದೇ ಶಂಬಣ್ಣನ ಮಗಳಲ್ವಾ......? ಅವ ಗಾಬರಿಯಿಂದ ಕೇಳಿದ. ಹೌದೋ    ಆ ಶಂಬಣ್ಣನ ಮಗಳೇ ನಾನು. ಅಮ್ಮ ಇಲ್ಲದ ನನಗೆ ಅಪ್ಪನೇ ಎಲ್ಲಾ ಆಗಿದ್ದ. ನೀವು ಮಾಡಿದ ಕೆಲಸದಿಂದ ನೊಂದು ಅವ ವಿಷ ಕುಡಿದು ಸತ್ತ.  ಶೀಲವಂತೆಯಾಗಿ ಬದುಕುತ್ತಿದ್ದ ನನಗೆ ಸಮಾಜ ಸೂಳೆ ಪಟ್ಟ ಕಟ್ಟಿತು. ಅವಳ ಆಕ್ರೋಶ ಹೆಚ್ಚುತ್ತಲೇ ಇತ್ತು.   ಅವನು ಕೋಪ ತಣಿಸಲು ಮಾತು ತುಂಡರಿಸಿದ    ನೀ ಊರ್ ಬಿಟ್ಹೋಗಿಯಲ್ಲಾ..... ....? ಅನ್ನೋಕೆ ಯತ್ನಿಸಿದ
     ಹೇಳ್ತೀನೋ ಕೇಳು...., ಊರ್ ಬಿಟ್ಟ ನಾನು ಗರತಿಯಾಗಿ ಬದುಕ್ಲಿಕ್ಕೆ ಸಾಧ್ಯ ಆಗ್ಲಿಲ್ಲ. ನಾ ಸೂಳೇನೇ ಆದೆ.  ಹಾಳಾಗಿ ಹೋದೆ. ನೀವೂ ಕೂಡ ಇಲ್ಲಿಗೆ ಬರೋ ಹೆಣ್ಣು ಮಕ್ಕಳನ್ನ ಹಾಳು ಮಾಡ್ತಾನೇ ಇದೀರಾ ಅನ್ನೋದು ನನಗೆ ತಿಳೀತು. ಈಗ ಅದನ್ನ ನಿಲ್ಸಿ ಪುಣ್ಯ ಕಟ್ಟಿಕೊಳ್ಳೋಣ ಅಂತ ಬಂದೆ.
      ಈಗ ನಗುವ ಸರದಿ ಆ ನಾಲ್ವರದ್ದು. ಹೇಗೆ ಬೇಕೋ ಹಾಗೆ ನಗಲಾರಂಭಿಸಿದರು. ಹೆಣ್ಣುಗಳ ಬೇಟೆ ನಿಲ್ಲಿಸ್ತೀಯಾ....? ಈಗಷ್ಟೇ ಹದ್ದಿಗೆ ಮಾಂಸ ಆದಂಗೆ ಆಗೋಗಿದ್ದೀಯಾ...., ನೀನು...ನೀನು.....ನಿಲ್ಲುಸ್ತೀಯಾ....?  ಅವಳಲ್ಲಿ ಅಷ್ಟೇ ದೃಢತೆ ಇತ್ತು
     ಪಾಪಿಗಳ....., ನಿಮ್ಮ ಅಂತ್ಯ ಕಾಲ ಬಂದಿದೆ. ನಿಮ್ಮಿಂದ ಹಾಳಾಗಿ ಹೋದ ನನಗೆ ಈಗ ಹೆಚ್.ಐ.ವಿ ಇದೆ. ಈಗ ಸುಖ ಅಂತ ಅಂದ್ಕೊಂಡ್ರಲ್ಲಾ..., ಅದು ನಿಮ್ಮ ಜೀವನದ ಕೊನೇಯ ಸುಖ. ನೀವು ನನ್ನ ಹತ್ತಿರ ಬರುವ ಕೆಲವೇ ನಿಮಿಷಗಳ ಮೊದಲು ನನ್ನ ಕಥೆಯನ್ನ ನಿಮ್ಮೂರ ಮುಖಂಡರಿಗೆ ಹೇಳಿದ್ದೇನೆ. ಇನ್ನು ಈಗ ಏನಾಗಬಹುದು ಅನ್ನೋದನ್ನ ಕೂಡ ವಿವರಿಸಿದ್ದೇನೆ.  ಅವಳ ಮಾತು ಮುಗಿಯುವ ಹಂಥದಲ್ಲಿ ಆ ಊರಿನ ಹಿರಿಯರು ಕಾಡಿನೊಳಕ್ಕೆ ಬಂದರು. ಅವರ ಜೊತೆ ಕಾಡಿನಿಂದ ತಪ್ಪಿಸಿಕೊಂಡು ಹೋಗಿದ್ದ ಯುವ ಪ್ರೇಮಿಗಳು ಇದ್ದರು.
    ಆ ನಂತರ ಅವಳು ಅವರು ಸುತ್ತಮುತ್ತಲ ಕಾಡಿನಲ್ಲಿ ಎ್ಲಲಿಯೂ ಕಾಣ ಸಿಗಲ್ಲಿಲ್ಲ. ಹೆಚ್.ಐ.ವಿ ಪೀಡಿತ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ವಿಚಾರ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತ್ತು.
   ಆ ರಕ್ಕಸಗುಂಡಿಯಿಂದ ಏನೋ ದುರ್ನಾತ ಬರುತ್ತಿದೆ ಅಂತಾ ಜನ ಅರಣ್ಯಇಲಾಖೆಗೆ ಪದೇ ಪದೇ ದೂರು ನೀಡಿದ್ರೂ ಅವರು ಸ್ಥಳಕ್ಕೆ ಬರುವ ಗೋಜಿಗೆ ಹೋಗಲ್ಲಿಲ್ಲ. ಬದಲಿಗೆ ವಿಚಿತ್ರ ಕಾಯಿಲೆ ಬಂದು ಕೆಲವು ಕಾಡುಪ್ರಾಣಿಗಳು ಮೃತಪಟ್ಟಿವೆ. ಈಗಾಗಲೇ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂಬ ಷರಾ ಬರೆದು ಸುಮ್ಮನಾದ್ರು.

   

No comments: